ತೀವ್ರ ವಿವಾದಕ್ಕೊಳಗಾಗಿದ್ದ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ವಿಷಯದಲ್ಲಿ ಒಂದು ಹೆಜ್ಜೆ ಹಿಂದೆ ಇಟ್ಟಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಬದಲಾಗಿ ‘ಸಾಮಾನ್ಯ ಮೌಲ್ಯಮಾಪನ ಪರೀಕ್ಷೆ’ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಶಿಕ್ಷಕರ ಸದನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪಬ್ಲಿಕ್ ಪರೀಕ್ಷೆ ಇರುತ್ತದೆ. ಆದರೆ ಇದು ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯಾಗಿರುತ್ತದೆ. ಮಕ್ಕಳ ಕಲಿಕಾ ಮಟ್ಟ ಮೌಲ್ಯಾಂಕನ ಮಾಡೋದು ಈ ಪರೀಕ್ಷೆಯ ಉದ್ದೇಶ. ಇದರಲ್ಲಿ ಪಾಸ್, ಫೇಲ್ ಎಂಬುದು ಇರುವುದಿಲ್ಲ. ಮಗುವಿನ ಕಲಿಕಾ ಮಟ್ಟವನ್ನ ಅಳೆಯುವುದು ಇದರ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಬೆಳಗಾವಿ ವಿಭಾಗದಲ್ಲಿ ಸಾಮಾನ್ಯ ಮೌಲ್ಯಮಾಪನ ಪರೀಕ್ಷೆಯನ್ನು ಪ್ರಯೋಗ ಮಾಡಲಾಗಿದೆ. 8ನೇ ತರಗತಿಯಿಂದಲೇ ಕಲಿಕಾ ಮಟ್ಟ ಹೆಚ್ಚಿಸಬೇಕು ಎಂಬುದು ಅಧಿಕಾರಿಗಳ ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ. ಹಾಗಾಗಿ ಕೆಲ ಮಾನದಂಡಗಳನ್ನ ಇಟ್ಟುಕೊಂಡು ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ,” ಎಂದು ತಿಳಿಸಿದರು.
ಪರೀಕ್ಷಾ ವಿಧಾನ
ರಾಜ್ಯಮಟ್ಟದಲ್ಲಿ ಪ್ರಶ್ನೆಪತ್ರಿಕೆಯನ್ನು ತಯಾರು ಮಾಡುತ್ತೇವೆ. ಪರೀಕ್ಷೆಯನ್ನು ಆಯಾ ಶಾಲಾ ಶಿಕ್ಷಕರೇ ನಡೆಸಲಿದ್ದು, ಮೌಲ್ಯಮಾಪನವನ್ನು ಜಿಲ್ಲಾ ಮಟ್ಟದಲ್ಲಿ ಮಾತ್ರ ಬೇರೆ ಶಿಕ್ಷಕರು ಮಾಡುತ್ತಾರೆ. ಪರೀಕ್ಷೆ ಫಲಿತಾಂಶವನ್ನು ವಿದ್ಯಾರ್ಥಿವಾರು ಮೌಲ್ಯಮಾಪನ ಮಾಡಲಾಗುತ್ತದೆ. ಮೌಲ್ಯಮಾಪನ ಮಾಡಿ 8 ನೇ ತರಗತಿಯಿಂದ ಮಗುವಿಗೆ ಅಗತ್ಯ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ವಿವರಿಸಿದರು.
ನಾಳೆ ಶಾಲಾ-ಕಾಲೇಜು ರಜೆ ಇಲ್ಲ
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಉಮಾಶಂಕರ್ ಮಾತನಾಡಿ, ನಾಳಿನ ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಯಾವ ಶಾಲಾ – ಕಾಲೇಜುಗಳಿಗೂ ನಾವು ರಜೆ ಘೋಷಣೆ ಮಾಡಿಲ್ಲ. ಪರಿಸ್ಥಿತಿಯನ್ನು ನೋಡಿಕೊಂಡು ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತಿಮಾನ ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.