ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಒಳಗೊಂಡಿರುವ 2023ರ ಮ್ಯಾಪ್ನ್ನು ಚೀನಾ ಸೋಮವಾರ ಬಿಡುಗಡೆ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದನ್ನು ಟೀಕಿಸಿರುವ ಕರ್ನಾಟಕ ಕಾಂಗ್ರೆಸ್ ಘಟಕ, ‘ಚೀನಾ’ ಎಂಬ ಪದದ ಉಚ್ಚಾರಣೆಗೂ ಪ್ರಧಾನಿ ಭಯಪಡುತ್ತಿದ್ದಾರೆ ಎಂದು ಟೀಕೆ ಮಾಡಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಚೀನಾ ಮತ್ತೊಮ್ಮೆ ಭಾರತವನ್ನು ಕೆಣಕುತ್ತಿದೆ, ಚೀನಾದೆಡೆಗೆ ಕೆಂಗಣ್ಣು ಬಿಡಬೇಕಿದ್ದ ಪ್ರಧಾನಿಯವರು ‘ಚೀನಾ’ ಎಂಬ ಪದದ ಉಚ್ಚಾರಣೆಗೂ ಭಯಪಡುತ್ತಿದ್ದಾರೆ. ಭಾರತದ ಪ್ರದೇಶಗಳಾದ ಅರುಣಾಚಲಪ್ರದೇಶ, ಅಕ್ಸಾಯ್ ಚಿನ್, ಲಡಾಕ್ ಚೀನಾ ತನ್ನ ನಕ್ಷೆಯಲ್ಲಿ ಸೇರಿಸಿ ಬಿಡುಗಡೆ ಮಾಡಿದ್ದರೂ 56 ಇಂಚಿನ ಎದೆಯವರು ಮೌನ ಮುರಿಯದಿರುವುದೇಕೆ? ಚೀನಾ ಪ್ರತಿ ವರ್ಷವೂ ಭಾರತದ ನೆಲವನ್ನು ಆಕ್ರಮಿಸುತ್ತಾ ಮುಂದೆ ಬರುತ್ತಿದ್ದರೂ ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿರುವುದೇಕೆ?” ಎಂದು ತರಾಟೆ ತೆಗೆದುಕೊಂಡಿದೆ.
ಚೀನಾ ಮತ್ತೊಮ್ಮೆ ಭಾರತವನ್ನು ಕೆಣಕುತ್ತಿದೆ, ಚೀನಾದೆಡೆಗೆ ಕೆಂಗಣ್ಣು ಬಿಡಬೇಕಿದ್ದ ಪ್ರಧಾನಿಯವರು “ಚೀನಾ” ಎಂಬ ಪದದ ಉಚ್ಚಾರಣೆಗೂ ಭಯಪಡುತ್ತಿದ್ದಾರೆ.
ಭಾರತದ ಪ್ರದೇಶಗಳಾದ ಅರುಣಾಚಲಪ್ರದೇಶ, ಅಕ್ಸಾಯ್ ಚಿನ್, ಲಡಾಕ್ ಚೀನಾ ತನ್ನ ನಕ್ಷೆಯಲ್ಲಿ ಸೇರಿಸಿ ಬಿಡುಗಡೆ ಮಾಡಿದ್ದರೂ 56 ಇಂಚಿನ ಎದೆಯವರು ಮೌನ ಮುರಿಯದಿರುವುದೇಕೆ?
ಚೀನಾ ಪ್ರತಿ ವರ್ಷವೂ… pic.twitter.com/3RhYBYStIU
— Karnataka Congress (@INCKarnataka) August 31, 2023
ಚೀನಾ ಬಿಡುಗಡೆ ಮಾಡಿದ ಹೊಸ ಮ್ಯಾಪ್ನ ಬಗ್ಗೆ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ.
”ಲಡಾಖ್ನಲ್ಲಿ ಒಂದು ಇಂಚು ಭೂಮಿಯೂ ನಷ್ಟವಾಗಿಲ್ಲ ಎಂದು ಪ್ರಧಾನಿ ಹೇಳಿದ್ದು ಸುಳ್ಳು ಎಂದು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಚೀನಾ ಭೂಮಿ ಅತಿಕ್ರಮಿಸಿದೆ ಎಂದು ಇಡೀ ಲಡಾಖ್ಗೆ ತಿಳಿದಿದೆ. ಈ ನಕ್ಷೆಯ ವಿಷಯವು ತುಂಬಾ ಗಂಭೀರವಾಗಿದೆ. ಅವರು ನಮ್ಮ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಪ್ರತಿಕ್ರಿಯಿಸಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಗ್ಲೋಬಲ್ ಟೈಮ್ಸ್ ಪ್ರದರ್ಶಿಸಿದ ನಕ್ಷೆಯು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶ ಮತ್ತು 1962ರ ಯುದ್ಧದಲ್ಲಿ ಆಕ್ರಮಿಸಿಕೊಂಡ ಅಕ್ಸಾಯ್ ಚಿನ್ನ್ನು ಚೀನಾದ ಭಾಗವಾಗಿ ತೋರಿಸಿದೆ. ನಕ್ಷೆಯಲ್ಲಿ ಇದಲ್ಲದೆ ಚೀನಾದ ಭೂಪ್ರದೇಶವಾಗಿ ತೈವಾನ್ ದ್ವೀಪ ಮತ್ತು ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗವನ್ನು ತೋರಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಎನ್ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಕ್ಷೆಗೆ ಪ್ರಾಮುಖ್ಯತೆ ಕೊಡಬೇಕಾಗಿಲ್ಲ ಮತ್ತು ಚೀನಾವು ಅಂತಹ ನಕ್ಷೆಗಳನ್ನು ಬಿಡುಗಡೆ ಮಾಡುವ ಕೆಟ್ಟ ಅಭ್ಯಾಸ ಹೊಂದಿದೆ ಎಂದು ಹೇಳಿದರು.
ಚೀನಾವು ತಮ್ಮದಲ್ಲದ ಪ್ರದೇಶಗಳ ನಕ್ಷೆಗಳನ್ನು ಹಾಕಿದೆ. ಇದು ಹಳೆಯ ಅಭ್ಯಾಸ. ಕೇವಲ ಭಾರತದ ಕೆಲವು ಭಾಗಗಳೊಂದಿಗೆ ನಕ್ಷೆಗಳನ್ನು ಹಾಕುವುದರಿಂದ ಏನೂ ಬದಲಾಗುವುದಿಲ್ಲ. ನಮ್ಮ ಭೂಭಾಗದ ಬಗ್ಗೆ ಸರಕಾರಕ್ಕೆ ಸರಿಯಾಗಿ ತಿಳಿದಿದೆ ಎಂದು ಹೇಳಿದ್ದಾರೆ.