ಬೆಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಜೊತೆ ಸಂಪರ್ಕದಲ್ಲಿದ್ದರೆಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಕೇರಳದ ಸಿಪಿಎಂ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಅವರನ್ನು ಬಂಧಿಸಿದೆ ಎಂದು ದಿವೈರ್.ಇನ್ ವರದಿ ಮಾಡಿದೆ.
ಡ್ರಗ್ ಜಾಲದಲ್ಲಿ ಹಣ ಹೂಡಿದ್ದಾರೆಂಬ ಆರೋಪದ ಮೇರೆಗೆ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಬಿನೀಶ್ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ. ಇಡಿ ಅಧಿಕಾರಿಗಳು ಬಿನೇಶ್ ಅವರನ್ನು ವಶಕ್ಕೆ ಪಡೆದಿದ್ದು ಮೂರು ಗಂಟೆಗಳ ಕಾಲ ಸತತವಾಗಿ ಪ್ರಶ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.
ಬೆಂಗಳೂರು ವಲಯ ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಸೆಷನ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಇಡಿ ಅಧಿಕಾರಿಗಳು ವಿಚಾರಣೆಗಾಗಿ 4 ದಿನ ವಶಕ್ಕೆ ಪಡೆದಿದ್ದಾರೆ ಮತ್ತು ಬಿನೀಶ್ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ದಿವೈರ್.ಇನ್ ಹೇಳಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಿಂದ ಹಿಂದೆ ಸರಿಯುವಂತೆ ಕೋರ್ಟ್ಗೆ ಬಾಂಬ್ ಬೆದರಿಕೆ
ಕೇಂದ್ರ ತನಿಖಾ ಸಂಸ್ಥೆ ಬಿನೀಶ್ ಕೊಡಿಯೇರಿ ಅವರನ್ನು ಮೂರು ಬಾರಿ ಪ್ರಶ್ನೆ ಮಾಡಿದೆ. ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಡ್ರಗ್ ಪೆಡ್ಲರ್ ಎಂ ಅನೂಪ್ ಅವರಿಂದ ಡ್ರಗ್ ವಶಕ್ಕೆ ಪಡೆದು ಅವರನ್ನು ಬಂಧಿಸಿತ್ತು. ಜೊತೆಗೆ ಆರ್.ರವೀಂದ್ರನ್, ಅಂಕಿತಾ.ಡಿ ಅವರಿಂದ 145 ಎಂಡಿಎಂಎ ಮಾತ್ರೆಗಳನ್ನು ಮತ್ತು 2.20 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಆರೋಪಿ ಬಿನೀಶ್ ಡ್ರಗ್ ಪೆಡ್ಲರ್ ಎಂ. ಅನೂಪ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು. ಇತರೆ ಇಬ್ಬರ ಜೊತೆ ಪೋನ್ನಲ್ಲಿ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ. ಈ ನಡುವೆ ಇಂಡಿಯನ್ ಯೂನಿಯನ್ ಮುಸ್ಲೀಂ ಲೀಗ್ (ಐಯುಎಂಲ್) ಬಿನೀಶ್ ಕೊಡಿಯೇರಿ ಡ್ರಗ್ ರಾಕೇಟ್ ಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿತ್ತು.
ಯೂತ್ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ. ಫಿರೋಜ್ ಮಾತನಾಡಿ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಹೋಟೆಲ್ ವ್ಯವಹಾರದಲ್ಲಿ ಬಿನೀಶ್ ಹಣ ಹೂಡಿಕೆ ಮಾಡಿದ್ದ. ಇದು ಡ್ರಗ್ ಪೆಡ್ಲರ್ ಅನೂಪ್ ಅವರಿಗೆ ಸೇರಿದೆ. 2015ರಿಂದಲೂ ಈ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು.