Homeಅಂಕಣಗಳುನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

ನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

- Advertisement -
- Advertisement -

ಎಲೆಮರೆ- 14

`ಐದು ಎಕರೆ ಬಳ್ಳಿ ಶೇಂಗಾ ಹಾಕಿದ್ದೆ ಕಾಯಿ ಚಲೋ ಹಿಡದಾತಿ, ಬೇರೆಯವ್ರು ಸರಕಾರಿ ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿದ್ರು. ನಾನು ಸೆಗಣಿಗೊಬ್ಬರ ಹಾಕಿ ಕಳೆ ತಗಸಿದ್ದೆ. ಅದಕ್ಕ ನಲ್ವತ್ ಸಾವ್ರ ಖರ್ಚಾಗಿತ್ತು. ಇದನ್ನ ನೋಡಿ ಊರವರೆಲ್ಲ ನಕ್ಕಿದ್ರು. ಈತಗ ಹುಚ್ ಹಿಡದಿರಬೇಕು, ಎರಡು ಸಾವ್ರ ಕಳೆನಾಶಕ ಹೊಡದಿದ್ರ ಸಾಕಿತ್ತು ಅಂದಿದ್ರು. ನನ್ನ ಲೆಕ್ಕ ಹೆಂಗಂದ್ರ ಕಳೆ ತಗಿಯೋರು ಬದುಕಬೇಕು ನಾನು ಬದುಕಬೇಕು ಅನ್ನೋದು. ಸೆಗಣಿ ಹಾಕಿ, ಕಳೆ ತಗಸಿದ್ದಕ್ಕ ನೆಲ ಮಿದುವು ಆಗಿ ಕಾಯಿ ಬಾಳ ಹಿಡದಾತಿ. 60-70 ಚೀಲ ಆಗಬಹುದು. ಬೇರೆಯವ್ರದ್ದು ಸರಕಾರಿ ಗೊಬ್ಬರ, ಕಳೆನಾಶಕ ಬಳಸಿದ್ದಕ್ಕ ಮಳಿನೂ ಬಾಳ ಆಗಿ ನೆಲ ಬಿಗುವು ಆಗಿ ಕಾಯಿ ಹಿಡದಿಲ್ಲ. ಅಂತ ರೈತರೆಲ್ಲಾ ಈ ಸಲ ಲಾಸ್ ಆದ್ರು. ನೀರಾವರಿಗೆ ಒಂದೆಕರೆ ಬಾಳೆ ಹಾಕೀನಿ. ಒಬ್ಬಂಟಿಗರಾಗಿ ಬಾಳ ಹೊಲ ಮಾಡಕಾಗಲ್ಲ’ ಹೀಗೆ ತಣ್ಣಗೆ ನೆಲದ ಜತೆಗಿನ ಪಿಸುಮಾತುಗಳನ್ನು ಆಡುವ ಕವಿ ಚಂಸು ಪಾಟೀಲ.

ಚಂದ್ರಶೇಖರ ಸುಭಾಶಗೌಡ ಪಾಟೀಲ ಅಂದ್ರೆ ಯಾರೀತ, ಯಾವುದೋ ರಾಜಕಾರಣೀದೋ, ದೊಡ್ ಮನ್ಷನ ಹೆಸರಿದ್ದಂಗೈತಿ ಅಂತ ಅನ್ನಿಸುತ್ತದೆ. ಇದೇ ಹೆಸರನ್ನು ಸಂಕ್ಷಿಪ್ತಗೊಳಿಸಿ ಚಂಸು ಪಾಟೀಲ ಅಂದರೆ ಸಾಹಿತ್ಯ ವಲಯದ ಹೊಸ ತಲೆಮಾರನ್ನು ಸೂಕ್ಷ್ಮವಾಗಿ ಗಮನಿಸುವ ಕೆಲವರಿಗಾದರೂ, ಅದರಲ್ಲೂ ಪೇಸ್‍ಬುಕ್‍ನ್ನು ಆಕ್ಟಿವ್ ಆಗಿ ಬಳಸುವವರಿಗೆ ಈ ಹೆಸರಿನ ಜತೆ ರೈತಾಪಿ ಮುಖದ ಚಿತ್ರವೊಂದು ಕಣ್ಮುಂದೆ ಬರಬಹುದು. ನನಗೋ ಕಾಸ್ಟವೆ ಸಿನೆಮಾದ ಕೊನೆಯಲ್ಲಿ ರೂಪಾಂತರ ಹೊಂದಿದ ನಟ ಟಾಮ್ ಹ್ಯಾಂಕ್ಸ್ ತರವೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹಾಗೆಯೂ ಚಂಸು ಕಾಣಿಸುತ್ತಾನೆ.

ನನಗೆ ಕಳೆದ ಒಂದೂವರೆ ದಶಕದಿಂದ ಚಂಸು ಪಾಟೀಲ ಪರಿಚಯ. ಆತ ಸಾದಾಸೀದಾ ಜವಾರಿ ಮನ್ಷ. ಒಮ್ಮೆ ಸೊಂಡೂರು ಭೂ ಹೋರಾಟ ಪುಸ್ತಕ ಬರೆಯುವಾಗ ದಾಖಲೆಗಳನ್ನು ಹುಡುಕಿಕೊಂಡು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗಿದ್ದೆ. ಆಗ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಐವತ್ತು ದಾಟಿದ ತಲೆ ಬಿಳಿಯಾದ ಹಿರಿಯರೇ ತುಂಬಿರುವಾಗ ಕರಿಕೂದಲಿನ ಕಡ್ಡಿಯಂಥ ಹುಡುಗ ಒಂದು ಮೂಲೆಯ ಹಳೇ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು ಕೂತಿದ್ದ. ನಾನು ನನ್ನ ಹೆಸರೇಳಿ ಪರಿಚಯಿಸಿಕೊಂಡೆ, `ಹೇಯ್ ಬರ್ರಿ ಅರುಣ್ ನೀವು ನಮಗ ಗೊತ್ತು ನಿಮ್ಮ ಬರಹ ಓದೇನಿ’ ಎಂದು ಸಹಜವಾದ ಪ್ರೀತಿ ತೋರಿದ್ದ’ ಈ ಹುಡುಗನೆ ಚಂಸು ಪಾಟೀಲ. ಬಹುಶಃ ನನಗೆ ನೆನಪಿರುವಂತೆ ಅದುವೆ ಮೊದಲ ಭೇಟಿ ಇರಬೇಕು.

