ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಇಂದು (ಡಿಸೆಂಬರ್ 30) ಅಹಮದಾಬಾದ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
“ಈ ಅವಿಸ್ಮರಣೀಯ ಶತಮಾನವು ದೇವರ ಪಾದದ ಮೇಲೆ ನಿಂತಿದೆ” ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ತಮ್ಮ ಹೃದಯಸ್ಪರ್ಶಿ ಟಿಪ್ಪಣಿಯಲ್ಲಿ ಮೋದಿ, “ಅಮ್ಮನಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಕಂಡಿದ್ದೇನೆ. ಅವರ ಜೀವನ ತಪಸ್ವಿಯ ಪ್ರಯಾಣವಾಗಿತ್ತು. ಅವರು ನಿಸ್ವಾರ್ಥ ಕರ್ಮಯೋಗಿ ಮತ್ತು ಮೌಲ್ಯಗಳಿಗೆ ಬದ್ಧವಾಗಿ ಜೀವನ ನಡೆಸಿದವರು” ಎಂದು ಬಣ್ಣಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, “ಅವರ 100ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಅವರು ಒಂದು ವಿಷಯವನ್ನು ಹೇಳಿದರು, ಅದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಬುದ್ಧಿವಂತಿಕೆಯಿಂದ ಕೆಲಸ ಮಾಡು, ಪರಿಶುದ್ಧವಾಗಿ ಬದುಕು ಎಂದು ತಿಳಿಸಿದ್ದರು” ಎಂದು ಬರೆದುಕೊಂಡಿದ್ದಾರೆ.
शानदार शताब्दी का ईश्वर चरणों में विराम… मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
— Narendra Modi (@narendramodi) December 30, 2022
ಹೀರಾಬಾ ಎಂದೂ ಕರೆಯಲ್ಪಡುವ ಹೀರಾಬೆನ್ ಅವರು ಪ್ರಧಾನಿ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಬಳಿಯ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಮಂತ್ರಿಯವರು ತಮ್ಮ ಗುಜರಾತ್ ಭೇಟಿಗಳ ಸಮಯದಲ್ಲಿ ಅವರೊಂದಿಗೆ ಸಮಯ ಕಳೆಯಲು ನಿಯಮಿತವಾಗಿ ರೈಸನ್ಗೆ ಭೇಟಿ ನೀಡುತ್ತಿದ್ದರು.
ಬುಧವಾರ ಬೆಳಗ್ಗೆ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ, ಹೀರಾಬೆನ್ ಅವರನ್ನು ಸೂಪರ್ ಸ್ಪೆಷಾಲಿಟಿ ಯುಎನ್ ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್ಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಸುಧಾರಿಸುತ್ತಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದರು. ಗುಜರಾತ್ ಮುಖ್ಯಮಂತ್ರಿ ಕಚೇರಿ (ಸಿಎಂಒ) ಕೂಡ ಹೇಳಿಕೆಯಲ್ಲಿ ಹೀರಾಬೆನ್ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದಿತ್ತು.
ಗುರುವಾರ ಮುಂಜಾನೆ ಗುಜರಾತ್ನ ವಡೋದರಾದ ‘ಧರ್ಮಯಾತ್ರೆ ಮಹಾಸಂಘ’ದ ಜನರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದರ ನಡುವೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಮೂಲಗಳ ಪ್ರಕಾರ ಪ್ರಧಾನಿ ಮೋದಿಯವರು ಅಹಮದಾಬಾದ್ಗೆ ತೆರಳಿದ್ದಾರೆ.
“ಪ್ರಧಾನಿ ಮೋದಿ ಅವರು ಅಹಮದಾಬಾದ್ಗೆ ತೆರಳಿದ್ದಾರೆ. ನಿಗದಿತವಾಗಿದ್ದ ಅಭಿವೃದ್ಧಿ ಕಾಮಗಾರಿಗಳು ನಮಾಮಿ ಗಂಗೆ ಮತ್ತು ರಾಷ್ಟ್ರೀಯ ಗಂಗಾ ಕೌನ್ಸಿಲ್ನ ಸಭೆಯ ಅಡಿಯಲ್ಲಿ ಯೋಜನೆಯ ಪ್ರಕಾರ ನಡೆಯಲಿದೆ. ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಸೇರಿಕೊಳ್ಳುವ ಸಾಧ್ಯತೆ ಇದೆ” ಎಂದಿದ್ದಾರೆ.
ಹೀರಾಬೆನ್ ಮೋದಿ ಅವರ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ನಲ್ಲಿ ಅವರು, “ಗೌರವಾನ್ವಿತ ಪ್ರಧಾನಮಂತ್ರಿಯವರ ತಾಯಿ ಪೂಜ್ಯಾ ಹೀರಾಬಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಪೂಜ್ಯ ಹೀರಾಬಾ ಅವರು ಉದಾರತೆ, ಸರಳತೆ, ಕಠಿಣ ಪರಿಶ್ರಮ ಮತ್ತು ಉನ್ನತ ಜೀವನ ಮೌಲ್ಯಗಳ ಪ್ರತಿರೂಪವಾಗಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬಾ ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ತಾಯಿಯ ಸಾವಿನಿಂದಾಗಿ ಒಬ್ಬರ ಜೀವನದಲ್ಲಿ ತುಂಬಲು ಅಸಾಧ್ಯವಾದ ಶೂನ್ಯ ಆವರಿಸುತ್ತದೆ. ಈ ದುಃಖದ ಸಮಯದಲ್ಲಿ ಪ್ರಧಾನಿ ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.
ಹೀರಾಬೆನ್ ಮೋದಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಗೃಹ ಸಚಿವ ಅಮಿತ್ ಶಾ, “ತಾಯಿಯನ್ನು ಕಳೆದುಕೊಂಡ ನೋವು ನಿಸ್ಸಂದೇಹವಾಗಿ ಜಗತ್ತಿನ ಅತೀ ದೊಡ್ಡ ನೋವು” ಎಂದು ಹೇಳಿದ್ದಾರೆ. “ಪ್ರಧಾನಿಯವರ ಗೌರವಾನ್ವಿತ ಮಾತಾಜಿ ಹೀರಾ ಬಾ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ತಾಯಿಯು ಒಬ್ಬ ವ್ಯಕ್ತಿಯ ಮೊದಲ ಸ್ನೇಹಿತ ಮತ್ತು ಶಿಕ್ಷಕಿ” ಎಂದು ತಿಳಿಸಿದ್ದಾರೆ.