ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕುಕಿ ಪ್ರಾಬಲ್ಯದ ಚುರಾಚಂದ್ಪುರ ಮತ್ತು ಮೈತಿ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆಗಳ ಗಡಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಖ್ಯಾತ ಆದಿವಾಸಿ ಗೀತ ರಚನೆಗಾರ- ಸಂಗೀತ ಸಂಯೋಜಕ ಸೇರಿದಂತೆ ಆರು ಮಂದಿ ಬಲಿಯಾಗಿದ್ದಾರೆ. ಈ ಘಟನೆಯಲ್ಲಿ 14 ಜನ ಗಾಯಗೊಂಡಿದ್ದಾರೆ.
ಈ ಗುಂಡಿನ ದಾಳಿ, ಸ್ಫೋಟಗಳು ಮತ್ತು ನಿರಂತರ ಶೆಲ್ಲಿಂಗ್ನಿಂದ, ಆದಿವಾಸಿ ಗೀತೆ “ಐ ಗಾಮ್ ಹಿಲೋ ಹಮ್” ರಚಿಸಿದ್ದ ಎಲ್.ಎಸ್.ಮಂಗ್ಬೋಯ್ ಲುಂಗ್ಡಿಮ್ (42) ಎಂಬ ಗೀತರಚನೆಕಾರ ಮೃತಪಟ್ಟಿದ್ದಾರೆ. ಈ ಮೂಲಕ ಕೆಲ ಸಮಯದ ವರೆಗೆ ಶಾಂತಿಯುತವಾಗಿದ್ದ ರಾಜ್ಯದಲ್ಲಿ ಮತ್ತೆ ರಕ್ತಪಾತ ಶುರುವಾಗಿದೆ.
ಮಂಗ್ಬೋಯ್ ಲುಂಗ್ಡಿಮ್ ಅವರು ಮೋರ್ಟರ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಿಜೋರಾಂ ರಾಜಧಾನಿ ಐಜ್ವಾಲ್ಗೆ ಚಿಕಿತ್ಸೆಗಾಗಿ ಕರೆ ತರುತ್ತಿದ್ದಾಗ ಗುರುವಾರ ಮಧ್ಯರಾತ್ರಿ ಬಳಿಕ 1 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.
ಕೊಯಿರೆಂಗ್ಟೆಕ್- ನರನ್ ಸೇನಿಯಾ ಪ್ರದೇಶದಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಗಾಯಗೊಂಡಿದ್ದ ರಿಚರ್ಡ್ ಹೆಮ್ ಕೊಲನ್ ಗಯಟೆ (31) ಬೆಳಿಗ್ಗೆ 9 ಗಂಟೆಯ ವೇಳೆಗೆ ಐಜ್ವಾಲ್ ಮೂಲಕ ಗುವಾಹತಿಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟರು.
ಈ ವೇಳೆ ಗಡಿಯ ಪಕ್ಕ ನಡೆದ ಗುಂಡಿನ ದಾಳಿಯಲ್ಲಿ ಗ್ರಾಮ ಸ್ವಯಂಸೇವಕರಿಬ್ಬರು ಸಾವಿಗೀಡಾಗಿದ್ದಾರೆ. ಚುರಚಂದನಪುರದ ಕೌಸಂಬಂಗ್ ಎಂಬಲ್ಲಿ ನಡೆದ ಶೆಲ್ಲಿಂಗ್ ದಾಳಿಯಲ್ಲಿ ಎಂಟು ಜನರು೭ ಗಾಯಗೊಂಡಿದ್ದಾರೆ.
ಇನ್ನು ಬಿಷ್ಣುಪುರದ ತಮ್ನಪೋಕ್ಪಿ ಮತ್ತು ನರನ್ ಸೇನಿಯಾ ಎಂಬಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪೆಬಮ್ ದೇಬನ್ ಮತ್ತು ಮೊಯಿರಂಗಥೆಮ್ ರೊಪೆನ್ ಎಂಬ ಇಬ್ಬರು ಪ್ರಾಣ ಬಿಟ್ಟಿದ್ದಾರೆ.
ಬಿಜೆಪಿ ಆಡಳಿತವಿರುವ ಮಣಿಪುರದಲ್ಲಿ ಮೇ 3ರಿಂದ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ. ಇಲ್ಲಿಯವರೆಗೆ ಮಣಿಪುರ ಹಿಂಸಾಚಾರದಲ್ಲಿ 190ಕ್ಕಿಂತ ಹೆಚ್ಚು ಜನರು ಸಾವಿಗೀಡಾಗಿದ್ದಾರೆ
ಮಂಗಳವಾರ, ಬಿಷ್ಣುಪುರ್ ಜಿಲ್ಲೆಯ ನರಸೇನಾ ಪಕ್ಕದ ಹಳ್ಳಿಗಳಲ್ಲಿ ಗುಂಡಿನ ದಾಳಿ ನಡೆದಿದೆ. ಪರಿಹಾರ ಶಿಬಿರದಲ್ಲಿ ತಂಗಿದ್ದ ಕುಕಿ ಗ್ರಾಮ ರಕ್ಷಣಾ ಸ್ವಯಂಸೇವಕನು ಈ ಬಾಂಬ್ ಸ್ಫೋಟದ ನಂತರ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು 30 ವರ್ಷದ ಜಂಗ್ಮಿನ್ಲುನ್ ಗಂಗ್ಟೆ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ತಿಳಿಸಿದೆ.
ಮತ್ತೋರ್ವ ವ್ಯಕ್ತಿಯನ್ನು ಲೈಬುಜಮ್ ಇನಾವೋ ಎಂದು ಗುರುತಿಸಲಾಗಿದೆ. ಅವರಿಗೆ ಬುಲೆಟ್ ತಾಗಿದ್ದರಿಂದ ಗಾಯಗೊಂಡು ಇಂಫಾಲ್ ಆಸ್ಪತ್ರೆ ಗೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
”ದಾಳಿಯ ವೇಳೆ ಮತ್ತೊಬ್ಬ ವ್ಯಕ್ತಿ ಮೇಲೆ ಗುಂಡು ಹಾರಿಸಲಾಗಿದ್ದು, ಆತನನ್ನು ಇಂಫಾಲ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಗೋಲಿಬಾರ್ ಮತ್ತು ಪ್ರತಿಭಟನಾಕಾರರ ಸಭೆಯ ನಂತರ ರಾಜ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿತ್ತು” ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಹಿಂಸಾಚಾರ ಪ್ರಾರಂಭವಾದಾಗಿನಿಂದ, ರಾಜ್ಯದಲ್ಲಿ ಕನಿಷ್ಠ 60,000 ಜನರು ಸ್ಥಳಾಂತರಗೊಂಡಿದ್ದಾರೆ. ಮಹಿಳೆಯರ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ ಮತ್ತು ಕೇಂದ್ರ ಭದ್ರತಾ ಪಡೆಗಳಿದ್ದರೂ ಜನಸಮೂಹವು ಪೊಲೀಸ್ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದೆ ಮತ್ತು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿದೆ.