Homeಮುಖಪುಟರಾಜ್ಯ ಸರ್ಕಾರದ ಭವಿಷ್ಯ ನಿಂತಿರುವುದು ಈ ನಾಲ್ಕು ಅಂಶಗಳ ಮೇಲೆ.

ರಾಜ್ಯ ಸರ್ಕಾರದ ಭವಿಷ್ಯ ನಿಂತಿರುವುದು ಈ ನಾಲ್ಕು ಅಂಶಗಳ ಮೇಲೆ.

- Advertisement -
- Advertisement -

| ನೀಲಗಾರ |

ಸಮ್ಮಿಶ್ರ ಸರ್ಕಾರವು ಅಸಿತ್ವಕ್ಕೆ ಬಂದ ಮೇಲೆ ‘ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಇರುವುದಿಲ್ಲ’ ಈ ಮಾತನ್ನು ಮೊದಲು ಹೇಳಿದ ದೊಡ್ಡ ನಾಯಕ ಯಾರು? ನಿಮ್ಮ ಉತ್ತರ ತಪ್ಪಾಗಿದೆ. ಅದು ಯಡಿಯೂರಪ್ಪನವರಲ್ಲ. ಬದಲಿಗೆ ಸಿದ್ದರಾಮಯ್ಯ, ಧರ್ಮಸ್ಥಳದ ಶಾಂತಿವನದಲ್ಲಿ. ಹ್ಞಾಂ, ಈಗ ನೆನಪಾಯಿತೇ? ಹೌದು, ಆ ಹೇಳಿಕೆ ಖಾಸಗಿ ಹೇಳಿಕೆಯಾಗಿತ್ತು. ಅವರನ್ನು ಭೇಟಿ ಮಾಡಲು ಹೋಗಿದ್ದವರಲ್ಲಿ ಯಾರೋ ರೆಕಾರ್ಡ್ ಮಾಡಿ ಬಹಿರಂಗಗೊಳಿಸಿದ್ದರು. ಆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನು ಅವಲೋಕಿಸಿದರೆ, ಸ್ವತಃ ಸಿದ್ದರಾಮಯ್ಯನವರೇ ವಿಡಿಯೋ ಬಹಿರಂಗಗೊಳ್ಳಲಿ ಎಂದು ಬಯಸಿದ್ದರೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೇ 23ರಂದು ಫಲಿತಾಂಶ ಘೋಷಣೆಯಾದ ತಕ್ಷಣ ಯಡಿಯೂರಪ್ಪನವರು ರಮೇಶ್ ಜಾರಕಿಹೊಳಿ ಜೊತೆ ಸೇರಿ ಸರ್ಕಾರ ಉರುಳಿಸುತ್ತಾರೆ ಎಂಬ ಏಕೈಕ ತೀರ್ಮಾನಕ್ಕೆ ಮೊದಲೇ ಬಾರದಿರಲಿ ಎಂಬ ಕಾರಣಕ್ಕೆ ಇದನ್ನು ಹೇಳಬೇಕಾಯಿತು. ಮತ್ತೆ ಶಾಂತಿವನಕ್ಕೇ ಮರಳುವುದಾದಲ್ಲಿ, ಮರುದಿನ ಡಿಸ್ಚಾರ್ಜ್ ಆಗಲಿದ್ದ ಸಿದ್ದರಾಮಯ್ಯನವರನ್ನು ಭೇಟಿಯಾಗಲು ಒಂದು ಹಿಂಡು ಶಾಸಕರನ್ನು ತುಂಬಿಸಿಕೊಂಡು ಹೋಗಿ, ಮಾಧ್ಯಮದವರ ಗಮನಕ್ಕೆ ಬರುವಂತೆ ಭೇಟಿ ಏರ್ಪಡಿಸಿದ್ದು ಇದೇ ರಮೇಶ್ ಜಾರಕಿಹೊಳಿ!

ಹಾಗಾಗಿ ಸ್ವಲ್ಪ ಸಾವಧಾನವಾಗಿ ಲೆಕ್ಕ ಹಾಕಿದರೆ ಅರ್ಥವಾಗುವ ಒಂದು ಸಂಗತಿಯೆಂದರೆ ಸರ್ಕಾರ ಉರುಳಬೇಕು ಎಂದು ಬಯಸುತ್ತಿರುವವರಲ್ಲಿ ಯಡಿಯೂರಪ್ಪನವರು ಒಬ್ಬರೇ ಇಲ್ಲ. ಹಾಗಾಗಿಯೇ ನಿನ್ನೆ ಹುಬ್ಬಳ್ಳಿಯಲ್ಲಿ ತಮ್ಮ ಪಕ್ಷದ ಮುಖಂಡರಿಗೆ ಯಡಿಯೂರಪ್ಪನವರು ‘ನಿಮಗೆ ಕೈ ಮುಗಿಯುತ್ತೇನೆ, ಸಮ್ಮಿಶ್ರ ಸರ್ಕಾರ ಬೀಳಲಿದೆ ಬಿಜೆಪಿ ಸರ್ಕಾರ ಬರಲಿದೆ ಎಂದು ದಯವಿಟ್ಟು ಹೇಳಬೇಡಿ’ ಎಂದಿದ್ದಾರೆ. ಇದರ ಹಿಂದೆ ಮುಂದಿನ ರಾಜ್ಯ ಸರ್ಕಾರದ ಭವಿಷ್ಯಕ್ಕೆ ಸಂಬಂಧಿಸಿದ ಮತ್ತೊಂದು ಸಂಗತಿಯಿದೆ.

ಒಟ್ಟಾರೆ ಹೇಳಬೇಕೆಂದರೆ ನಾಲ್ಕು ಅಂಶಗಳ ಮೇಲೆ ರಾಜ್ಯ ಸರ್ಕಾರದ ಮುಂದಿನ ಭವಿಷ್ಯ ನಿಂತಿದೆ. ಕಾಮನ್ ಸೆನ್ಸ್‍ಗೆ ಹೊಳೆಯುವ ವಿಷಯವೆಂದರೆ, ಮೇ 23ರಂದು ಬಿಜೆಪಿಗೆ ಕೇಂದ್ರದಲ್ಲಿ ಬಹುಮತ ಬಂದರೆ, ರಾಜ್ಯದ ಮೈತ್ರಿ ಪಕ್ಷಗಳ ಶಾಸಕರಲ್ಲಿ ಅಗತ್ಯವಿರುವಷ್ಟು ಜನರು ಬೇಲಿ ಹಾರುತ್ತಾರೆ; ಸರ್ಕಾರ ಉರುಳುತ್ತದೆ. ಆದರೆ, ಬಿಜೆಪಿಗೆ ಬಹುಮತ ಬರಲ್ಲ ಎಂದು ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾದ (ಬಹುಶಃ ಬಿಜೆಪಿಯ ಮುಂದಿನ ರಾಷ್ಟ್ರಾಧ್ಯಕ್ಷರಾಗಬಹುದಾದ) ರಾಂ ಮಾಧವ್ ಅವರೇ ಹೇಳಿದ್ದಾರೆ. ಎನ್‍ಡಿಎಗೂ ಬಹುಮತ ಬಾರದೇ, ಬಿಜೆಪಿ ಅಧಿಕಾರ ಹಂಚಿಕೊಂಡರೂ, ಪ್ರಧಾನಿಯಾಗಿ ಮೋದಿಯೇ ಆಗುತ್ತಾರಾ ಹೇಳುವುದು ಕಷ್ಟ.

ಆದರೆ, ಈ ಫಲಿತಾಂಶದಲ್ಲಿ ಜೆಡಿಎಸ್‍ಗೆ ಹಾಗೂ ದೇವೇಗೌಡರಿಗೆ ಪ್ರಮುಖ ಪಾತ್ರ ಇರುವಂತಹ ಸನ್ನಿವೇಶ ಉಂಟಾಗುವ ಸಾಧ್ಯತೆ ಇದೆ. ‘ಫೆಡರಲ್ ಫ್ರಂಟ್’ ಮಾಡಲು ಹೊರಟಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಆಗಲೇ ಎಚ್.ಡಿ.ಕುಮಾರಸ್ವಾಮಿಯವರ ಜೊತೆ ಮಾತಾಡಿರುವ ವರದಿ ಬಂದಿದೆ. ದೇವೇಗೌಡರ ಜೊತೆಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಲೇಬೇಕಾದ ಅನಿವಾರ್ಯತೆ ರಾಹುಲ್‍ಗಾಂಧಿಗೆ ಬರಬಹುದು. ಆಗ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕೆಂದು ರಾಜ್ಯ ನಾಯರಿಗೆ ತಾಕೀತು ಮಾಡುವ ಸಾಧ್ಯತೆ ಹೆಚ್ಚು.

