Homeಕರ್ನಾಟಕ'ನಮ್ಮದು ಪ್ರಜಾಪ್ರಭುತ್ವ; ಪ್ರಧಾನಮಂತ್ರಿ ಏಕಚಕ್ರಾಧಿಪತಿ ಅಲ್ಲ..'; ದೇವೇಗೌಡರಿಗೆ 'ಫೆಡರಲಿಸಂ' ಪಾಠ ಮಾಡಿದ ಸಿಎಂ

‘ನಮ್ಮದು ಪ್ರಜಾಪ್ರಭುತ್ವ; ಪ್ರಧಾನಮಂತ್ರಿ ಏಕಚಕ್ರಾಧಿಪತಿ ಅಲ್ಲ..’; ದೇವೇಗೌಡರಿಗೆ ‘ಫೆಡರಲಿಸಂ’ ಪಾಠ ಮಾಡಿದ ಸಿಎಂ

- Advertisement -
- Advertisement -

‘ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನನಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು’ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಒಕ್ಕೂಟ ವ್ಯವಸ್ಥೆಯ (ಫೆಡರಲಿಸಂ) ಮಾಠ ಮಾಡಿದ್ದಾರೆ.

ಏಪ್ರಿಲ್ 14 ರಂದು ಮೈಸೂರಿನಲ್ಲಿ ನಡೆದ ಎನ್‌ಡಿಎ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದರು. ಈ ಕುರಿತು ತಮ್ಮ ಆಕ್ರೋಶ ಹೊರಹಾಕಿರುವ ಸಿಎಂ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಸನ್ಮಾನ್ಯ ಎಚ್.ಡಿ. ದೇವೇಗೌಡರೇ, ನೂರು ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಮಂತ್ರಿಯವರನ್ನು ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಪ್ರಶ್ನೆ ಮಾಡಬಾರದು ಎಂಬ ನಿಮ್ಮ ಮಾತು ನನ್ನಲ್ಲಿ ಅತ್ಯಾಶ್ಚರ್ಯವನ್ನು ಮಾತ್ರವಲ್ಲ, ನಿಮ್ಮ ಬಗ್ಗೆ ಕನಿಕರವನ್ನೂ ಉಂಟು ಮಾಡಿದೆ. ಒಂದು ಪ್ರಾದೇಶಿಕ ಪಕ್ಷವನ್ನು ಇಷ್ಟು ವರ್ಷಗಳ ಕಾಲ ಮುನ್ನಡೆಸುತ್ತಾ ಬಂದ ನೀವು ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಯವರನ್ನು ಟೀಕಿಸುತ್ತಾ ಬಂದವರು. ಇದೀಗ ಈ ಇಳಿವಯಸ್ಸಿನಲ್ಲಿ ಈ ಬಗೆಯ ಶರಣಾಗತಿಯ ಸ್ಥಿತಿ ಯಾಕೆ ಬಂತು’ ಎಂದು ಪ್ರಶ್ನಿಸಿದ್ದಾರೆ.

‘ನಮ್ಮದು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ. ಇಲ್ಲಿ ಪ್ರಧಾನನಮಂತ್ರಿ ಏಕಚಕ್ರಾಧಿಪತಿಯೂ ಅಲ್ಲ, ಮುಖ್ಯಮಂತ್ರಿ ಮಾಂಡಲೀಕನೂ ಅಲ್ಲ. ಇಬ್ಬರು ಅವರವರ ಸ್ಥಾನಮಾನದಲ್ಲಿ ಸಮಾನರು. ಎರಡೂ ಪದವಿಗಳು ಸಮಾನವಾದುದು, ವಯಸ್ಸಿನ ಹಿರಿ-ಕಿರಿತನಗಳು ಪದವಿಗಳಿಗೆ ಅನ್ವಯವಾಗುವುದಿಲ್ಲ. ಅತಿ ಸಣ್ಣ ವಯಸ್ಸಿಗೆ ಪ್ರಧಾನಿಯಾದ ರಾಜೀವ್ ಗಾಂಧಿಯವರಿದ್ದಾಗಲೂ ಅವರಿಗಿಂತ ಹಿರಿಯರಾದ ಮುಖ್ಯಮಂತ್ರಿಗಳೂ ಇದ್ದರು. ಆಗಲೂ ಪರಸ್ಪರ ಟೀಕೆ-ಟಿಪ್ಪಣಿಗಳು ವಿನಿಮಯವಾಗುತ್ತಿದ್ದವು. ಇಲ್ಲಿಯ ವರೆಗೆ ಯಾರೂ ಕೂಡಾ ನಿಮ್ಮ ರೀತಿಯ ಉಪದ್ವಾಪ್ಯತನದ ಪ್ರಶ್ನೆಗಳನ್ನು ಎತ್ತಿರಲಿಲ್ಲ. ನೀವು ಹಿಂದಿನ ಪ್ರಧಾನಿಗಳನ್ನು ಯಾವ ಯಾವ ರೀತಿಯಲ್ಲಿ ಪ್ರಶ್ನಿಸಿದ್ದೀರಿ, ದೂರಿದ್ದೀರಿ, ಕೆಣಕಿದ್ದೀರಿ ಎನ್ನುವ ಪಟ್ಟಿಯನ್ನು ನಾನು ನಿಮಗೆ ಕೊಡಬಲ್ಲೆ’ ಎಂದು ಹೇಳಿರುವ ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಕುರಿತು ದೇವೇಗೌಡರು ಮಾಡಿರುವ ಟೀಕೆಗಳ ಪತ್ರಿಕಾ ತುಣುಕುಗಳನ್ನು ಹಂಚಿಕೊಂಡಿದ್ದಾರೆ.

