ಉತ್ತರಪ್ರದೇಶದ ಮುಜಾಫರ್ನಗರದಲ್ಲಿ ಶಾಲಾ ಶಿಕ್ಷಕಿಯೋರ್ವರು ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿಗಳಿಗೆ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಜಿ 20 ಸಭೆಯಲ್ಲಿ ಘಟನೆಯ ವೀಡಿಯೊವನ್ನು ತೋರಿಸಿ ಎಂದು ಬಿಜೆಪಿಗೆ ಆಗ್ರಹಿಸಿದ್ದಾರೆ.
ವಿಡಿಯೋ ವೈರಲ್ ಬೆನ್ನಲ್ಲೇ ಬಿಜೆಪಿ ಪಕ್ಷದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಬಿಜೆಪಿಗರು ದೇಶದಲ್ಲಿ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದರು. ಶಿಕ್ಷಕಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿ ವಿದ್ಯಾರ್ಥಿಗಳಿಗೆ ಹೇಳುವುದು ಬಿಜೆಪಿಯ ದ್ವೇಷ ಹರಡುವ ಅಜೆಂಡಾದ ಫಲಿತಾಂಶವಾಗಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್ ಯಾದವ್, ಜಿ 20 ಸಭೆಯಲ್ಲಿ ಘಟನೆಯ ವೀಡಿಯೊವನ್ನು ತೋರಿಸುವಂತೆ ಬಿಜೆಪಿ ಪಕ್ಷವನ್ನು ಕೇಳಿದ್ದಾರೆ. ಜಿ 20 ಅಧ್ಯಕ್ಷ ಸ್ಥಾನವನ್ನು ಭಾರತ ಪಡೆದಿರುವುದರಿಂದ ಈ ಬಾರಿ ಜಿ 20 ಸಭೆಯನ್ನು ಭಾರತದಲ್ಲಿ ನಡೆಯಲಿದೆ.
ಅಖಿಲೇಶ್ ಯಾದವ್ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, G20ನಲ್ಲಿ ಈ ವಿಡಿಯೋವನ್ನು ತೋರಿಸುವ ಮೂಲಕ ದ್ವೇಷದ ಅಜೆಂಡಾ ಸರಿಯಾಗಿದೆ ಎಂದು ಸಾಬೀತುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಜಾಫರ್ನಗರದ ವೈರಲ್ ವೀಡಿಯೊದಲ್ಲಿ, ಶಿಕ್ಷಕಿಯೊಬ್ಬರು ಅಲ್ಪಸಂಖ್ಯಾತ ಸಮುದಾಯದ ಮಗುವಿಗೆ ಇತರ ಮಕ್ಕಳಿಗೆ ಥಳಿಸಲು ಹೇಳುವುದು ನೋಡಿದೆ. ಇದರಲ್ಲಿ ಶಿಕ್ಷಕಿ ಎರಡು ವಿಚಾರದಲ್ಲಿ ಅಪರಾಧಿ, ಆಕೆ ಬಾಲಕನಿಗೆ ಥಳಿಸಿದ್ದಾಳೆ ಮತ್ತು ಇತರ ಮಕ್ಕಳನ್ನು ಕೆರಳುವಂತೆ ಮಾಡಿದ್ದಾಳೆ. ಬಿಜೆಪಿ ಸರ್ಕಾರ ಈ ವೀಡಿಯೊವನ್ನು ತೋರಿಸಿ G20 ಸಭೆಯಲ್ಲಿ ತಮ್ಮ ದ್ವೇಷದ ಅಜೆಂಡಾ ಹೇಗೆ ಸರಿ ಎಂಬುದನ್ನು ಸಾಬೀತುಪಡಿಸಬೇಕು. ಅಂತಹ ಶಿಕ್ಷಕಿ ಸಮಾಜಕ್ಕೆ ಕಳಂಕ, ಇಡೀ ದೇಶದ ಶಿಕ್ಷಕರು ಆ ಶಿಕ್ಷಕಿಯ ವಿರುದ್ಧ ಧ್ವನಿ ಎತ್ತಬೇಕು ಎಂದು ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
ಮುಜಾಫರ್ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಸಹಪಾಠಿ ವಿದ್ಯಾರ್ಥಿಗಳಿಗೆ ಸೂಚಿಸಿದ್ದು, ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಮಗುವಿನ ಬಳಿ ಬಂದು ಮುಖಕ್ಕೆ ಮತ್ತು ಬೆನ್ನಿಗೆ ಹೊಡೆಯುತ್ತಾರೆ. ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ವಿಡಿಯೋ ಭಾರಿ ವೈರಲ್ ಆಗಿದ್ದು ವ್ಯಾಪಕವಾದ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ: ದಲಿತ ಬಾಲಕ ಶಾಲಾ ಕೊಠಡಿಯಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ; ಕೊಲೆ ಆರೋಪಿಸಿದ ಕುಟುಂಬ