Homeಅಂಕಣಗಳುರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

ರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದು ಹಕ್ಕು ಅಥವಾ ಕರ್ತವ್ಯವೆಂದು ಭಾವಿಸುತ್ತಲೇ ಬಂದದ್ದಾರೆ, ಇದಕ್ಕೆ ಅಪವಾದಗಳಿರಲೂ ಸಾಧ್ಯ. ಭಾರತೀಯ ನಾಗರರಿಕರೂ ಸಹ 1952ರಿಂದ ಇದೇ ರೀತಿಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನುಭವವನ್ನು ಪಡೆದಿದ್ದಾರೆ ಮತ್ತು ಸಹಜವಾಗಿಯೇ ಈ ಪ್ರತಿನಿಧಿಗಳು ತಮ್ಮ ಜೀವನವನ್ನು ಹಸನುಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನಂಬುವ ಜನ ಇವರು ಎಂದು ಹೇಳಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅಧಿಕಾರದಲ್ಲಿ ಕುಳಿತಿರುವ ಪಕ್ಷಗಳು, ಅವುಗಳ ನಾಯಕರು ಜನರ ಇಂಥ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ನಿಜವಾಗಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿ ಚುನಾವಣೆಗಳು ಎದುರಾದಾಗ ನಮ್ಮ ಮುಂದೆ ನಿಲ್ಲುತ್ತದೆ.
ಆದರೆ ಚುನಾವಣೆ ಎಂಬ ಪ್ರಕ್ರಿಯೆಯೇ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಶ ಎಂದಾಯಿತು. ಕೆಲವು ಬಾರಿ ಚುನಾವಣೆ ನಡೆಸುವುದೇ, ಅದರಲ್ಲಿ ಭಾಗವಹಿಸಿ ಮತ ‘ದಾನ’ ಮಾಡುವುದೇ ಪ್ರಜಾತಂತ್ರ ಎನ್ನುವ ಅತಿರೇಕದ ಮಾತುಗಳೂ ಕೇಳಿಬರುತ್ತಿವೆ. ಭಾರತ ಜಗತ್ತಿನ ಅತಿ ‘ದೊಡ್ಡ’ ಪ್ರಜಾಪ್ರಭುತ್ವ ರಾಷ್ಟ್ರ (ಜನಸಂಖ್ಯೆಯ ದೃಷ್ಟಿಯಿಂದ ಎನ್ನುವ ಮಾತಿನ ಹಿಂದಿನ ಪ್ರೇರಣೆ ಇದೆ) ಆದರೆ ಈ ಮಾತನ್ನು ಹೇಳುವವರು, ಅದನ್ನು ಪ್ರಶ್ನೆ ಮಾಡದೇ ಒಪ್ಪುವವರು ಮರೆಯುವ ಒಂದು ವಿಷಯವೇನೆಂದರೆ ಪ್ರಜಾತಂತ್ರವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ, ಮತ ಚಲಾಯಿಸುವುದಲ್ಲ, ಬದಲಿಗೆ ಅದು ಸಾಮಾಜಿಕ ಮೌಲ್ಯ ಎಂಬುದು. ನಮ್ಮ ಸಮಾಜ ಇನ್ನೂ ಉಳಿದುಕೊಂಡೇ ಬಂದಿರುವ ಸಾಮಾಜಿಕ, ಆರ್ಥಿಕ ಅಂತರಗಳು, ತಾರತಮ್ಯಗಳು, ಅವುಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿ ಹೊರಟವರ ನಾಲಿಗೆಯನ್ನು ಕಟ್ಟಿಹಾಕುತ್ತವೆ. ಹೀಗಿದ್ದೂ, ಈ ಮಾತನ್ನು ಹೇಳಿದ್ದೇವೆಂದರೆ ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುತ್ತಿದ್ದೇವೆಂದೇ ಹೇಳಬೇಕು.