‘2002ರ ಗುಜರಾತ್ ಗಲಭೆಯ ಬಗ್ಗೆ ಲೋಕಸಭೆಯಲ್ಲಿ ನಡುರಾತ್ರಿವರೆಗೆ ನಡೆದ ಚರ್ಚೆಯಲ್ಲಿ ನೀವು ಆಗಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ವಿರುದ್ಧ ಪ್ರಯೋಗ ಮಾಡಿರುವ ಟೀಕಾಸ್ತ್ರಗಳು ಸದನದ ದಾಖಲೆಯಲ್ಲಿರಬಹುದು. ಇದನ್ನು ಈಗಲೂ ನಾನು ತಪ್ಪೆಂದು ಹೇಳುವುದಿಲ್ಲ. ಇವೆಲ್ಲವೂ ಸಂಸದೀಯ ಪ್ರಜಾಪ್ರಭುತ್ವದ ನಡವಳಿಕೆಗಳ ಭಾಗವಾಗಿರುತ್ತದೆ. ಆಗ ನೀವು ಮುಖ್ಯಮಂತ್ರಿಯೂ ಆಗಿರಲಿಲ್ಲ, ನೀವು ಕೇವಲ ಒಂದು ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದವರು. ಆಗ ಈ ನೂರು ಕೋಟಿ, ಆರು ಕೋಟಿ ವ್ಯತ್ಯಾಸಗಳು ಬಾಧಿಸಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಕೆಲವೇ ತಿಂಗಳುಗಳ ಹಿಂದೆ ನರೇಂದ್ರ ಮೋದಿ ಅವರಿಗಿಂತ ಕನಿಷ್ಠ ಹತ್ತು ವರ್ಷ ಸಣ್ಣವರಾಗಿರುವ ಮತ್ತು ಕೇವಲ ಒಬ್ಬ ಶಾಸಕರಾಗಿರುವ ನಿಮ್ಮ ಮಗ ಎಚ್.ಡಿ.ಕುಮಾರಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಯಾವ ಭಾಷೆ ಬಳಸಿ ತರಾಟೆಗೆ ತೆಗೆದುಕೊಂಡಿದ್ದರೆನ್ನುವುದನ್ನು ನಾಡಿನ ಜನ ಇನ್ನೂ ಮರೆತಿಲ್ಲ, ನಿಮ್ಮ ನೆನಪಲ್ಲಿಯೂ ಇರಬಹುದು. ಆಗ ಯಾಕೆ ನೀವು ನೂರು ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಮಂತ್ರಿಯವರನ್ನು ಟೀಕಿಸಬಾರದು ಎಂದು ಮಗನಿಗೆ ಕಿವಿ ಹಿಂಡಿ ಬುದ್ದಿ ಹೇಳಿರಲಿಲ್ಲ? ಇವೆಲ್ಲವೂ ಅನುಕೂಲಶಾಸ್ತ್ರ ಅಷ್ಟೆ ಎನ್ನುವುದು ರಾಜ್ಯದ ಜನರಿಗೆ ತಿಳಿದಿದೆ’ ಎಂದು ಹೇಳಿದ್ದಾರೆ.