2002 ರಲ್ಲಿ ಬೆಂಗಳೂರಿನ `ನೋಟ’ ವಾರಪತ್ರಿಕೆಯಲ್ಲಿಯೂ, 2003 ರಲ್ಲಿ ಗುಲ್ಬರ್ಗಾದ ಕ್ರಾಂತಿ ದೈನಿಕದಲ್ಲಿಯೂ, 2003 ರಿಂದ 2006 ರ ತನಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿಯೂ ಚಂಸು ಪತ್ರಕರ್ತನಾಗಿ ಕೆಲಸ ಮಾಡಿದ. ಈತನ ವ್ಯಕ್ತಿ ಸ್ವಭಾವಕ್ಕೆ ಈ ಪತ್ರಕರ್ತ ಹುದ್ದೆ ಉಸಿರುಕಟ್ಟಿಸಿತು, ಮನೆಯ ಘಟನೆಗಳೂ ಪತ್ರಕರ್ತನಾಗಿ ಮುಂದುವರಿಯಲು ತೊಡಕಾದವು. ಈ ಎಲ್ಲದರ ಕಾರಣ ಹುಟ್ಟೂರಿಗೆ ಬಂದು, ತಾನು ಓದಿದ್ದೆಲ್ಲವನ್ನೂ ಮರೆತು 2007 ರಿಂದ ಕಮ್ತಕ್ಕೆ ನಿಂತ. ಆರಂಭಕ್ಕೆ ರೈತಾಪಿ ಕೆಲಸ ಸುಲಭವೇನಾಗಿರಲಿಲ್ಲ. ಹೊಲವೇ ಕಡುಕಷ್ಟಗಳನ್ನೊಡ್ಡಿ ಚಂಸುವನ್ನು ಪರೀಕ್ಷಿಸಿತು. ಈ ಎಲ್ಲಾ ಕಷ್ಟಗಳಿಗೆ ಬಂಡೆಯಂತಾಗಿ ನೆಲದ ಜತೆಗಿನ ಸಾಂಗತ್ಯವನ್ನು ಮುಂದುವರಿಸಿದ. ಬರುಬರುತ್ತಾ ನೆಲ ಚಂಸುವನ್ನು ಕೈಹಿಡಿಯತೊಡಗಿತು. ಅಹರ್ನಿಶಿ ಮತ್ತು ನಾವುನಮ್ಮಲ್ಲಿ ಬಳಗ 2018 ರಲ್ಲಿ ಪ್ರಕಟಿಸಿದ `ಬೇಸಾಯದ ಕತಿ’ ಪುಸ್ತಕದಲ್ಲಿ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಚಂಸು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಬೇಕು ಅಂದುಕೊಂಡ ಯುವಜನತೆಗೆ ಇದೊಂದು ಅತ್ಯಂತ ಪ್ರಾಯೋಗಿಕ ಮಾರ್ಗದರ್ಶಿ. ಈ ಕೃತಿಯನ್ನು ಹಿರಿಯ ರೈತ ಹೋರಾಟಗಾರರಾದ ಶಾಮಣ್ಣನವರು ಅಕ್ಷತಾ ಅವರಿಂದ ಪುಸ್ತಕ ಪಡೆದು ರೈತ ಸಮಾವೇಶಗಳು ನಡೆವಲ್ಲಿ ಹೋಗಿ ಸ್ವತಃ ತಾವೇ ರೈತರಿಗೆ ಮಾರಾಟ ಮಾಡಿದ್ದಾರೆ. ಬಹುಶಃ ಈ ಕೃತಿಯ ಮಹತ್ವವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಹೇಳಲಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ನಮ್ಮ ಗ್ರಾಮೀಣ ಕೃಷಿಕರು ಮಾಡುತ್ತಿದ್ದ ಸಹಜ ಸಾವಯವ ಬೇಸಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಚಂಸು ಪಾಟೀಲರು ಮೂಲತಃ ಕವಿ. ಈ ತನಕ `ಗೆಳೆಯನಿಗೆ’ (1995), `ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (2005) `ಅದಕ್ಕೇ ಇರಬೇಕು’ (2009) ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
2007 ರ ನಂತರ ಕಮ್ತಕ್ಕೆ ಬಂದಾಗಿನಿಂದ ನೆಲದ ಜತೆಗಿನ ಪಿಸುಮಾತುಗಳ ಆಲಿಸಿಕೊಂಡು ರೈತರ ಕಣ್ಣೋಟದಲ್ಲಿ ಕವಿತೆ ಬರೆಯಲು ತೊಡಗಿದ್ದಾರೆ. ಈ ಕವಿತೆಗಳು ಚಂಸು ಅವರ ಮೊದಲ ಕವಿತೆಗಳಿಗಿಂತ ತೀರಾ ಭಿನ್ನವಾಗಿವೆ. ಈ ನೆಲದ ನಿಜದ ರೈತನ ನಾಡಿಮಿಡಿತದಂತೆ ಈ ಕವಿತೆಗಳು ಮಾತನಾಡುತ್ತವೆ. ಚಂಸು ಅವರಿಗಿರುವ ವಿಶಿಷ್ಟತೆ ಏನೆಂದರೆ ತನ್ನ ಹಳ್ಳಿ ಕೂನುಬೇವಿನ ಹೊಲದಲ್ಲಿ ಉಳುಮೆ ಮಾಡಿಕೊಂಡೇ ಪೇಸ್‍ಬುಕ್ ಮತ್ತು ಅಂತರ್ಜಾಲದಲ್ಲಿ ಲೋಕದ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಇದಕ್ಕೆಲ್ಲಾ ಪ್ರಖರವಾದ ವ್ಯಂಗ್ಯ ವಿಷಾದ ಸಿಟ್ಟು ತಣ್ಣನೆಯ ಪ್ರತಿರೋಧದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪ್ರತಿಕ್ರಿಯೆಯನ್ನು ದಾಟಿಸಲು ಚಂಸು ಕವಿತೆಯನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಟಿ.ಕೆ.ತ್ಯಾಗರಾಜ್ ಅವರು ಸಂಪಾದಕರಾಗಿರುವ `ದ ಡೆಕ್ಕನ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಚಂಸು `ಭಪ್ಪರೇ ಶವ್ವಾ’ ಎನ್ನುವ ಅಂಕಣ ಬರೆಯುತ್ತಾರೆ. ಬಯಲಾಟ ದೊಡ್ಡಾಟದಲ್ಲಿ ಪರಸ್ಪರ ಹೊಗಳುವ ಸಂದರ್ಭದಲ್ಲಿ ಅಲೆಲೆಲೆ ಭಪ್ಪರೇ ಶವ್ವಾ..! ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. ಹಾಗಾಗಿಯೇ ಚಂಸು ಸಾಮಾನ್ಯ ಜನರ ಬದುಕಿನ ಅಪರೂಪದ ಘಟನೆಗಳ ಕುರಿತು ಬರೆಯಲು `ಭಪ್ಪರೇ ಶವ್ವಾ..!’ ಎಂದು ಹೆಸರುಕೊಟ್ಟುಕೊಂಡಿದ್ದಾರೆ.

