ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷಗಳು ಒಗ್ಗೂಡಲು ಸಾಧ್ಯವಿಲ್ಲ. 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರತಿಪಕ್ಷಗಳು ಒಗ್ಗೂಡಬೇಕಾದರೆ ಕಾಂಗ್ರೆಸ್ ಇರಲೇಬೇಕು ಎಂದು ಕಾಂಗ್ರೆಸ್ ನಾಯಕರು ಭಾನುವಾರ ತಿಳಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿರುದ್ಧ ಮೈತ್ರಿ ಮಾಡಿಕೊಳ್ಳಲು ವಿವಿಧ ಪಕ್ಷಗಳನ್ನು ಒಟ್ಟುಗೂಡಿಸುವಲ್ಲಿ ಕಾಂಗ್ರೆಸ್ ತನ್ನ ಪಾತ್ರವನ್ನು ಅರಿತುಕೊಂಡಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
“ಕಾಂಗ್ರೆಸ್ ಈಗಾಗಲೇ ಕ್ರಮವನ್ನು ತೆಗೆದುಕೊಂಡಿದೆ ಮತ್ತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ” ಎಂದು ವೇಣುಗೋಪಾಲ್ ತಿಳಿಸಿದ್ದಾರೆ. “ನಾವು ಖಂಡಿತವಾಗಿಯೂ ಪ್ರತಿಪಕ್ಷಗಳನ್ನು ಬಿಜೆಪಿ ವಿರುದ್ಧ ಒಗ್ಗೂಡಿಸುತ್ತೇವೆ” ಎಂದಿದ್ದಾರೆ.
“ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ ಗಳಿಸಿರುವ ಪ್ರಭಾವವನ್ನು ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಬಳಸಿಕೊಳ್ಳಬೇಕು” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಲಹೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹೊರಬಿದ್ದಿವೆ.
“ಕಾಂಗ್ರೆಸ್ ನನ್ನ ಮಾತು ಕೇಳಿದರೆ ಭಾರತೀಯ ಜನತಾ ಪಕ್ಷವು 100 ಸ್ಥಾನಗಳನ್ನು ದಾಟುವುದಿಲ್ಲ” ಎಂದು ನಿತೀಶ್ಕುಮಾರ್ ತಿಳಿಸಿದ್ದರು.
“ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕುರಿತು ಹೆಚ್ಚಿನ ಚರ್ಚೆಗಳನ್ನು ಫೆಬ್ರವರಿ 24ರಂದು ರಾಯಪುರದಲ್ಲಿ ಆರಂಭವಾಗಲಿರುವ ಪಕ್ಷದ ಮೂರು ದಿನಗಳ ಸರ್ವಸದಸ್ಯರ ಅಧಿವೇಶನದಲ್ಲಿ ನಡೆಸಲಾಗುವುದು” ಎಂದು ಕಾಂಗ್ರೆಸ್ ಸಂವಹನದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
“ನಾವು ಮುನ್ನಡೆಸಬೇಕು ಎಂದು ಯಾರೂ ನಮಗೆ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ. ಏಕೆಂದರೆ ಕಾಂಗ್ರೆಸ್ ಇಲ್ಲದೆ ಯಾವುದೇ ಪ್ರತಿಪಕ್ಷಗಳ ಒಗ್ಗಟ್ಟು ಯಶಸ್ವಿಯಾಗುವುದಿಲ್ಲ” ಎಂದು ರಮೇಶ್ ಸ್ಪಷ್ಟಪಡಿಸಿದ್ದಾರೆ. “ಆದ್ದರಿಂದ, ನಿತೀಶ್ ಕುಮಾರ್ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ … ಇದರ ಕುರಿತು ಪಕ್ಷದ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಲಾಗುವುದು” ಎಂದಿದ್ದಾರೆ.
ಚುನಾವಣಾ ಪೂರ್ವ ಮೈತ್ರಿ ಮತ್ತು ಇತರ ವಿಧಾನಗಳ ಬಗ್ಗೆಯೂ ಕಾಂಗ್ರೆಸ್ ಚರ್ಚಿಸಲಿದೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿರಿ: 1985ರಿಂದ ಕರ್ನಾಟಕದಲ್ಲಿ ಯಾವುದೇ ಪಕ್ಷದ ಸರ್ಕಾರ ಮರು ಆಯ್ಕೆಯಾಗಿಲ್ಲ; ಈ ಬಾರಿ ಏನಾಗಲಿದೆ?
ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪ್ರಭಾವವನ್ನು ಒಪ್ಪಿಕೊಂಡಿದ್ದಕ್ಕಾಗಿ ನಿತೀಶ್ ಕುಮಾರ್ ಅವರಿಗೆ ಧನ್ಯವಾದವನ್ನೂ ರಮೇಶ್ ಅರ್ಪಿಸಿದ್ದಾರೆ.
“ಇದು ಭಾರತೀಯ ರಾಜಕೀಯಕ್ಕೆ ಪರಿವರ್ತನೆಯ ಕ್ಷಣವಾಗಿದೆ, ಅವರು ಅದನ್ನು ಒಪ್ಪಿಕೊಂಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಭಾರತೀಯ ಜನತಾ ಪಕ್ಷವು ಪ್ರತಿಪಾದಿಸುವ ದ್ವೇಷದ ರಾಜಕೀಯವನ್ನು ಎದುರಿಸುವ ಗುರಿಯನ್ನು ಭಾರತ್ ಜೋಡೋ ಯಾತ್ರೆಯು ಹೊಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (12 ರಾಜ್ಯಗಳನ್ನು ಕಾಲ್ನಡಿಗೆಯಲ್ಲಿ) ಕ್ರಮಿಸಿದ ಬಳಿಕ ಭಾರತ್ ಜೋಡೋ ಯಾತ್ರೆಯು ಜನವರಿ 30ರಂದು ಕೊನೆಗೊಂಡಿತು.