ರಾಜಕಾರಣವು ‘ಸಾಧ್ಯತೆಗಳ ಕಲೆ’ (ಪಾಲಿಟಿಕ್ಸ್ ಇಸ್ ದ ಆರ್ಟ್ ಆಫ್ ಪಾಸಿಬಲ್) ಎಂದು ಜರ್ಮನಿಯ ಏಕೀಕರಣದ ರೂವಾರಿಯೆಂದೂ, ಉಕ್ಕಿನ ಮನುಷ್ಯನೆಂದೂ ಬಣ್ಣಿಸಲಾದ ಬಿಸ್ಮಾರ್ಕ್ ಹೇಳಿದನೆಂದು ಪ್ರಚಲಿತವಿದೆ. ಅಂದರೆ ರಾಜಕಾರಣದಲ್ಲಿ ತೊಡಗಿರುವವರು ಆದರ್ಶಗಳ ಬೆನ್ನು ಹತ್ತದೆ ತಮ್ಮ ಸಾಮಥ್ರ್ಯ ಹಾಗೂ ಮಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬ ಮಾತಿದು. ಆದರೆ ಆ ಸಾಧ್ಯತೆಗಳು ಎಂಥವು, ಯಾರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಪ್ರಶ್ನೆ. ಈ ಆಚರಣಯೋಗ್ಯ ಯೋಜನೆಗಳಿಂದಾಗಿ ನಾಯಕರಿಗೆ ಮಾತ್ರ ಲಾಭ ಸಿಗುತ್ತದೋ, ಅಥವಾ ಸಮಾಜದಲ್ಲಿ ಈಗಾಗಲೇ ಸವಲತ್ತುಗಳನ್ನು ಅನುಭವಿಸುವವರು ಉಪಯುಕ್ತರಾಗುತ್ತಾರೋ, ಅಥವಾ ದುರ್ಭರ ಜೀವನವನ್ನು ನಡೆಸುವವರ ಬಾಳು ಹಸನಾಗುತ್ತದೋ ಎನ್ನುವುದರ ಮೇಲೆ ಆ ಸಾಧ್ಯತೆಗಳ ಗುಣಾವಗುಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಸಮಕಾಲೀನ ರಾಜಕಾರಣವು ರಾಜಕೀಯವಾಗಿರುವ ಬಗೆಯ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಸನ್ನಿವೇಷವನ್ನು ಅರ್ಥಮಾಡಿಕೊಳ್ಳಬಹುದು. ದುರಂತವೆಂದರೆ ಭಾರತದ ಬಹುತೇಕ ರಾಜಕೀಯ ನಾಯಕರು ಈ ಸಾಧ್ಯತೆಗಳನ್ನು ತೀರಾ ವೈಯಕ್ತಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಧನಾತ್ಮಕ ಶಬ್ದವಾದ ‘ರಾಜಕಾರಣ’ ಇಂದು ಋಣಾತ್ಮಕವಾದ ‘ರಾಜಕೀಯ’ವಾಗಿದೆ. ಅದೆಷ್ಟರಮಟ್ಟಿಗೆಂದರೆ ಯಾವನಾದರು ಕುತಂತ್ರಿಯೆಂದರೆ ಅವನು ರಾಜಕೀಯ ಮಾಡುತ್ತಾನೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಧಿಕಾರವನ್ನು ಪಡೆಯಲು ಮತ್ತು ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬುದು ಇಂದು ರಾಜಕಾರಣಿಗಳ ನಡುವೆ ಮಾತ್ರವಲ್ಲ, ಅವರನ್ನು ಚುನಾಯಿಸುವ ಪ್ರಜೆಗಳ ನಡುವೆಯೂ ಒಪ್ಪಿತ ಮೌಲ್ಯವೇ ಆಗಿದೆ. ಹಣ ಸಂಪಾದನೆಗಾಗಿ ಬಂಡವಾಳ ಹೂಡುವಂತೆ ಅಧಿಕಾರ (ಆ ಮೂಲಕ ಹಣ) ಸಂಪಾದನೆಗಾಗಿ ಹಣದ ಹೊಳೆ ಹರಿಸುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಯಾರಾದರೂ ಕೆಲವರು ಹಣವನ್ನು ಖರ್ಚುಮಾಡದೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟರೆ ಅಂಥವರನ್ನು ತಲೆಕೆಟ್ಟವರೆಂದೇ ಕರೆಯಲಾಗುವ ಹಂತಕ್ಕೆ ಸಮಾಜ ತಲುಪಿದೆ. ಇಂಥ ಅವನತಿಗೆ ಕಾರಣವೇನು? ಒಂದು ಓಟಿಗೆ ನಿಗಿದಿತ ಮೊತ್ತವನ್ನೋ, ಬೆಳೆ ಬಾಳುವ ವಸ್ತುವನ್ನೋ ನೀಡದಿದ್ದರೆ ಮತ‘ದಾನ’ ಮಾಡುವ ಗೋಜಿಗೆ ಹೋಗದ ಜನರಿದ್ದಾರೆ. ಮತ‘ದಾನ’ಯೆಂಬುದು ವ್ಯವಹಾರವಾಗಿ ‘ಮತ’ವು ಒಂದು ಸರಕಿನ ಸ್ಥಿತಿಯನ್ನು ತಲುಪುವಂತೆ ಮಾಡುವಲ್ಲಿ ಜನನಾಯಕರೆನ್ನಿಸಿಕೊಳ್ಳುವವರ ಪಾತ್ರವೇ ದೊಡ್ಡದು. ಆಗ ಮತ ಪವಿತ್ರವೆಂದೂ ಮತ‘ದಾನ’ ಕರ್ತವ್ಯವೆಂದೂ, ಆ ಕರ್ತವ್ಯವನ್ನೇ ಮಾಡದಿರುವವರು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆಂದೂ ಹೇಳುವುದು ಹುಂಬತನದ ಮಾತುಗಳು ಮಾತ್ರವಾಗುತ್ತವೆ.
ಇನ್ನು ಈ ದೇಶದ ಹಲವು ಮೂಲೆಗಳಲ್ಲಿ ನಡೆಯುವ ಚಳವಳಿಗಳು ಪ್ರಜಾತಂತ್ರವೆಂಬ ಮೌಲ್ಯವನ್ನು ಜನರಲ್ಲಿ ಅರ್ಥಪೂರಿತವಾಗಿ ನೆಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮತ್ತೊಂದು ಪ್ರಶ್ನೆ. ಚುನಾವಣೆಗಳೇ ಪ್ರಜಾತಂತ್ರ ಎಂಬ ಭ್ರಮೆಯಲ್ಲಿ ಜನ ತೇಲುವಂತೆ ಮಾಡಲು ಜನನಾಯಕರೆನಿಸಿಕೊಳ್ಳುವವರು ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದರಿಂದ ಈ ಚಳವಳಿಗಳು ಜನರನ್ನು ಆಕರ್ಷಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟದ ಮಾತು.
2019ನೇ ಇಸವಿಯಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಇದುವರೆಗೂ ಜನರ ಹೆಸರಿನಲ್ಲಿಯೇ ಸಂವಿಧಾನದ ಸಾಕ್ಷಿಯಾಗಿ ಅಧಿಕಾರವನ್ನು ಅನುಭವಿಸಿದ ಸರ್ಕಾರಗಳ ಸೋಲನ್ನೇ ತನ್ನ ಚಿಮ್ಮುವ ಹಲಗೆಯನ್ನಾಗಿ ಮಾಡಿಕೊಂಡು ಯಶಸ್ಸನ್ನು ಗಳಿಸಿದ ಭಾರತೀಯ ಜನತಾ ಪಕ್ಷ ತನ್ನ ಒಬ್ಬ ನಾಯಕನನ್ನು ಅತಿಮಾನುಷನಂತೆ ಚಿತ್ರಿಸುತ್ತಾ ಇಲ್ಲಿಯವರೆಗೂ ತೋರಿಕೆಗಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದ ಪ್ರಜಾತಂತ್ರವನ್ನು ಹಾಳುಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವ ನಮ್ಮದು ಎಂಬ ಮಾತನ್ನೇ ಮರೆಮಾಚಿ, ಈ ದೇಶದ ಪ್ರಧಾನಿಯನ್ನು ನೇರವಾಗಿ ಚುನಾಯಿಸುತ್ತೇವೆಂದು ಅಥವಾ ಸೋಲಿಸುತ್ತೇವೆಂದು ಜನರು ನಂಬುವಂತೆ, ಹೇಳುವಂತೆ ಆಗಿದೆ. ಆ ಪಕ್ಷ ನಾಯಕರು ತಮ್ಮ ಸೇನಾಪತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಭಾಷೆಯಲ್ಲಿ ಸಮರಕ್ಕೇ ಹೊರಟಿದ್ದಾರೆ. ಇದೆಲ್ಲಾ ಒಂದು ಮಹಾಯುದ್ಧವೇನೊ ಎಂಬಂತೆ ಇಲ್ಲಿನ ಜನ ಪ್ರೇಕ್ಷಕರಾಗಿದ್ದಾರೆ. ಇನ್ನು ಪ್ರಜಾತಂತ್ರಕ್ಕೇ ಇಲ್ಲಿ ಜಾಗವೆಲ್ಲಿದೆ? ಇಬ್ಬರು ಯೋಧರ ನಡುವೆ ನಡೆಯುವ ಯುದ್ಧದೋಪಾದಿಯಲ್ಲಿ ಈ ಚುನಾವಣೆಗಳು ನಮ್ಮ ಮುಂದೆ ವಿಜೃಂಭಿಸುತ್ತಿವೆ.
