ಭಾರತೀಯ ಸೇನೆಯು ಸಿಖ್ ಸೈನಿಕರಿಗಾಗಿ ಸುಮಾರು 13,000 ಹೆಲ್ಮೆಟ್ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಇದನ್ನು ವಿರೋಧಿಸಿ ಅಕಾಲ್ ತಖ್ತ್ ಮತ್ತು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಪ್ರತಿಭಟನೆಗೆ ಮುಂದಾಗಿವೆ.
ಪೇಟಾ ಧರಿಸುವುದು ಸಿಖ್ ಧರ್ಮದ ಸಂಕೇತವಾಗಿದ್ದು, ಹೆಲ್ಮೆಟ್ ನೀಡುವ ಮೂಲಕ ನಮ್ಮ ಧರ್ಮದ ಆಚರಣೆಗಳಿಗೆ ಧಕ್ಕೆ ತರುವಂತಹ ಕೆಲಸ ಆಗಬಾರದು. ನಿಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕೇಂದ್ರ ಸರ್ಕಾರವನ್ನು ಸಿಖ್ ಧರ್ಮದ ಸಂಘಟನೆಗಳು ಕೇಳಿಕೊಂಡಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ರಕ್ಷಣಾ ಸಚಿವಾಲಯವು ಜನವರಿ 5 ರಂದು ಸಿಖ್ ಸೈನಿಕರಿಗೆ 12,730 ಬ್ಯಾಲಿಸ್ಟಿಕ್ ಹೆಲ್ಮೆಟ್ಗಳ ಪ್ರಸ್ತಾವನೆಗಾಗಿ ಟೆಂಡರ್ ಅಥವಾ ವಿನಂತಿಯನ್ನು ಬಿಡುಗಡೆ ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಪ್ರಸ್ತಾವನೆಯಲ್ಲಿ, ಸಿಖ್ ಸೈನಿಕರು ಈಗ ಧರಿಸಿರುವ ಬುಲೆಟ್ ಪ್ರೂಫ್ ‘ಪಟ್ಕಾ’ಗಳಿಗಿಂತ ಭಿನ್ನವಾಗಿ, ಈ ಹೆಲ್ಮೆಟ್ಗಳು ಇಡೀ ತಲೆಯನ್ನು ಮುಚ್ಚುವ ರೀತಿಯಲ್ಲಿರಬೇಕು. ಹೆಲ್ಮೆಟ್ಗಳು ದೊಡ್ಡ ಗಾತ್ರದಲ್ಲಿರಬೇಕು ಎಂದು ತಿಳಿಸಲಾಗಿದೆ.
ಈ ಬಗ್ಗೆ ಅಕಾಲ್ ತಖ್ತ್ ಜಥೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, “ಎರಡನೇ ಮಹಾಯುದ್ಧದಲ್ಲಿ ಸಿಖ್ ಸೈನಿಕರು ಹೆಲ್ಮೆಟ್ ಧರಿಸುವಂತೆ ಬ್ರಿಟಿಷ್ ಅಧಿಕಾರಿಗಳು ಮಾಡಿದ ಪ್ರಯತ್ನಗಳನ್ನು ಹೇಗೆ ತಿರಸ್ಕರಿಸಲಾಯಿತು ಎಂಬುದನ್ನು ಗಮನಿಸಬೇಕು. ಪೇಟವು ಬಟ್ಟೆಯಲ್ಲ, ಇದು ಗುರು ಸಾಹಿಬ್ನಿಂದ ಸಿಖ್ಖರ ತಲೆಯ ಮೇಲೆ ಇರಿಸಲ್ಪಟ್ಟ ಕಿರೀಟವಾಗಿದೆ ಮತ್ತು ಇದು ನಮ್ಮ ಗುರುತಿನ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ.
1956, 1962 ಮತ್ತು 1971 ರಲ್ಲಿ ನಡೆದ ಯುದ್ಧಗಳಲ್ಲಿ ಸಿಖ್ ಸೈನಿಕರು ಹೇಗೆ ಪೇಟ ಧರಿಸಿಕೊಂಡೇ ಯುದ್ಧದಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಗಮನಿಸಿ ಎಂದು ಸಿಂಗ್ ಹೇಳಿದ್ದಾರೆ.
ಇದೇ ವಿಚಾರವಾಗಿ ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಕೂಡ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಸಿಖ್ ಧರ್ಮದ ಸಂಕೇತವಾದ ಪೇಟಾವನ್ನೇ ಬದಲಿಸಿ ಹೆಲ್ಮೆಟ್ ನೀಡುವುದು ಸರಿಯಲ್ಲ. ನಿಮ್ಮ ಈ ಕ್ರಮವು ಸಿಖ್ ಹೆಮ್ಮೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.