Homeಮುಖಪುಟ2019ರಲ್ಲಿ ದಿಟ್ಟವಾಗಿ ಧ್ವನಿಯೆತ್ತಿದ 10 ಪತ್ರಕರ್ತೆಯರ ಕುರಿತು...

2019ರಲ್ಲಿ ದಿಟ್ಟವಾಗಿ ಧ್ವನಿಯೆತ್ತಿದ 10 ಪತ್ರಕರ್ತೆಯರ ಕುರಿತು…

ಈ ರೀತಿಯಲ್ಲಿ ಸಾಧನೆ ಮಾಡಿರುವ ಎಲ್ಲಾ ಪತ್ರಕರ್ತೆಯರನ್ನು ಹುಡುಕಿ ಗುರುತಿಸುವ ಯಾವ ಹಾದಿಯೂ ಇಲ್ಲ. ಆದರೂ ನಾವು ಅವರಿಗೆ ಧನ್ಯವಾದ ಹೇಳಲೇಬೇಕು. ಗೌರಿಯ ನೆನಪಿನಲ್ಲಿ ಇಂತವರು ಇನ್ನಷ್ಟು ಹುಟ್ಟಿ ಬೆಳೆಯಲಿ.

- Advertisement -
- Advertisement -

ಕೃಪೆ: ಫೆಮಿನಿಸಂ ಇನ್‌ ಇಂಡಿಯಾ

ಅನುವಾದ: ನಿಖಿಲ್‌ ಕೋಲ್ಪೆ

2019ರಲ್ಲಿ ಕೆಲವು ಪತ್ರಕರ್ತೆಯರು ಅದ್ಭುತವಾದ ವರದಿಗಾರಿಕೆ ಮಾಡುವುದರ ಮೂಲಕ ನಿಜಕ್ಕೂ ಮಾಧ್ಯಮವು ನಿಜಕ್ಕೂ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎಂದು ತೋರಿಸಿಕೊಟ್ಟಿದ್ದು, ಅವರಲ್ಲಿ ಹತ್ತು ಮಂದಿಯನ್ನು ಇಲ್ಲಿ ಹೆಸರಿಸಲಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ಮಾಧ್ಯಮ ವೃತ್ತಿಯಲ್ಲಿ ತಮ್ಮ ಜಾಗವನ್ನು ಸ್ಥಿರಗೊಳಿಸಿದ್ದಾರೆ.

1. ಯಾಶಿಕಾ  ದತ್

ಯಾಶಿಕಾ ಸ್ವತಂತ್ರ ಪತ್ರಕರ್ತೆಯಾಗಿ ಹಿಂದೂಸ್ತಾನ್ ಟೈಮ್ಸ್, ಲೈವ್‌ಮಿಂಟ್, ಸ್ಕ್ರೋಲ್.ಇನ್, ದಿ ವೈರ್, ಹಫ್‌ಪೋಸ್ಟ್ ಇಂಡಿಯಾ ಮುಂತಾದ ಮಾಧ್ಯಮಗಳಿಗೆ ಬರೆಯುತ್ತಾರೆ. ಅವರು ಹಿಂದೂಸ್ತಾನ್ ಟೈಮ್ಸ್‌ನ ಭಾನುವಾರದ ಆವೃತ್ತಿ ‘ಬ್ರಂಚ್’ನಲ್ಲಿ ಅವರಲ್ಲಿದ್ದಾಗ ಸಾಮಾಜಿಕ ಕಳಕಳಿಯ ಲೇಖನಗಳ ಅಭಿಯಾನವನ್ನೇ ನಡೆಸಿದರು.

