Homeಅಂಕಣಗಳುಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

- Advertisement -
- Advertisement -

ಸರಕಾರಿ ಆಸ್ಪತ್ರೆಯ ವೈದ್ಯರೊಳಗ ಒಂದು ಜೋಕು ಓಡಾಡತಾ ಇರತೇತಿ. ಅದೇನಪಾ ಅಂದರ ತುರ್ತು ಚಿಕಿತ್ಸಾ ಘಟಕದೊಳಗ ಏನಾದರ ಒಂದು ಕೇಸು ಬಂತು ಅಂದರ ಅದನ್ನ ನೋಡಾಕ ನೂರು ಜನಾ ಹೊರಗ ಗುಂಪು ಕಟ್ಟಿಕೊಂಡು ಬರತಾರ. ಹೋಗರಿ, ಡಾಕ್ಟರಿಗೆ ಕೆಲಸಾ ಮಾಡಾಕ ಬಿಡ್ರಿ ಅಂದರ ಹೋಗಂಗಿಲ್ಲ. ಅವರನ್ನ ಚದುರಿಸಬೇಕು ಅಂತ ಡಾಕ್ಟರು ಒಂದು ಉಪಾಯ ಕಂಡುಕೊಂಡಿರತಾರ. ಅದೇನಪಾ ಅಂದರ ರೋಗಿಗೆ ತುರ್ತಾಗಿ ರಕ್ತ ಬೇಕಾಗೇತಿ. ಯಾರರ ಕೊಡವರು ಇದ್ದರ ಮುಂದ ಬರ್ರಿ ಅಂತ ಹೇಳತಾರ. ಆವಾಗ ಎಲ್ಲಾ ಶೂರರೂ ಅಲ್ಲಿಂದ ಹೋಗಿ ಬಿಡತಾರಂತ.

ಯಾವಾಗಲೂ, ಎಲ್ಲಾದಕ್ಕೂ `ಯಾಕ’ ಅಂತ ಪ್ರಶ್ನೆ ಮಾಡೋ ಉತ್ತರ ಕುಮಾರರಿಂದ ತುಂಬಿ ಹೋಗಿರೋ ದೇಶ ನಮ್ಮದು. ಹಂಗ ಇದ್ದಾಗ ದೆಹಲಿ- ಮುಂಬೈ ಮುಂತಾದ ನಗರಗಳಲ್ಲಿ ಕೆಲವು ಜನ ರಕ್ತ ದಾನ ಮಾಡೋ ಸುದ್ದಿ ಇದ್ದಕ್ಕಿದ್ದಂಗ ಜೋರಾಗಿ ಬಿಟ್ಟದಲ್ಲಾ ಎನು ಕತಿ?

ಈ ಹಿನ್ನೆಲೆಯೊಳಗ ಒಂದು ಮಜಾ ನೀವು ನೋಡಿದಿರಾ? ನಮ್ಮ ಠೀವಿ ಚಾನೆಲ್ಲುಗಳು ಬಳಸೋ ಶಬ್ದಗಳು ರಾತ್ರೋರಾತ್ರಿ ಬದಲಾಗಿದ್ದು ನೋಡಿದಿರಾ?

`ತಬ್ಲೀಘಿ ಜಿಹಾದಿಗಳು’ ಅಂತಿದ್ದವರು `ತಬ್ಲೀಘಿ ಸೇನಾನಿಗಳು’ ಅಂತ ಕರೀಲಿಕ್ಕೆ ಶುರು ಮಾಡಿದ್ದು ಯಾಕ ಅಂತ ವಿಚಾರ ಮಾಡಿದಿರಾ?

ನೋಡ್ರಿ, ನಿಮಗ ಬರೇ ಬಣ್ಣದ ಚಿತ್ರ ತೋರಿಸಿ, ನಿಮ್ಮ ಹತ್ರ ಹೂಂ ಅನ್ನಿಸಿ, ನಿಮ್ಮಿಂದ ವಿಚಾರ ಶಕ್ತಿ ಕಿತ್ತುಕೊಳ್ಳೋ ಜಾದೂ ಠೀವಿಯವರ ಹತ್ರ ಐತಿ.

