Homeಮುಖಪುಟಎನ್‌ಸಿಟಿ ದೆಹಲಿ ತಿದ್ದುಪಡಿ ಬಿಲ್: ಬೇರೆ ರಾಜ್ಯಗಳ ಬಾಗಿಲಿಗೂ ಕೇಂದ್ರೀಕರಣದ ಭೂತ ವಕ್ಕರಿಸುವ ಮುನ್ಸೂಚನೆಯೇ?

ಎನ್‌ಸಿಟಿ ದೆಹಲಿ ತಿದ್ದುಪಡಿ ಬಿಲ್: ಬೇರೆ ರಾಜ್ಯಗಳ ಬಾಗಿಲಿಗೂ ಕೇಂದ್ರೀಕರಣದ ಭೂತ ವಕ್ಕರಿಸುವ ಮುನ್ಸೂಚನೆಯೇ?

- Advertisement -
- Advertisement -

ಮಧ್ಯ ಕರ್ನಾಟಕದ ಬೃಹತ್ ಜನಪದ ಮಹಾಕಾವ್ಯ ಜುಂಜಪ್ಪ ಕಾವ್ಯದಲ್ಲಿ ಒಂದು ಘಟನೆ ಬರುತ್ತದೆ. ಇಡೀ ನಾಡಿನ ತುಂಬೆಲ್ಲಾ ವಿಪರೀತ ಕ್ಷಾಮ, ನೀರು-ನಿಡಿಗೂ ತಾತ್ಸಾರ ಎದ್ದು ದನಗಳಿಗೆ ತಿನ್ನಲು ಮೇವು, ಕುಡಿಯಲು ನೀರಿಲ್ಲದ ಪರಿಸ್ಥಿತಿ ಬಂದೊದಗುತ್ತದೆ. ತನ್ನ ಪಶು ಸಂಪತ್ತು ಉಳಿಸಿಕೊಳ್ಳಲು ಮೇವು-ನೀರು ಹುಡುಕಿ ಹೊರಟ ಜುಂಜಪ್ಪನಿಗೆ ಒಂದು ದೊಡ್ಡ ಗೋಮಾಳ ಎದುರಾಗುತ್ತದೆ. ಆಳೆತ್ತರದ ಹುಲ್ಲು, ಕೆರೆ ತುಂಬಾ ನೀರು ನೋಡಿ ಸಂತಸಗೊಂಡ ಜುಂಜಪ್ಪ ತನ್ನ ದನಗಳನ್ನ ಅಲ್ಲಿಗೆ ಅಟ್ಟುತ್ತಾನೆ. ಆದರೆ ಆ ಪ್ರದೇಶದ ಸೆಟ್ಟಿ ನೂರಾರು ಜನ ಕಾವಲುಗಾರರು, ಭದ್ರವಾದ ಬೇಲಿ ಹಾಕಿ ನೊಣವೂ ಒಳ ಹೋಗದಂತೆ ಮಾಡಿರುತ್ತಾನೆ. ಆಗ ಜುಂಜಪ್ಪ ಹೇಳುವ ಮಾತಿದೆಯಲ್ಲ ಎಲ್ಲ ಕಾಲಕ್ಕೂ ಸಲ್ಲುವ ಮಾತು “ಯಪ್ಪಾ ದನಗೋಳ ಹುಲ್ಲಿದ್ದ ಕಡೆ ಮೇಯ್ಕಳಿ, ನೀರಿದ್ದ ಕಡೆ ಕುಡ್ಕಳಿ” ಎಂದು ಸೆಟ್ಟಿಯನ್ನು ಸದೆಬಡಿದು ತನ್ನ ಪಶು ಸಂಪತ್ತು ಉಳಿಸಿಕೊಳ್ಳುತ್ತಾನೆ.