ಅವರು ಸಾಮಾಜಿಕ ಮತ್ತು ಮುಖ್ಯವಾಗಿ ದಲಿತ ಕಳಕಳಿಯ ವಿಷಯಗಳ ಕುರಿತು ಬ್ಲಾಗ್‌ಗಳಲ್ಲಿ ಬರೆಯುತ್ತಿದ್ದು, Tumblr ಬ್ಲಾಗ್ ಸೈಟಿನ dalitdiscrimination.tumblr.com ಸ್ಥಾಪಕಿ. ಅವರು ‘ಕಮಿಂಗ್ ಔಟ್ ಏಸ್ ದಲಿತ್’ ಎಂಬ ಅನುಭವ ಕಥನವನ್ನು ಬರೆದಿದ್ದು, ಜಾತ್ಯಾಧರಿತ ಅವಮಾನಗಳ ಘಟನೆಗಳ ಕುರಿತು ವಿವರಿಸಿದ್ದಾರೆ. ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದು ತಾನು ಹೇಗೆ ಜಾತಿ ಗುರುತನ್ನು ಮರೆಮಾಚಬೇಕಾಯಿತು ಎಂಬುದನ್ನವರು ಇಲ್ಲಿ ವಿವರಿಸಿದ್ದಾರೆ.

2.ಕವಿತಾ ದೇವಿ
ಕವಿತಾ ದೇವಿಯವರು ‘ಖಬರ್ ಲಹರಿಯಾ’ ಸಂಪಾದಕಿ ಬುಂದೇಲ್ ಖಂಡ್‌ನ ಗ್ರಾಮೀಣ ಒಳಭಾಗದಿಂದ ಬಂದಿರುವ ಕವಿತಾ ತನ್ನದೇ ಚಿಂತನೆಯ ಸ್ವತಂತ್ರ ಮಹಿಳೆಯರ ಜೊತೆಗೂಡಿ ‘ಖಬರ್ ಲಹರಿಯಾ’ದಲ್ಲಿ ಜಾತಿ, ವರ್ಗ ಮತ್ತು ಸಂಪನ್ಮೂಲ ಪ್ರಶ್ನೆಗಳ ಕುರಿತು ವಿವರವಾಗಿ ಬರೆದಿದ್ದಾರೆ. ಈ ಪತ್ರಿಕೆಯು ಗ್ರಾಮೀಣ ಜನರಾಡುವ ಹಿಂದಿಯ ವಿವಿಧ ಉಪಭಾಷೆಗಳಲ್ಲಿ ಪ್ರಕಟವಾಗುತ್ತಿದೆ.

ಅವರ ಇತ್ತೀಚಿನ ಬರವಣಿಗೆಯು ಗ್ರಾಮೀಣ ದಲಿತ ಬಹುಜನ ಮಹಿಳೆಯರು ಹೇಗೆ ಸಾಮಾಜಿಕ ಮಾಧ್ಯಮಗಳನ್ನು ಪರಿಗಣಿಸುತ್ತಾರೆ ಎಂಬುದರ ಕುರಿತಾಗಿದೆ. 40ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶಗಳಿಂದ ಈ ಪತ್ರಿಕೆಗೆ ವರದಿ ಮಾಡುತ್ತಾರೆ. ಅವರು ಇತ್ತೀಚೆಗೆ ಭಾರತದಲ್ಲಿ ಟಿಇಡಿ ಮಾತುಕತೆಗಳ ಕುರಿತು ಉಪನ್ಯಾಸವನ್ನೂ ನೀಡಿದ್ದರು.

3. ಚಿತ್ರಾಂಗದಾ ಚೌಧರಿ
ಚಿತ್ರಾಂಗದಾ ಚೌಧರಿಯವರು ಸ್ವತಂತ್ರ ಪತ್ರಕರ್ತೆಯಾಗಿದ್ದು, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ)ದ ಮುಖ್ಯ ತಂಡದ ಸದಸ್ಯೆಯಾಗಿದ್ದಾರೆ. ಅದು ಮೂಲನಿವಾಸಿ ಗ್ರಾಮೀಣ ಸಮುದಾಯಗಳು, ಭೂಮಿ ಮತ್ತು ಅರಣ್ಯ ಹಕ್ಕುಗಳು, ಸಂಪನ್ಮೂಲ ನ್ಯಾಯ ಇತ್ಯಾದಿ ವಿಷಯಗಳ ಕುರಿತು ಕೆಲಸ ಮಾಡುತ್ತದೆ. ಅವರು ಕಾರವಾನ್, ದಿ ಹಿಂದೂ, ಪರಿ ಮುಂತಾದ ಮಾಧ್ಯಮಗಳಲ್ಲಿ ಈ ವಿಷಯಗಳ ಬಗ್ಗೆ ಬರೆದಿದ್ದಾರೆ.

