ದುಬೈನಲ್ಲಿ ನಡೆದ ವಿಶ್ವಸಂಸ್ಥೆಯ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ-28)ರ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯ ವೇಳೆ ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಈ ಕುರಿತು ಪ್ರಧಾನ ಮಂತ್ರಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ತಮ್ಮ ಭೇಟಿಯ ವೇಳೆ ಇತ್ತೀಚೆಗೆ ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಬಗ್ಗೆ ಮಾತುಕತೆ ನಡೆಸಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಕತಾರ್ ನ್ಯಾಯಾಲಯವು ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದ ನಂತರ ಪ್ರಧಾನಿ ಮೋದಿ ಮತ್ತು ಕತಾರ್ನ ದೊರೆಯ ಜೊತೆಗಿನ ಮೊದಲ ಭೇಟಿ ಇದಾಗಿದೆ. ಆದರೆ ಪ್ರಧಾನಿ ತಮ್ಮ ಭೇಟಿ ವೇಳೆ ಕತಾರ್ ದೊರೆ ಜೊತೆ ಈ ವಿಷಯದ ಕುರಿತು ಮಾತುಕತೆಯನ್ನು ನಡೆಸಿದ್ದಾರೆಯೇ ಎಂಬುವುದನ್ನು ಸ್ಪಷ್ಟಪಡಿಸಿಲ್ಲ.
ಕಳೆದ ತಿಂಗಳು ಕತಾರ್ನ ನ್ಯಾಯಾಲಯವು ಕತಾರ್ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ಒಮಾನಿ ಕಂಪನಿಯಿಂದ ನೇಮಕಗೊಂಡ ಎಂಟು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಭಾರತದ ಮಾಜಿ ನೌಕಾ ಅಧಿಕಾರಿಗಳ ವಿರುದ್ಧ ಬೇಹುಗಾರಿಕೆಯ ಆರೋಪ ಹೊರಿಸಲಾಗಿತ್ತು. ಕತಾರ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಕೂಡ ಸಲ್ಲಿಸಲಾಗಿದೆ. ಈ ಬಗ್ಗೆ ಒಂದು ಬಾರಿ ವಿಚಾರಣೆ ಕೂಡ ನಡೆದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಿಒಪಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದರು. ಅಲ್ಲಿ ಅವರು ವಿವಿಧ ದೇಶಗಳ ನಾಯಕರನ್ನು ಭೇಟಿಯಾಗಿದ್ದಾರೆ. ಪ್ರಧಾನಿಯವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫ್ರಾನ್ಸ್, ಇಸ್ರೇಲ್, ಮಾಲ್ಡೀವ್ಸ್, ಸ್ವೀಡನ್, ಸ್ವಿಟ್ಜರ್ಲೆಂಡ್ ಮತ್ತು ಉಜ್ಬೇಕಿಸ್ತಾನ್ ನಾಯಕರೊಂದಿಗಿನ ಮೋದಿ ಚರ್ಚೆ ಮಾಡುವ ಪೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಮೋದಿ ಅವರು ಕತಾರ್ನ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತನಾಡುತ್ತಿರುವುದು ತೋರಿಸುವ ವೀಡಿಯೊ ಕ್ಲಿಪ್ನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು.
ಭಾರತದ ಪ್ರಧಾನ ಮಂತ್ರಿಗಳ ಅಧಿಕೃತ ಖಾತೆಯಲ್ಲಿCOP ಶೃಂಗಸಭೆ ನಡೆದ ಸುಮಾರು 24 ಗಂಟೆಗಳ ನಂತರ ಕತಾರ್ ದೊರೆಯ ಜೊತೆ ಮಾತುಕತೆಯ ಕುರಿತು ಪೋಸ್ಟ್ ಮಾಡಲಾಗಿದೆ. ಪೋಸ್ಟ್ನಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯ ಸಾಧ್ಯತೆ ಮತ್ತು ಕತಾರ್ನಲ್ಲಿರುವ ಭಾರತೀಯರ ಯೋಗಕ್ಷೇಮದ ಕುರಿತು ಸಕಾರಾತ್ಮಕ ಚರ್ಚೆ ನಡೆಸಿರುವುದಾಗಿ ಮೋದಿ ತಿಳಿಸಿದ್ದಾರೆ. ಆದರೆ ಮೋದಿ ಅವರು ಕತಾರ್ ದೊರೆಯೊಂದಿಗೆ ಎಂಟು ಭಾರತೀಯರ ಸಮಸ್ಯೆಯ ಕುರಿತು ಪ್ರಸ್ತಾಪಿಸಿದ್ದಾರೆಯೇ ಎಂಬುದಕ್ಕೆ ಯಾವುದೇ ದೃಢೀಕರಣವಿಲ್ಲ.
ಏನಿದು ಪ್ರಕರಣ?
ಕತಾರ್ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ನೀಡುವ ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸಸ್ಗಾಗಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳನ್ನು ಕಳೆದ ವರ್ಷದ ಆಗಸ್ಟ್ನಲ್ಲಿ ಕತಾರ್ ಪೊಲೀಸರು ಬಂಧಿಸಿದ್ದರು. ಬಂಧಿತರ ಮೇಲೆ ಬೇಹುಗಾರಿಕೆಯ ಆರೋಪವನ್ನು ಹೊರಿಸಲಾಗಿದೆ. ಈ 8 ಮಾಜಿ ಅಧಿಕಾರಿಗಳ ಜಾಮೀನು ಅರ್ಜಿಗಳನ್ನು ಹಲವಾರು ಬಾರಿ ತಿರಸ್ಕರಿಸಲಾಗಿದೆ ಮತ್ತು ಅವರ ಬಂಧನವನ್ನು ಕತಾರ್ ಅಧಿಕಾರಿಗಳು ವಿಸ್ತರಿಸಿದ್ದರು. ಬಂಧಿತ ಭಾರತೀಯರಲ್ಲಿ ನಿವೃತ್ತ ಕಮಾಂಡರ್ ಪೂರ್ಣೇಂದು ತಿವಾರಿ ಅವರು ಅಲ್ ದಹ್ರಾ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ನಮಗೆ ಈ 8 ಜನರಿಗೆ ವಿಧಿಸಿರುವ ಶಿಕ್ಷೆಯ ವಿಚಾರವಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮರಣದಂಡನೆ ವಿಧಿಸಲಾಗಿದೆ ಎಂಬುದನ್ನು ತಿಳಿದು ತೀವ್ರ ಆಘಾತವಾಗಿದೆ. ಇವರ ಕುಟುಂಬದ ಸದಸ್ಯರ ಜೊತೆ ಮತ್ತು ಕಾನೂನು ತಂಡದ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿತ್ತು.
ಇದನ್ನು ಓದಿ: ದುಂಡಾ ಜಾತಿ ಹಿಂಸಾಚಾರ: ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದ ಬಿಜೆಪಿ ಸರಕಾರ