ಅನರ್ಹ ಶಾಸಕರನ್ನು ಬಿ.ಎಸ್ ಯಡಿಯೂರಪ್ಪನವರು ದುಡ್ಡು ಕೊಟ್ಟು ಕೊಂಡುಕೊಂಡಿದ್ದಾರೆ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಕಾರವಾರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪರ ಪ್ರಚಾರ ನಡೆಸುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪದೇ ಪದೇ ನನ್ನ ಮೇಲೆ ಆಧಾರವಿಲ್ಲದ ಆರೋಪ ಮಾಡುವುದು ಸರಿಯಲ್ಲ. ಈ ಥರ ಹಗುರವಾಗಿ, ಬೇಜವಾಬ್ದಾರಿ ಮಾತಾಡುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ನಾವು 15ಕ್ಕೆ 15 ಸ್ಥಾನಗಳನ್ನು ಗೆಲ್ಲುತ್ತೇವೆ. ಎಲ್ಲ ಕ್ಷೇತ್ರಗಳಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿ ಎರಡನೇ ಸುತ್ತಿಗೆ ಅಣಿಯಾಗಿದ್ದೇನೆ. ಡಿಸೆಂಬರ್ 3ರೊಳಗೆ ಎಲ್ಲಾ ಕ್ಷೇತ್ರಗಳಿಗೆ ಮತ್ತೊಮ್ಮೆ ಭೇಟಿ ನೀಡುತ್ತೇನೆ. ವಾತವಾರಣ ನಿರೀಕ್ಷೆಗೆ ಮೀರಿ ಚೆನ್ನಾಗಿದೆ. 15 ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಬಹುಮತ ಬರುವುದು ನಮ್ಮ ಶಿವರಾಮ್ ಹೆಬ್ಬಾರ್ ರವರ ಕ್ಷೇತ್ರವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ನವರು ಎಲ್ಲಿಯೂ ಅಭಿವೃದ್ದಿ ಬಗ್ಗೆ ಮಾತಾಡುತ್ತಿಲ್ಲ. ಅವರಿಗೆ ಯಡಿಯೂರಪ್ಪನವರ ಸರ್ಕಾರ ಬಿದ್ದು ಮತ್ತೊಮ್ಮೆ ಚುನಾವಣೆ ಬರಬೇಕಾಗಿದೆ. ಅಂದರೆ ಮೂರು ಮೂರು ತಿಂಗಳಿಗೆ ಚುನಾವಣೆ ಬೇಕೆ ಹೊರತು ರಾಜ್ಯದ ಅಭಿವೃದ್ದಿ ಬೇಕಾಗಿಲ್ಲ.
ರಾಜ್ಯದ ಜನ ಕಳೆದ ನಾಲ್ಕು ತಿಂಗಳ ನನ್ನ ಒಳ್ಳೆಯ ಕೆಲಸವನ್ನು ಮೆಚ್ಚಿದ್ದಾರೆ. ಕರ್ನಾಟ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ನೀರಾವರಿ ಮತ್ತು ರೈತರಿಗೆ ಒಳ್ಳೆಯ ಬೆಲೆ ಕೊಡುತ್ತೇನೆ. ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪರ ಕೆಲಸ ಮಾಡುತ್ತೇನೆ. ಬರುವ ಫೆಬ್ರವರಿ ಬಜೆಟ್ ಅನ್ನು ಉತ್ತಮವಾಗಿ ರೂಪಿಸಿತ್ತೇನೆ ಎಂದರು.