Homeಅಂಕಣಗಳುನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

ನಮ್ಮ ನ್ಯಾಯ ವ್ಯವಸ್ಥೆಯ ನ್ಯಾಯ ಮತ್ತು ಅನ್ಯಾಯ

- Advertisement -
- Advertisement -

 ಗೌರಿ ಲಂಕೇಶ್
14 ಜನವರಿ, 2014 (`ಕಂಡಹಾಗೆ’ ಸಂಪಾದಕೀಯದಿಂದ) |

ನಾನು ಕೋರ್ಟಿಗೆ ಹೋದಾಗಲೆಲ್ಲಾ ಅಲ್ಲಿಗೆ ಬರುವ ತರಹೇವಾರಿ ಜನರನ್ನು ಗಮನಿಸುತ್ತಾ ಕಾಲ ಕಳೆಯುತ್ತೇನೆ. ಹಲವೊಮ್ಮೆ ನನ್ನ ಕುತೂಹಲ ಕೆರಳಿಸಿದವರನ್ನು ಮಾತನಾಡಿಸುತ್ತೇನೆ. ಆಗ ವಿಚಿತ್ರ ರೀತಿಯ ಜನಗಳ, ಸಮಸ್ಯೆ ಬದುಕುಗಳ ಕಿರುನೋಟ ನನಗೆ ದೊರಕುತ್ತದೆ.
ಇತ್ತೀಚೆಗೆ ಕೋರ್ಟ್ ಹಾಲ್ ಒಂದರಲ್ಲಿ ನನ್ನ ಪಕ್ಕ ಸುಮಾರು 50 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕೂತಿದ್ದರು. ಅವರ ಮುಖದಲ್ಲಿ ಆತಂಕ, ಜಿಗುಪ್ಸೆ ತುಂಬಿತ್ತು. ಆಕೆಯೊಂದಿಗೆ ಮಾತನಾಡಿದಾಗ ಗೊತ್ತಾಗಿದ್ದು, ಅವರ ಮನೆಯನ್ನು ಅದ್ಯಾರಿಗೋ ಬಾಡಿಗೆ ಮೇಲೆ ನೀಡಿದ್ದರಂತೆ. ಆದರೆ ಬಾಡಿಗೆದಾರ ಎಂತೆಂತಹದ್ದೋ ತಕರಾರುಗಳನ್ನು ಎತ್ತಿ ಇವರ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದನಂತೆ. ಅ ವ್ಯಾಜ್ಯ ಐದಾರು ವರ್ಷ ನಡೆದು ಇನ್ನೇನು ತೀರ್ಪು ಬರಬೇಕು ಎನ್ನುವಾಗ ತಾನು ಬಾಡಿಗೆ ನೀಡುವುದಾಗಿ ಈ ಮಹಿಳೆಯ ಗಂಡನನ್ನು ಕರೆದನಂತೆ, ಆತನನ್ನು ಭೇಟಿಯಾಗಲೂ ಹೋದ ಗಂಡ ಎರಡು ದಿನವಾದರೂ ಮನೆಗೆ ಹಿಂದಿರುಗಲಿಲ್ಲ. ಬದಲಾಗಿ ಆತನ ಹೆಣ ಬೆಂಗಳೂರಿನ ಕೆರೆಯೊಂದರಲ್ಲಿ ಸಿಕ್ಕಿತು. ಬಾಡಿಗೆದಾರನೇ ಕೊಲೆ ಮಾಡಿಸಿದ್ದಾನೆಂದು ಈಕೆ ಪೊಲೀಸರಿಗೆ ದೂರು ನೀಡಿದರು. ಆದರೆ ಬಾಡಿಗೆದಾರನೊಂದಿಗೆ ಶಾಮೀಲಾದ ಪೊಲೀಸರು ಕೊಲೆಗಡುಕ ಸಿಕ್ಕಿಲ್ಲವೆಂದು ವರದಿ ಸಲ್ಲಿಸಿದರು. ಆಗ ಮಹಿಳೆ ಬಾಡಿಗೆದಾರ ಮತ್ತು ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆಹೋದರು.
