ಒಕ್ಕಲಿಗ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀಡದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸಲಾಗುವುದು ಎಂಬ ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಪ್ರತ್ಯೇಕ ರಾಜ್ಯದ ಕೂಗಿನ ವಿರುದ್ಧ ಗಟ್ಟಿ ದನಿ ಎತ್ತಿರುವ ಕನ್ನಡಿಗರು ನಡೆಸುತ್ತಿರುವ ‘ಕರ್ನಾಟಕವೊಂದೇ’ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಮೊನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ “ರಾಜ್ಯಕ್ಕೆ ಬರುತ್ತಿರುವ ಆದಾಯದಲ್ಲಿ ಒಕ್ಕಲಿಗರ ಪಾಲು ಶೇ.60 ರಷ್ಟಿದೆ. ಹಲವರು ಸರ್ಕಾರಕ್ಕೆ ಭೂದಾನ ಮಾಡಿದ್ದಾರೆ. ಆದರೆ ಒಕ್ಕಲಿಗರಿಗೆ ಕೇವಲ 4% ಮೀಸಲಾತಿ ಸಿಗುತ್ತಿದೆ. ಮೀಸಲಾತಿ ಹೆಚ್ಚಳ ಮಾಡಿದಿದ್ದರೆ ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ” ಎಂದು ಸೋಮೇಶ್ವರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಇಂದು, ಮುಂದು, ಎಂದೆಂದೂ,
ಕರ್ನಾಟಕವೊಂದೇ. ಒಡಕು, ತರಲಿದೆ ಕೆಡಕು.#ಕರ್ನಾಟಕವೊಂದೇ#Karnatakavonde pic.twitter.com/y5BsWKarrN— Manjunath S (@NaanuManjunatha) December 7, 2020
ಇದಕ್ಕೆ ರಾಜ್ಯದ ಜಾತಿ, ಧರ್ಮ ಲೆಕ್ಕಿಸದೇ ಸಾವಿರಾರು ಕನ್ನಡಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು, ಮುಂದು, ಎಂದೆಂದೂ, ಕರ್ನಾಟಕವೊಂದೇ. ಒಡಕು, ತರಲಿದೆ ಕೆಡಕು ಎಂದು ಅಭಿಪ್ರಾಯಪಟ್ಟಿರುವ ಕನ್ನಡಿಗರು #ಕರ್ನಾಟಕವೊಂದೇ ಹ್ಯಾಸ್ಟ್ಯಾಗ್ ಬಳಸಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದಕ್ಕೆ ಮತ್ತಷ್ಟು ಸಾವಿರ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಪ್ರತಿಕ್ರಿಯಿಸಿ “ಏಕೀಕರಣಕ್ಕಾಗಿ ಜಾತಿ, ಧರ್ಮ, ಮತ, ಪಂಥ ಬೇಧವಿಲ್ಲದೆ ನಮ್ಮ ಹಿರಿಯರು ತ್ಯಾಗ, ಸಮರ್ಪಣೆಯಿಂದ ಒಂದಾಗಿ ಹೋರಾಡಿದ ಪರಿಣಾಮವಾಗಿ ಕರ್ನಾಟಕ ಒಂದು ರಾಜ್ಯವಾಗಿದೆ. ಇದನ್ನು ಒಡೆಯುವ ಮಾತನ್ನು ಯಾರೇ, ಯಾವ ಉದ್ದೇಶಕ್ಕೇ ಆಡಿದರೂ ಖಂಡಿಸುತ್ತೇನೆ. ಒಡಕು ಮಾತುಗಳು ಯಾವ ಮೂಲೆಯಿಂದ ಬಂದರೂ ತಪ್ಪು” ಎಂದಿದ್ದಾರೆ.
ಏಕೀಕರಣಕ್ಕಾಗಿ ಜಾತಿ, ಧರ್ಮ, ಮತ, ಪಂಥ ಬೇಧವಿಲ್ಲದೆ ನಮ್ಮ ಹಿರಿಯರು ತ್ಯಾಗ, ಸಮರ್ಪಣೆಯಿಂದ ಒಂದಾಗಿ ಹೋರಾಡಿದ ಪರಿಣಾಮವಾಗಿ ಕರ್ನಾಟಕ ಒಂದು ರಾಜ್ಯವಾಗಿದೆ. ಇದನ್ನು ಒಡೆಯುವ ಮಾತನ್ನು ಯಾರೇ, ಯಾವ ಉದ್ದೇಶಕ್ಕೇ ಆಡಿದರೂ ಖಂಡಿಸುತ್ತೇನೆ. ಒಡಕು ಮಾತುಗಳು ಯಾವ ಮೂಲೆಯಿಂದ ಬಂದರೂ ತಪ್ಪು. (1/3)#ಕರ್ನಾಟಕವೊಂದೇ #Karnatakavonde pic.twitter.com/KKxKDPiegf
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) December 7, 2020
“ಕರ್ನಾಟಕದ ಒಗ್ಗಟ್ಟಿರುವುದೇ ಕನ್ನಡತನದಲ್ಲಿ, ಇಂದು ಅಖಂಡ ಕರ್ನಾಟಕವನ್ನ ಜಾತಿಯ ಹೆಸರಲ್ಲಿ ಒಡೆಯುವ ಸಂಚು ರೂಪುಗೊಳ್ತಿದೆ, ಹಳೆ ಮೈಸೂರು-ಉತ್ತರ ಕರ್ನಾಟಕ, ಲಿಂಗಾಯತ-ಒಕ್ಕಲಿಗ ಹೀಗೆ ವಾದಗಳು ಹುಟ್ಟಿಕೊಳ್ತಿವೆ. ಇವುಗಳನ್ನ ಮೊಳಕೆಯಲ್ಲೇ ಚಿವುಟಿ ಹಾಕಬೇಕು. ನೆನಪಿರಲಿ ಒಂದೇ ಒಂದೇ #ಕನ್ನಡವೊಂದೇ #ಕರ್ನಾಟಕವೊಂದೇ” ಎಂದು ಸಚಿನ್ ಗ್ಯಾಂಗರ್ ಟ್ವೀಟ್ ಮಾಡಿದ್ದಾರೆ.
2025ಕ್ಕೆ ಲೋಕಸಭೆಯ ಸದಸ್ಯರ ಸಂಖ್ಯೆ ಹೊಸ ಜನಗಣತಿಯ ಪ್ರಕಾರ ಆದಲ್ಲಿ ಕರ್ನಾಟಕಕ್ಕೆ ಈಗಿರುವ ಲೋಕಸಭೆ ಸದಸ್ಯರ ಸಂಖ್ಯೆ ಐದರಷ್ಟು ಕುಸಿಯಲಿದೆ. ಇಂತಹ ಹೊತ್ತಲ್ಲಿ ಕರ್ನಾಟಕದ ದನಿ ಉಳಿಸಿಕೊಳ್ಳಬೇಕು ಅನ್ನುವ ಆಸೆಯಿರುವವರು ಯಾವ ಕಾರಣಕ್ಕೂ ರಾಜ್ಯ ವಿಭಜನೆ ಸಮರ್ಥಿಸಬಾರದು ಎಂದು ವಸಂತ ಶೆಟ್ಟಿಯವರು ಒತ್ತಾಯಿಸಿದ್ದಾರೆ.
“ದೇಶವನ್ನು ಧರ್ಮದ ಹೆಸರಿನಲ್ಲಿ ಮಾನಸಿಕವಾಗಿ ಒಡೆದಿದ್ದಾಯ್ತು. ಈಗ ಜಾತಿಗಳ ಹೆಸರಲ್ಲಿ ರಾಜ್ಯ ಒಡೆಯುವ ಹುನ್ನಾರ. ಇದು ಯಾರ ಚಿತಾವಣೆ, ಈ ಕುತಂತ್ರಗಳೆಲ್ಲ ಯಾವ ಗರಡಿಯಿಂದ ಎದ್ದು ಬರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಕನ್ನಡಿಗರು ದಡ್ಡರಲ್ಲ. ಹಿರಿಯರು ಕಟ್ಟಿದ ನಾಡಿದು, ಯಾರದೋ ಕುಯುಕ್ತಿಗಳಿಗೆ ಒಡೆಯಲು ಬಿಡೆವು” ಎಂದು ಪತ್ರಕರ್ತರಾದ ದಿನೇಶ್ ಕುಮಾರ್ ಎಸ್.ಸಿ ತಿಳಿಸಿದ್ದಾರೆ.