ಜುಂಜಪ್ಪನ “ಹುಲ್ಲಿದ್ದ ಕಡೆ ಮೇಯ್ಕಳಿ, ನೀರಿದ್ದ ಕಡೆ ಕುಡ್ಕಳಿ” ಎನ್ನುವ ಕ್ರಾಂತಿಕಾರಿ ಮಾತಿನ ಅರ್ಥ ಎಲ್ಲವೂ ಎಲ್ಲರಿಗೆ ಸೇರಿದ್ದು, ಆಹಾರ, ನೀರು ಭೂಮಿಯ ಹಕ್ಕಿನ ಬಗ್ಗೆ ಮಾತನಾಡುತ್ತಾ ಹೋಗುತ್ತದೆ. ಈ ನಿದರ್ಶನ ಏಕೆ ಇಲ್ಲಿ ಬಂತು ಎಂದರೆ ಇಂದು ಕೇಂದ್ರ ಬಿಜೆಪಿ ಸರ್ಕಾರ ಈ ಎಲ್ಲಾ ಮೂರು ಮೂಲಭೂತ ಸಂಗತಿಗಳನ್ನು ಮುಕ್ಕರಿಸಿಕೊಂಡು ತಿನ್ನುತ್ತಿದೆ.

ವಿಷಯಕ್ಕೆ ಬರುವುದಾದರೆ ಸೋಮವಾರ (ಮಾರ್ಚ್ 22ರಂದು) ಲೋಕಸಭೆಯಲ್ಲಿ ಮಂಡಿಸಿದ ರಾಷ್ಟ್ರ ರಾಜಧಾನಿ ದೆಹಲಿಯ ಭೂಪ್ರದೇಶ (ತಿದ್ದುಪಡಿ) ಕಾಯ್ದೆ (2021) (National Capital Territory of Delhi (Amendment) Bill – GNCTD)ಯ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ಎಲ್ಲಾ ರಾಜ್ಯಗಳ ಶಾಸಕಾಂಗಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆಯೇ? ನಾವೇನು ದೂರವಿಲ್ಲ ನಿಮ್ಮ ಮನೆ ಬಾಗಿಲಿಗೂ ಬರುತ್ತೇವೆ ಎನ್ನುವ ಮುನ್ಸೂಚನೆಯೇ?

ಈ ತಿದ್ದುಪಡಿ ಏನು ಹೇಳುತ್ತದೆ?

ದೆಹಲಿ ಚುನಾಯಿತ ಸರ್ಕಾರ, ಸಚಿವ ಸಂಪುಟವು ಯಾವುದೇ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರುವ ಮೊದಲು ಲೆಫ್ಟಿನೆಂಟ್ ಜನರಲ್ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಹೇಳುತ್ತದೆ.

ಇದರಿಂದ ಏನಾದರೂ ತೊಂದರೆಯೇ?

ಹೌದು, ಈ ತಿದ್ದುಪಡಿಯಿಂದ “ಸರ್ಕಾರ ಎಂದರೆ ಈಗ ಲೆಫ್ಟಿನೆಂಟ್ ಗವರ್ನರ್” ಎಂದಾಗುತ್ತದೆ.

ಈ ಹೊಸ ತಿದ್ದುಪಡಿಯ ಪ್ರಕಾರ ದೆಹಲಿ ಸರ್ಕಾರ ಸಣ್ಣ ನಿರ್ಧಾರ ತೆಗೆದುಕೊಳ್ಳಬೇಕಾದರೂ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅಭಿಪ್ರಾಯ ತೆಗೆದುಕೊಳ್ಳಲೇಬೇಕು. ಅವರು ಹೂ ಅಂದರೆ ಹೂ ಇಲ್ಲ ಅಂದರೆ ಇಲ್ಲ. ’ಸರ್ಕಾರ’ ಎಂದರೆ ಲೆಫ್ಟಿನೆಂಟ್ ಗವರ್ನರ್ ಮಾತ್ರ. ಜನರಿಂದ ಆಯ್ಕೆಯಾದವರಿಗೆ ತುಸು ಗೌರವವೂ ಇಲ್ಲವೇ?

ತಿದ್ದುಪಡಿ ತಂದಿರುವ ದೊಡ್ಡ ಸಂಕಷ್ಟ ಏನು?