ಎರಡನೆಯ ಅಂಶ, ಬಿಜೆಪಿಯೊಳಗಿನ ಸಮಸ್ಯೆಗಳು. ಸಮ್ಮಿಶ್ರ ಸರ್ಕಾರ ಬೀಳಿಸುವ ಸುಪಾರಿಯನ್ನು ಯಡಿಯೂರಪ್ಪ ತೆಗೆದುಕೊಂಡಿರಬಹುದಾದರೂ, ಸುಪಾರಿಯ ಶುಲ್ಕ ಮುಖ್ಯಮಂತ್ರಿಯ ಪದವಿಯೇ ಆಗಿರಬೇಕೆಂದೇನಿಲ್ಲ. ಅದಕ್ಕೆ ಬೇಕಾದ ತಯಾರಿಯನ್ನು ಬಿ.ಎಲ್.ಸಂತೋಷ್ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಯಡಿಯೂರಪ್ಪನವರೇಕೆ ಅಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಾರೆ? ಬಿಜೆಪಿಯೊಳಗಿನ ಸಮಸ್ಯೆಗಳು ತೀವ್ರವಾದರೆ, ಆಡಳಿತಾರೂಢ ಮೈತ್ರಿಕೂಟದ ಶಾಸಕರೇಕೆ ಬೇಲಿ ಹಾರುತ್ತಾರೆ? ಹಾಗಾಗಿ ಬಿಜೆಪಿಯೊಳಗೆ ಒಗ್ಗಟ್ಟು ಹೇಗಿದೆ ಎಂಬುದು ಮತ್ತು ಕೇಂದ್ರದಲ್ಲಾಗುವ ಬದಲಾವಣೆಯ ಸ್ವರೂಪ ಅದರ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದೂ ಸಹಾ ಬಿಜೆಪಿಯ ನಡೆಗಳನ್ನು ನಿರ್ಧರಿಸಲಿದೆ.