ದೇಶವನ್ನು ಧರ್ಮದ ಹೆಸರಿನಲ್ಲಿ ಮಾನಸಿಕವಾಗಿ ಒಡೆದಿದ್ದಾಯ್ತು.ಈಗ ಜಾತಿಗಳ ಹೆಸರಲ್ಲಿ ರಾಜ್ಯ ಒಡೆಯುವ ಹುನ್ನಾರ. ಇದು ಯಾರ ಚಿತಾವಣೆ, ಈ ಕುತಂತ್ರಗಳೆಲ್ಲ ಯಾವ ಗರಡಿಯಿಂದ ಎದ್ದು ಬರುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಕನ್ನಡಿಗರು ದಡ್ಡರಲ್ಲ. ಹಿರಿಯರು ಕಟ್ಟಿದ ನಾಡಿದು, ಯಾರದೋ ಕುಯುಕ್ತಿಗಳಿಗೆ ಒಡೆಯಲು ಬಿಡೆವು. #ಕರ್ನಾಟಕವೊಂದೇ pic.twitter.com/oldZEuMDZS
— Dinesh Kumar Dinoo (@dinoosacham) December 7, 2020
ಇನ್ನು ಅಜಯ್ ರಾಜ್ ಎನ್ನುವವರು ಪ್ರತ್ಯೇಕ ರಾಜ್ಯದ ಪರ ಟ್ವೀಟ್ ಮಾಡಿದ್ದಾರೆ. “ಆಡಳಿತತ್ಮಕ ದೃಷ್ಟಿಯಿಂದ ಹೊಸ ರಾಜ್ಯ ಉದಾಯಿಸಿದರೆ ಒಳ್ಳೇದು ಕಣ್ರಪ್ಪ. ಅಭಿವೃದ್ಧಿಯೂ ಆಗ್ತದೆ ಹಾಗೂ ಜನ ಪ್ರತಿನಿಧಿಗಳಿಂದ ಉತ್ತರದಾಯಿತ್ವವೂ ಸಿಗುತ್ತೆ. ನಾವು ಭಾವನಾತ್ಮಕವಾಗಿ ಯೋಚಿಸಿದಷ್ಟು ನಮಗೆ ನಷ್ಟ ಕಣ್ರಪ್ಪ. 14 ಜಿಲ್ಲೆಗಳನ್ನೊಳಗೊಂಡ ಕೇರಳ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಕಣ್ರಪ್ಪ. #ಮೈಸೂರು_ರಾಜ್ಯ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ ಎಚ್.ಎಂ ರವರು “ಒಡೆದು ಆಳುವುದರಿಂದ ಅದ್ಯಾವ ರೀತಿ ಅಭಿವೃದ್ಧಿ ಆಗುತ್ತೆ ಸ್ವಲ್ಪ ವಿವರಿಸಿ. ಅಖಂಡವಾಗಿದ್ದ ತೆಲುಗು ರಾಜ್ಯ ಆಂಧ್ರ ತೆಲಂಗಾಣಗಳಾಗಿ ಒಡೆದ ಮೇಲೆ ಯಾವ ರೀತಿ ಅಭಿವೃದ್ಧಿ ಆಗಿದೆ ಹೇಳಿ. #ಕರ್ನಾಟಕವೊಂದೇ” ಎಂದಿದ್ದಾರೆ. ಅಲ್ಲದೆ ಮೈಸೂರು ಕೇವಲ ಒಕ್ಕಲಿಗರ ಸ್ವತ್ತಲ್ಲ, ಉತ್ತರದ ಜಿಲ್ಲೆಗಳು ಲಿಂಗಾಯತರ ಸ್ವತ್ತಲ್ಲ. ಇಂತಹ ಎಷ್ಟೇ ಮನೆಮುರುಕರು ಹಾರಾಡಿದರೂ, ಎಂದಿಗೂ #ಕರ್ನಾಟಕವೊಂದೆ #KarnatakaVonde ಎಂದು ಟ್ವೀಟ್ ಮಾಡಿದ್ದಾರೆ.
ಮೈಸೂರು ಕೇವಲ ಒಕ್ಕಲಿಗರ ಸ್ವತ್ತಲ್ಲ, ಉತ್ತರದ ಜಿಲ್ಲೆಗಳು ಲಿಂಗಾಯತರ ಸ್ವತ್ತಲ್ಲ. ಇಂತಹ ಎಷ್ಟೇ ಮನೆಮುರುಕರು ಹಾರಾಡಿದರೂ, ಎಂದಿಗೂ #ಕರ್ನಾಟಕವೊಂದೆ #KarnatakaVonde
— Shruthi H M । ಶ್ರುತಿ ಎಚ್ ಎಮ್ (@shruthihm1) December 7, 2020
ಇಂದು ಕನ್ನಡ ನಾಡು ಇಷ್ಟು ಸಮೃದ್ಧವಾಗಿ ಬೆಳೆಯೋದಕ್ಕೆ ನಾಡಿನ ಎಲ್ಲಾ ಭಾಗದ, ಎಲ್ಲಾ ವರ್ಗದ ಜನರ ದುಡಿಮೆಯ ಶ್ರಮವಿದೆ, ಮುಂದೆ ಕೂಡ ಈ ಒಗ್ಗಟ್ಟು ಬೇಕೇ ಬೇಕು. ಒಡೆದಾಳುವ ನೀತಿಗಳನ್ನ ನಮ್ಮ ನಡುವೆ ನುಸುಳುವುದಕ್ಕೆ ಬಿಡಕೂಡದು. ನಮಗೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರಾಗಿರಬೇಕು. #ಕರ್ನಾಟಕವೊಂದೇ ಎಂದು ಚೇತನ್ ಜೀರಾಳ್ ಟ್ವೀಟ್ ಮಾಡಿದ್ದಾರೆ.
