ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕಿನ ಬೆನ್ನಲ್ಲೇ ಕೆನಡಾದಲ್ಲಿನ ಭಾರತೀಯರಿಗೆ ನಿನ್ನೆ ಎಚ್ಚರಿಕೆ ಸಲಹೆ ಬಿಡುಗಡೆ ಮಾಡಿದ ಕೇಂದ್ರ ಸರಕಾರ, ಇಂದು ಕೆನಡಾದ ಪ್ರಜೆಗಳಿಗೆ ವೀಸಾ ಸೇವೆಯನ್ನು ರದ್ದುಪಡಿಸಿದೆ.
ಕೆನಡಾದಲ್ಲಿನ ಭಾರತೀಯ ಹೈಕಮಿಷನ್ನ ವೆಬ್ಸೈಟ್ನಲ್ಲಿ ಈ ಕುರಿತು ಘೋಷಣೆಯನ್ನು ಮಾಡಲಾಗಿದೆ. ಇದಲ್ಲದೆ ಕೆನಡಾದಲ್ಲಿ ವೀಸಾ ಅರ್ಜಿಗಳನ್ನು ನಡೆಸುತ್ತಿರುವ ಬಿಎಲ್ಎಸ್ ಇಂಟರ್ನ್ಯಾಶನಲ್ ಸಂಸ್ಥೆಯು ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. ಅದಲ್ಲದೆ ಮುಂದಿನ ಆದೇಶದವರೆಗೆ ವೀಸಾ ಸೇವೆ ರದ್ದು ಮುಂದುವರಿಯಲಿದೆ ಎಂದು ಹೇಳಿದೆ.
ಸೆ.21ರಿಂದ ಜಾರಿಗೆ ಬರುವಂತೆ, ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯವರೆಗೆ ಅಮಾನತುಗೊಳಿಸಲಾಗಿದೆ. ದಯವಿಟ್ಟು BLS ವೆಬ್ಸೈಟ್ನ್ನು ಪರಿಶೀಲಿಸುತ್ತಿರಿ ಎಂದು ವೀಸಾ ಅಪ್ಲಿಕೇಶನ್ ಸೆಂಟರ್ ವೆಬ್ಸೈಟ್ನಲ್ಲಿ ತಿಳಿಸಿದೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಏಜೆಂಟ್ಗಳಿಗೆ ಸಂಬಂಧವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಗಳನ್ನು ಮಾಡಿದ್ದರು. ಆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.
ಈ ಮಧ್ಯೆ ಕೆನಡಾವು ಭಾರತೀಯ ಅಧಿಕಾರಿಯನ್ನು ದೇಶ ತೊರೆಯಲು ಸೂಚಿಸಿದ್ದು, ಇದರ ಬೆನ್ನಲ್ಲೇ ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಭಾರತವು ಉಚ್ಛಾಟನೆ ಮಾಡಿದೆ.
ಕೆನಡಾದ ರಾಜತಾಂತ್ರಿಕ ಅಧಿಕಾರಿಗೆ ದೇಶ ತೊರೆಯಲು ಐದು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಭಾರತ ಮಂಗಳವಾರ ಹೇಳಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿಕೊಂಡು ಉಚ್ಛಾಟಣೆ ನಿರ್ಧಾರದ ಬಗ್ಗೆ ತಿಳಿಸಿತ್ತು.
ಇದಾದ ಬಳಿಕ ಕೆನಡಾ ಪ್ರಜೆಗಳಿಗೆ ಭಾರತಕ್ಕೆ ತುರ್ತು ಇದ್ದರೆ ಮಾತ್ರ ಪ್ರಯಾಣಿಸಿ ಎಂದು ಕೆನಡಾ ಸಲಹೆ ಬಿಡುಗಡೆ ಮಾಡಿತ್ತು. ಅನಗತ್ಯವಾಗಿ ಭಾರತದಲ್ಲಿರಬೇಡಿ ವಾಪಾಸ್ಸು ಬನ್ನಿ ಎಂದು ಕೂಡ ಕೆನಡಾ ಸರಕಾರ ತಿಳಿಸಿತ್ತು. ಇದರ ಬೆನ್ನಲ್ಲೇ ಭಾರತ ಕೆನಡಾದಲ್ಲಿನ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಸಲಹೆಯನ್ನು ಬಿಡುಗಡೆ ಮಾಡಿ ಎಚ್ಚರಿಕೆಯಿಂದಿರುವಂತೆ ಸೂಚಿಸಿತ್ತು.
ಇದನ್ನು ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರ ಮಹೇಶ್ ರಾವುತ್ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್