ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಶಾಲೆಯ ಮಾಲೀಕರೋರ್ವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ನಿಂದನೆಯ ಹೇಳಿಕೆಗಳನ್ನು ನೀಡಿದರೆ ಮಾತ್ರ ವ್ಯಕ್ತಿಯನ್ನು ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಬಹುದು ಎಂದು ಹೇಳಿದೆ.
ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಶ್ನಿಸಿ ಶಾಲಾ ಮಾಲಕರೋರ್ವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಮೀಮ್ ಅಹ್ಮದ್, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ- 1989ರ ಕಾಯ್ದೆಯಡಿಯಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸದಸ್ಯರ ಜಾತಿಯ ಹೆಸರನ್ನು ಯಾವುದೇ ಹೊರಗಿನವರು ಇಲ್ಲದ ವೇಳೆ ಉಚ್ಚರಿಸುವ ಮೂಲಕ ಮೌಖಿಕ ನಿಂದನೆ ಮಾಡಿದರೆ ಅಪರಾಧವಾಗುವುದಿಲ್ಲ. SC/ST ಕಾಯಿದೆಯ ಸೆಕ್ಷನ್ 3(1)(s) ಅಡಿಯಲ್ಲಿ ಒಬ್ಬ ವ್ಯಕ್ತಿಯು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೇಳಿಕೆಗಳನ್ನು ನೀಡಿದರೆ ಮಾತ್ರ ಅಪರಾಧಕ್ಕಾಗಿ ವಿಚಾರಣೆಗೆ ಒಳಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.
12ನೇ ತರಗತಿ ಪರೀಕ್ಷೆಯಲ್ಲಿ ತನ್ನ ಮಗ ಅನುತ್ತೀರ್ಣಗೊಂಡ ಬಳಿಕ ಪೋಷಕರು ಶಾಲಾ ಮಾಲೀಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ನ್ಯಾಯಾಲಯವು ವಿಚಾರಣೆಯ ವೇಳೆ ಗಮನಿಸಿದೆ. ಆರೋಪಿ ಮತ್ತು ಆತನ ಸಹಚರರು ದೂರು ಹಿಂಪಡೆಯಲು 5 ಲಕ್ಷ ರೂ. ನೀಡುವುದಾಗಿ ಹೇಳಿದ್ದರು ಮತ್ತು ಆರೋಪಿಗಳು ತಮ್ಮ ಜಾತಿಯ ಹೆಸರು ಹೇಳಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಆರೋಪಿಗಳು ಸಾರ್ವಜನಿಕವಾಗಿ ದೂರುದಾರರನ್ನು ನಿಂದಿಸಿಲ್ಲ ಎಂದು ಕೋರ್ಟ್ ಗಮನಿಸಿದೆ.
ಸಮಾಜದ ದುರ್ಬಲ ವರ್ಗದ ಸದಸ್ಯರು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮತ್ತು ಕಿರುಕುಳಗಳಿಗೆ ಒಳಗಾದಾಗ ಕಾಯಿದೆ 1989ರ ಅಡಿಯಲ್ಲಿ ಅಪರಾಧವನ್ನು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಪ್ರಕರಣದ ಸಾಕ್ಷಿಗಳು ದೂರುದಾರರ ಆಪಾದಿತ ಘಟನೆ ನಡೆದಾಗ ಮನೆಯಲ್ಲಿ ಸಹ ಇರಲಿಲ್ಲ ಎಂದು ಅದು ಕಂಡುಹಿಡಿದಿದೆ. ಆಪಾದಿತ ಘಟನೆಯ ವೇಳೆ ಯಾವುದೇ ಹೊರಗಿನವರು ಕೋಣೆಯಲ್ಲಿ ಕುಳಿತಿಲ್ಲ ಅಥವಾ ಯಾರೂ ಆಪಾದಿತ ಘಟನೆಯನ್ನು ನೋಡಿಲ್ಲವಾದ್ದರಿಂದ ಸಾರ್ವಜನಿಕ ವೀಕ್ಷಣೆಯ ಸ್ಥಳವಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ ವಿದ್ಯಾರ್ಥಿಗಳ ಫಲಿತಾಂಶ ಮತ್ತು ಪರೀಕ್ಷೆಯು ಸಿಬಿಎಸ್ಇಯ ಸಂಪೂರ್ಣ ಪ್ರಕ್ರಿಯೆಯಾಗಿದೆ ಮತ್ತು ಆರೋಪಿಗಳಿಗೆ ಪ್ರಕ್ರಿಯೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯವು ಹೇಳಿದೆ.
ಇದನ್ನು ಓದಿ: ಪೂಂಛ್ನಲ್ಲಿ ಸೈನಿಕರ ಚಿತ್ರಹಿಂಸೆಯಿಂದ ಮೂವರು ನಾಗರಿಕರು ಸಾವು?