ರಾಜ್ಯ ಒಡೆಯುವ ವಿಷಯ ಯಾರೇ ತಂದರೂ ಅವರನ್ನ ಗಟ್ಟಿಯಾಗಿ ವಿರೋಧ ಮಾಡಿ. ಅದು ಸಂಘಿಗಳೇ ಆಗಿರಲಿ, ಕಾಂಗ್ರೆಸ್ನವರೇ ಆಗಿರಲಿ, ಜೆಡಿಎಸ್ನವರೇ ಆಗಿರಲಿ, ಒಕ್ಕಲಿಗರೇ ಆಗಿರಲಿ, ಲಿಂಗಾಯತರೇ ಆಗಿರಲಿ, ಅಹಿಂದದವರೇ ಆಗಿರಲಿ, ತುಳುವರೇ ಆಗಿರಲಿ. ಯಾರೇ ಕನ್ನಡ ನಾಡಿನ ಒಗ್ಗಟ್ಟನ್ನು ವಿರೋಧ ಮಾಡಿದರೆ ಅಂತವರನ್ನೆಲ್ಲ ವಿರೋಧ ಮಾಡಿ. #ಕರ್ನಾಟಕವೊಂದೇ ಎಂದು ಗಣೇಶ್ ಚೇತನ್ರವರು ಕರೆ ನೀಡಿದ್ದಾರೆ.
ಕೀಲಾರ ನಾಗೇಗೌಡ ಶಿವಲಿಂಗಯ್ಯನವರು ಪ್ರತಿಕ್ರಿಯಿಸಿ “ಕಾವಿ ಬಟ್ಟೆ ತೊಟ್ಟವರಿಗೆ ಸೋಷಿಯಲ್ ಸೈನ್ಸ್ ಗೊತ್ತಿರಲ್ಲ, ಅಧ್ಯಾತ್ಮ ಗೊತ್ತಿದಿಯ ಅಂದರೆ ಬ್ರಾಹ್ಮಣರ ಅಧ್ಯಾತ್ಮನ ನಮ್ಮೆಲ್ಲರ ಅಧ್ಯಾತ್ಮ ಅಂದುಕೊಂಡು ಅವರುಗಳು ಮಂಗ ಆಗುವುದಲ್ಲದೇ ನಮ್ಮನ್ನು ಮಂಗ ಮಾಡುತ್ತಾರೆ. ಈಗಿರುವ 3A ಮೀಸಲಾತಿ ಏನಿದೆ ಅಷ್ಟು ಸಾಕು ಅಂತ ನನ್ನ ಅಭಿಪ್ರಾಯ” ಎಂದಿದ್ದಾರೆ.
“ಮೊದಲು ಚುಂಚನಗಿರಿ ಮಠದ ಶಾಲೆ-ಕಾಲೇಜು-ಆಸ್ಪತ್ರೆಗಳಲ್ಲಿ ಬಡ ಒಕ್ಕಲಿಗರಿಗೆ ಉಚಿತ ಶಿಕ್ಷಣ-ವೈದ್ಯಕೀಯ ವ್ಯವಸ್ಥೆ ಕಲ್ಪಿಸಲಿ, ಮಠದ ಸಮುದಾಯ ಭವನಗಳು ಉಚಿತವಾಗಿ ಸಿಗುವಂತಾಗಲಿ. ಮೊದಲು ಮಠವು ಬಡ ಒಕ್ಕಲಿಗರಿಗೆ ಬದುಕಲು ವ್ಯವಸ್ಥೆ ಗಳನ್ನು ಕಲ್ಪಿಸಿಕೊಡಲಿ, ಅದು ಬಿಟ್ಟು ಜಾತಿಯ ಹೆಸರಲ್ಲಿ ಮಠವೇ ಎಲ್ಲಾ ಕಡೆ ಜಾಗ, ಹಣ, ಅನುದಾನ ಪಡೆದು ಬೆಳೆಯುವುದು ಆಗಿದೆ” ಎಂದು ರಾಜೇಂದ್ರ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾರ್ಟೂನಿಸ್ಟ್ಗಳ ಕಣ್ಣಲ್ಲಿ ರೈತ ಹೋರಾಟ: ವೈರಲ್ ಆದ ಹೋರಾಟದ ಚಿತ್ರಗಳು