ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಂತರ ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ನನ್ನ ಹೆಸರು ಡಿಲೀಟ್ ಆಗಿದೆ ಎಂದು ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಈ ಕ್ಷೇತ್ರದಲ್ಲಿ ಹುಟ್ಟಿ, ವಿದ್ಯಾಭ್ಯಾಸ ಮಾಡಿ ಮತ್ತು ಬೆಳೆದರೂ, ಲಕ್ಷಾಂತರ ಇತರ ನಾಗರಿಕರ ಜೊತೆಗೆ ನನ್ನ ಹೆಸರನ್ನು ಸದ್ದಿಲ್ಲದೆ ತೆಗೆದುಹಾಕಲಾಗಿದೆ ಎಂದು ಹೇಳಿಕೊಂಡಿದ್ದಾರೆ.
“ಸ್ನೇಹಿತರೇ, ನಿಮಗೆ ಒಂದು ಜೋಕ್ ಹೇಳಬೇಕು, ಎಸ್ಐಆರ್ ನಂತರ ಬೆಂಗಳೂರಿನಲ್ಲಿ ಮತದಾನದ ಹಕ್ಕು ಕಳೆದುಕೊಂಡಿರುವ 65 ಲಕ್ಷ ಮತದಾರರಲ್ಲಿ ನಾನೂ ಒಬ್ಬ. ಇದು ಒಳ್ಳೆಯ ಹಾಸ್ಯ ಅಲ್ಲವೇ? ನಾನು ಹುಟ್ಟಿದ್ದು ಇದೇ ಕ್ಷೇತ್ರದಲ್ಲಿ, ಇಲ್ಲೇ ವಾಸಿಸಿದ್ದೇನೆ, ಇಲ್ಲೇ ಶಾಲೆ, ಕಾಲೇಜಿಗೆ ಹೋಗಿದ್ದೇನೆ ಮತ್ತು ರಂಗಭೂಮಿ ಜೀವನ ನಡೆಸಿದ್ದೇನೆ. ನಿಮ್ಮ ಮಾಹಿತಿಗಾಗಿ, ನಾನು ಇದೇ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯೂ ಆಗಿದ್ದೆ” ಎಂದು ಪ್ರಕಾಶ್ ರಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
“ಹಾಸ್ಯ ಚೆನ್ನಾಗಿದೆ..ಆಟ ಶುರುವಾಗಲಿ. ನಾನು ಏನೇನು ಪ್ರಕ್ರಿಯೆಗಳನ್ನು ಎದುರಿಸಬೇಕು ಎಂಬುವುದನ್ನು ನೋಡೋಣ. ನನ್ನ ಓಟರ್ ಐಡಿ ವಾಪಸ್ ಪಡೆಯಲು ನಾನು ಯಾವ ಯಾವ ಖಾಗದಗಳನ್ನು ಕೊಡಬೇಕು ಎಂದು ನೋಡೋಣ” ಎಂದಿದ್ದಾರೆ.
ಮುಂದುವರಿದು, “ಸರಿ, ಆಟ ಆರಂಭವಾಗಲಿ, ಆದರೆ ಮೈ ಡಿಯರ್ ಫ್ರೆಂಡ್.. ಒಂದು ಸಣ್ಣ ಮಾತು; ನಿಮ್ಮನ್ನು ಆಯ್ಕೆ ಮಾಡದ ಕೆಲವು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನಿಮ್ಮ ಅಧಿಕಾರವನ್ನು ನೀವು ಬಳಸಬಹುದು, ಆದರೆ ನಮ್ಮನ್ನು ತಡೆಯಲು ನಿಮ್ಮಿಂದ ಸಾಧ್ಯವೇ? ಮೈ ಡಿಯರ್ ಫ್ರೆಂಡ್…ನಮ್ಮ ಶಕ್ತಿಯಿಂದ ನಾವು ನಿಮ್ಮನ್ನು ಕೆಳಗಿಳಿಸುತ್ತಿದ್ದೇವೆ. ಸುಮ್ಮನೆ ಕೇಳಿದೆ ಅಷ್ಟೇ ಬೈ” ಎಂದು ಪ್ರಕಾಶ್ ರಾಜ್ ತಿವಿದಿದ್ದಾರೆ.