ಅವರು ಯಾವತ್ತೂ ಬೆಳಕಿಗೆ ಬರದ ಕುಗ್ರಾಮಗಳ ಕುರಿತು ಹೆಚ್ಚಾಗಿ ಬರೆಯುತ್ತಾರೆ. ಅವರು ಇತ್ತೀಚೆಗೆ ತಾಲಬರಿಯಾ ಕಲ್ಲಿದ್ದಲು ಗಣಿಗಳ ಬಗ್ಗೆ ಯುಗಪ್ರವರ್ತಕ ಲೇಖನವೊಂದನ್ನು ಬರೆದು, ಹೇಗೆ ಅದಾನಿ ಉದ್ಯಮ ಸಮೂಹವು ಮರಗಳನ್ನು ಕಡಿದು ಅರಣ್ಯ ಭೂಮಿಯನ್ನು ಆಕ್ರಮಣ ಮಾಡಿದೆ, ಸರಕಾರವು ಧ್ವನಿಯೆತ್ತಿದವರ ಬಾಯಿಯನ್ನು ಹೇಗೆ ಮುಚ್ಚಿಸಿದೆ ಎಂದು ವಿವರಿಸಿದ್ದಾರೆ.

4. ಗ್ರೀಷ್ಮಾ ಕುಥರ್

ಕರಾವಳಿ ಕರ್ನಾಟಕದ ಕೇಸರಿಕರಣದ ಕುರಿತಾದ 18 ಭಾಗಗಳ ಸರಣಿಯ ಲೇಖಕಿ ಗ್ರೀಷ್ಮಾ ಕುಥರ್. ಇದು ಕರಾವಳಿ ಕರ್ನಾಟಕದ ಹಿಂದೂ ರಾಷ್ಟ್ರೀಯತೆಯ ಸಮಕಾಲೀನ ಇತಿಹಾಸದ ವಿವರವಾದ ವಿವರವಾಗಿದೆ. ಅವರು ಪ್ರಸ್ತುತ ಫಸ್ಟ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿರುವ ತಮಿಳುನಾಡಿನ ವಕೀಲರಾಗಿದ್ದಾರೆ. 18 ಭಾಗಗಳ ಈ ಸರಣಿಯಲ್ಲಿ, ಕರಾವಳಿ ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯತೆಯ ಉಗಮವನ್ನು, 1800 ರ ದಶಕದಲ್ಲಿ ಸರಸ್ವತ್ ಬ್ರಾಹ್ಮಣರನ್ನು ಸಜ್ಜುಗೊಳಿಸಿದ ಸಮಯದಿಂದ, ಬ್ರಹ್ಮ ಸಮಾಜ ಮತ್ತು ಆರ್ಯ ಸಮಾಜದವರೆಗೆ ಮತ್ತು 1941 ರಲ್ಲಿ ಮಂಗಳೂರಿನಲ್ಲಿ ಆರ್‌ಎಸ್ಎಸ್ ಹುಟ್ಟುವವರೆಗೂ ಅವರು ಗುರುತಿಸಿದ್ದಾರೆ.