ಇದಕ್ಕೂ ಮೊದಲು ಪೊಲೀಸ್, ಸಾರ್ವಜನಿಕ ಸುವ್ಯವಸ್ಥೆ ಮತ್ತು ಭೂವ್ಯವಹಾರಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ರೀತಿಯ ಸಂಗತಿಗಳಲ್ಲಿ ಲೆಫ್ಟಿನೆಂಟ್ ಜನರಲ್ ಅವರ ಒಪ್ಪಿಗೆ ಪಡೆದುಕೊಳ್ಳಬೇಕಾದ ಅಗತ್ಯ ಇರಲಿಲ್ಲ, ಆದರೆ ಈಗ ಪ್ರತಿಯೊಂದಕ್ಕೂ ಎಲ್‌ಜಿ ಅವರ ಮನೆ ಬಾಗಿಲು ತಟ್ಟುವ ಪ್ರಮೇಯವನ್ನು ತಿದ್ದುಪಡಿ ತಂದಿಟ್ಟಿದೆ.

ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ವ್ಯಾಪ್ತಿಯ ಬಗ್ಗೆ 2018ರಲ್ಲಿ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿತ್ತು. ದೆಹಲಿಯ ಎಲ್‌ಜಿ ಸ್ವತಂತ್ರವಾಗಿ ವರ್ತಿಸುವಂತಿಲ್ಲ, ಸರ್ಕಾರದ ನೀತಿ ನಿರ್ಧಾರಗಳಿಗೆ ಅಡ್ಡಿಪಡಿಸುವಂತಿಲ್ಲ. ಸಂವಿಧಾನವು ಚುನಾಯಿತ ಸರಕಾರಕ್ಕೆ ಮಹತ್ವ ನೀಡಿರುವಾಗ ಅದರ ನಿರ್ಧಾರಗಳಲ್ಲಿ ಎಲ್‌ಜಿ ಕೈಯಾಡಿಸುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು.

ಆದರೆ ಈಗ ಬಿಜೆಪಿ ಸರ್ಕಾರದ ಉಪ್ಪು ಕದಿಯುವ ಬುದ್ಧಿಯಿಂದ ದೆಹಲಿ ಸರ್ಕಾರಕ್ಕೆ ನ್ಯಾಯಾಲಯದಿಂದ ಸಿಕ್ಕಿದ್ದ ಈ ಹಕ್ಕು ಏನಾಗಲಿದೆ? ಮಣ್ಣುಪಾಲೇ!

’ಶಾಸಕಾಂಗ ರೂಪಿಸುವ ಯಾವುದೇ ಕಾನೂನಿನ ಪ್ರಕಾರ ಸರ್ಕಾರ ಎಂದರೆ ಅದು ಲೆಫ್ಟಿನೆಂಟ್ ಜನರಲ್’ ಎಂದು ನೇರವಾಗಿ ಪ್ರಜಾಪ್ರಭುತ್ವದ, ಸಂವಿಧಾನದ ಆಶಯಗಳ ಮುಖದ ಮೇಲೆ ಹೊಡೆಯುವಷ್ಟು (ಈಗಾಗಲೇ ಸಾಕಷ್ಟು ಬಾರಿ ಹೊಡೆದಿದೆ) ಬಿಜೆಪಿ ಮುಂದಕ್ಕೆ ಹೋಗಿದೆ.

ಈ ವಿವಾದ ಶುರು ಮಾಡಿದ್ದು ಯಾರು ಕಾಂಗ್ರೆಸ್/ ಬಿಜೆಪಿ?

ಕಾಂಗ್ರೆಸ್ ಸರ್ಕಾರ ಕೇಂದ್ರಾಡಳಿತ ಪ್ರದೇಶವಾಗಿದ್ದ ರಾಷ್ಟ ರಾಜಧಾನಿ ದೆಹಲಿಯಲ್ಲಿ ಸೀಮಿತ ಅಧಿಕಾರ ಹೊಂದಿರುವ ವಿಧಾನಸಭೆಗೆ ಅವಕಾಶ ನೀಡಿ ’ರಾಷ್ಟ್ರ ರಾಜಧಾನಿ ಪ್ರದೇಶ- ದೆಹಲಿ ಸರ್ಕಾರ’ (NCT) ಕಾಯ್ದೆ- 1991 ಅನ್ನು ಜಾರಿಗೊಳಿಸಲಾಯಿತು. 1996ರಿಂದಲೂ ದೆಹಲಿ ಸರ್ಕಾರ, ಕೇಂದ್ರ ಸರ್ಕಾರದ ಜೊತೆಗಿನ ಎಲ್ಲಾ ರೀತಿಯ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುತ್ತಿದ್ದವು. ಆದರೆ, 2015ರಲ್ಲಿ ದೆಹಲಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಹಾಗಾದರೆ ಇಲ್ಲಿ ಎರಡು ಬಗೆದದ್ದು ಬಿಜೆಪಿಯೇ ಎಂದಾಯಿತು.

’ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಸೂದೆಯ ಸಾಲುಗಳು ದೆಹಲಿ ನಾಗರಿಕರಿಗೆ ಅವಮಾನ ಮೂಡುವಂತಿವೆ. ದೆಹಲಿಯ ಜನರು ಮತ ಚಲಾಯಿಸಿ ಆಯ್ಕೆ ಮಾಡಿದವರಿಂದ ಅಧಿಕಾರವನ್ನು ಕಿತ್ತುಕೊಂಡು, ಸೋತವರಿಗೆ ಅಧಿಕಾರ ನೀಡಿರುವ ಬಿಜೆಪಿಯು ದೆಹಲಿ ಜನರಿಗೆ ಮೋಸ ಮಾಡಿದೆ’ ಎಂದು ದೆಹಲಿ ಮುಖ್ಯಮಂತ್ರಿ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

’ಇತ್ತೀಚೆಗೆ ಗುಜರಾತ್ ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅದರಲ್ಲೂ ಸೂರತ್‌ನಲ್ಲಿ ಎಎಪಿ 22 ಸೀಟುಗಳನ್ನು ಗೆದ್ದು ಪಾದಾರ್ಪಣೆ ಮಾಡಿದ್ದು ಅಮಿತ್ ಷಾ, ನರೇಂದ್ರ ಮೋದಿ ಅವರ ಗರ್ವಕ್ಕೆ ಪೆಟ್ಟುಕೊಟ್ಟಿದೆ. ಅಲ್ಲದೇ ಇಡೀ ರಾಷ್ಟ್ರದಲ್ಲಿ ಅದರಲ್ಲೂ ಪ್ರಮುಖವಾಗಿ ಉತ್ತರ ಭಾರತ ಭಾಗದಲ್ಲಿ ಬಿಜೆಪಿಗೆ ಆತಂಕ ಮೂಡಿಸುತ್ತಿರುವ ಏಕೈಕೆ ಪಕ್ಷವೆಂದರೆ ಆಮ್ ಆದ್ಮಿ ಪಕ್ಷವೊಂದೆ. ಆದ ಕಾರಣ ನಮ್ಮ ಪಕ್ಷವನ್ನು ಮುಗಿಸುವ ಹುನ್ನಾರವೇ ಕಾಯ್ದೆಯ ತಿದ್ದುಪಡಿ’ ಎಂಬುದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಮಾತು.

’ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರು ಮಸೂದೆ ಮಂಡನೆಯ ವೇಳೆ ಸರ್ಕಾರದ ದಕ್ಷತೆ ಹೆಚ್ಚಾಗಲಿದೆ ಅಲ್ಲದೇ, ದೆಹಲಿ ಸರ್ಕಾರದ ಕಾರ್ಯವಿಧಾನಕ್ಕೆ ಸಂಬಂಧಿಸಿದಂತೆ ಅಸ್ಪಷ್ಟತೆ ಸೃಷ್ಟಿಯಾಗಿತ್ತು. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಿಂದ ಮಸೂದೆ ಮಂಡಿಸಲಾಗಿದೆ. ದೆಹಲಿಗೆ ಎಲ್‌ಜಿ ಅವರೇ ಆಡಳಿತಗಾರರಾಗಿದ್ದಾರೆ. ಅಲ್ಲದೆ ಸರ್ಕಾರದ ದೈನಂದಿನ ವ್ಯವಹಾರಗಳನ್ನು ತಿಳಿದುಕೊಳ್ಳುವ ಅಧಿಕಾರ ಅವರಿಗೆ ಇದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ಆಡಳಿತಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎನ್ನುವ ತಿಪ್ಪೆ ಸಾರಿಸುವ ಮಾತುಗಳನ್ನು ಆಡುತ್ತಲೇ ನಮ್ಮ ಸರ್ಕಾರದ ಧಮನಕ್ಕೆ ಬಿಜೆಪಿ ನಿಂತಿದೆ’ ಎಂಬುದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಅಭಿಪ್ರಾಯ.