ಸರ್ಕಾರದ ಹಲವು ವೈಫಲ್ಯಗಳು, ಸುಳ್ಳುಗಳು, ಅವರ ಕೃಪಾಪೋಷಿತ ಪುಂಡರುಗಳ ದಾಂಧಲೆಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಲ್ಲಿನ ಮಾಧ್ಯಮ, ಮೇಲ್ವರ್ಗದ ಜನ ಮತ್ತು ನವಉದಾರವಾದಿ ವ್ಯವಸ್ಥೆಯ ಫಲಾನುಭವಿಗಳು ಈ ಎಲ್ಲಾ ವಾಸ್ತವಗಳಿಗೆ ಕಣ್ಣು ಮುಚ್ಚಿದ್ದಾರೆ. ತಮ್ಮ ಎದುರಾಳಿಗಳನ್ನು ಅಂದರೆ ತಮ್ಮ ಮಾತುಗಳನ್ನು ಒಪ್ಪದವರನ್ನು ‘ನಗರದ ನಕ್ಸಲರು’, ದೇಶದ್ರೋಹಿಗಳು, ‘ತುಕಡೆ ತುಕಡೆ’ ಗುಂಪುಗಳು ಮುಂತಾದ ಹೆಸರುಗಳಿಂದ ಕರೆದು, ಅಶ್ಲೀಲ ಭಾಷೆಯಲ್ಲಿ ಟೀಕಿಸಿ ವಿಚಿತ್ರ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತರರ ದನಿ ಅಡಗಿ ಹೋಗುವಷ್ಟು ಗಲಾಟೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹಲವರು ಮೌನಕ್ಕೆ ಶರಣು ಹೋಗಿದ್ದಾರೆ. ಅಸಡ್ಡೆಯಿಂದ, ಹೆದರಿಕೆಯಿಂದ, ನಿರಾಸಕ್ತಿಯಿಂದ.
ಇನ್ನು, ಇಲ್ಲಿನ ವಿರೋಧ ಪಕ್ಷಗಳ ನಡವಳಿಕೆ ಏನು ಪ್ರಶ್ನಾತೀತವಾಗಿ ಉಳಿದಿಲ್ಲ. ತಮ್ಮ ಸಣ್ಣತನಗಳು, ಒಳಜಗಳಗಳು, ಪ್ರತಿಷ್ಠೆಗಳು, ಅಧಿಕಾರದಾಹ ಇವುಗಳಿಂದಲೂ ಸಂಪೂರ್ಣವಾಗಿ ಮುಕ್ತರಾಗದ ಇವರು ಯಾವ ಕ್ಷಣದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇಂಥವರನ್ನು ನಂಬಿ ಇವರ ಕೈಗೆ ಅಧಿಕಾರವನ್ನು ಕೊಡುವುದು ಹೇಗೆ ಎನ್ನುವುದು ಜನಸಾಮಾನ್ಯರ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಚಿಂತೆ
ಚುನಾವಣೆಗಳೂ ಪ್ರಜಾತಂತ್ರದ ಒಂದು ಪ್ರಕ್ರಿಯೆ, ಮುಖ್ಯವಾದ ಪ್ರಕ್ರಿಯೆ ಎಂದು ಅರ್ಥಮಾಡಿಕೊಂಡು, ಪ್ರಜಾತಂತ್ರವೆಂದರೆ ಜನರೆಲ್ಲರ ಸಾರ್ಥಕ ಪಾಲುಗೊಳ್ಳುವಿಕೆ ಎಂಬುದನ್ನು ಆಚರಣೆಗೆ ತರುವವರೆಗೂ ನಮ್ಮ ಅತಿ ದೊಡ್ಡ ಪ್ರಜಾತಂತ್ರದ ಈ ಗೊಂದಲಗಳು ಮುಂದುವರೆಯುವಂಥವೇ. ಚಳವಳಿಗಳ ಯಶಸ್ಸಿನ ಬಗ್ಗೆ ಎಷ್ಟೇ ಅನುಮಾಗಳಿರಲಿ, ಅಂತಿಮವಾಗಿ ಜನರನ್ನು ನಿಜವಾದ ಅರ್ಥದಲ್ಲಿ ಪ್ರಜಾತಂತ್ರವಾದಿಗಳನ್ನಾಗಿ ಮಾಡುವಂಥ ಶಕ್ತಿ ಇರುವುದು ಜನಪರ ಚಳವಳಿಗೆ ಮಾತ್ರ ಎನ್ನುವ ಮಾತನ್ನು ನಂಬಿ ಕಾರ್ಯಪ್ರವೃತ್ತರಾಗುವುದೊಂದೇ ಇಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳಿಗೆ ಉಳಿದಿರುವ ದಾರಿ. ರಾಜಕೀಯದ ಜಾಗದಲ್ಲಿ ರಾಜಕಾರಣವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...