“ನಾನು ಮುಖ್ಯಮಂತ್ರಿಯಾಗಲು ಎಂದಿಗೂ ಬಯಸಲಿಲ್ಲ, ಬದಲಾವಣೆಯನ್ನಷ್ಟೇ ಬಯಸುತ್ತೇನೆ” ಎಂದು ನಟ ಹಾಗೂ ರಾಜಕಾರಣಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ. ತಮ್ಮ ಪ್ರಸ್ತಾವನೆಯಲ್ಲಿ ವಿದ್ಯಾವಂತ ಮತ್ತು ಸಹಾನುಭೂತಿಯ ಯುವಕರನ್ನು ಮುಖ್ಯಮಂತ್ರಿಯಾಗಿ ನೇಮಿಸುವುದು ಕೂಡಾ ಸೇರಿದೆ ಎಂದು ಹೇಳಿದ್ದಾರೆ.
ಚನ್ನೈನಲ್ಲಿ ’ರಜಿನಿ ಮಕ್ಕಳ ಮಂದ್ರಂ’ ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿ ಮಾತನಾಡಿದ ಅವರು, ಈಗ ನಾವು ರಾಜಕೀಯ ಮತ್ತು ಸರ್ಕಾರವನ್ನು ಬದಲಾಯಿಸದಿದ್ದರೆ ಇನ್ಯಾವಾಗಲೂ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನಮ್ಮ ರಾಜಕೀಯದಲ್ಲಿ ಇಬ್ಬರು ಪ್ರಮುಖರು ಇದ್ದರು, ಒಬ್ಬರು ಜಯಲಲಿತಾ ಮತ್ತೊಬ್ಬರು ಕರುಣಾನಿಧಿ. ಜನರು ಅವರಿಗೆ ಮತ ಹಾಕಿದರು. ಆದರೆ ಈಗ ನಿರ್ವಾತವಿದೆ. ಈಗ, ಬದಲಾವಣೆಯನ್ನು ತರಲು ನಾವು ಹೊಸ ಆಂದೋಲನವನ್ನು ರಚಿಸಬೇಕಾಗಿದೆ ಎಂದು ರಜಿನಿ ಹೇಳಿದ್ದಾರೆ.
ಕಳೆದ ವಾರ, ಅವರು ತಮ್ಮ ’ರಜಿನಿ ಮಕ್ಕಳ ಮಂದ್ರಂ’ನ ಜಿಲ್ಲಾ ಕಾರ್ಯದರ್ಶಿಯನ್ನು ಭೇಟಿಯಾದ ನಂತರ “ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ವೈಯಕ್ತಿಕವಾಗಿ ಒಂದು ವಿಷಯದ ಬಗ್ಗೆ ನಿರಾಶೆಗೊಂಡಿದ್ದೇನೆ. ಸಮಯ ಬಂದಾಗ ಅದರ ಬಗ್ಗೆ ಹೇಳುತ್ತೇನೆ” ಎಂದು ಹೇಳಿದ್ದರು. 2021 ರ ರಾಜ್ಯ ಚುನಾವಣೆಗೆ ಮುನ್ನ ತಮ್ಮ ಪಕ್ಷವನ್ನು ಪ್ರಾರಂಭಿಸುವುದಾಗಿ ರಜನಿಕಾಂತ್ ಹೇಳಿದ್ದರು.
ರಜನಿಕಾಂತ್ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಇಬ್ಬರೂ ಒಟ್ಟಾಗಿ ಕೆಲಸ ಮಾಡವ ಇಚ್ಚೆ ವ್ಯಕ್ತಪಡಿಸಿದ್ದಾರೆ. 1996 ರಲ್ಲಿ “ಜಯಲಲಿತಾ ಚುನಾವಣೆಯಲ್ಲಿ ಗೆದ್ದರೆ ದೇವರಿಗೆ ಸಹ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ” ಎಂಬ ರಜನಿಕಾಂತ್ ಅವರ ಮಾತು ಡಿಎಂಕೆ ಮೈತ್ರಿಕೂಟವನ್ನು ವಿಧಾನಸಭಾ ಚುನಾವಣೆಯಲ್ಲಿ ಮುನ್ನಡೆ ಸಾಧಿಸಲು ಅನುವು ಮಾಡಿಕೊಟ್ಟಿದ್ದವು.