‘ರಾಜ್ಯ ಸರ್ಕಾರಕ್ಕೆ ಅನ್ಯಾಯವಾದಾಗ ಅದನ್ನು ವಿರೋಧಿಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿಯವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಇದೇ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದೇಶ ಕಂಡ ಅತ್ಯಂತ ಸಭ್ಯ ಮತ್ತು ಗೌರವಾರ್ಹ ರಾಜಕೀಯ ನಾಯಕರಾಗಿರುವ ಮನಮೋಹನ್ ಸಿಂಗ್ ವಿರುದ್ಧ ಯಾವ ಭಾಷೆ ಬಳಸಿದ್ದರೆನ್ನುವುದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ.
ನೀವು ದೇಶದ ಪ್ರಧಾನಿಯಾಗಿದ್ದಾಗ ಕನ್ನಡಿಗರು ಎದೆಯುಬ್ಬಿಸಿ ಖುಷಿಪಟ್ಟರು. ನೀವು ರಾಜ್ಯದ ನೆಲ-ಜಲ-ಭಾಷೆಯ ರಕ್ಷಣೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ಆಯಾ ಕಾಲಗಳ ಪ್ರಧಾನಿಗಳ ವಿರುದ್ಧ ಹೋರಾಟಕ್ಕಿಳಿದಾಗಲೂ ಕನ್ನಡಿಗರು ನಿಮ್ಮನ್ನು ತಲೆಮೇಲೆ ಕೂರಿಸಿ ಕೊಂಡಾಡಿದರು’ ಎಂದಿದ್ದಾರೆ.

‘ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳು ತಮ್ಮ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಪ್ರಧಾನ ಮಂತ್ರಿಗಳು ಈ ರಾಜ್ಯಗಳ ವಿರುದ್ಧ ಸೇಡು ತೀರಿಸಿಕೊಳ್ಳುವವರಂತೆ ನಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನೀವು ಕೇಂದ್ರದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರಬೇಕಾಗಿತ್ತು. ದುರ್ದೈವದ ಸಂಗತಿ ಎಂದರೆ ಈಗ ನೀವು ಕೇವಲ ನಿಮ್ಮ ಪಕ್ಷ ಮತ್ತು ಕುಟುಂಬದ ರಾಜಕೀಯ ಉಳಿವಿಗಾಗಿ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಪ್ರಧಾನಮಂತ್ರಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರ ಪರವಾಗಿ ನಮ್ಮ ವಿರುದ್ಧ ಕತ್ತಿ ಬೀಸುತ್ತಿದ್ದೀರಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಈಗಲೂ ಕಾಲ ಮಿಂಚಿಲ್ಲ, ನಿಮ್ಮ ತಪ್ಪನ್ನು ತಿದ್ದಿಕೊಂಡು ಕನ್ನಡಿಗರಿಗೆ ಕೇಂದ್ರ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಿ. ತೆರಿಗೆ ಹಂಚಿಕೆ, ಬರ ಪರಿಹಾರ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ನರೇಂದ್ರ ಮೋದಿ ಸರ್ಕಾರ ಕನ್ನಡಿಗರ ಕತ್ತು ಕುಯ್ಯುತ್ತಿದೆ. ಇದರ ವಿರುದ್ಧ ನೀವು ದನಿ ಎತ್ತದೆ ಇರುವುದರಿಂದ ವರ್ತಮಾನದಲ್ಲಿ ನಿಮ್ಮ ಪಕ್ಷಕ್ಕೆ ಒಂದಷ್ಟು ಲಾಭವಾಗಲೂ ಬಹುದು. ಆದರೆ ಇತಿಹಾಸ ನಿಮ್ಮನ್ನು ಖಂಡಿತಾ ಕ್ಷಮಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ; ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ಬಗ್ಗೆ ಮತದಾರರು ಜಾಗರೂಕರಾಗಿರಿ: ಮಾಯಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹುಬ್ಬಳ್ಳಿ : ಕೈ ಕೈ ಮಿಲಾಯಿಸಿಕೊಂಡ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು

0
ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂಭಾಗ ಇಂದು (ಏ.30) ಮಧ್ಯಾಹ್ನ ನಡೆದಿದೆ. ಜೆಡಿಎಸ್‌ ಪಕ್ಷ ಖಾಸಗಿ ಹೋಟೆಲ್‌ನಲ್ಲಿ ಉತ್ತರ ಕರ್ನಾಟಕದ 14...