ಗ್ರೀಷ್ಮಾ, ಹಿಂದೆ ವಕೀಲ ವೃತ್ತಿ ಮಾಡುತ್ತಿದ್ದು, ಅವರು ಡಾ. ಹೆನ್ರಿ ಬಾಬು ಅವರ ಸಂದರ್ಶಶನವನ್ನು ಮಾಡಿ, ದಿಲ್ಲಿಯ ಅವರ ಮನೆಗೆ ಪೊಲೀಸ್ ದಾಳಿಯ ವೇಳೆ ಏನು ನಡೆಯಿತು ಎಂಬುದನ್ನು ದಲಿತ್ ಕ್ಯಾಮರಾ ಪತ್ರಿಕೆಯಲ್ಲಿ ವಿವರಿಸಿದ್ದಾರೆ. 2019ರ ಸೆಪ್ಟೆಂಬರ್ 10ರಂದು ತಾವು ಪುಣೆಯವರೆಂದು ಹೇಳಿಕೊಂಡು 50 ಪೊಲೀಸ್ ಅಧಿಕಾರಿಗಳ ತಂಡವು ಡಾ. ಹೆನ್ರಿ ಬಾಬು ಅವರ ದಿಲ್ಲಿಯ ಮನೆಗೆ ದಾಳಿ ಮಾಡಿದ್ದರು.  ಆಗಸ್ಟ್‌ನಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಅವರು ಫಸ್ಟ್‌ಪೋಸ್ಟ್‌ಗಾಗಿ ‘ವಾಯ್ಸಸ್ ಫ್ರಮ್ ದಿ ಲಾಕ್ಡೌನ್’ ಎಂಬ ಶೀರ್ಷಿಕೆಯ ಧ್ವನಿಸುರಳಿಯನ್ನು ನಿರ್ಮಿಸಿದರು. ಅಲ್ಲಿ ಕಾಶ್ಮೀರಿ ಪತ್ರಕರ್ತರು ಮತ್ತು ನಿವಾಸಿಗಳ ವಾಸ್ತವ, ಸ್ಥಗಿತದ ಅಡಿಯಲ್ಲಿ ದೈನಂದಿನ ಜೀವನವನ್ನು ವಿವರಿಸುತ್ತಾರೆ.

5. ರಾಣಾ ಅಯ್ಯೂಬ್
ರಾಣಾ ಅಯ್ಯೂಬ್ ಪತ್ರಕರ್ತೆ ಮತ್ತು ಕಾದಂಬರಿಗಾರ್ತಿ. ಅವರು ‘ ಗುಜರಾತ್ ಫೈಲ್ಸ್: ದಿ ಅನಾಟಮಿ ಆಫ್ ಎ ಕವರ್ ಅಪ್’  ಪುಸ್ತಕದ ಲೇಖಕಿ. ಅದು 2002ರ ಗುಜರಾತ್ ಹತ್ಯಾಕಾಂಡದ ವಿವರಗಳನ್ನು ನೀಡಿದ್ದು, ಗಲಭೆಯಲ್ಲಿ ಅಮಿತ್ ಶಾ ಮತ್ತು ಪ್ರಧಾನಿ (ಆಗ ಗುಜರಾತ್ ಮುಖ್ಯಮಂತ್ರಿ) ನರೇಂದ್ರ ಮೋದಿಯ ಪಾತ್ರವನ್ನು ವಿವರಿದೆ. ಇದು ಜಾಗತಿಕವಾಗಿ ಗಮನ ಸೆಳೆದಿದ್ದು ಅಮಿತ್ ಶಾ ಸ್ವಲ್ಪ ಕಾಲ ಜೈಲಿಗೆ ಹೋಗುವುದಕ್ಕೂ ಕಾರಣವಾಯಿತು. ಅವರ ವ್ಯಕ್ತಿ ಚಿತ್ರಣವನ್ನು ಡೆಕ್ಸ್ಟರ್ ಫಿಲ್ಕಿನ್ಸ್ ಅವರು ‘ದಿ ನ್ಯೂಯಾರ್ಕರ್’ನಲ್ಲಿ ಬರೆದಿದ್ದರು.

