ಮಧ್ಯಪ್ರದೇಶದಲ್ಲಿ ತಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಎನ್ಪಿಆರ್ ಜಾರಿಗೊಳಿಸುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಕಮಲ್ನಾಥ್ ಇಂದು ಸಂಜೆ ಘೋಷಿಸಿದ್ದಾರೆ.
ಭೋಪಾಲ್ನ ಶಾಸಕ ಆರಿಫ್ ಮಸೂದ್ರವರು ಎನ್ಪಿಆರ್ ಕುರಿತು ತಮ್ಮ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು, ಎನ್ಪಿಆರ್ ವಿರುದ್ಧ ನಿಲುವು ಮಂಡಿಸಬೇಕು ಇಲ್ಲದಿದ್ದಲ್ಲಿ ಪಕ್ಷ ತೊರೆಯುತ್ತೇನೆ ಎಂದು ಬೆದರಿಕೆ ಹಾಕಿದ ಬೆನ್ನಲ್ಲೇ ಮುಖ್ಯಮಂತ್ರಿ ಕಮಲ್ನಾಥ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಮ್ಮಲ್ಲಿ ಎನ್ಪಿಆರ್ ಅಧಿಸೂಚನೆಯನ್ನು 2019ರ ಡಿಸೆಂಬರ್ 9ರಂದು ಹೊರಡಿಸಲಾಯಿತು. ಆದರೆ ಪ್ರಸ್ತುತ ನಾವು ರಾಜ್ಯದಲ್ಲಿ ಎನ್ಪಿಆರ್ ಅನ್ನು ಕಾರ್ಯಗತಗೊಳಿಸಲು ಹೋಗುತ್ತಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೌರತ್ವ ಕಾಯ್ದೆ- 1955ರಂತೆ ನಾವು ಮೊದಲು ಮುಂದುವರೆಯುತ್ತಿದ್ದೆವೆ. 2003 ರ ನಿಯಮ 3ರ ನಿಬಂಧನೆಗಳಂತೆ ನಮ್ಮ ಆದೇಶ ಹೊರಡಿಸಿದ್ದೆವು. ಆದರೆ ಇದರ ಹೊರತಾಗಿಯೂ ನಾವು ಎನ್ಪಿಆರ್ ಅನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರವು ಸೂಚಿಸಿದ ಎನ್ಪಿಆರ್ ಅನ್ನು ಸಿಎಎ 2019ರ ನಂತರ ಜಾರಿ ಮಾಡುತ್ತಿರುವುದು ಸರಿಯಿಲ್ಲ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ವಕ್ತಾರ ಮತ್ತು ಜನಸಂಪರ್ಕ ಸಚಿವ ಪಿ ಒ ಶರ್ಮಾ ಅವರು ರಾಜ್ಯದಲ್ಲಿ ಎನ್ಪಿಆರ್ ಜಾರಿಗೆ ಬರುವುದಿಲ್ಲ ಎಂದು ಸಮರ್ಥಿಸಿಕೊಂಡರು. ಈ ವಿಷಯದ ಬಗ್ಗೆ ಗೆಜೆಟ್ ಅಧಿಸೂಚನೆಯನ್ನು ಮೊದಲೇ ನೀಡಲಾಗಿದೆ ಮತ್ತು ಸ್ಪಷ್ಟಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದಿನ ದಿನ ತಾನೇ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ರವರು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರವು ಎನ್ಪಿಆರ್ ಮಾಡಬೇಕೆಂದು ಮಾರ್ಗದರ್ಶನ ನೀಡುತ್ತಿದೆ. ಇದು ಸರಿಯಾದುದ್ದಲ್ಲ ಇದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದ್ದರು.
ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೆ ಜನಗಣತಿಯ ಜೊತೆಗೆ ಎನ್ಪಿಆರ್ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಜನಗಣತಿ ಆಯೋಗವು ದೇಶದ ಪ್ರತಿ ಸಾಮಾನ್ಯ ನಿವಾಸಿಯ ಸಮಗ್ರ ಗುರುತಿನ ಡೇಟಾಬೇಸ್ ರಚಿಸುವುದು ಎನ್ಪಿಆರ್ನ ಉದ್ದೇಶವೆಂದು ಹೇಳಿತ್ತು.
ಆದರೆ ಬಿಜೆಪಿಯೇತರ ಹೆಚ್ಚಿನ ಪಕ್ಷಗಳು ಸಿಎಎಯನ್ನು ವಿರೋಧಿಸಿದ್ದವಾದರೂ ಎನ್ಪಿಆರ್ ಅನ್ನು ವಿರೋಧಿಸಿ ತೀರ್ಮಾನ ತೆಗೆದುಕೊಂಡಿದ್ದು ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಮಾತ್ರವಾಗಿದ್ದವು. ಎನ್ಪಿಆರ್ ಎನ್ಆರ್ಸಿ ಅನುಷ್ಠಾನಕ್ಕೆ ಪೂರ್ವಭಾವಿಯಾಗಿದೆ ಎಂಬ ಕಾರಣಕ್ಕೆ ಈ ನಿಲುವಿಗೆ ಬರಲಾಗುತ್ತಿದೆ.
ಎನ್ಆರ್ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರವು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದಾರೆ.