ನ್ಯಾಯಾಂಗದಲ್ಲಿ ಅತಿರೇಕದ ಭ್ರಷ್ಟಾಚಾರವಿದೆ ಎಂಬ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗುರುವಾರ ಹೇಳಿದ್ದಾರೆ.
”ಕೆಲವು ವಕೀಲರು ತೀರ್ಪುಗಳನ್ನು ಬರೆಯುತ್ತಾರೆ ಎಂದು ಕೇಳಿದ್ದೇನೆ. ಅದಾದನಂತರ ಆ ತೀರ್ಪನ್ನು ನ್ಯಾಯಾಲಯಗಳು ಉಚ್ಚರಿಸುತ್ತವೆ ಎಂದು ಬುಧವಾರ ಗೆಹ್ಲೋಟ್ ಹೇಳಿದ್ದರು.
”ನ್ಯಾಯಾಂಗದಲ್ಲಿ ಏನಾಗುತ್ತಿದೆ? ನ್ಯಾಯಾಲಯಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಈ ಹೇಳಿಕೆ ರಾಜ್ಯದ ವಕೀಲರ ಸಂಘಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜಸ್ಥಾನ ಹೈಕೋರ್ಟ್ ವಕೀಲರ ಸಂಘವು ಶುಕ್ರವಾರ ರಾಜ್ಯದ ಎಲ್ಲಾ ನ್ಯಾಯಾಲಯಗಳಾದ್ಯಂತ ಒಂದು ದಿನದ ಮುಷ್ಕರವನ್ನು ಘೋಷಿಸಿತ್ತು. ”ಗೆಹ್ಲೋಟ್ ಅವರು ‘ಸಾರ್ವಜನಿಕರನ್ನು ದಾರಿತಪ್ಪಿಸಲು’ ಹೇಳಿಕೆ ನೀಡಿದ್ದಾರೆ” ಎಂದು ರಾಜಸ್ಥಾನ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೆ ವಕೀಲರ ಅಸೋಸಿಯೇಷನ್ ಪತ್ರ ಬರೆದಿದೆ.
ಈ ಬಗ್ಗೆ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮಹೇಂದ್ರ ಶಾಂಡಿಲ್ಯ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು, ”ಗೆಹ್ಲೋಟ್ ಅವರ ಈ ಹೇಳಿಕೆ ದುರದೃಷ್ಟಕರ ಮತ್ತು ಮುಖ್ಯಮಂತ್ರಿ ಅವರ ಬಳಿ ಯಾವುದಾದರೂ ಸಾಕ್ಷ್ಯವಿದ್ದರೆ ಅದನ್ನು ಪ್ರಸ್ತುತಪಡಿಸಬೇಕು” ಎಂದು ಹೇಳಿದ್ದಾರೆ.
ಶಿವಚರಣ್ ಗುಪ್ತಾ ಎಂಬ ವಕೀಲರು ರಾಜಸ್ಥಾನ ಹೈಕೋರ್ಟ್ನ ಜೈಪುರ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿದ್ದು, ಗೆಹ್ಲೋಟ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ.
”ಹಲವಾರು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಈ ಹಿಂದೆ ನ್ಯಾಯಾಂಗದಲ್ಲಿನ “ಭ್ರಷ್ಟಾಚಾರ” ಕುರಿತು ಮಾತನಾಡಿದ್ದಾರೆ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ” ಎಂದು ಶುಕ್ರವಾರ, ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಯಾವಾಗ ಎಂಬುದನ್ನು ಹೇಳಲು ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರದ ಹೇಳಿಕೆ