Homeಅಂಕಣಗಳುರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

ರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದು ಹಕ್ಕು ಅಥವಾ ಕರ್ತವ್ಯವೆಂದು ಭಾವಿಸುತ್ತಲೇ ಬಂದದ್ದಾರೆ, ಇದಕ್ಕೆ ಅಪವಾದಗಳಿರಲೂ ಸಾಧ್ಯ. ಭಾರತೀಯ ನಾಗರರಿಕರೂ ಸಹ 1952ರಿಂದ ಇದೇ ರೀತಿಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನುಭವವನ್ನು ಪಡೆದಿದ್ದಾರೆ ಮತ್ತು ಸಹಜವಾಗಿಯೇ ಈ ಪ್ರತಿನಿಧಿಗಳು ತಮ್ಮ ಜೀವನವನ್ನು ಹಸನುಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನಂಬುವ ಜನ ಇವರು ಎಂದು ಹೇಳಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅಧಿಕಾರದಲ್ಲಿ ಕುಳಿತಿರುವ ಪಕ್ಷಗಳು, ಅವುಗಳ ನಾಯಕರು ಜನರ ಇಂಥ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ನಿಜವಾಗಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿ ಚುನಾವಣೆಗಳು ಎದುರಾದಾಗ ನಮ್ಮ ಮುಂದೆ ನಿಲ್ಲುತ್ತದೆ.
ಆದರೆ ಚುನಾವಣೆ ಎಂಬ ಪ್ರಕ್ರಿಯೆಯೇ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಶ ಎಂದಾಯಿತು. ಕೆಲವು ಬಾರಿ ಚುನಾವಣೆ ನಡೆಸುವುದೇ, ಅದರಲ್ಲಿ ಭಾಗವಹಿಸಿ ಮತ ‘ದಾನ’ ಮಾಡುವುದೇ ಪ್ರಜಾತಂತ್ರ ಎನ್ನುವ ಅತಿರೇಕದ ಮಾತುಗಳೂ ಕೇಳಿಬರುತ್ತಿವೆ. ಭಾರತ ಜಗತ್ತಿನ ಅತಿ ‘ದೊಡ್ಡ’ ಪ್ರಜಾಪ್ರಭುತ್ವ ರಾಷ್ಟ್ರ (ಜನಸಂಖ್ಯೆಯ ದೃಷ್ಟಿಯಿಂದ ಎನ್ನುವ ಮಾತಿನ ಹಿಂದಿನ ಪ್ರೇರಣೆ ಇದೆ) ಆದರೆ ಈ ಮಾತನ್ನು ಹೇಳುವವರು, ಅದನ್ನು ಪ್ರಶ್ನೆ ಮಾಡದೇ ಒಪ್ಪುವವರು ಮರೆಯುವ ಒಂದು ವಿಷಯವೇನೆಂದರೆ ಪ್ರಜಾತಂತ್ರವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ, ಮತ ಚಲಾಯಿಸುವುದಲ್ಲ, ಬದಲಿಗೆ ಅದು ಸಾಮಾಜಿಕ ಮೌಲ್ಯ ಎಂಬುದು. ನಮ್ಮ ಸಮಾಜ ಇನ್ನೂ ಉಳಿದುಕೊಂಡೇ ಬಂದಿರುವ ಸಾಮಾಜಿಕ, ಆರ್ಥಿಕ ಅಂತರಗಳು, ತಾರತಮ್ಯಗಳು, ಅವುಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿ ಹೊರಟವರ ನಾಲಿಗೆಯನ್ನು ಕಟ್ಟಿಹಾಕುತ್ತವೆ. ಹೀಗಿದ್ದೂ, ಈ ಮಾತನ್ನು ಹೇಳಿದ್ದೇವೆಂದರೆ ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುತ್ತಿದ್ದೇವೆಂದೇ ಹೇಳಬೇಕು.
ರಾಜಕಾರಣವು ‘ಸಾಧ್ಯತೆಗಳ ಕಲೆ’ (ಪಾಲಿಟಿಕ್ಸ್ ಇಸ್ ದ ಆರ್ಟ್ ಆಫ್ ಪಾಸಿಬಲ್) ಎಂದು ಜರ್ಮನಿಯ ಏಕೀಕರಣದ ರೂವಾರಿಯೆಂದೂ, ಉಕ್ಕಿನ ಮನುಷ್ಯನೆಂದೂ ಬಣ್ಣಿಸಲಾದ ಬಿಸ್ಮಾರ್ಕ್ ಹೇಳಿದನೆಂದು ಪ್ರಚಲಿತವಿದೆ. ಅಂದರೆ ರಾಜಕಾರಣದಲ್ಲಿ ತೊಡಗಿರುವವರು ಆದರ್ಶಗಳ ಬೆನ್ನು ಹತ್ತದೆ ತಮ್ಮ ಸಾಮಥ್ರ್ಯ ಹಾಗೂ ಮಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬ ಮಾತಿದು. ಆದರೆ ಆ ಸಾಧ್ಯತೆಗಳು ಎಂಥವು, ಯಾರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಪ್ರಶ್ನೆ. ಈ ಆಚರಣಯೋಗ್ಯ ಯೋಜನೆಗಳಿಂದಾಗಿ ನಾಯಕರಿಗೆ ಮಾತ್ರ ಲಾಭ ಸಿಗುತ್ತದೋ, ಅಥವಾ ಸಮಾಜದಲ್ಲಿ ಈಗಾಗಲೇ ಸವಲತ್ತುಗಳನ್ನು ಅನುಭವಿಸುವವರು ಉಪಯುಕ್ತರಾಗುತ್ತಾರೋ, ಅಥವಾ ದುರ್ಭರ ಜೀವನವನ್ನು ನಡೆಸುವವರ ಬಾಳು ಹಸನಾಗುತ್ತದೋ ಎನ್ನುವುದರ ಮೇಲೆ ಆ ಸಾಧ್ಯತೆಗಳ ಗುಣಾವಗುಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಸಮಕಾಲೀನ ರಾಜಕಾರಣವು ರಾಜಕೀಯವಾಗಿರುವ ಬಗೆಯ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಸನ್ನಿವೇಷವನ್ನು ಅರ್ಥಮಾಡಿಕೊಳ್ಳಬಹುದು. ದುರಂತವೆಂದರೆ ಭಾರತದ ಬಹುತೇಕ ರಾಜಕೀಯ ನಾಯಕರು ಈ ಸಾಧ್ಯತೆಗಳನ್ನು ತೀರಾ ವೈಯಕ್ತಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಧನಾತ್ಮಕ ಶಬ್ದವಾದ ‘ರಾಜಕಾರಣ’ ಇಂದು ಋಣಾತ್ಮಕವಾದ ‘ರಾಜಕೀಯ’ವಾಗಿದೆ. ಅದೆಷ್ಟರಮಟ್ಟಿಗೆಂದರೆ ಯಾವನಾದರು ಕುತಂತ್ರಿಯೆಂದರೆ ಅವನು ರಾಜಕೀಯ ಮಾಡುತ್ತಾನೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಧಿಕಾರವನ್ನು ಪಡೆಯಲು ಮತ್ತು ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬುದು ಇಂದು ರಾಜಕಾರಣಿಗಳ ನಡುವೆ ಮಾತ್ರವಲ್ಲ, ಅವರನ್ನು ಚುನಾಯಿಸುವ ಪ್ರಜೆಗಳ ನಡುವೆಯೂ ಒಪ್ಪಿತ ಮೌಲ್ಯವೇ ಆಗಿದೆ. ಹಣ ಸಂಪಾದನೆಗಾಗಿ ಬಂಡವಾಳ ಹೂಡುವಂತೆ ಅಧಿಕಾರ (ಆ ಮೂಲಕ ಹಣ) ಸಂಪಾದನೆಗಾಗಿ ಹಣದ ಹೊಳೆ ಹರಿಸುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಯಾರಾದರೂ ಕೆಲವರು ಹಣವನ್ನು ಖರ್ಚುಮಾಡದೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟರೆ ಅಂಥವರನ್ನು ತಲೆಕೆಟ್ಟವರೆಂದೇ ಕರೆಯಲಾಗುವ ಹಂತಕ್ಕೆ ಸಮಾಜ ತಲುಪಿದೆ. ಇಂಥ ಅವನತಿಗೆ ಕಾರಣವೇನು? ಒಂದು ಓಟಿಗೆ ನಿಗಿದಿತ ಮೊತ್ತವನ್ನೋ, ಬೆಳೆ ಬಾಳುವ ವಸ್ತುವನ್ನೋ ನೀಡದಿದ್ದರೆ ಮತ‘ದಾನ’ ಮಾಡುವ ಗೋಜಿಗೆ ಹೋಗದ ಜನರಿದ್ದಾರೆ. ಮತ‘ದಾನ’ಯೆಂಬುದು ವ್ಯವಹಾರವಾಗಿ ‘ಮತ’ವು ಒಂದು ಸರಕಿನ ಸ್ಥಿತಿಯನ್ನು ತಲುಪುವಂತೆ ಮಾಡುವಲ್ಲಿ ಜನನಾಯಕರೆನ್ನಿಸಿಕೊಳ್ಳುವವರ ಪಾತ್ರವೇ ದೊಡ್ಡದು. ಆಗ ಮತ ಪವಿತ್ರವೆಂದೂ ಮತ‘ದಾನ’ ಕರ್ತವ್ಯವೆಂದೂ, ಆ ಕರ್ತವ್ಯವನ್ನೇ ಮಾಡದಿರುವವರು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆಂದೂ ಹೇಳುವುದು ಹುಂಬತನದ ಮಾತುಗಳು ಮಾತ್ರವಾಗುತ್ತವೆ.
ಇನ್ನು ಈ ದೇಶದ ಹಲವು ಮೂಲೆಗಳಲ್ಲಿ ನಡೆಯುವ ಚಳವಳಿಗಳು ಪ್ರಜಾತಂತ್ರವೆಂಬ ಮೌಲ್ಯವನ್ನು ಜನರಲ್ಲಿ ಅರ್ಥಪೂರಿತವಾಗಿ ನೆಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮತ್ತೊಂದು ಪ್ರಶ್ನೆ. ಚುನಾವಣೆಗಳೇ ಪ್ರಜಾತಂತ್ರ ಎಂಬ ಭ್ರಮೆಯಲ್ಲಿ ಜನ ತೇಲುವಂತೆ ಮಾಡಲು ಜನನಾಯಕರೆನಿಸಿಕೊಳ್ಳುವವರು ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದರಿಂದ ಈ ಚಳವಳಿಗಳು ಜನರನ್ನು ಆಕರ್ಷಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟದ ಮಾತು.
2019ನೇ ಇಸವಿಯಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಇದುವರೆಗೂ ಜನರ ಹೆಸರಿನಲ್ಲಿಯೇ ಸಂವಿಧಾನದ ಸಾಕ್ಷಿಯಾಗಿ ಅಧಿಕಾರವನ್ನು ಅನುಭವಿಸಿದ ಸರ್ಕಾರಗಳ ಸೋಲನ್ನೇ ತನ್ನ ಚಿಮ್ಮುವ ಹಲಗೆಯನ್ನಾಗಿ ಮಾಡಿಕೊಂಡು ಯಶಸ್ಸನ್ನು ಗಳಿಸಿದ ಭಾರತೀಯ ಜನತಾ ಪಕ್ಷ ತನ್ನ ಒಬ್ಬ ನಾಯಕನನ್ನು ಅತಿಮಾನುಷನಂತೆ ಚಿತ್ರಿಸುತ್ತಾ ಇಲ್ಲಿಯವರೆಗೂ ತೋರಿಕೆಗಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದ ಪ್ರಜಾತಂತ್ರವನ್ನು ಹಾಳುಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವ ನಮ್ಮದು ಎಂಬ ಮಾತನ್ನೇ ಮರೆಮಾಚಿ, ಈ ದೇಶದ ಪ್ರಧಾನಿಯನ್ನು ನೇರವಾಗಿ ಚುನಾಯಿಸುತ್ತೇವೆಂದು ಅಥವಾ ಸೋಲಿಸುತ್ತೇವೆಂದು ಜನರು ನಂಬುವಂತೆ, ಹೇಳುವಂತೆ ಆಗಿದೆ. ಆ ಪಕ್ಷ ನಾಯಕರು ತಮ್ಮ ಸೇನಾಪತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಭಾಷೆಯಲ್ಲಿ ಸಮರಕ್ಕೇ ಹೊರಟಿದ್ದಾರೆ. ಇದೆಲ್ಲಾ ಒಂದು ಮಹಾಯುದ್ಧವೇನೊ ಎಂಬಂತೆ ಇಲ್ಲಿನ ಜನ ಪ್ರೇಕ್ಷಕರಾಗಿದ್ದಾರೆ. ಇನ್ನು ಪ್ರಜಾತಂತ್ರಕ್ಕೇ ಇಲ್ಲಿ ಜಾಗವೆಲ್ಲಿದೆ? ಇಬ್ಬರು ಯೋಧರ ನಡುವೆ ನಡೆಯುವ ಯುದ್ಧದೋಪಾದಿಯಲ್ಲಿ ಈ ಚುನಾವಣೆಗಳು ನಮ್ಮ ಮುಂದೆ ವಿಜೃಂಭಿಸುತ್ತಿವೆ.
ಸರ್ಕಾರದ ಹಲವು ವೈಫಲ್ಯಗಳು, ಸುಳ್ಳುಗಳು, ಅವರ ಕೃಪಾಪೋಷಿತ ಪುಂಡರುಗಳ ದಾಂಧಲೆಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಲ್ಲಿನ ಮಾಧ್ಯಮ, ಮೇಲ್ವರ್ಗದ ಜನ ಮತ್ತು ನವಉದಾರವಾದಿ ವ್ಯವಸ್ಥೆಯ ಫಲಾನುಭವಿಗಳು ಈ ಎಲ್ಲಾ ವಾಸ್ತವಗಳಿಗೆ ಕಣ್ಣು ಮುಚ್ಚಿದ್ದಾರೆ. ತಮ್ಮ ಎದುರಾಳಿಗಳನ್ನು ಅಂದರೆ ತಮ್ಮ ಮಾತುಗಳನ್ನು ಒಪ್ಪದವರನ್ನು ‘ನಗರದ ನಕ್ಸಲರು’, ದೇಶದ್ರೋಹಿಗಳು, ‘ತುಕಡೆ ತುಕಡೆ’ ಗುಂಪುಗಳು ಮುಂತಾದ ಹೆಸರುಗಳಿಂದ ಕರೆದು, ಅಶ್ಲೀಲ ಭಾಷೆಯಲ್ಲಿ ಟೀಕಿಸಿ ವಿಚಿತ್ರ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತರರ ದನಿ ಅಡಗಿ ಹೋಗುವಷ್ಟು ಗಲಾಟೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹಲವರು ಮೌನಕ್ಕೆ ಶರಣು ಹೋಗಿದ್ದಾರೆ. ಅಸಡ್ಡೆಯಿಂದ, ಹೆದರಿಕೆಯಿಂದ, ನಿರಾಸಕ್ತಿಯಿಂದ.
ಇನ್ನು, ಇಲ್ಲಿನ ವಿರೋಧ ಪಕ್ಷಗಳ ನಡವಳಿಕೆ ಏನು ಪ್ರಶ್ನಾತೀತವಾಗಿ ಉಳಿದಿಲ್ಲ. ತಮ್ಮ ಸಣ್ಣತನಗಳು, ಒಳಜಗಳಗಳು, ಪ್ರತಿಷ್ಠೆಗಳು, ಅಧಿಕಾರದಾಹ ಇವುಗಳಿಂದಲೂ ಸಂಪೂರ್ಣವಾಗಿ ಮುಕ್ತರಾಗದ ಇವರು ಯಾವ ಕ್ಷಣದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇಂಥವರನ್ನು ನಂಬಿ ಇವರ ಕೈಗೆ ಅಧಿಕಾರವನ್ನು ಕೊಡುವುದು ಹೇಗೆ ಎನ್ನುವುದು ಜನಸಾಮಾನ್ಯರ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಚಿಂತೆ
ಚುನಾವಣೆಗಳೂ ಪ್ರಜಾತಂತ್ರದ ಒಂದು ಪ್ರಕ್ರಿಯೆ, ಮುಖ್ಯವಾದ ಪ್ರಕ್ರಿಯೆ ಎಂದು ಅರ್ಥಮಾಡಿಕೊಂಡು, ಪ್ರಜಾತಂತ್ರವೆಂದರೆ ಜನರೆಲ್ಲರ ಸಾರ್ಥಕ ಪಾಲುಗೊಳ್ಳುವಿಕೆ ಎಂಬುದನ್ನು ಆಚರಣೆಗೆ ತರುವವರೆಗೂ ನಮ್ಮ ಅತಿ ದೊಡ್ಡ ಪ್ರಜಾತಂತ್ರದ ಈ ಗೊಂದಲಗಳು ಮುಂದುವರೆಯುವಂಥವೇ. ಚಳವಳಿಗಳ ಯಶಸ್ಸಿನ ಬಗ್ಗೆ ಎಷ್ಟೇ ಅನುಮಾಗಳಿರಲಿ, ಅಂತಿಮವಾಗಿ ಜನರನ್ನು ನಿಜವಾದ ಅರ್ಥದಲ್ಲಿ ಪ್ರಜಾತಂತ್ರವಾದಿಗಳನ್ನಾಗಿ ಮಾಡುವಂಥ ಶಕ್ತಿ ಇರುವುದು ಜನಪರ ಚಳವಳಿಗೆ ಮಾತ್ರ ಎನ್ನುವ ಮಾತನ್ನು ನಂಬಿ ಕಾರ್ಯಪ್ರವೃತ್ತರಾಗುವುದೊಂದೇ ಇಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳಿಗೆ ಉಳಿದಿರುವ ದಾರಿ. ರಾಜಕೀಯದ ಜಾಗದಲ್ಲಿ ರಾಜಕಾರಣವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...