ಈ ಅಂಕಣವು ಲಘು ಹಾಸ್ಯಮಿಶ್ರಿತ ವ್ಯಂಗ್ಯ ನೋವು ಸಂಕಟ ಎಲ್ಲವನ್ನೂ ಬೆರೆಸಿದಂತಿದೆ. ಹೊಸ ತಲೆಮಾರು ಬರೆವ ಬರಹದಲ್ಲಿ ಇದು ವಿಶಿಷ್ಟವಾಗಿದೆ. ಗ್ರಾಮೀಣ ಚಿತ್ರಕಲಾವಿದ ಮುರಿಗೆಜ್ಜಪ್ಪ, ಅಪ್ಪಣ್ಣ, ಉಪ್ಪಾರ ಗುಡ್ಡಪ್ಪ, ಬಯಲಾಟದ ಅನುಭವ, ಶಿಶುನಾಳ ಶರೀಫರ ಹಾಡುಗಳು ನೆಲೆಗೊಂಡ ಬಗೆ, ರಂಗಭೂಮಿಯ ನಂಟು ಭಜನೆಯ ಒಡನಾಟ ಹೀಗೆ ಹಾವೇರಿ, ರಾಣೇಬೆನ್ನೂರು ಭಾಗದ ಸಾಂಸ್ಕøತಿಕ ಗುರುತುಗಳನ್ನು ಬೆರೆಸಿ ಅಲ್ಲಿಯದ್ದೇ ಆದ ಉಪಭಾಷೆಯ ನುಡಿಗಟ್ಟನ್ನು ಬಳಸಿ ವಿಶಿಷ್ಟ ಸಂಕಥನದಂತೆ ಈ ಅಂಕಣ ಬರೆಯುತ್ತಿದ್ದಾರೆ.

`ಪ್ರತಿದಿನವೂ/ವಲಸೆ ಬರುವ/ ಸೂರ್ಯ ಚಂದ್ರರಿಗೆ/ ಸಿಕ್ಕಬಹುದೇ? ಪೌರತ್ವದ ಕೊಡುಗೆ ! ಆದರೂ ನಿತ್ಯ/ ಈ ಅತಿಕ್ರಮಣವನ್ನು ಸಹಿಸುವುದು ಹೇಗೆ?/ ಕೊರಳುಪಟ್ಟಿ/ ಹಿಡಿದು ದಬ್ಬಿರವರನು/ಹೊರಗೆ’ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೀಗೆ ಕವಿತೆ ಬರೆವ ಚಂಸು, ಸಾಸಿವೆ ಕಾಳಿನಷ್ಟು ಬರೆದು ಬೆಟ್ಟದಷ್ಟು ಪ್ರಚಾರ ಬಯಸುವ ಈ ಕಾಲದ ಹೊಸತಲೆಮಾರಿನ ಕವಯಿತ್ರಿ ಕವಿಗಳಿಗಿಂತ ನೂರುಪಾಲು ಎತ್ತರದಲ್ಲಿದ್ದಾರೆ. ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿ ಬೇಸಾಯದ ಕತಿ ಹೇಳುವ ಚಂಸುಗೆ ಒಳಿತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...