ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ NSUI, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಬಳಿ ಬೈಕ್ ಅನ್ನು ಶವದಂತೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆಯನ್ನು ಮಾಡಿದೆ.
ಕೇಂದ್ರ ಸರ್ಕಾರ ಕಳೆದ 21 ದಿನಗಳಿಂದ ಪೆಟ್ರೋಲ್ ಬೆಲೆಯನ್ನು ಸತತವಾಗಿ ಎರಿಸುತ್ತಲೇ ಇದೆ. ಇಂದೂ ಸಹ ಪೆಟ್ರೋಲ್ ಗೆ 25 ಪೈಸೆ ಮತ್ತು ಡೀಸೆಲ್ ಗೆ 21 ಪೈಸೆಯನ್ನು ಏರಿಸಲಾಗಿದೆ. ಅಲ್ಲದೆ, ಕಳೆದ 21 ದಿನಗಳಲ್ಲಿ 1 ಲೀಟರ್ ಪೆಟ್ರೋಲ್ ಗೆ 9.12ರೂ. ಹಾಗೂ ಡೀಸೆಲ್ ಗೆ 11.01 ರೂ. ಏರಿಕೆ ಮಾಡಲಾಗಿದೆ.
NSUI ರಾಜ್ಯಾಧ್ಯಕ್ಷ ಮಂಜುನಾಥ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಬೈಕನ್ನು ಶವದಂತೆ ಹೊತ್ತು ಶವಯಾತ್ರೆ ಮಾಡಲಾಯಿತು. ನಂತರ ಆ ಬೈಕ್ ಗೆ ಶವಸಂಸ್ಕಾರ ಮಾಡಿ ಕೊನೆಗೆ ಬೆಂಕಿ ಹಚ್ಚಿ ಸುಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ.
ನಂತರ ಮಾತನಾಡಿದ ಮಂಜುನಾಥ್ “ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುತ್ತಿದೆ. ಮೊದಲೇ ಕೊರೋನಾ ದಿಂದ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ತೈಲೋದ್ಯಮ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ರಿಂದ 90ರ ಗಡಿಗೆ ಬಂದು ನಿಂತಿದ್ದು, ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆ ಅತ್ಯಂತ ಪಾತಾಳಕ್ಕೆ ಕುಸಿದಿರುವ ಸಮಯದಲ್ಲೂ ಸಹ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಏರಿಸುತ್ತಿರುವುದು ಸಾಮಾನ್ಯವಾಗಿ ಜನರ ಆಕ್ರೋಶ ಕಾರಣವಾಗಿದೆ.