ಒಬ್ಬರು ಮುಸ್ಲಿಂ ಮಹಿಳೆಯಾಗಿ ಅವರು ಮಹಿಳೆಯರ ಹಕ್ಕುಗಳು, ಮುಸ್ಲಿಮರ ಹಕ್ಕುಗಳ ಬಗ್ಗೆ ಬರೆಯುತ್ತಿದ್ದು, ಹಿಂದೂತ್ವವಾದಿಗಳ ಆರೆಸ್ಸೆಸ್ ರಾಜಕೀಯದ ವಿರುದ್ದ ಕೂಡಾ ಬರೆಯುತ್ತಾರೆ. ಅವರು 2018ರಲ್ಲಿ ಹೇಗ್‌ನ ಪೀಸ್ ಪ್ಯಾಲೇಸ್‌ನಲ್ಲಿ ‘ ಮೋಸ್ಟ್ ರಿಸಿಲಿಯೆಂಟ್ ಗ್ಲೋಬಲ್ ಜರ್ನಲಿಸ್ಟ್’ ಪ್ರಶಸ್ತಿಯನ್ನು ಪಡೆದಿದ್ದರು.

6. ಅನುರಾಧಾ ಭಾಸಿನ್
ಅನುರಾಧಾ ಭಾಸಿನ್ ದೀರ್ಘಕಾಲದಿಂದ ಪತ್ರಿಕಾ ವೃತ್ತಿಯಲ್ಲಿದ್ದಾರೆ. ಅವರು ಕಾಶ್ಮೀರದ ಕುರಿತು ಹಲವಾರು ಬರಹಗಳನ್ನು ಪ್ರಕಟಿಸಿ, ಅಲ್ಲಿನ ನಿಜ ಪರಿಸ್ಥಿತಿಯನ್ನು ಬಯಲಿಗೆಳೆದಿದ್ದಾರೆ. ಸಂಘರ್ಷದ ಸ್ಥಳದಿಂದಲೇ ವರದಿ ಮಾಡುವ ಅವರು ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅವರು ‘ಕಾಶ್ಮೀರ್ ಟೈಮ್ಸ್’ನ ಕಾರ್ಯನಿರ್ವಾಹಕ ಸಂಪಾದಕಿಯಾಗಿದ್ದು, 370ನೇ ವಿಧಿಯನ್ನು ಕಿತ್ತುಹಾಕಿದ ಬಳಿಕ ಕಾಶ್ಮೀರದಲ್ಲಿ ಹೇರಲಾಗಿರುವ ಸಂಪರ್ಕ ಕಡಿತದ ವಿರುದ್ದ ಅವರು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ.

7. ನಿತಾಶಾ ಕೌಲ್
ನಿತಾಶಾ ಕೌಲ್ ಅವರು ಲಂಡನ್‌ನಲ್ಲಿ ವಾಸವಾಗಿರುವ ಲೇಖಕಿ, ಪತ್ರಕರ್ತೆ ಮತ್ತು ಕವಿಯತ್ರಿ. ಅವರು ಕತೆ, ಕವನಗಳ ಜೊತೆಯಲ್ಲಿ ರಾಜಕೀಯ ಆರ್ಥಿಕತೆ, ಭೂತಾನ್, ಕಾಶ್ಮೀರ, ಭಾರತೀಯ ರಾಷ್ಟ್ರೀಯತೆ, ಲಿಂಗತ್ವ ಇತ್ಯಾದಿಗಳ ಬಗ್ಗೆ ಬರೆಯುತ್ತಾರೆ. ಅವರು ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಸಹಾಯಕ ಪ್ರಾಧ್ಯಾಪಕಿ.

ಅವರು 370ನೇ ವಿಧಿಯ ರದ್ಧತಿ ಮತ್ತು ಆ ನಂತರದ ಮಾಧ್ಯಮ ಪ್ರತಿಬಂಧದ ಕುರಿತು ಯುಎಸ್‌ಎಯ ಕಾಂಗ್ರೆಸ್ ವಿಚಾರಣೆಯಲ್ಲಿ ಕಾಶ್ಶೀರವನ್ನು ಪ್ರತಿನಿಧಿಸಿ ಧ್ವನಿಯೆತ್ತುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು. ಕಾಶ್ಮೀರಿ ಪಂಡಿತೆಯಾಗಿ ಅವರು ಕಾಶ್ಮೀರಿ ಮುಸ್ಲಿಮರ ಹಕ್ಕುಗಳ ಕುರಿತು ಧ್ವನಿಯೆತ್ತಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ದ ವಿವಿಧ ವೇದಿಕೆಗಳಲ್ಲಿ ಮಾತನಾಡಿದ್ದಾರೆ.

