ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆಡಿದ ಮಾತುಗಳಿಗೆ ರಾಜ್ಯದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಚಿತ್ರದುರ್ಗ ಮತ್ತು ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಗಳು ನಡೆದಿದ್ದು ಪ್ರತಿಭಟನೆಗೆ ಕರೆ ಕೊಡಲಾಗಿದೆ.
ಬಹಳಷ್ಟು ಜನರು ಯತ್ನಾಳ್ ಮತ್ತು ಬಿಜೆಪಿ ಸಿಟ್ಟಿಗೆದ್ದಿದ್ದು ಟ್ವಿಟ್ಟರ್ ಅಭಿಯಾನಕ್ಕೆ ಕರೆ ಕೊಡಲಾಗಿದೆ. ಅಲ್ಲದೇ ಬರಗೂರು ರಾಮಚಂದ್ರಪ್ಪ, ಬಿ.ಟಿ. ಲಲಿತಾನಾಯಕ್, ಸಿದ್ಧನಗೌಡ ಪಾಟೀಲ್, ಕೆ.ಪಿ.ಸುರೇಶ, ಬಿ ಟಿ ಜಾಹ್ನವಿ, ಬಸೂ, ದಿನೇಶ್ ಅಮಿನ್ ಮಟ್ಟು, ಅರುಣ್ ಜೋಳದಕೂಡ್ಲಿಗಿ, ಬಿ. ಶ್ರೀಪಾದ ಭಟ್, ಅಕ್ಷತಾ ಹುಂಚದಕಟ್ಟೆ, ಬಿದಲೋಟಿ ರಂಗನಾಥ್, ಎಲ್.ಎನ್. ಮುಕುಂದರಾಜ್ ಸೇರಿದಂತೆ ನೂರಾರು ಪ್ರಗತಿಪರರು ಸಹಿ ಮಾಡಿರುವ ಖಂಡನಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಖಂಡನಾ ಹೇಳಿಕೆ ಕೆಳಗಿನಂತಿದೆ.
ನಾಡಿನ ಸಾಕ್ಷಿಪ್ರಜ್ಞೆ, ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ, ಶ್ರೀ ಎಚ್.ಎಸ್. ದೊರೆಸ್ವಾಮಿಯವರ ಕುರಿತು ಶಾಸಕ ಬಸನಗೌಡ ಯತ್ನಾಳ್ ಅವಹೇಳನಕಾರಿ ಮಾತುಗಳ ವಿರುದ್ಧ ಖಂಡನಾ ಹೇಳಿಕೆ ಕೆಳಗಿನಂತಿದೆ.
ನಿಮಗೆ ತಿಳಿದಿರುವಂತೆ ನಿನ್ನೆ ಬಿಜಾಪುರದ ಒಂದು ಸಭೆಯಲ್ಲಿ ಶಾಸಕ ಬಸನಗೌಡ ಯತ್ನಾಳ್, ಸಂದರ್ಭವೇ ಇಲ್ಲದಿದ್ದರೂ ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿಯವರ ವಿಚಾರ ಎಳೆತಂದು, ಅತ್ಯಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. 102 ವರ್ಷಗಳ ಹಿರಿಯ ಜೀವ, ನಾಡಿನ ಸಾಕ್ಷಿಪ್ರಜ್ಞೆ, ಎಲ್ಲ ಜನಪರ ಚಿಂತನೆ-ಚಳವಳಿಗಳ ಒಡನಾಡಿಯಾಗಿರುವ ಶ್ರೀ ದೊರೆಸ್ವಾಮಿಯವರು ಕರ್ನಾಟಕಕ್ಕೆ ಮಾತ್ರವಲ್ಲ, ನಮ್ಮ ದೇಶದ ಆಸ್ತಿ. ನಮ್ಮೆಲ್ಲರ ಹೆಮ್ಮೆ. ಅಂತಹವರ ಕುರಿತಾಗಿ, ಸ್ವತಃ ಯಾವುದೇ ಒಳ್ಳೆಯ ಕೆಲಸ ಮಾಡಿರದ, ಜನರ ಪರವಾದ ಚಿಂತನೆಯಾಗಲಿ, ಕ್ರಿಯೆಯಾಗಲಿ ಇಲ್ಲದ ಒಬ್ಬ ವ್ಯಕ್ತಿ ಈ ರೀತಿಯ ಮಾತುಗಳನ್ನಾಡುವುದು ಅತ್ಯಂತ ಆಕ್ಷೇಪಾರ್ಹವಾದುದು.
