ಹಣಕಾಸಿನ ನೀತಿಯಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡಬಾರದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿದ್ದು, ಕೊರೊನಾ ಸಾಂಕ್ರಮಿಕದ ಹಿನ್ನಲೆಯಲ್ಲಿ “ವಿವಿಧ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ” ಎಂದು ಮಾಹಿತಿ ನೀಡಿದೆ.
ರಿಯಲ್ ಎಸ್ಟೇಸ್ ಸೇರಿದಂತೆ ಇನ್ನೂ ಹೆಚ್ಚಿನ ವಲಯಗಳಿಗೆ ನೆರವು ನೀಡಬೇಕು ಎಂಬ ಬೇಡಿಕೆಗೆ ಕೇಂದ್ರವು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ, “ಆರ್ಥಿಕ ನೀತಿಯು ಸರ್ಕಾರದ ನಿಯಂತ್ರಣದ್ದಾಗಿದ್ದು, ನ್ಯಾಯಾಲಯ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. 2 ಕೋಟಿವರೆಗಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡುವುದರ ಜೊತೆಗೆ ಇನ್ನೂ ಹೆಚ್ಚಿನ ಪರಿಹಾರ ನೀಡಿದರೆ ಅದು ರಾಷ್ಟ್ರದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಾನಿಯುಂಟು ಮಾಡುತ್ತದೆ” ಎಂದು ಹೇಳಿದೆ.
ಆದರೆ ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ’’ತೃಪ್ತಿಕರವಾಗಿಲ್ಲ” ಎಂದು ಸುಪ್ರೀಂಕೋರ್ಟ್ ಹೇಳಿದ್ದು, ಒಂದು ವಾರದಲ್ಲಿ ಹೊಸ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ಇದನ್ನೂ ಓದಿ: ಕೊರೊನಾದಿಂದ 551 ವೈದ್ಯರ ಸಾವು: ಭಾರತೀಯ ವೈದ್ಯಕೀಯ ಸಂಘಟನೆಯ ದತ್ತಾಂಶ
2 ಕೋಟಿವರೆಗಿನ ಸಾಲದ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಿದ್ಧ ಎಂದು ಸರ್ಕಾರ ಕಳೆದ ವಾರ ಸುಪ್ರೀಂಕೋರ್ಟ್ ತಿಳಿಸಿತ್ತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ತೆಗೆದುಕೊಂಡ ಸಾಲಗಳಿಗೆ, ಶೈಕ್ಷಣಿಕ, ವಸತಿ, ಗ್ರಾಹಕ ವಸ್ತುಗಳು ಮತ್ತು ವಾಹನ ಸಾಲಗಳಿಗೆ ಮತ್ತು ಕ್ರೆಡಿಟ್ ಕಾರ್ಡ್ ಬಾಕಿಗಾಗಿ ಈ ಬಡ್ಡಿ ಮನ್ನಾ ಅನ್ವಯಿಸುತ್ತದೆ.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸಣ್ಣ ಸಾಲಗಾರರಿಗೆ ಸಹಾಯ ಮಾಡಲು ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿ ಮನ್ನಾದ ವಿಚಾರಣೆ ಆಲಿಸುತ್ತಿದ್ದ ಸುಪ್ರೀಂಕಕೋರ್ಟ್, “ಅರ್ಜಿದಾರರು ಎತ್ತಿದ ಹಲವಾರು ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ” ಎಂದು ಹೇಳಿದೆ.
ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಉತ್ಪಾದಕರ ಕಳವಳಗಳನ್ನು ಹೊಸ ಅಫಿಡವಿಟ್ಗಳಲ್ಲಿ ಪರಿಗಣಿಸಲು ಸರ್ಕಾರವನ್ನು ಕೇಳಲಾಯಿತು.
ಇದನ್ನೂ ಓದಿ: 10 ಕೋಟಿ ಜನರನ್ನು ತೀವ್ರ ಬಡತನಕ್ಕೆ ದೂಡಲಿದೆ ಕೊರೊನಾ: ವಿಶ್ವಬ್ಯಾಂಕ್