ಎಲ್ಲಾ ಇರಲಿ, ಅದರ ಹಿಂದಿನ ಹಕೀಕತ್ತು ಏನು ಒಂದೀಟು ತಿಳಕೊಳ್ಳೋಣು. ಅದು ಏನಪಾ ಅಂದರ ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಈ ಪ್ಲಾಸ್ಮಾ ಅಂದರ ಅದು ಮನುಷ್ಯರ ರಕ್ತದಾಗ ಇರೋ ದ್ರವ್ಯ. ಇದರಾಗನ ಕೆಂಪು ಮತ್ತು ಬಿಳಿ ರಕ್ತ ಕಣಗಳು ಈಜಾಡಿಕೊಂಡು ಇರತಾವು. ಆದರ ಇದರಾಗ ಇರೋ ಪ್ರಮುಖ ವಸ್ತು ಅಂದರ ರೋಗ ನಿರೋಧಕ ಕಣಗಳು ಅಥವಾ ಇಮ್ಯುನೋ ಗ್ಲೋಬುಲಿನ್. ಅವಕ್ಕ ಆಂಟಿಬಾಡಿ ಅಥವಾ ಪ್ರತಿಜೀವಿಗಳು ಅಂತಾರ. ಇವು ರೋಗ ಬಂದು ಗುಣವಾದ ಪ್ರತಿ ರೋಗಿಯ ದೇಹದಾಗ ಇರತಾವು. ಇವನ್ನ ರೋಗ ಇದ್ದವನಿಗೆ ಕೊಟ್ಟರ ಅವನ ದೇಹದಾಗ ಪ್ರತಿಜೀವಿಯ ಸಂಖ್ಯೆ ಜಾಸ್ತಿ ಆಗಿ, ಅವನ ರೋಗ ನಿರೋಧಕ ಶಕ್ತಿ ಹೆಚ್ಚಾಗಿ, ಅವನ ರೋಗ ಕಮ್ಮಿ ಆಗುವ ಸಾಧ್ಯತೆ ಹೆಚ್ಚು ಆಗತೇತಿ.

ಒಂದು ರೀತಿಯೊಳಗ ಇದು ಲಸಿಕೆ ಇದ್ದಂಗ. ಯಾವ ರೋಗಾಣುವಿನ ವಿರುದ್ಧ ಲಸಿಕೆಯೊ ತಯಾರು ಮಾಡಬೇಕಾಗೇದೋ, ಅದರದ ಒಂದು ಸಣ್ಣ ಪ್ರಮಾಣದ ಸೋಂಕನ್ನು ತೊಗೊಂಡು ಒಂದು ಕುದುರೆ, ಎಮ್ಮೆ ಅಥವಾ ಇನ್ನೊಂದು ಅಂಥಾ ಪ್ರಾಣಿಯ ದೇಹದಾಗ ಹಾಕತಾರ. ಅದರ ದೇಹದಾಗ ಪ್ರತಿಜೀವಿ ತಯಾರು ಆದ ಮ್ಯಾಲೆ ಅದನ್ನ ತಗದು ಮನುಷ್ಯರಿಗೆ ನಿರೋಧಕ ಔಷಧಿ ಅಂತ ಕೊಡತಾರ.

ಅದರ ರೀತಿಯೊಳಗನ ಇರೋದು ಇದು ಪ್ಲಾಸ್ಮಾ ಥೆರಪಿ ಅಥವಾ ಜೀವದ್ರವ್ಯ ಚಿಕಿತ್ಸೆ. ಇದನ್ನ ಯಾರು ರೋಗದಿಂದ ಗುಣಾ ಆಗಿರತಾರೋ ಅವರ ದೇಹದಿಂದ ತೊಗೋಬೇಕಾಗತದ. ಭಾರತದಾಗ ರಕ್ತ ದಾನ ಸ್ವಯಂ ಆಸಕ್ತಿಯಿಂದ ಮಾತ್ರ ಕೊಡಬಹುದಾದ್ದರಿಂದ, ರಕ್ತದಾಗ ಇರೋ ಜೀವದ್ರವ್ಯವನ್ನ ಸಹಿತ ದಾನಿಗಳ ಸಮ್ಮತಿಯಿಂದ ಮಾತ್ರ ತೊಗೋಬಹುದು.

ಆದರ ಈಗ ಈ ಜೀವದ್ರವ್ಯದ ಜರೂರತ್ತು ಬರೇ ಯಾರೋ ಕೆಲವರ ಆರೋಗ್ಯ ರಕ್ಷಣೆಯ ಕಾರಣಗಳಿಗೆ ಬೇಕಾಗಿಲ್ಲ. ಸಮಾಜದ ಸ್ವಾಸ ಕಾಪಾಡೋ ಸಲುವಾಗಿ ಬೇಕಾಗೇತಿ.

ತಮ್ಮ ರಕ್ತದೊಳಗಿನ ಪ್ಲಾಸ್ಮಾ ತೊಗೊಳ್ಳಲಿಕ್ಕೆ ದೆಹಲಿ- ಮುಂಬಯಿ ಸೇರಿದಂತೆ 300 ಜನ ತಬ್ಲೀಘ ಜಮಾತ ಸದಸ್ಯರು ಸಮ್ಮತಿ ಕೊಟ್ಟಾರ ಅನ್ನೋ ಸುದ್ದಿ ಬಂದಕೂಡಲೇ ಕೆಲವರು ವಿರೋಧ ಮಾಡಲಿಕ್ಕೆ ಸುರು ಮಾಡಿದರು. ನನಗ ಕೊರೋನಾ ಬಂದು, ನಾನು ಸತ್ತರೂ ಸತ್ತೆ, ಗದ್ದಾರುಗಳ ರಕ್ತ ತೊಗೊಳ್ಳೋದಿಲ್ಲಾ ಅಂತ ಘೋಷಣೆ ಮಾಡಿಕೊಂಡರು.