ದೆಹಲಿಯ ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಜನರಲ್ ಅಧಿಕಾರದ ಜಟಾಪಟಿ ಹೊಸತೇನೂ ಅಲ್ಲ. ಕೇಂದ್ರ ಸರ್ಕಾರವು 2015ರಲ್ಲಿ ಲೆಫ್ಟಿನೆಂಟ್ ಜನರಲ್ ನಜೀಬ್ ಜಂಗ್ ಸಹ ಇದೇ ಮಾತು ಹೇಳಿದ್ದರು. ’ಸರ್ಕಾರ ಎಂದರೆ ರಾಷ್ಟ್ರಪತಿಯ ಮೂಲಕ ಸಂವಿಧಾನದ 239ನೇ ಪರಿಚ್ಛೇದದ ಅನ್ವಯ ನೇಮಕಗೊಂಡ ಲೆಫ್ಟಿನೆಂಟ್ ಜನರಲ್’ ಎಂದಿದ್ದರು.

ಒಟ್ಟಿನಲ್ಲಿ ಬಿಜೆಪಿ ಎಷ್ಟು ಮೊಂಡುತನ ಬೆಳೆಸಿಕೊಂಡಿದೆ ಎಂದರೆ ನಾಳೆ ಬಾ ಎಂದು ಬಾಗಿಲ ಮೇಲೆ ಬರೆದರೂ ಇಂದೇ ಬರುವೆ ಎನ್ನುವ ಭೂತದಂತಾಗಿದೆ. ಈ ಭೂತ ಇಂದು ದೆಹಲಿಯ ಬಾಗಿಲು ಮಾತ್ರ ಬಡಿದಿಲ್ಲ, ಎಲ್ಲರ ಮನೆ ಬಾಗಿಲಿಗೂ ಬರುತ್ತೇವೆ ಎನ್ನುವ ಮುಸ್ಸೂಚನೆಯೇ ಇದು?

ಗುಜರಾತ್ ಮಾಡೆಲ್‌ಅನ್ನು ಇಡೀ ದೇಶವೇ ಮರೆಯುವಂತೆ ಮಾಡಿ, ಬಿಜೆಪಿಗೆ ಮಗ್ಗುಲು ಮುಳ್ಳಾಗಿ ಬೆಳೆಯುತ್ತಿದ್ದ ಅರವಿಂದ ಕೇಜ್ರಿವಾಲ್ ಅವರ ದೆಹಲಿ ಮಾಡೆಲ್ ಎನ್ನುವ ಬೆಣ್ಣೆ ಜಾರಿ ಬಿಜೆಪಿಯ ರೊಟ್ಟಿಗೆ ಬಿದ್ದಿದೆ. ಇನ್ನು ನಿಮ್ಮ, ನಿಮ್ಮ ಮಾದರಿಗಳನ್ನು ನೀವಿಟ್ಟುಕೊಳ್ಳಿ ನಾವು ಹೇಳುವ ಮಾದರಿಯೇ ಅಂತಿಮ ಮರಣ ಶಾಸನ ಇದಾಗಲಿದೆಯೇ? ಎಲ್ಲವೂ ಆಗುತ್ತಿರುವ ಈ ಹೊತ್ತಿನಲ್ಲಿ ಇದೂ ಆಗಲಿದೆ ಎನ್ನುವುದೇ ದುರಂತ.

ಸೋಮಶೇಖರ್ ಶಿರಾ
ಪತ್ರಕರ್ತರು. ಸದ್ಯ ಎಎಪಿ ಕರ್ನಾಟಕದ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.


ಇದನ್ನೂ ಓದಿ: ಗದ್ದಲ, ವಿರೋಧಗಳ ನಡುವೆ ರಾಜ್ಯಸಭೆಯಲ್ಲೂ ದೆಹಲಿ ಮಸೂದೆ ಅಂಗೀಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...