ಈಗ ಶಾಸಕನಾಗಿರುವ ಈ ಬಸನಗೌಡ ಯತ್ನಾಳ್ ತಾನೇ ಚುನಾವಣಾ ಆಯೋಗಕ್ಕೆ ಕೊಟ್ಟ ಮಾಹಿತಿಯ ಪ್ರಕಾರ, ಆತನ ವಿರುದ್ಧ ‘ವಂಚನೆ, ಶಾಂತಿಗೆ ಭಂಗ ತಂದಿರುವುದು, ಗಲಭೆಗೆ ಕುಮ್ಮಕ್ಕು’ ಸೇರಿದಂತೆ ಸುಮಾರು 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಂತಹ ವ್ಯಕ್ತಿ ಶ್ರೀ ದೊರೆಸ್ವಾಮಿಯಂತಹ ಪ್ರಮಾಣಿಕ, ಸಜ್ಜನ, ಬದ್ಧತೆಯುಳ್ಳ ಹೋರಾಟಗಾರರನ್ನು “ಪಾಕಿಸ್ತಾನದ ಏಜೆಂಟ್, ಆತ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಅವನು ಗುಂಡಿಗೆ ಬಲಿಯಾಗುತ್ತಾನೆ” ಇತ್ಯಾದಿಯಾಗಿ ಏಕವಚನದಲ್ಲಿ ಮಾತಾಡಿರುವುದು ಕನ್ನಡಿಗರಾದ ನಮ್ಮೆಲ್ಲರಲ್ಲಿ ಅಪಾರ ಆಕ್ರೋಶ ಹುಟ್ಟಿಸಿದೆ.
ಸ್ವಾತಂತ್ರ್ಯ ಚಳವಳಿಯಲ್ಲಿ ಶ್ರೀ ದೊರೆಸ್ವಾಮಿಯವರ ಪಾತ್ರವೇನು ಎಂಬ ಬಗ್ಗೆ ಅಧಿಕೃತ ದಾಖಲೆಗಳು ಲಭ್ಯವಿದ್ದು, ಅದು ಚರಿತ್ರೆಯಲ್ಲಿ ಈಗಾಗಲೇ ಗಟ್ಟಿಯಾಗಿ ದಾಖಲಾಗಿರುವ ಸಂಗತಿಯಾಗಿದೆ. ಅವರು ಕೇವಲ ಬ್ರಿಟೀಷರನ್ನು ಭಾರತದಿಂದ ಓಡಿಸುವುದಕ್ಕಷ್ಟೆ ಸೀಮಿತವಾಗದೆ, ಒಂದು ಸುಂದರ, ಸಮಾನ, ಸಹಬಾಳ್ವೆಯ ಭಾರತವನ್ನು ಕಟ್ಟುವ ಕನಸನ್ನಿಟ್ಟುಕೊಂಡು ನಿರಂತರವಾಗಿ ಶ್ರಮಿಸುತ್ತಾ ಬಂದ ಅಪರೂಪದ ಗಾಂಧಿವಾದಿ ಹೋರಾಟಗಾರರು. ಮಹಾತ್ಮಾ ಗಾಂಧೀಜಿಯವರ ಒಡನಾಡಿಯಾಗಿದ್ದ ಈ ಮಹಾನ್ ಚೇತನ ಇಂದಿಗೂ ಅವರಂತೆಯೆ ಸತ್ಯಪಕ್ಷಪಾತಿಯಾಗಿ, ನೇರನಿಷ್ಠುರಿಯಾಗಿ, ನಾಡಿನ ಜನತೆಯ ಹಿತಾಸಕ್ತಿಗೆ ಮತ್ತು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನುಡಿಯುತ್ತಾ, ನಡೆಯುತ್ತಾ ಬಂದಿರುವುದು, ಯತ್ನಾಳನಂತಹ ಹೊಣೆಗೇಡಿಗಳಿಗೆ ನುಂಗಲಾರದ ತುತ್ತಾಗಿದೆ. ಆತನ ಇಂತಹ ಮಾತುಗಳು ಶ್ರೀ ದೊರೆಸ್ವಾಮಿಯವರಿಗೆ ಮಾತ್ರವಲ್ಲ, ಇಡೀ ಸ್ವಾತಂತ್ರ್ಯ ಚಳವಳಿಗೇ ಬಗೆದ ಅಪಚಾರವಾಗಿದೆ.
ಯತ್ನಾಳನಿಗಾಗಲಿ ಅವರ ಪಕ್ಷಕ್ಕಾಗಲೀ, ಸ್ವಾತಂತ್ರ್ಯ ಚಳವಳಿಯ ಗಂಧಗಾಳಿ ಗೊತ್ತಿಲ್ಲ. ಇಡೀ ಭಾರತದ ಜನತೆ ಜಾತಿ-ಧರ್ಮ ಬೇಧಬಿಟ್ಟು ಒಗ್ಗೂಡಿ, ಪರಕೀಯರನ್ನು ಭಾರತ ಬಿಟ್ಟು ತೊಲಗಿಸುವ ಮತ್ತು ಸ್ವತಂತ್ರ, ಸಮಾನ ಭಾರತ ಕಟ್ಟುವ ಉದ್ದೇಶದಿಂದ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿರುವಾಗ, ಅದರಲ್ಲೇ ಕೋಮುವಾದದ ಹುಳಿಹಿಂಡುತ್ತಾ ಸ್ವಾತಂತ್ರ್ಯ ಚಳವಳಿಗೇ ದ್ರೋಹ ಬಗೆದ ಪಕ್ಷ ಅದು. ಅಂತಹ ಪಕ್ಷದೊಳಗೆ ಯತ್ನಾಳನಂತಹವರನ್ನೇ ಸಾಕಿಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಅನೇಕರು ಇತ್ತೀಚೆಗೆ ಜೀವಪರವಾದ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ, ಎನ್ಪಿಆರ್-ಎನ್ಆರ್ಸಿಯಂತಹ ಜೀವವಿರೋಧಿತನವನ್ನು ವಿರೋಧಿಸುವವರ ಮೇಲೆ ದಾಳಿ ಮಾಡುತ್ತಿರುವುದನ್ನು, ಸ್ವತಂತ್ರ ಚಿಂತನೆಗೆ ಬೆದರಿಕೆ ಒಡ್ಡುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಏಕೆ, ಸರ್ಕಾರದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕವಿಗಳು, ಪತ್ರಕರ್ತರು, ಶಿಕ್ಷಕರು, ಹೋರಾಟಗಾರರು, ಸಾರ್ವಜನಿಕರು- ಎಲ್ಲರ ಮೇಲೆ ದೇಶದ್ರೋಹದ ಆರೋಪ ಹೊರಿಸುತ್ತಾ ಬಂಧಿಸುತ್ತಿರುವುದನ್ನೂ ನೋಡುತ್ತಿದ್ದೇವೆ. ಇದು ಭಯಭೀತಿಯ ವಾತಾವರಣ ಸೃಷ್ಟಿಸುತ್ತಾ, ಕೋಮುಗಲಭೆಗಳಿಗೆ ಪ್ರಚೋದನೆ ನೀಡುತ್ತಾ, ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ.
ಆದ್ದರಿಂದ, ಸಂವಿಧಾನ ವಿರೋಧಿಯಾದ ಈ ಎಲ್ಲ ಬೆಳವಣಿಗೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭಾರತವು, ಎಂದಿಗೂ ಶಾಂತಿ-ಸಹಬಾಳ್ವೆಯ ನಾಡಾಗಿ ಉಳಿಯಬೇಕು ಮತ್ತು ಹಾಗಾದಾಗ ನಾವು ನಿಜವಾಗಿಯೂ ಅಭಿವೃದ್ಧಿಪಥದಲ್ಲಿ ಸಾಗಲು ಸಾಧ್ಯ ಎಂದು ಭಾವಿಸುತ್ತೇವೆ.