ಇದೆಲ್ಲಾ ನಡೆದು ಬರೋಬ್ಬರಿ 16 ವರ್ಷಗಳಾಗಿವೆ. ಈ ಮಧ್ಯೆ ಈಕೆಯ ಮಕ್ಕಳು ಬೆಳೆದು ನಿಂತಿದ್ದಾರೆ. ಪೊಲೀಸ್ ಅಧಿಕಾರಿ ನಿವೃತ್ತಿ ಪಡೆದು ತನ್ನ ಮನೆ ಸೇರಿದ್ದಾನೆ. ಬಾಡಿಗೆದಾರ ಇನ್ನೂ ಅದೇ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ಈ ಮಹಿಳೆಯ ಅರ್ಜಿ ಅಂದು ಎಲ್ಲಿತ್ತೋ ಇವತ್ತಿಗೂ ಅಲ್ಲೇ ಇದೆ. ಆಕೆಗೆ ಬಾಡಿಗೆಯೂ ಬಂದಿಲ್ಲ. ಆಸ್ತಿಯೂ ವಾಪಸ್ಸಾಗಿಲ್ಲ, ನ್ಯಾಯವಂತೂ ಸಿಕ್ಕಿಲ್ಲ, ಈ ವ್ಯಾಜ್ಯ ಮ್ಯಾಜಿಸ್ಟ್ರೇಟರ ನಂತರ ಹೈಕೋರ್ಟಿಗೆ ಹೋಗಿ ಅಂತ್ಯಗೊಳ್ಳುವುದು ಇನ್ನು ಎಷ್ಟು ವರ್ಷಕ್ಕೋ?
ಇನ್ನೊಂದು ವಿಚಿತ್ರ ಪ್ರಕರಣ. ಸುಮಾರು 45 ಪ್ರಾಯದ ಈಕೆ ರಾಜ್ಯ ಸರ್ಕಾರಿ ನೌಕರಿಯಲ್ಲಿದ್ದಾರೆ. ಈಕೆಯ ಗಂಡ ಕೇಂದ್ರ ಸರ್ಕಾರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕಿದ್ದಾನೆ. ಈಕೆ ಮದುವೆಯಾದ ಕೆಲ ವರ್ಷಗಳಲ್ಲೇ ಗಂಡ ಮತ್ತೊಬ್ಬಳನ್ನು ಮದುವೆಯಾದಾಗ ಈಕೆ ಆತನನ್ನು ತೊರೆದು ತಾನಾಯಿತು ತನ್ನ ಪಾಡಾಯಿತು ಎಂದು ಏಕಾಂಗಿ ಜೀವನ ಸಾಗಿಸಲಾರಂಭಿಸಿದಳು. ಆದರೆ ಗಂಡನ ಕಾಟ ಮುಂದುವರೆಯಿತು. ಆತ ಸರ್ಕಾರಿ ನೌಕರನಾದ್ದರಿಂದ ತನ್ನ ಎರಡನೇ ಪತ್ನಿಯ ಬಗ್ಗೆ ದಾಖಲಿಸುವಂತಿಲ್ಲ. ಆದ್ದರಿಂದ ಎರಡನೇ ಪತ್ನಿಯೊಂದಿಗೆ ಮಕ್ಕಳಾದಾಗ ಆತ ಆಸ್ಪತ್ರೆಯಲ್ಲಿ ತಾಯಿಯ ಹೆಸರು ನಮೂದಿಸಬೇಕಿದ್ದ ಜಾಗದಲ್ಲಿ ತನ್ನ ಮೊದಲನೆ ಹೆಂಡತಿಯ ಹೆಸರನ್ನೇ ದಾಖಲಿಸಿದ್ದ. ಇದು ಮೊದಲನೇ ಪತ್ನಿಗೆ ಗೊತ್ತಾದಾಗ ಆಕೆ ಕೆಂಡಾಮಂಡಲವಾದಳು. ತನ್ನ ಬದುಕನ್ನು ಹಾಳು ಮಾಡಿ ಏಕಾಂಗಿಯಾಗಿ ಸದ್ದಿಲ್ಲದೇ ತನ್ನದಲ್ಲದ ಮಕ್ಕಳನ್ನು ತನ್ನ ತಲೆಗೆ ಕಟ್ಟುತ್ತಿರುವ ನಾಳೆ ತನ್ನ ಚೂರುಪಾರು ಆಸ್ತಿಗೂ ಆತನ ಎರಡನೇ ಪತ್ನಿಯ ಮಕ್ಕಳು ತಾವೇ ವಾರಸುದಾರರು ಎಂದು ವಾದಿಸಿದರೆ ಏನು ಗತಿ ಎಂದು ಚಿಂತಿಸಿ ಗಂಡನ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಏರಿದಳು. ಆ ಮಕ್ಕಳು ತನ್ನ ಮಕ್ಕಳಲ್ಲ, ಅವರುಗಳ ತಾಯಿ ತಾನಲ್ಲ ಎಂಬ ತೀರ್ಪು ಕೋರಿದಳು.
