ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಬೋಸ್ ಅವರು ಬುಧವಾರ ಬಿಜೆಪಿಗೆ ರಾಜೀನಾಮೆ ಘೋಷಿಸಿದ್ದಾರೆ.
ಚಂದ್ರಬೋಸ್ ಅವರು 2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ 2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು.
ನಾನು ಬಿಜೆಪಿಗೆ ಸೇರಿದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ ಅದೇನೂ ನಡೆದಿಲ್ಲ ಎಂದು ಚಂದ್ರ ಬೋಸ್ ರಾಜೀನಾಮೆ ವೇಳೆ ಹೇಳಿದ್ದಾರೆ.
2016 ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ಚಂದ್ರ ಬೋಸ್ ಅವರನ್ನು 2020 ರಲ್ಲಿ ನಡೆದ ಪಕ್ಷದ ಸಂಘಟನೆ ಪುನರ್ರಚನೆಯ ಭಾಗವಾಗಿ ಈ ಸ್ಥಾನದಿಂದ ತೆಗೆದು ಹಾಕಲಾಗಿದೆ.
ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದು, ರಾಜೀನಾಮೆ ಪತ್ರದಲ್ಲಿ ಬಿಜೆಪಿ ವೇದಿಕೆ ಮೂಲಕ ತನ್ನ ಸಿದ್ದಾಂತವನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದ್ದೆ. ಎಲ್ಲಾ ಸಮುದಾಯಗಳನ್ನು ಭಾರತೀಯರಾಗಿ ಒಗ್ಗೂಡಿಸುವ ನೇತಾಜಿ ಅವರ ಸಿದ್ಧಾಂತವನ್ನು ಪ್ರಚಾರ ಮಾಡುವ ಪ್ರಾಥಮಿಕ ಉದ್ದೇಶದೊಂದಿಗೆ ಬಿಜೆಪಿಯ ಚೌಕಟ್ಟಿನೊಳಗೆ ಆಜಾದ್ ಹಿಂದ್ ಮೋರ್ಚಾವನ್ನು ರಚಿಸಲು ನಿರ್ಧರಿಸಿದ್ದೆ. ಇದಕ್ಕೆ ಬಿಜೆಪಿಯಿಂದ ಯಾವುದೇ ಬೆಂಬಲ ಸಿಕ್ಕಿಲ್ಲ. ಕೇಂದ್ರ ಅಥವಾ ರಾಜ್ಯ ಬಿಜೆಪಿಯ ಯಾವುದೇ ನಾಯಕರಿಂದ ನನ್ನ ಪ್ರಸ್ತಾವನೆಗೆ ಮನ್ನಣೆ ನೀಡಿಲ್ಲ. ನನ್ನ ಪ್ರಸ್ತಾಪಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೆ ಬಿಜಪಿಯ ನಾಯಕತ್ವವನ್ನು ಭೋಷ್ ಅವರು ಹಲವು ಬಾರಿ ಟೀಕಿಸಿದ್ದರು. 2019ರಲ್ಲಿ ಸಿಎಎ ವಿರುದ್ಧ ಹೇಳಿಕೆಯನ್ನು ನೀಡಿದ್ದರು.
ಇದನ್ನು ಓದಿ: ವಿಶೇಷ ಅಧಿವೇಶನ: ಚೀನಾ ಗಡಿ ಸಂಘರ್ಷ ಸೇರಿ 9 ಅಂಶಗಳ ಚರ್ಚೆಗೆ ಆಗ್ರಹಿಸಿ ಸೋನಿಯಾ ಗಾಂಧಿ ಪತ್ರ