ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಗೆ ಸಂಬಂಧಿಸಿದಂತೆ ಇತ್ತೀಚಿನ ಮಧ್ಯಪ್ರದೇಶ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ (ಜನವರಿ 3) ನಿರಾಕರಿಸಿದೆ. ಪ್ರತಿ ಮತಾಂತರಕ್ಕೂ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ತಿಳಿಸಿರಬೇಕು ಎಂದು ಹೇಳಿದ ಕಾಯಿದೆಯ ನಿಬಂಧನೆಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
“ಎಲ್ಲಾ ಮತಾಂತರಗಳು ಕಾನೂನುಬಾಹಿರ ಎಂದು ಹೇಳಲಾಗುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠವು ಹೇಳಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
ನವೆಂಬರ್ 2022ರಲ್ಲಿ ಮಧ್ಯಪ್ರದೇಶದ ಹೈಕೋರ್ಟ್ ಪೀಠವು ಸರ್ಕಾರಕ್ಕೆ ಸೂಚನೆ ನೀಡಿತ್ತು. “ಮತಾಂತರಕ್ಕೂ ಮುನ್ನವೇ ಕಡ್ಡಾಯ ಘೋಷಣೆ ಮಾಡಬೇಕೆಂಬ ನಿಬಂಧನೆಗೆ ಬದ್ಧವಾಗಿರಲು ವಿಫಲರಾದ ಯಾರ ವಿರುದ್ಧವೂ ಬಲವಂತದ ಕ್ರಮವನ್ನು ತೆಗೆದುಕೊಳ್ಳಬಾರದು” ಎಂದು ಸೂಚಿಸಿತ್ತು.
“ಮತಾಂತರವನ್ನು ಬಯಸುವ ನಾಗರಿಕನು ಈ ವಿಷಯದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಘೋಷಣೆಯನ್ನು ನೀಡಬೇಕಿರುವುದು ಕಡ್ಡಾಯಗೊಳಿಸುತ್ತದೆ ಎಂದು ಕಾನೂನಿನ ಪರಿಚ್ಛೇದ 10 ಹೇಳುತ್ತದೆ. ಇದು ನಮ್ಮ ಅಭಿಪ್ರಾಯದಲ್ಲಿ ಅಸಾಂವಿಧಾನಿಕವಾಗಿದೆ. 21ರ ಕಾಯಿದೆಯ ಸೆಕ್ಷನ್ 10ರ ಉಲ್ಲಂಘನೆಗಾಗಿ ಬಲವಂತದ ಕ್ರಮವನ್ನು ತೆಗೆದುಕೊಳ್ಳಬಾರದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮಾಹಿತಿ ನೀಡದೆ ತಮ್ಮ ಧರ್ಮವನ್ನು ಮತಾಂತರಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಹೈಕೋರ್ಟ್ ತಡೆದಿದ್ದನ್ನು ಪ್ರಶ್ನಿಸಿ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಗೆತ್ತಿಕೊಂಡಿದೆ.
ಕಾಯಿದೆಯ ಸೆಕ್ಷನ್ 10ರ ಪ್ರಕಾರ, “ಬೇರೆಧರ್ಮಕ್ಕೆ ಮತಾಂತರಗೊಳ್ಳಲು ಬಯಸುವ ವ್ಯಕ್ತಿಗಳು 60 ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ ಘೋಷಣೆಯನ್ನು ಸಲ್ಲಿಸಬೇಕು, ಅವರು ಯಾವುದೇ ಬಲ, ಬಲವಂತ, ಅನಗತ್ಯ ಪ್ರಭಾವ ಅಥವಾ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿರಬೇಕು.”
ನಿಬಂಧನೆಯನ್ನು ಪಾಲಿಸದವರಿಗೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ 50,000 ರೂ. ದಂಡ ವಿಧಿಸಲಾಗುವುದೆಂದು ಕಾನೂನು ಹೇಳಿದೆ.
ಮಂಗಳವಾರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಪದೇ ಪದೇ ಮನವಿ ಮಾಡಿದರು ಎಂದು ‘ಲೈವ್ ಲಾ’ ವರದಿ ತಿಳಿಸಿದೆ.
ಇದಕ್ಕೆ ಸುಪ್ರೀಂ ಕೋರ್ಟ್, “ಎಲ್ಲಾ ಧಾರ್ಮಿಕ ಮತಾಂತರಗಳು ಕಾನೂನುಬಾಹಿರವಾಗಿರಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
“ಮದುವೆಯನ್ನು ಕಾನೂನುಬಾಹಿರ ಮತಾಂತರಕ್ಕೆ ಬಳಸಲಾಗುತ್ತದೆ. ಇದನ್ನು ನೋಡುತ್ತಾ ನಾವು ಕಣ್ಣುಮುಚ್ಚಿ ಕೂರುವುದಿಲ್ಲ” ಎಂದು ಮೆಹ್ತಾ ವಾದಿಸಿದ್ದಾರೆ.
ನ್ಯಾಯಪೀಠವು ಆದೇಶವನ್ನು ರದ್ದುಗೊಳಿಸಲು ನಿರಾಕರಿಸಿತು ಮತ್ತು ಈ ವಿಷಯದ ಬಗ್ಗೆ ನೋಟಿಸ್ ಜಾರಿಗೊಳಿಸಿತು. ಇದೀಗ ನ್ಯಾಯಾಲಯವು ಫೆಬ್ರವರಿ 7ರಂದು ಪ್ರಕರಣದ ವಿಚಾರಣೆ ನಡೆಸಲಿದೆ.
ತಪ್ಪು ನಿರೂಪಣೆ, ಬಲಪ್ರಯೋಗ, ಅನಗತ್ಯ ಪ್ರಭಾವ, ಬಲಾತ್ಕಾರ, ಯಾವುದೇ ಇತರ ಮೋಸದ ವಿಧಾನ, ಆಮಿಷ ಅಥವಾ ಮದುವೆಯ ಭರವಸೆಯ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಬಾರದು ಎಂದು ಮಧ್ಯಪ್ರದೇಶ ಸರ್ಕಾರ ಜಾರಿಗೆ ತಂದ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2021 ಹೇಳುತ್ತದೆ.
ಬಲಪಂಥೀಯರ ಪಿತೂರಿ ಸಿದ್ಧಾಂತವಾದ ‘ಲವ್ ಜಿಹಾದ್’ (ಮುಸ್ಲಿಮರು ಹಿಂದೂ ಹೆಣ್ಣುಮಕ್ಕಳನ್ನು ಮದುವೆಯಾಗಿ ಮತಾಂತರ ಮಾಡುತ್ತಾರೆಂಬ ವಾದ) ಪ್ರಸ್ತಾಪವನ್ನು ಬಿಜೆಪಿ ನಾಯಕರು ಆಗಾಗ್ಗೆ ಮಾಡುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಕೇಂದ್ರ ಗೃಹ ಸಚಿವಾಲಯವು ಲವ್ ಜಿಹಾದ್ನಂತಹ ಯಾವುದೇ ಪ್ರಕರಣಗಳ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದೆ. ಆದರೂ ಬಿಜೆಪಿ ಅಧಿಕಾರದಲ್ಲಿರುವ ಹಲವು ರಾಜ್ಯಗಳು ‘ಲವ್ ಜಿಹಾದ್’ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿವೆ.
The right answer for love ziyad , if BJP people’s have the strong dum & thakat(guts) is love pankthi (bhojana)for all Hindus with together(poor&rich) in all over India……