8. ಸುಪ್ರಿಯಾ ಶರ್ಮಾ
ಸುಪ್ರಿಯಾ ಶರ್ಮಾ ಅವರು ಸ್ಕ್ರೋಲ್.ಇನ್‌ನ ಕಾರ್ಯನಿರ್ವಾಹಕ ಸಂಪಾದಕಿ. ಹಿಂದೆ ಛತ್ತೀಸ್‌ಘಡದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಾಗಿ ಕೆಲಸ ಮಾಡಿದ್ದರು.

ಕುಂತಿ ಗ್ರಾಮದಲ್ಲಿ 19 ಎಫ್‌ಐ‌ಆರ್‌ಗಳ ಮೂಲಕ 10,000 ಆದಿವಾಸಿಗಳ ಮೇಲೆ ದೇಶದ್ರೋಹದ ಆರೋಪ ಹೊರಿಸಿದ ಕುರಿತು ಬಹುತೇಕ ಎಲ್ಲಾ ಪ್ರಮುಖ ವರದಿಗಳನ್ನು ಬರೆದಿದ್ದಾರೆ. ಅದಲ್ಲದೇ ಅವರು ಸಿಎಎ, ಎನ್‌ಆರ್‌ಸಿ ಮೂಲಕ ಸರಕಾರ ಉಂಟುಮಾಡಿರುವ ಬಿಕ್ಕಟ್ಟಿನ ಬಗ್ಗೆಯೂ ವ್ಯಾಪಕವಾಗಿ ಬರೆದಿದ್ದಾರೆ.

9. ಸೀಮಾ ಚಿಶ್ತಿ
ಸೀಮಾ ಚಿಶ್ತಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಾಗಿ ಕೆಲಸ ಮಾಡುತ್ತಾರೆ. ಅವರು ಭಾರತದಲ್ಲಿ ಬದಲಾವಣೆ ಮತ್ತು ಅಸ್ಮಿತೆಯ ಬಿಕ್ಕಟ್ಟಿನ ಕುರಿತಾಗಿಯೇ ಹೆಚ್ಚಾಗಿ ಬರೆದಿದ್ದಾರೆ. ವಾಟ್ಸಾಪ್‌ನಲ್ಲಿ ಪತ್ರಕರ್ತರು ಮತ್ತು ಮಾನವಹಕ್ಕುಗಳ ಹೋರಾಟಗಾರರ ಮೇಲೆ ಇಸ್ರೇಲಿನ ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಸರಕಾರ ಗುಪ್ತಚರ್ಯೆ ನಡೆಸಿದ ವಿಷಯವನ್ನು ಬಯಲಿಗೆಳೆದವರು ಇವರೇ.

10. ಸಂಗೀತಾ ಬರೂವಾ ಪಿಶರೋತಿ
ಸಂಗೀತಾ ಬರೂವಾ ಪಿಶರೋತಿ ಅವರು ‘ದಿ ವೈರ್’ನ ಸಹಸಂಪಾದಕಿ. ಅವರು ಅದರಲ್ಲಿ ಈಶಾನ್ಯ ರಾಜ್ಯಗಳ ಸಂಸ್ಕೃತಿ, ರಾಜಕೀಯ ಇತ್ಯಾದಿಗಳ ಬಗ್ಗೆ ಬರೆಯುತ್ತಾರೆ. ಹಿಂದೆ ಅವರು ದಿ ಹಿಂದೂ ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದರು. ಅವರು ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ‘ದಿ ವೈರ್’ನಲ್ಲಿ ವ್ಯಾಪಕವಾಗಿ ಬರೆದಿದ್ದಾರೆ.

ಅಸ್ಸಾಮಿನ ಮಹಿಳೆಯಾಗಿರುವುದರಿಂದ ಅಲ್ಲಿನ ನೈಜ ಪರಿಸ್ಥಿತಿಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು, ಅಲ್ಲಿನ ಪ್ರತಿಭಟನೆಗಳಿಗೆ ಕಾರಣವಾದ ವಿಷಯಗಳ ಬಗ್ಗೆ ಅತ್ಯುತ್ತಮ ವರದಿಗಾರಿಕೆ ಮಾಡಿದ್ದಾರೆ. ಅವರು ಅಸ್ಸಾಮಿನ ಹೃದಯ ಭಾಗವನ್ನೇ ಪ್ರವೇಶಿಸಿ, ವಿವಾಹಿತ ಮುಸ್ಲಿಂ ಮಹಿಳೆಯರು ಯಾವುದೇ ಜೀವನ ಮಾರ್ಗವಿಲ್ಲದೆ ನಿರ್ಗತಿಕರಾಗುವುದಕ್ಕೆ ಕಾರಣವಾದ ಎದೆ ಕಲಕುವ ಕಾನೂನು ತೊಡಕುಗಳ ಬಗ್ಗೆ ಬರೆದಿದ್ದಾರೆ.

ಈ ಹತ್ತು ಮಂದಿಯಲ್ಲದೆ ಗೌರವಾರ್ಹವಾಗಿ ಸ್ಮರಿಸಬಹುದಾದ ಇನ್ನೂ ಕೆಲವು ಪತ್ರಕರ್ತೆಯರಿದ್ದಾರೆ. ಇವರಲ್ಲಿ ನೇಹಾ ದೀಕ್ಷಿತ್ 2019ರಲ್ಲಿ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ನಿಂದ ‘ಇಂಟರ್ನ್ಯಾಷನಲ್ ಪ್ರೆಸ್ ಫ್ರೀಡಂ ಅವಾರ್ಡ್’ ಪಡೆದವರು. 2019ರಲ್ಲಿ ಅವರು ಪೊಲೀಸರ ಕಾನೂನು ಬಾಹಿರ ಹತ್ಯೆಗಳ ಬಗ್ಗೆಯೇ ಹೆಚ್ಚಾಗಿ ವರದಿ ಮಾಡಿದರು. ರೋಹಿಣಿ ಸಿಂಗ್ ‘ದಿ ವೈರ್’ ಮತ್ತು ಇತರ ಮಾಧ್ಯಮಗಳಿಗಾಗಿ ಬರೆಯುತ್ತಾರೆ. ಅವರು ಹಿಂದೆ ದಿ ಇಕನಾಮಿಕ್ ಟೈಮ್ಸ್‌ಗಾಗಿ ಬರೆಯುತ್ತಿದ್ದು, 2019ರಲ್ಲಿ “ಭಯೋತ್ಪಾದನೆಗಾಗಿ ಹಣ ಒದಗಿಸುವ” ಸಂಸ್ಥೆಯೊಂದರಿಂದ ಬಿಜೆಪಿ ಡೊನೇಷನ್ ಪಡೆದಿರುವುದನ್ನು ಬಯಲಿಗೆಳೆದಿದ್ದರು. ಅವರು ಸರಕಾರ ಬಳಸುತ್ತಿರುವ ಚುನಾವಣಾ ಬಾಂಡ್‌ಗಳ ಬಗ್ಗೆ ಚರ್ಚೆ ಎಬ್ಬಿಸುವುದಕ್ಕೆ ಕಾರಣರಾಗಿದ್ದರು.

(ಈ ರೀತಿಯಲ್ಲಿ ಸಾಧನೆ ಮಾಡಿರುವ ಎಲ್ಲಾ ಪತ್ರಕರ್ತೆಯರನ್ನು ಹುಡುಕಿ ಗುರುತಿಸುವ ಯಾವ ಹಾದಿಯೂ ಇಲ್ಲ. ಆದರೂ ನಾವು ಅವರಿಗೆ ಧನ್ಯವಾದ ಹೇಳಲೇಬೇಕು. ಗೌರಿಯ ನೆನಪಿನಲ್ಲಿ ಇಂತವರು ಇನ್ನಷ್ಟು ಹುಟ್ಟಿ ಬೆಳೆಯಲಿ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...