ಇನ್ನು ಮೂರನೆಯ ಅಂಶ, ಕಾಂಗ್ರೆಸ್‍ನೊಳಗಿನ ಸಮಸ್ಯೆಗಳು. ಅದರಲ್ಲೂ ಸಿದ್ದರಾಮಯ್ಯನವರು ಉರುಳಿಸಲಿರುವ ದಾಳ. ಸುಮಲತಾರ ಹಿಂದೆ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಇದ್ದರು ಎಂಬುದು ಬಹಿರಂಗಕ್ಕೆ ಬಂದಿಲ್ಲವಾದರೂ, ಸುಮಲತಾ ಹಿಂದೆ ಸಿದ್ದರಾಮಯ್ಯನವರ ಆಪ್ತರು ಇದ್ದುದಂತೂ ನಿಜ. ಅದಕ್ಕಿಂತ ಆಶ್ಚರ್ಯಕರ ಸುದ್ದಿಯೊಂದು ಹೈದ್ರಾಬಾದ್ ಕರ್ನಾಟಕದಲ್ಲಿ ಓಡಾಡುತ್ತಿದೆ. ಅದೇನೆಂದರೆ, ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಸ್ಪರ್ಧಿಸಿದ್ದ ಉಮೇಶ್ ಜಾಧವ್ ಹಿಂದೆ ಇದ್ದುದು ಸಿದ್ದರಾಮಯ್ಯ ಎಂದು. ಖರ್ಗೆಯವರ ಪರ, ದೇವೇಗೌಡರ ಪರ, ಪ್ರಜ್ವಲ್ ಪರ ಮತ್ತು ನಿಖಿಲ್ ಪರ ಸಿದ್ದರಾಮಯ್ಯನವರು ಬ್ಯಾಟಿಂಗ್ ಮಾಡಿ ಪ್ರಚಾರದಲ್ಲಿದ್ದರೆಂಬುದು ನಿಜವೇ. ಆದರೆ, ಈ ಹಿಂದಿನ ಬಾಗಿಲಿನ ಕಾರ್ಯಾಚರಣೆಗಳನ್ನು ಅವರು ಮಾಡಿದ್ದಾರಾ ಇಲ್ಲವಾ ಎಂಬುದು ಹೆಚ್ಚಿನವರಿಗೆ ಸ್ಪಷ್ಟವಿಲ್ಲ. ಸಿದ್ದರಾಮಯ್ಯನವರು ಅಂತಹ ಸ್ಟ್ರಾಟೆಜಿಸ್ಟ್ ಅಲ್ಲವೆಂದೂ, ಮುಖ್ಯಮಂತ್ರಿಯಾದ ನಂತರ ಅವರ ರಾಜಕೀಯ ಚಾಣಾಕ್ಷತೆ ವಿಪರೀತ ಹೆಚ್ಚಾಗಿದೆಯೆಂದೂ ಎರಡೂ ಬಗೆಯ ಅಭಿಪ್ರಾಯಗಳು ಚಾಲ್ತಿಯಲ್ಲಿವೆ. ಒಂದಂತೂ ನಿಜ. ಕಾಂಗ್ರೆಸ್‍ನ ರಾಜ್ಯ ನಾಯಕರ ಪೈಕಿ ಈ ಸರ್ಕಾರ ಉಳಿಯದಿದ್ದರೆ ಒಳ್ಳೆಯದೆಂದು ಬಯಸುವವರಲ್ಲಿ ಸಿದ್ದರಾಮಯ್ಯನವರಿದ್ದಾರೆ.

ನಾಲ್ಕನೆಯ ಅಂಶ ಉಪಚುನಾವಣೆ ಫಲಿತಾಂಶ. ಲೋಕಸಭಾ ಚುನಾವಣೆಯ ಫಲಿತಾಂಶ ಬರುವ ದಿನವೇ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶವೂ ಹೊರಬರಲಿದೆ. ಒಂದು ವೇಳೆ ಕೃಷ್ಣ ಭೈರೇಗೌಡ ಮತ್ತು ಈಶ್ವರ ಖಂಡ್ರೆ ಗೆದ್ದರೆ (ಇಬ್ಬರೂ ಗೆಲ್ಲುವ ಸಾಧ್ಯತೆಗಳಿವೆ) ಬ್ಯಾಟರಾಯನಪುರ ಮತ್ತು ಭಾಲ್ಕಿ ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಬೇಕಾಗುತ್ತದೆ. ಈ ನಾಲ್ಕೂ ಸಹಾ ಹಿಂದೆ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳು. ಇವುಗಳಲ್ಲಿ ಎಷ್ಟನ್ನು ಬಿಜೆಪಿ ಕಿತ್ತುಕೊಳ್ಳುತ್ತದೆ ಎಂಬುದು, ಸರ್ಕಾರ ಉರುಳಿಸಲು ಅದಕ್ಕೆ ಅಷ್ಟು ಅನುಕೂಲ ಮಾಡಿಕೊಡುತ್ತದೆ. ಹಾಗಾಗಿ ಇದಕ್ಕೂ ಮಹತ್ವವಿದೆ.

ಲೋಕಸಭಾ ಚುನಾವಣಾ ಫಲಿತಾಂಶ ಎಲ್ಲದರ ಮೇಲೂ ಪರಿಣಾಮ ಬೀರಲಿದೆ ಎನ್ನುವುದೇನೋ ವಾಸ್ತವ. ಆದರೆ, ಆ ಫಲಿತಾಂಶವು ಈ ನಾಲ್ಕು ಅಂಶಗಳ ಮೂಲಕವೇ ಆಪರೇಟ್ ಆಗುವುದರೊಂದಿಗೆ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳತ್ತೋ? ಕೊಡವಿಕೊಂಡು ಏಳತ್ತೋ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...