ಟಿಂಡರ್ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಪುರದ ನ್ಯಾಯಾಲಯವು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಸೆಷನ್ಸ್ ನ್ಯಾಯಾಧೀಶ ಅಜಿತ್ ಕುಮಾರ್ ಹಿಂಗರ್ ಅವರ ಪೀಠವು, ಪ್ರಾಸಿಕ್ಯೂಷನ್ ಸತ್ಯಗಳನ್ನು ದೃಢೀಕರಿಸಲು ಸಾಕಷ್ಟು ಪುರಾವೆಗಳನ್ನು ಪ್ರಸ್ತುತಪಡಿಸಿದೆ ಎಂದು ಹೇಳಿ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಪ್ರಮುಖ ಆರೋಪಿ ಪ್ರಿಯಾ ಸೇಠ್ (27) ಟಿಂಡರ್ನಲ್ಲಿ ದುಶ್ಯಂತ್ ಶರ್ಮಾ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಅವನನ್ನು ಬಾಡಿಗೆಗೆ ಮನೆಗೆ ಕರೆಸಿ ಅಲ್ಲಿ ಅವಳು ಮತ್ತು ಆಕೆಯ ಇಬ್ಬರು ಸಹಚರರಾದ ದಿಶ್ಕಾಂತ್ ಕಮ್ರಾ ಮತ್ತು ಲಕ್ಷ್ಯ ವಾಲಿಯಾ ಶರ್ಮಾ ಕುಟುಂಬಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದರು. ದುಶ್ಯಂತ್ ಕುಟುಂಬವು ಇವರು ಕೇಳಿದಷ್ಟು ಹಣವನ್ನು ಕೊಡದ ಕಾರಣ ಆತನಿಗೆ ಹಲವು ಬಾರಿ ಇರಿದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ದುಶ್ಯಂತ್ ಶರ್ಮಾ ಅವರ ತಂದೆಯಿಂದ ಆರೋಪಿಗಳು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಂತ್ರಸ್ತನ ತಂದೆ ತನ್ನ ಮಗನ ಖಾತೆಗೆ 3 ಲಕ್ಷ ಜಮೆ ಮಾಡಿದ ನಂತರ ಆರೋಪಿಗಳು ಶರ್ಮಾ ಅವರ ಡೆಬಿಟ್ ಕಾರ್ಡ್ ಬಳಸಿ ಜೈಪುರದ ನೆಹರು ಉದ್ಯಾನ್ ಬಳಿ ಎಟಿಎಂನಿಂದ 20,000ರೂ. ಡ್ರಾ ಮಾಡಿದ್ದಾರೆ. ಬಳಿಕ ಶರ್ಮಾನನ್ನು ಕೊಂದು ದೇಹವನ್ನು ತುಂಡುಗಳಾಗಿ ಕತ್ತರಿಸಿ ಸೂಟ್ಕೇಸ್ನಲ್ಲಿ ತುಂಬಿ ದೆಹಲಿ ರಸ್ತೆಯಲ್ಲಿ ಎಸೆದಿದ್ದರು.
2018ರಲ್ಲಿ ವಿವಾನ್ ಕೊಹ್ಲಿ ಎಂಬವರು ಟಿಂಡರ್ ಡೇಟಿಂಗ್ ಆ್ಯಪ್ನಲ್ಲಿ ದುಷ್ಯಂತ್ ಶರ್ಮಾ ಎಂಬ ಹೆಸರಿನಲ್ಲಿ ಪ್ರೊಫೈಲ್ ತೆರೆದಿದ್ದಾರೆ. ನಂತರ ಇವರಿಗೆ ಜೈಪುರದ ಯುವತಿ ಪ್ರಿಯಾ ಸೇಠ್ ಪರಿಚಿತರಾಗುತ್ತಾರೆ. ಈ ವೇಳೆ ವಿವಾನ್ ಕೊಹ್ಲಿ ನಾನು ದೊಡ್ಡ ಉದ್ಯಮಿ ಎಂದು ಪ್ರಿಯಾ ಸೇಠ್ ಬಳಿ ಸುಳ್ಳು ಹೇಳಿಕೊಂಡಿರುತ್ತಾರೆ. ಇದರಿಂದಾಗಿ ಆತನಿಂದ ದರೋಡೆ ಮಾಡುವ ಉದ್ದೇಶದಿಂದ ವಿವಾನ್ ಕೊಹ್ಲಿ( ದುಶ್ಯಂತ್ ಶರ್ಮಾ) ಅವರನ್ನು ಪ್ರಿಯಾ ಜೈಪುರಕ್ಕೆ ಕರೆಸಿ ಬಳಿಕ ಅಪಹರಣ ನಡೆಸಿ ಕೊಲೆ ಮಾಡಿದ್ದರು.
ವಿವಾನ್ ಕುಟುಂಬದವರು ನೀಡಿದ ದೂರನ್ನು ಆಧರಿಸಿ ಜೈಪುರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಾರೆ. ಈ ಘಟನೆ ಬಗ್ಗೆ ನ್ಯಾಯಾಲಯದಲ್ಲಿ 5 ವರ್ಷಗಳ ಕಾಲ ಸುದೀರ್ಘವಾದ ವಿಚಾರಣೆ ನಡೆಯುತ್ತದೆ. ಅಂತಿಮವಾಗಿ ನ್ಯಾಯಾಲಯ ಪ್ರಿಯಾ ಮತ್ತು ಇಬ್ಬರು ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳಾದ ಪ್ರಿಯಾ ಸೇಥ್ ಮತ್ತು ದಿಶ್ಕಾಂತ್ ಕಮ್ರಾ ಅವರು ಇದಕ್ಕೂ ಮೊದಲು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. 2014, 2016 ಮತ್ತು 2017ರಲ್ಲಿ ಎಟಿಎಂ ಯಂತ್ರ ಒಡೆದ ಪ್ರಕರಣಕ್ಕೆ ಸಂಬಂಧಿಸಿ ಆಕೆಯನ್ನು ಬಂಧಿಸಲಾಗಿತ್ತು.
ಇದನ್ನು ಓದಿ; ಕೊಚ್ಚಿ: ‘ಟೆಕ್ ಫೆಸ್ಟ್’ನಲ್ಲಿ ಕಾಲ್ತುಳಿತ; ನಾಲ್ವರು ವಿದ್ಯಾರ್ಥಿಗಳು ಸಾವು