ಆದ್ದರಿಂದ, ಕೆಳಗೆ ಸಹಿ ಮಾಡಿರುವ ನಾವೆಲ್ಲರೂ, ಈ ಆಗ್ರಹಗಳನ್ನು ಮುಂದಿಡುತ್ತಿದ್ದೇವೆ.
1.ಶಾಸಕ ಬಸನಗೌಡ ಯತ್ನಾಳ್ ಮೇಲೆ, ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ, ಸ್ವಾತಂತ್ರ್ಯ ಚಳವಳಿಯನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಕ್ಕೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ಶ್ರೀ ದೊರೆಸ್ವಾಮಿಯವರ ಬಗ್ಗೆ ಅತ್ಯಂತ ಆಕ್ಷೇಪಾರ್ಹವಾಗಿ ಮಾತನಾಡಿದ್ದಕ್ಕೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು.
2.ಶ್ರೀ ದೊರೆಸ್ವಾಮಿಯವರ ಕುರಿತು “ಅವನು ಗುಂಡಿಗೆ ಬಲಿಯಾಗುತ್ತಾನೆ” ಎಂದು ಹೇಳಿರುವುದು ಕೊಲೆಗೆ ಪ್ರಚೋದನೆ ಮಾಡುವಂತಹ ಹೇಳಿಕೆಯಾಗಿದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಯತ್ನಾಳ್ ಮೇಲೆ ಕೊಲೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆಯೂ ಕ್ರಮ ಕೈಗೊಳ್ಳಬೇಕು.
3.ಯತ್ನಾಳ್ ಸಂವಿಧಾನದ 51 ಎ (ಬಿ) ಉಲ್ಲಂಘಿಸಿದ್ದು ಅವರ ಶಾಸಕ ಸ್ಥಾನದಿಂದ ಪದಚ್ಯುತಗೊಳಿಸಿ
4.ಯತ್ನಾಳ್ ಮಾತನಾಡಿದ ಅಪಾಯಕಾರಿ ಮಾತುಗಳ ಹೊಣೆ ಹೊತ್ತು, ಗೃಹಮಂತ್ರಿ ರಾಜೀನಾಮೆ ನೀಡಬೇಕು.
5.ಹೀಗೆಯೆ ಬೇಕಾಬಿಟ್ಟಿ ಮಾತಾನಾಡುತ್ತಿರುವ, ಬಿಜೆಪಿ ಪಕ್ಷದ ಅನೇಕ ಪದಾಧಿಕಾರಿಗಳು ಮತ್ತು ಇನ್ನಿತರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
6. ಶ್ರೀ ದೊರೆಸ್ವಾಮಿಯವರು, ನಮ್ಮೆಲ್ಲರಿಗೂ ಮಾರ್ಗದರ್ಶಕರೂ ನಮ್ಮ ಸ್ಫೂರ್ತಿಯ ಸೆಲೆಯೂ ಆಗಿದ್ದಾರೆ. ಆದ್ದರಿಂದ, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರ ಕ್ರಮ ಜರುಗಿಸುವವರೆಗೆ ರಾಜ್ಯದ ಎಲ್ಲ ಜನಪರ ಸಂಘಟನೆಗಳು, ಚಿಂತಕರು, ಗಾಂಧಿವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಜವಾಬ್ದಾರಿಯುಳ್ಳ ನಾಗರೀಕರ ಒಗ್ಗಟ್ಟಿನ ಹೋರಾಟ ಈ ನಿಟ್ಟಿನಲ್ಲಿ ನಿರಂತರವಾಗಿ ನಡೆಯಲಿದೆ.
ನಮ್ಮ ದೊರೆಸ್ವಾಮಿ, ನಮ್ಮ ಹೆಮ್ಮೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.