ಇನ್ನ ಕೆಲವರು ನೋಡ್ರಿ ಅವರು ದೇವರಂಥಾವರು. ರೋಗಿಗಳಿಗೆ ತಮ್ಮ ರಕ್ತ ಕೊಟ್ಟು ಉಳಿಸಿಕೊಳ್ಳಾಕ ಹತ್ಯಾರು, ಅಂತ ಹೇಳಿದರು. ಆದರ ಸತ್ಯ ಅನ್ನೋದು ಈ ಎರಡು ವಿಪರೀತಗಳ ನಡುವೆ ಐತಿ.

ರಕ್ತ ಸ್ರಾವದಿಂದ ಸಾಯುವವರನ್ನ ರಕ್ತ ಮರುಪೂರಣೆಯಿಂದ ರಕ್ಷಣೆ ಮಾಡೋ ತಂತ್ರಜ್ಞಾನ ಇವತ್ತಿನದಲ್ಲ. ಎರಡನೇ ಮಹಾ ಯುದ್ಧದಿಂದನೂ ಈ ಪದ್ಧತಿ ನಡೆಯುತ್ತಾ ಬಂದೇತಿ. ಭಾರತದೊಳಗ ಸ್ವಾತಂತ್ರ ಪೂರ್ವದಾಗೂ ರಕ್ತದಾನದ ಉದಾಹರಣೆಗಳು ಇದ್ದಾವ. ಪ್ರತಿ ಸಲೆ ನಮ್ಮ ತಂಗಿಯೋ, ಹೆಂಡತಿಯೋ, ಮಗಳೋ, ರಕ್ತ ಹೀನತೆಯಿಂದ ಬಳಲುವಾಗ, ಯಾರಿಗರ ನಮ್ಮವರಿಗೆ ಅಪಘಾತ ಆದಾಗ, ಅವರಿಗೆ ರಕ್ತ ಹೊಂದಿಸಲು ನಾವು ಹುಡುಕಾಡಿರುತೇವಿ. ರಕ್ತ ದಾನಿ ಸಿಕ್ಕರ ಸಾಕು ಅಂತ ಆಗಿರತೇತಿ. ಅವರ ಮತ, ಜಾತಿ ಕೇಳಾಕ ಹೋಗೋದಿಲ್ಲ. ಇದು ನಮಗ ಮಾನವ ಕುಲದ ಏಕತೆಯ ಪಾಠ ಆಗಿರತದೋ ಇಲ್ಲೋ. ಇಂಥಾ ಪರಿಸ್ಥಿತಿಯೊಳಗ `ಮಾನವ ಜಾತಿ ತಾನು ಒಂದೇ ವಲಂ’ ಅಂದರ ಅಲ್ಲಂ ಅಂತ ಯಾರರ ಹೇಳತೇವೇನು?

ಇನ್ನ ತಿಂಗಳಾನುಗಟ್ಟಲೆ ಕೊರೋನಾ ಜಿಹಾದು- ಭಯೋತ್ಪಾದನೆ ಅಂತ ಹೀಯಾಳಿಸಿಕೊಂಡ ತಬ್ಲೀಘು ಜಮಾತು ಸದಸ್ಯರು ರಕ್ತದಾನಕ್ಕೆ ತಯಾರಾದ ತಕ್ಷಣ ಅವರನ್ನು ಕೊರೊನಾ ಸೇನಾನಿಗಳು ಅಂತ ಮಾಡಿದವರು ಯಾರು? ಅವರಿಗೆ `ನಾನು ನಿನ್ನೆ ಏನು ಮಾತಾಡಿದ್ದೆ?- ಇವತ್ತು ಏನು ಮಾತಾಡಾಕ ಹತ್ತೇನಿ’ ಅಂತ ನೆನಪು ಇರತೈತೋ ಇಲ್ಲೋ?

ಅವರಿಗೆ ಇರಲಿ ಬಿಡಲಿ, ನಮಗರ ಅಷ್ಟು ಬುದ್ಧಿ ಅದನೋ ಇಲ್ಲೋ? ರಾಜಕಾರಣಿಗಳು ಮಾಧ್ಯಮ ದುರುಪಯೋಗ ಪಡಿಸಿಕೊಳ್ಳೋದು, ಮಾಧ್ಯಮದವರು ರಾಜಕಾರಣ ಮಾಡೋದು ನಮಗ ಗೊತ್ತು ಆಗತೇತೋ ಇಲ್ಲೋ? ಈ ಪ್ರಶ್ನೆಗಳ ಉತ್ತರಗಳೇ ನಮ್ಮ ನಾಳೆಗಳನ್ನ ನಿರ್ಧರಿಸತಾವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...