ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ತಿಪ್ಪೂರಿನಲ್ಲಿ ನಡೆದ ತೆಂಗು ಮತ್ತು ಅಡಿಕೆ ಮರಗಳ ಕಡಿದ ಪ್ರಕರಣ ಸಂಬಂಧ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರಳಿ ಅವರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ತೆಂಗು ಮತ್ತು ಅಡಿಕೆ ಗಿಡಗಳ ಕಡಿದ ಪ್ರಕರಣದ ವಿರುದ್ಧ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಅಮ್ಮನಘಟ್ಟ ವೃತ್ತದ ಗ್ರಾಮ ಲೆಕ್ಕಿಗ ಮುರಳಿ ಅವರನ್ನು ಅಮಾನತುಗೊಳಿಸಲಾಗಿದೆ.
ಕೆಳಹಂತದ ನೌಕರನನ್ನು ಅಮಾನತು ಮಾಡುವ ಮೂಲಕ ಆದೇಶ ನೀಡಿದ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳ ವಿರುದ್ಧ ಟೀಕೆ ವ್ಯಕ್ತವಾಗಿದೆ.
ಈ ನಡುವೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ತಿಪ್ಪೂರು ಮತ್ತು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿವೆ. ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿವೆ.
ತೆಂಗು ಮತ್ತು ಅಡಿಕೆ ಮರಗಳನ್ನು ಕಳೆದುಕೊಂಡಿರುವ ಸಿದ್ದಮ್ಮ ಅವರಿಗೆ ಸೂಕ್ತ ನ್ಯಾಯ ಸಿಗಬೇಕು. ಕೂಡಲೇ ಪರಿಹಾರ ಕೊಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.