ಆಕೆ ಇಂಥದ್ದೊಂದು ಅರ್ಜಿ ಸಲ್ಲಿಸಿ, ಈಗ ಹನ್ನೊಂದು ವರ್ಷಗಳಾಗಿವೆ. ಆದರೆ ಅರ್ಜಿ ಮಾತ್ರ ಮುಂದಕ್ಕೆ ಹೋಗದೇ ಎಲ್ಲಿದೆಯೋ ಅಲ್ಲೇ ಇದೆ. ಇದನ್ನೆಲ್ಲಾ ಹೇಳಿದಕ್ಕೆ ಕಾರಣವಿದೆ. ಇವತ್ತು 21 ಹೈಕೋರ್ಟ್‍ಗಳ ಮುಂದೆ ಮೂವತ್ತು ಲಕ್ಷಕ್ಕಿಂತಲೂ ಹೆಚ್ಚು ಕೇಸುಗಳಿವೆ. ಇನ್ನು ಇತರೆ ನ್ಯಾಯಾಲಯಗಳ ಮುಂದೆ ಸುಮಾರು ಮೂರು ಕೋಟಿ ಕೇಸುಗಳಿವೆ. ಅಷ್ಟೇ ಅಲ್ಲ ದೇಶದಾದ್ಯಂತ ಕನಿಷ್ಠ ಮೂರು ಸಾವಿರ ಜಡ್ಜ್‍ಗಳ ಕೊರತೆ ಇದೆ. ಹೀಗಿರುವಾಗ ಈ ಲಕ್ಷಾಂತರ ಕೇಸುಗಳು ಇತ್ಯರ್ಥವಾಗುವುದೆಂದು? ಜನಸಾಮಾನ್ಯರಿಗೆ ನ್ಯಾಯ ಸಿಗುವುದೆಂದು?
ನಮ್ಮ ನ್ಯಾಯ ವ್ಯವಸ್ಥೆಯ ಒಂದು ಮಗ್ಗಲು ಇದಾದರೆ ಇನ್ನೊಂದು ಮಗ್ಗಲು ನಮ್ಮ ಜೈಲಿನಲ್ಲಿರುವ ಎರಡೂವರೆ ಲಕ್ಷ ವಿಚಾರಣಾಧೀನ ಬಂಧಿಗಳು. ಅವರಲ್ಲಿ ಬಹಳಷ್ಟು ಜನ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಬಹಳಷ್ಟು ವಿಚಾರಣಾಧೀನ ಖೈದಿಗಳ ವಿರುದ್ದದ ಕೇಸುಗಳು ಸಾಬೀತಾಗದೆ ಕೊನೆಗೆ ಅವರು ನಿರಪರಾಧಿಗಳು ಎಂದು ಬಿಡುಗಡೆ ಹೊಂದುತ್ತಾರೆ. ಆದರೆ ಅಷ್ಟರ ಮಟ್ಟಿಗೆ ಅವರ ಬದುಕಿನ ಹಲವಾರು ವರ್ಷಗಳು ಜೈಲಿನಲ್ಲೇ ಕಳೆದು ಹೋಗಿರುತ್ತದಲ್ಲದೇ, ಅವರು ಬಿಡುಗಡೆಗೊಂಡು ಹೊರಬರುವ ಹೊತ್ತಿಗೆ ಸಮಾಜದಲ್ಲಿನ ಅವರ ಮಾನ ಮತ್ತು ಬದುಕಿನ ಅವಕಾಶಗಳು ನಾಶವಾಗಿರುತ್ತವೆ. ಹಾಗೆಯೇ ಬಹಳಷ್ಟು ಪ್ರಕರಣಗಳಲ್ಲಿ ವಿಚಾರಣಾಧೀನ ಖೈದಿಯೇ ಆತನ ಸಂಸಾರದ ಆರ್ಥಿಕ ಸ್ತಂಭವಾಗಿರುವುದರಿಂದ ಆತ ಜೈಲಿನಲ್ಲಿರುವಾಗ ಆ ಸಂಸಾರವೇ ಛಿದ್ರಗೊಂಡಿರುತ್ತದೆ. ಇದೆಲ್ಲದರ ಅರ್ಥ ಕೊನೆಗೂ ವಿಚಾರಣಾಧೀನ ಖೈದಿಗೆ ನ್ಯಾಯ ಸಿಕ್ಕರೂ ಅನ್ಯಾಯವಾಗಿರುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...