ಯೆಮನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಲು ತಾಯಿ ಹರಸಾಹಸ ಪಡುತ್ತಿದ್ದು, ಯಮನ್ಗೆ ತೆರಳಲು ಅನುಮತಿ ನೀಡುವ ವಿಷಯದಲ್ಲಿ ವಾರದೊಳಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ಸೂಚಿಸಿದೆ.
ಯೆಮೆನ್ ದೇಶದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪ್ರಿಯಾ, ಯೆಮೆನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದಾರೆ. ನ.13ರಂದು ಯೆಮೆನ್ ಸುಪ್ರೀಂಕೋರ್ಟ್, ನರ್ಸ್ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲ್ಮನವಿಯನ್ನು ವಜಾಗೊಳಿಸಿತ್ತು.
2017ರ ಜುಲೈನಲ್ಲಿ ತಲಾಲ್ ಅಬ್ದೋ ಮಹದಿಯನ್ನು ಹತ್ಯೆಗೈದಿದ್ದಕ್ಕಾಗಿ ನಿಮಿಷಾ ಪ್ರಿಯಾ ಶಿಕ್ಷೆಗೆ ಗುರಿಯಾಗಿದ್ದಾರೆ. ಆಕೆಯ ಪಾಸ್ಪೋರ್ಟ್ನ್ನು ಆತನ ಬಳಿಯಿಂದ ಪಡೆಯಲು ಆಕೆ ನಿದ್ರೆ ಬರುವ ಚುಚ್ಚುಮದ್ದನ್ನು ನೀಡಿದ್ದರು. ಪ್ರಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆತನಿಂದ ಪಾಸ್ಪೋರ್ಟ್ ತೆಗೆದುಕೊಳ್ಳುವ ತಂತ್ರವನ್ನು ಮಾಡಿದ್ದರು. ಆದರೆ ತಲಾಲ್ ಅಬ್ದೋ ಮಹದಿ ಚುಚ್ಚುಮದ್ದು ನೀಡಿದ ಬಳಿಕ ಮೃತಪಟ್ಟಿದ್ದರು. ಪ್ರಕರಣದಲ್ಲಿ ದೋಷಿ ಎಂದು ಯಮನ್ ಸರಕಾರ ನಿಮಿಷಾ ಪ್ರಿಯಾಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಇದರ ಬೆನ್ನಲ್ಲೇ ಪ್ರಿಯಾ ಅವರ ತಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಯೆಮೆನ್ಗೆ ಪ್ರಯಾಣಿಸಲು ಅನುಮತಿ ಕೋರಿದ್ದಾರೆ. ಮಹಿಳೆ ತನ್ನ ಮಗಳನ್ನು ಉಳಿಸಲು ಬಲಿಪಶುವಿನ ಕುಟುಂಬಕ್ಕೆ ಪಾವತಿಸಬೇಕಾಗಿರುವ ಪರಿಹಾರದ ಕುರಿತು ಮಾತುಕತೆ ನಡೆಸಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ
ವಕೀಲ ಸುಭಾಷ್ ಕೆಆರ್ ಮಹಿಳೆಯನ್ನು ಕೋರ್ಟ್ನಲ್ಲಿ ಪ್ರತಿನಿಧಿಸಿದ್ದು, ನಿಮಿಷಾ ಅವರನ್ನು ಗಲ್ಲು ಶಿಕ್ಷೆಯಿಂದ ರಕ್ಷಿಸುವ ಏಕೈಕ ಮಾರ್ಗವೆಂದರೆ ಹಣವನ್ನು ಪಾವತಿಸುವ ಮೂಲಕ ಮೃತನ ಕುಟುಂಬದೊಂದಿಗೆ ಮಾತುಕತೆ ನಡೆಸುವುದಾಗಿದೆ. ಅದಕ್ಕಾಗಿ ಅವರು ಯೆಮೆನ್ಗೆ ಪ್ರಯಾಣಿಸಲು ಬಯಸಿದ್ದರು. ಆದರೆ ಪ್ರಯಾಣ ನಿಷೇಧದಿಂದಾಗಿ ಅವರು ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಪ್ರಯಾಣ ನಿಷೇಧವನ್ನು ಸಡಿಲಿಸಬಹುದು ಮತ್ತು ನಿರ್ದಿಷ್ಟ ಕಾರಣಗಳು ಮತ್ತು ಅವಧಿಗಳಿಗಾಗಿ ಭಾರತೀಯ ಪ್ರಜೆಗಳಿಗೆ ಯೆಮೆನ್ಗೆ ಪ್ರಯಾಣಿಸಲು ಅನುಮತಿಸಬಹುದು ಎಂದು ಕೇಂದ್ರದ ಪರ ವಕೀಲರು ಕೋರ್ಟ್ಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್, ಪ್ರಸ್ತುತ ಅರ್ಜಿಯನ್ನು ಪ್ರಾತಿನಿಧ್ಯವೆಂದು ಪರಿಗಣಿಸಲಿ. ಇಂದಿನಿಂದ ಒಂದು ವಾರದೊಳಗೆ ನಿರ್ಧಾರವನ್ನು ತಿಳಿಸುವಂತೆ ಸೂಚಿಸಿದ್ದಾರೆ.
ಈ ಮೊದಲು ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಹಣ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂಬ ಕೋರಿಕೆಯನ್ನು ಹೈಕೋರ್ಟ್ ನಿರಾಕರಿಸಿತ್ತು. ಆದರೆ ಮರಣದಂಡನೆಯಿಂದ ಪಾರು ಮಾಡಲು ಇರಬಹುದಾದ ಕಾನೂನಾತ್ಮಕ ಪರಿಹಾರವನ್ನು ಮುಂದುವರಿಸುವಂತೆ ಸೂಚಿಸಿತ್ತು.
ಇದನ್ನು ಓದಿ: ಬೆಂಗಳೂರು: ರಸ್ತೆ ಬದಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗು ದಾರುಣ ಸಾವು