ಉತ್ತರಪ್ರದೇಶದಲ್ಲಿ ಝಾನ್ಸಿಯ ರೈಲ್ವೇ ಕೋರ್ಟ್ಗೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಮಾರ್ಗಮಧ್ಯೆ ಬಿಟ್ಟು ಟೀ ಕುಡಿಯಲು ತೆರಳಿದ್ದು, ಈ ವೇಳೆ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾರೆ.
ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪೊಲೀಸ್ ವ್ಯಾನ್ನಲ್ಲಿದ್ದ ಆರೋಪಿಗಳನ್ನು ಪೊಲೀಸರು ಮುಂಜಾಗೃತೆಯ ಸೆಕ್ಯೂರಿಟಿ ಇಲ್ಲದೆ ಬಿಟ್ಟು ಹೋಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪೊಲೀಸರು ಇಲ್ಲದಿದ್ದಾಗ ಆರೋಪಿಗಳು ವ್ಯಾನ್ನ ಬಾಗಿಲು ತೆರೆದು ಪರಾರಿಯಾಗಿದ್ದರು.
ವರದಿಗಳ ಪ್ರಕಾರ, ಘಟನೆ ಸಂಭವಿಸಿದಾಗ ಪೊಲೀಸ್ ವ್ಯಾನ್ನಲ್ಲಿ ಸುಮಾರು ಏಳು ಆರೋಪಿಗಳು ಇದ್ದರು. ಅದರಲ್ಲಿ ಮೂವರು ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 1.40ರ ಸಮಯದಲ್ಲಿ ಘಟನೆ ನಡೆದಿದೆ. 11 ಪೊಲೀಸರ ತಂಡ 7 ಆರೋಪಿಗಳನ್ನು ಝಾನ್ಸಿಯ ರೈಲ್ವೇ ಕೋರ್ಟ್ಗೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದರು.
ತಪ್ಪಿಸಿಕೊಂಡ ಆರೋಪಿಗಳು ರೈಲ್ವೇ ಸ್ಟೇಸನ್ನಲ್ಲಿ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ತಪ್ಪಿಸಿಕೊಂಡವರನ್ನು ಬ್ರಿಜೇಂದ್ರ, ಶೈಲೇಂದ್ರ, ಗ್ಯಾನ್ ಪ್ರಸಾದ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಪರಾರಿ ಪ್ರಕರಣದ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಮೂವರು ಸಬ್ ಇನ್ಸ್ಪೆಕ್ಟರ್ಗಳು ಸೇರಿ 8 ಪೊಲೀಸ್ ಅಧಿಕಾರಿಗಳನ್ನು ಪ್ರಕರಣಕ್ಕೆ ಸಂಬಂಧಿಸಿ ಅಮಾನತು ಮಾಡಲಾಗಿದೆ. ಸರಕಾರಿ ಕರ್ತವ್ಯದ ವೇಳೆ ನಿರ್ಲಕ್ಷ್ಯ ಆರೋಪದಲ್ಲಿ ಅವರ ವಿರುದ್ಧ ತನಿಖೆಗೆ ಆದೇಶವನ್ನು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ತನಿಖೆಗೆ ಸಮಿತಿ ರಚಿಸಲಾಗಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಎರಡು ತಂಡವನ್ನು ರಚಿಸಲಾಗಿದೆ. ಸಿಸಿಟಿವಿಯನ್ನು ಕೂಡ ತಂಡವು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರಪ್ರದೇಶದ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.
झांसी में तीन कैदी पुलिस वैन से फरार@Uppolice @jhansipolice pic.twitter.com/kq4n74zzfk
— Anmol dubey ( अनमोल दुबे ) (@anmoldubey110) September 21, 2023
ಇದನ್ನು ಓದಿ: ಕೆನಡಾದ ಪ್ರಜೆಗಳಿಗೆ ವೀಸಾ ಸೇವೆ ಸ್ಥಗಿತಗೊಳಿಸಿದ ಭಾರತ