ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನ ಟೌನ್ ಹಾಲ್ ಎದುರು ಶಾಂತಿಯುತ ಪ್ರತಿಭಟನೆ ನಡೆದಿದೆ. ಈ ವೇಳೆ ನಿಷೇದಾಜ್ಞೆ ಉಲ್ಲಂಘಿಸಿದ ಕಾರಣಕ್ಕಾಗಿ ಪೊಲೀಸರು ಪ್ರತಿಭಟನಾಕಾರರನ್ನು ಎಳೆದಾಡಿ, ಹಲ್ಲೆ ನಡೆಸಿ ಡಾ.ವಾಸು ಸೇರಿದಂತೆ ಹಲವು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ನಿಗಧಿಯಂತೆ ಪುರ್ವಾನುಮತಿ ಪಡೆದು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಜನಶಕ್ತಿಯ ಡಾ.ಎಚ್.ವಿ ವಾಸು, ಸಂಜಯ್, ಮಲ್ಲಿಗೆ ಸ್ವರಾಜ್ ಇಂಡಿಯಾದ ಮನೋಹರ್ ಇಳವರ್ತಿ, ವಕೀಲರಾದ, ನರಸಿಂಹಮೂರ್ತಿ, ವಿನಯ್ ಶ್ರೀನಿವಾಸನ್ ಸೇರಿದಂತೆ ಹಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಚ್.ವಿ ವಾಸು “ಈ ದೇಶದ ಮೂಲ ಪರಿಕಲ್ಪನೆ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣುವಂತೆ ನಮ್ಮ ಸಂವಿಧಾನ ಹೇಳುತ್ತದೆ. ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿಯನ್ನು ನಾವು ವಿರೋಧಿಸುತ್ತೇವೆ. ಇದು ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ರವರ ದೇಶ ಅಲ್ಲ ಇದು. ಮಹಾತ್ಮ ಗಾಂಧಿ, ಮೌಲನಾ ಅಬ್ದುಲ್, ಭಗತ್ ಸಿಂಗ್ ಸೇರಿದಂತೆ ಈ ದೇಶದ ಸ್ವಾತಂತ್ರ ಚಳವಳಿಯಲ್ಲಿ ಹಿಂದೂ ಮುಸ್ಲಿಂರು ಸೇರಿದಂತೆ ಎಲ್ಲ ಧರ್ಮಿಯರು ಭಾಗವಹಿಸಿದ್ದಾರೆ ಎಂಬುದನ್ನು ನಾವು ಮರೆಯಬಾರದು. 1927 ಡಿಸೆಂಬರ್ 19 ರಂದು ಪ್ರಾಣ ಸ್ನೇಹಿತರಾಗಿದ್ದ ಅಶ್ವಾಕುಲ್ಲಾ ಖಾನ್ ಮತ್ತು ರಾಮಪ್ರಸಾದ್ ಬಿಸ್ಮಿಲ್ ಭಾರತದ ಸ್ವಾತಂತ್ರಕ್ಕಾಗಿ ಹುತಾತ್ಮರಾದ ದಿನ ಇಂದು. ಹಾಗಾಗಿ ಅನ್ಯಾಯವೇ ಕಾನೂನಾಗುತ್ತಿರುವಾಗ ಪ್ರತಿರೋಧಿಸುವುದು ನಮ್ಮ ಕರ್ತವ್ಯ ಎಂದು ತಿಳಿದು ಶಾಂತಿಯುತ ಪ್ರತಿಭಟನೆ ನಡೆಸುತ್ತೇವೆ” ಎಂದರು.
ಪೊಲೀಸರ ಈ ದೌರ್ಜನ್ಯವನ್ನು ಖಂಡಿಸುತ್ತೇವೆ. ಬಂಧಿಸಿದ ಮಾತ್ರಕ್ಕೆ ಪ್ರತಿಭಟನೆ ನಿಲ್ಲುವುದಿಲ್ಲ. ರಾಜ್ಯದ್ಯಂತ ಪ್ರತಿಭಟನೆ ಇನ್ನು ತೀವ್ರವಾಗಲಿದೆ. ನೋ ವೈಲೆನ್ಸ್, ನೋ ಸೈಲೆನ್ಸ್ ಎಂದು ಡಾ.ವಾಸು ಎಚ್.ವಿ ಹೇಳಿದ್ದಾರೆ.
ಪೊಲೀಸರು ಮಹಿಳೆಯರು, ಮಕ್ಕಳು ಎಂಬುದನ್ನು ನೋಡದೇ ಪ್ರತಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪ್ರತಿಭಟನೆಗೆ ಅನುಮತಿ ಪಡೆದಿದ್ದರಲ್ಲ ಎಂಬ ಪ್ರಶ್ನೆಗೆ ನಾನು ಮೊದಲು ಪ್ರತಿಭಟನೆಗೆ ಅನುಮತಿ ಕೊಟ್ಟಿದ್ದು ನಿಜ. ಆದರೆ ನಿಷೇದಾಜ್ಞೆ ಘೋಷಣೆಯಾದ ಮೇಲೆ ಎಲ್ಲಾ ಅನುಮತಿಗಳನ್ನು ರದ್ದುಗೊಳಿಸಿದ್ದೇವೆ. ಪ್ರತಿಭಟನಾಕಾರರ ಮೇಲೆ ಕ್ರಮಜರುಗಿಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಹೇಳಿದ್ದಾರೆ.