“ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್” ಎಂಬ ಶೀರ್ಷಿಕೆಯಲ್ಲಿ ಕನ್ನಡದ ಸುವರ್ಣ ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿದ ಅಜಿತ್ ಹನುಮಕ್ಕನವರ್ ಮತ್ತು ಕನ್ನಡಪ್ರಭ ಪತ್ರಿಕೆಯಲ್ಲಿ ಲೇಖನ ಬರೆದ ಪ್ರಶಾಂತ್ ನಾತು ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ್ರ ಪ್ರಧಾನಿ ರಾಹುಲ್ ಗಾಂಧಿಯೋ, ಮೋದಿಯೋ? ನೇರವಾಗಿ ಮೋದಿಯನ್ನು ಪ್ರಶ್ನಿಸಲಾಗದೆ ವಿರೋಧಪಕ್ಷಗಳನ್ನು ಗುರುಮಾಡುವ ಗೋದಿ ಮೀಡಿಯಾ ನೀವು ಎಂಬ ಟೀಕೆ ಕೇಳಿಬಂದಿದೆ.
ರೈತರು ಜಿಯೋ ಸಿಮ್ ತಿರಸ್ಕರಿಸಲು ಕರೆ ನೀಡಿದಾಗ, ದೆಹಲಿಯಲ್ಲಿ ರೈತರ ಹೋರಾಟ ಆರಂಭವಾದಾಗಿನಿಂದಲೂ ಈ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ರೈತರ ವಿರುದ್ಧವೇ ಲೇಖನಗಳು ಬರೆಸುತ್ತಿವೆ. ಆದರೆ ಈಗ ಕೃಷಿ ಕಾಯ್ದೆಗಳನ್ನು ತಂದಿರುವುದು ನರೇಂದ್ರ ಮೋದಿ, ರೈತರು ಹೋರಾಡುತ್ತಿರುವುದು ಮೋದಿ ಸರ್ಕಾರದ ವಿರುದ್ಧ. ಹೀಗಿರುವಾಗ ಮೋದಿಯನ್ನು ಗುರಿಮಾಡಲು ಧೈರ್ಯವಿಲ್ಲದ ಈ ಪತ್ರಿಕೆಗಳು ರಾಹುಲ್ ಗಾಂಧಿಯನ್ನು ಗುರಿಮಾಡಿರುವುದು ಜಾಲತಾಣಿಗರ ಆಕ್ರೋಶವನ್ನು ಹೆಚ್ಚು ಮಾಡಿದೆ.
“ಇದನ್ನು ಅವರು ಸುಮ್ಮನೆ ಮಾಡ್ತಿಲ್ಲಾ ಪೊಲಿಟಿಕಲ್ ಹಿಕ್ ಮತ್ ಇಟ್ಕೊಂಡೆ ಮಾಡುವುದು. ಅಧಿಕಾರದಲ್ಲಿರುವವರನ್ನು ಕೇಳದೆ, ಅಧಿಕಾರದಲ್ಲಿರದ ರಾಹುಲ್ ನನ್ನು ಕೇಳುವುದು. ವಿರೋಧ ಪಕ್ಷಗಳ ಬಗ್ಗೆ ಅಪಪ್ರಚಾರ ಮಾಡುವುದು, ರಾಜಕೀಯ ವರ್ಚಸ್ಸು ಬೆಳೆಯದಂತೆ ಮಾಡುವುದು. ಬಿಜೆಪಿಯ ದೊಂಬಿ, ಅವೈಜ್ಞಾನಿಕ ಆಡಳಿತ ಪ್ರಜೆಗಳಿಗೆ ಗೊತ್ತಾಗದಂತೆ ಮಾಡುತ್ತಾ ಇಡೀ ದೇಶವನ್ನು ಖಾಸಗಿ ವ್ಯಕ್ತಿಗಳ ಕೈಗೆ ಅಡವಿಡುವುದು! ಇದು ಪತ್ರಿಕೋದ್ಯಮವಲ್ಲ,ದೇಶದ ತಲೆ ಹೊಡೆಯುವ ಕೆಲಸ” ಎಂದು ಕಾಂತರಾಜು ಕೆ ಗೊಲ್ಲರಹಟ್ಟಿಯವರು ಕಿಡಿಕಾರಿದ್ದಾರೆ.
ಈತನಿಗೆ ನಿಜವಾಗಿಯೂ ಪತ್ರಿಕಾಧರ್ಮ, ಸಾಮಾಜಿಕ ಕಾಳಜಿ ಎಂದರೆ ಏನೆಂದು ಗೊತ್ತಿದ್ದರೆ, ವೃತ್ತಿಯ ವಿಚಾರದಲ್ಲಿ ಯಾವುದೇ ಪಂಥದ ಪಕ್ಷಪಾತಿ ಅಲ್ಲದೇ ಇರುತ್ತಿದ್ದರೆ ಈ ಅಂಕಣದ ಹೆಡ್ಡಿಂಗ್ ‘ರಸ್ತೆಯಲ್ಲಿ ರೈತ ಮನೆಯಲ್ಲಿ ಮೋದಿ’ ಹೀಗೆ ಇರಬೇಕಿತ್ತು ಎಂದು ಪತ್ರಕರ್ತೆ ಹೇಮಾವತಿ ವೆಂಕಟ್ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯ ರಸ್ತೆಯಲ್ಲಿ ನೂರಾರು ಕಿಲೋಮೀಟರ್ ನಡಿಗೆಯಲ್ಲಿ ಸಾಗುತ್ತಿದ್ದ ಕಾರ್ಮಿಕರನ್ನು ರಾಹುಲ್ ಗಾಂಧಿ ಮಾತನಾಡಿಸಿದರೆ ಅದು ನಾಟಕ, ಕಾರ್ಮಿಕರಿಗೆ ಊರಿಗೆ ತೆರಳಲು ಬಸ್ ವ್ಯವಸ್ಥೆ ಮಾಡಿದರೆ ಗಿಮಿಕ್,
ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲು ಹೋದರೆ ಅದು ರಾಜಕೀಯ. ಇಟಲಿಗೆ ಹೋದರೆ ಪಲಾಯನ ಎಂದು ಬೊಬ್ಬೆ ಹೊಡೆಯುವವರು ಇದೇ ಪತ್ರಕರ್ತರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೈತ ರಸ್ತೆಯಲ್ಲಿರುವಾಗ ವಾರಣಾಸಿಯಲ್ಲಿ ದೀಪಾವಳಿ, ಆರ್ಕೆಸ್ಟ್ರಾ, ಕುಣಿತ ಎಲ್ಲ ಬೇಕಿತ್ತಾ? ಹೊಸ ಸಂಸತ್ತಿಗೆ ಭೂಮಿ ಪೂಜೆ ಮಾಡುವ ಅರ್ಜಂಟ್ ಏನಿತ್ತು? ಈ ತುರ್ತು ಸಂದರ್ಭದಲ್ಲಿ ಚಳಿಗಾಲದ ಅಧಿವೇಶನ ರದ್ದು ಪಡಿಸಿದ್ದು ಯಾಕೆ ಎಂದು ಒಬ್ಬರಾದರೂ ಅಂಕಣ ಬರೆದ್ರಾ? ಯಾಕೆ ಬಿಜೆಪಿ ಬೆಂಬಲಿಗರಾದ ಮಾತ್ರಕ್ಕೆ ಸರ್ಕಾರದ ವಿಲಕ್ಷಣ ನಡವಳಿಕೆ ಪ್ರಶ್ನೆ ಮಾಡಬಾರದೇ? ಈ ನಾತು ಅವರಿಗೆ ಈ ಅಂಕಣ ಬರೆಯುವ ಅಗತ್ಯ ಏನಿತ್ತು? ರಾಹುಲ್ ಪ್ರಧಾನಿಯೇ, ಗೃಹಮಂತ್ರಿಯೇ, ಕೃಷಿ ಸಚಿವರೇ? ಕನಿಷ್ಠ ಕಾಮನ್ ಸೆನ್ಸ್ ಬೇಡ್ವಾ!
ಈಗ ರಾಹುಲ್ ಏನು ಮಾಡಬೇಕಿತ್ತು; ಸರ್ಕಾರ ಅಗೆಯುವ ರಸ್ತೆ ಪಕ್ಕ ಕಾವಲು ಕಾಯಬೇಕಿತ್ತಾ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಗೆ ಧಿಕ್ಕಾರ
ತೊಲಗಲಿ ತೊಲಗಲಿ ರಾಹುಲ್ ಗಾಂಧಿ ತೊಲಗಲಿ
ಡೌನ್ ಡೌನ್ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಡಲಿ !! ಎಂದು ವಕೀಲರಾದ ಜಗನ್ನಾಥ್ ರಾಮಸ್ವಾಮಿಯವರು ವ್ಯಂಗ್ಯವಾಡಿದ್ದಾರೆ.
ಪ್ರತಿಭಟನಾ ನಿರತ ರೈತರನ್ನು ಖಾಲಿಸ್ತಾನಿ ಉಗ್ರರು, ಅವರನ್ನು ಬೆಂಬಲಿಸುತ್ತಿರುವವರೆಲ್ಲ ದೇಶದ್ರೋಹಿ ಅರ್ಬನ್ ನಕ್ಸಲ್ಗಳು ಎಂದೆಲ್ಲ ಸಂಭೋದಿಸಿದ್ದು ಇದೆ ಸುವರ್ಣ ಚಾನಲ್ನ ಅಜಿತ್ ಹನುಮಕ್ಕ ಮತ್ತು ಪ್ರಶಾಂತ್ ನಾತು ಅಲ್ಲವೇ? ಕ್ರಿಮಿ ಕೀಟಗಳಂತೆಯೂ ಕಾಲ ಕಸದಂತೆ ಅನ್ನದಾತನ ಚಳುವಳಿಯನ್ನು ಹೀಯಾಳಿಸಿದ ಇವರ ಕಣ್ಣಿಗೆ ಇಂದು ದೆಹಲಿ ಪ್ರತಿಭಟನಾ ನಿರತರು ನೈಜ ರೈತರಾಗಿ ಕಾಣಿಸಿತ್ತಿರುವುದು ಪರಮಾಶ್ಚರ್ಯ! ಎಂದು ದೀಪಕ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
“ದೇಶದ ಅನ್ನದಾತ ರೈತರು ರಸ್ತೆಯಲ್ಲಿ.. ದೇಶದ ಪ್ರಧಾನಿ ಮೋದಿ ಅದಾನಿ-ಅಂಬಾನಿ ಮನೆ ಬಾಗಿಲಿನಲ್ಲಿ…” ಎಂದು ಕನ್ನಡಿಗ ವೀರ ಕನ್ನಡಿಗ ಎಂಬುವವರು ವ್ಯಂಗ್ಯವಾಡಿದ್ದಾರೆ.
ರೈತರು ರಸ್ತೆಗಿಳಿಯುವಂತೆ ಮಾಡಿದ್ದು ಯಾರು? ಪ್ರಧಾನಿ ಮೋದಿಯವರು. ರೈತ ವಿರೋಧಿ ಕೃಷಿ ಕಾಯ್ದೆ ತರುತ್ತಿರುವವರು ಯಾರು ? ಪ್ರಧಾನಿ ಮೋದಿಯವರು….. ಚಳಿ,ಮಳೆ,ಗಾಳಿಯನ್ನದೆ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿರುವ ರೈತರ ಜೊತೆ ಮಾತಾಡಲು ಅಂಜುವ ನರೇಂದ್ರ ಮೋದಿಯವರು ಪ್ರಧಾನಿ ನಿವಾಸದಲ್ಲಿ ಬೆಚ್ಚಗಿದ್ದಾರೆ!! ಈ ಮಾಧ್ಯಮಗಳು ಮತ್ತು ಪತ್ರಕರ್ತರು ಪ್ರಶ್ನಿಸಬೇಕಾಗಿರುವುದು ಯಾರನ್ನು? ಪ್ರಧಾನಿ ಮೋದಿಯವರನ್ನು….ಆದರೆ…..? ನಾತ ಮತ್ತು ಅಜಿತ್ ನ ಅವತಾರಗಳ ನೋಡಿದ್ಮೇಲೆ ಅರ್ಥವಾಯ್ತು….ಗುಲಾಮಿ ಸಂತತಿ ಇನ್ನೂ ಜೀವಂತವಾಗಿದೆ ಅಂತ!! ಎಂದು ಓದು ಸಿದ್ದೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಜಿಯೋ ಸಿಮ್ ತಿರಸ್ಕರಿಸಲು ಕರೆ ಕೊಟ್ಟಾಗ ಅಜಿತ್ ಹನುಮಕ್ಕನವರ್ ಅಂಬಾನಿ ಪರ ಬ್ಯಾಟಿಂಗ್ ಮಾಡಿ ಟೀಕೆಗೊಳಗಾಗಿದ್ದರು. ಈ ಹಿಂದೆಯೂ ಸಹ ಪೆಟ್ರೋಲ್ ದರ ಹೆಚ್ಚಾದಾಗ ಮೋದಿ ಹೆಸರೆತ್ತದೆ ವರದಿ ಮಾಡಿದ್ದರು. ಅವರು ಸಂಪೂರ್ಣ ಬಿಜೆಪಿ ಪರವಾಗಿ ವರದಿ ಮಾಡುವುದರಿಂದ ರೊಚ್ಚಿಗೆದ್ದ ನೆಟ್ಟಿಗರು ಈ ಹಿಂದೆ ‘ಅಜಿತ್ ಬಿಜೆಪಿ ಏಜೆಂಟ್’ ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ರೆಂಡ್ ಮಾಡಿದ್ದರು.
ಸರಿಯಾದ ವಿಶ್ಲೇಷಣೆ ಮಾಡಿದ್ದಿರಿ.. ಧನ್ಯವಾದ