ಹಿಂದೂ ಧರ್ಮವನ್ನು ಅನುಸರಿಸುವವರು ಮಾತ್ರ ದೇವಾಲಯಗಳಲ್ಲಿ ಉದ್ಯೋಗಕ್ಕೆ ಅರ್ಹರು. ಇತರ ಧರ್ಮದವರಿಗೆ ಅವಕಾಶವಿಲ್ಲ ಎಂದು ಆಂಧ್ರ ಪ್ರದೇಶದ ಹೈಕೋರ್ಟ್ ಸೋಮವಾರ ಹೇಳಿದೆ.
ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ತನ್ನನ್ನು ತೆಗೆದು ಹಾಕಿರುವುದನ್ನು ಪ್ರಶ್ನಿಸಿ ಪಿ ಸುದರ್ಶನ್ ಬಾಬು ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರಿನಾಥ್ ನೂನೆಪಲ್ಲಿ, ಅರ್ಜಿದಾರ ಸುದರ್ಶನ್ ತಾನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂಬುವುದನ್ನು ಮುಚ್ಚಿಟ್ಟು ದೇವಸ್ಥಾನದಲ್ಲಿ ದಾಖಲೆ ಸಹಾಯಕರಾಗಿ ಅನುಕಂಪದ ನೇಮಕಾತಿ ಪಡೆದಿರುವುದು ರುಜುವಾತಾಗಿದೆ ಎಂದಿದ್ದು, ಸುದರ್ಶನ್ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೆ, ದೇವಸ್ಥಾನಗಳಲ್ಲಿ ಹಿಂದೂ ಧರ್ಮ ಅನುಸರಿಸುವವರಿಗೆ ಮಾತ್ರ ಉದ್ಯೋಗಕ್ಕೆ ಅವಕಾಶ ಎಂದು ತೀರ್ಪು ನೀಡಿದ್ದಾರೆ.
ಅರ್ಜಿದಾರ ಸುದರ್ಶನ್ ಬಾಬು 2002 ರಲ್ಲಿ, ತಾನು ಹಿಂದೂ ಧರ್ಮ ಮತ್ತು ಎಸ್ಸಿ (ಮಾಲಾ) ಸಮುದಾಯಕ್ಕೆ ಸೇರಿದವನು ಎಂದು ಸುಳ್ಳು ಹೇಳಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದಿದ್ದಾರೆ. ನಂತರ 2010ರಲ್ಲಿ ಹೋಲಿ ಕ್ರಾಸ್ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ವಿವಾಹವಾಗಿದ್ದಾರೆ. ಹಿಂದೂ ಎಂದು ಸುಳ್ಳು ಹೇಳಿಕೊಂಡು ಕೆಲಸ ಪಡೆದಿದ್ದಕ್ಕಾಗಿ ಸುದರ್ಶನ್ ವಿರುದ್ಧ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದ್ದವು.
ದೂರಿನನ್ವಯ ಸುದರ್ಶನ್ ಅವರಿಗೆ ಲೋಕಾಯುಕ್ತ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸುದರ್ಶನ್, ತಾನು ತನ್ನ ನಂಬಿಕೆಯನ್ನು ಮುಚ್ಚಿಟ್ಟಿಲ್ಲ ಎಂದು ಪ್ರತಿಪಾದಿಸಿ
ಜಾತಿ ಪ್ರಮಾಣ ಪತ್ರ ಮತ್ತು ಶಾಲಾ ದಾಖಲಾತಿಗಳನ್ನು ಲೋಕಾಯುಕ್ತಕ್ಕೆ ಒದಗಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ಸುದರ್ಶನ್ ತನ್ನ ಧರ್ಮವನ್ನು ಮುಚ್ಚಿಟ್ಟು ಉದ್ಯೋಗ ಪಡೆದಿದ್ದಾರೆ ಎಂಬ ಅಂಶವನ್ನು ಪತ್ತೆ ಹಚ್ಚಿತ್ತು. ಈ ಬೆನ್ನಲ್ಲೇ ಶ್ರೀಶೈಲ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಸುದರ್ಶನ್ ಅವರನ್ನು ತೆಗೆದು ಹಾಕಿತ್ತು.
ಇದನ್ನೂ ಓದಿ : ಮಧ್ಯಪ್ರದೇಶ: ಘರ್ಷಣೆ ವೇಳೆ ಕೈ ಕಾರ್ಯಕರ್ತ ಸಾವು: ಬಿಜೆಪಿ ಅಭ್ಯರ್ಥಿಯ ಬಂಧನಕ್ಕೆ ಪ್ರತಿಭಟನೆ