ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಮತ್ತು ಅದರ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ರಕ್ಷಣೆ ಕೋರಿ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ARG ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಇದನ್ನು ವಿಚಾರಣೆ ನಡೆಸಿತು.
“ಅರ್ಜಿಯಲ್ಲಿನ ಮನವಿಗಳು ಮಹದಾಸೆಯಿಂದ ಕೂಡಿದೆ. ಮಹಾರಾಷ್ಟ್ರ ಪೊಲೀಸರು ಚಾನೆಲ್ನ ಯಾವುದೇ ಉದ್ಯೋಗಿಯನ್ನು ಬಂಧಿಸಬಾರದು ಮತ್ತು ಪ್ರಕರಣಗಳನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ನೀವು ಬಯಸುತ್ತೀರಿ. ನೀವು ಈ ಮನವಿಯನ್ನು ಕೈಬಿಡುವುದು ಉತ್ತಮ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಮಿಲಿಂದ್ ಸಾಥೆ ಅವರಿಗೆ ತಿಳಿಸಿದರು.
ಇದನ್ನೂ ಓದಿ: ಅರ್ನಾಬ್, ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಶಿವಸೇನೆ ಶಾಸಕನ ಮನೆ ಮೇಲೆ ಇ.ಡಿ ದಾಳಿ!
ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಮತ್ತು ಅದರ ನೌಕರರನ್ನು ಪೊಲೀಸರ ದೌರ್ಜನ್ಯದಿಂದ ತಡೆಯುವ ಸಲುವಾಗಿ ಈ ಮನವಿಯನ್ನು ಸಲ್ಲಿಸಲಾಗಿದೆ ಎಂದು ಮಿಲಿಂದ್ ಸಾಥೆ ಕೋರ್ಟ್ಗೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, “ನೀವು ಎಲ್ಲಾ ಪರಿಹಾರಗಳನ್ನು ಒಂದೇ ಅರ್ಜಿಯಲ್ಲಿ ಕೋರಿದ್ದೀರಿ. ಇವುಗಳೆಲ್ಲವನ್ನೂ ಒಂದೇ ಮನವಿಯ ಅಡಿಯಲ್ಲಿ ಆಲಿಸಲು ಸಾಧ್ಯವಿಲ್ಲ” ಎಂದು ಹೇಳಿದೆ. ನಂತರ ಕಾನೂನಿನಡಿಯಲ್ಲಿ ಲಭ್ಯವಿರುವ ಸೂಕ್ತ ಪರಿಹಾರಗಳನ್ನು ಪಡೆದುಕೊಳ್ಳಲು ಮತ್ತು ಅರ್ಜಿಯನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿತು. ಇದಾದ ನಂತರ ಮನವಿಯನ್ನು ಹಿಂತೆಗೆದುಕೊಳ್ಳುವುದಾಗಿ ಮಿಲಿಂದ್ ಸಾಥೆ ಹೇಳಿದರು.
ಇದನ್ನೂ ಓದಿ: ಆತನ ಚಾನೆಲ್ ನೋಡುವುದೇ ಇಲ್ಲ: ಅರ್ನಾಬ್ಗೆ ಜಾಮೀನು ನೀಡಿದ ನ್ಯಾಯಮೂರ್ತಿ ಹೇಳಿಕೆ!
ಈ ಅರ್ಜಿಯಲ್ಲಿ “ರಿಪಬ್ಲಿಕ್ ಚಾನೆಲ್ನ ಅರ್ನಾಬ್ ಗೋಸ್ವಾಮಿ ಮತ್ತು ಅವರ ನೌಕರರಿಗೆ ರಕ್ಷಣೆ ಕೋರಿರುವುದಲ್ಲದೆ, ತಮ್ಮನ್ನು ಗುರಿಯಾಗಿಸಿಕೊಂಡಿರುವ ಮಹಾರಾಷ್ಟ್ರ ಸರ್ಕಾರವನ್ನು ನಿಯಂತ್ರಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಜೊತೆಗೆ ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ರದ್ದುಗೊಳಿಸಿ, ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಲಾಗಿತ್ತು. ಹಾಗೆಯೇ ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ರಾಜ್ಯ ಸರ್ಕಾರ ಮತ್ತು ಮಹಾರಾಷ್ಟ್ರ ಪೊಲೀಸರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು. ತಮ್ಮ ಸಿಬ್ಬಂದಿಯನ್ನು ಬಂಧಿಸಬಾರದು” ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್ಗಳು ಟಿಆರ್ಪಿಯನ್ನು ದುರುದ್ದೇಶದಿಂದ ತಿರುಚಿವೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ನಾನೊಬ್ಬ ಪತ್ರಕರ್ತೆ, ಹಾಗಾಗಿ ಅರ್ನಾಬ್ ಪರ ನಿಲ್ಲುವುದಿಲ್ಲ!- ಅರ್ಫಾ ಖಾನಮ್ ಶೇರ್ವಾನಿ
ಆದರೆ ARG ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಈ ಆರೋಪಗಳನ್ನು ನಿರಾಕರಿಸಿದೆ.
ಟಿಆರ್ಪಿಯನ್ನು ನಿರ್ವಹಿಸುವ BARC ಸಂಸ್ಥೆ ಹನ್ಸಾ ರಿಸರ್ಚ್ ಗ್ರೂಪ್ ಪ್ರೈವೇಟ್ ಲಿಮಿಟೆಡ್ ಮೂಲಕ ಈ ಬಗ್ಗೆ ದೂರು ಬಂದಾಗ ಈ ಹಗರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವಿಷ್ಟೇ ಅಲ್ಲದೇ ಅರ್ನಾಬ್ ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರದಲ್ಲಿ ಇನ್ನೂ ಕೆಲವು ಪ್ರಕರಣಗಳು ಬಾಕಿ ಉಳಿದಿವೆ.
ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್ಗೊಳಗಾದ ಬೆಂಗಳೂರು ಎಡಿಟರ್ಸ್ ಗಿಲ್ಡ್!