ತೃಣಮೂಲ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರನ್ನು ಗೆದ್ದುಕೊಂಡಿದೆ. ಗೆಲುವಿನ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದು ಜನರ ಗೆಲುವು, ಜನರು ಭಾರತೀಯ ಜನತಾ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
“ಇದು ಜನರ ಗೆಲುವು. ಇದು ಅಭಿವೃದ್ಧಿಯ ವಿಜಯ. ದುರಹಂಕಾರದ ರಾಜಕೀಯ ಕೆಲಸ ಮಾಡುವುದಿಲ್ಲ. ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ” ಎಂದಿರುವ ಮಮತಾ ಬ್ಯಾನರ್ಜಿಯವರ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
“ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ ಏಕೆಂದರೆ ಲೋಕಸಭೆಯಲ್ಲಿ ಅವರು ಮತ ಚಲಾಯಿಸಿದ ಪಕ್ಷವು ಈಗ ಅವರನ್ನೆ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸಲು ಕೇಳುತ್ತಿದೆ” ಎನ್ನುವ ಮೂಲಕ ಕೇಂದ್ರದ ಎನ್ಆರ್ಸಿಯನ್ನು ತೀವ್ರವಾಗಿ ತರಾಟೆಗೆ ತೆಗೆದಕೊಂಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷವು ಉತ್ತರ ಬಂಗಾಳದ ಕಲಿಯಗುಂಜ್ ವಿಧಾನಸಭಾ ಸ್ಥಾನ, ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಖರಗ್ಪುರ ಸದರ್ ಸ್ಥಾನವನ್ನು ಗೆದ್ದುಕೊಂಡಿದೆ. ನಾಡಿಯಾ ಜಿಲ್ಲೆಯ ಕರಿಂಪುರ ಸ್ಥಾನದಲ್ಲೂ ತೃಣಮೂಲ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದು ಗೆಲುವಿನ ಸನಿಹದಲ್ಲಿದೆ.