Homeಅಂತರಾಷ್ಟ್ರೀಯನೇಪಾಳ: ಮಂಗಳವಾರವೂ ಸಂಸತ್ತಿಗೆ ನುಗ್ಗಿದ ಪ್ರತಿಭಟನಾಕಾರರು; ಹಲವು ಉನ್ನತ ರಾಜಕೀಯ ನಾಯಕರ ಮನೆಗಳು ಬೆಂಕಿಗಾಹುತಿ

ನೇಪಾಳ: ಮಂಗಳವಾರವೂ ಸಂಸತ್ತಿಗೆ ನುಗ್ಗಿದ ಪ್ರತಿಭಟನಾಕಾರರು; ಹಲವು ಉನ್ನತ ರಾಜಕೀಯ ನಾಯಕರ ಮನೆಗಳು ಬೆಂಕಿಗಾಹುತಿ

- Advertisement -
- Advertisement -

ನೇಪಾಳದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸತತ ಎರಡನೇ ದಿನವಾದ ಮಂಗಳವಾರವೂ ಸಂಸತ್ತಿನ ಗೋಡೆಗಳನ್ನು ಭೇದಿಸಿ ಫೆಡರಲ್ ಸಂಸತ್ತಿನ ಕಟ್ಟಡಕ್ಕೆ ನುಗ್ಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಓಲಿ ಮಂಗಳವಾರ (ಸೆಪ್ಟೆಂಬರ್ 9) ರಾಜೀನಾಮೆ ನೀಡಿದ್ದಾರೆ ಎಂದು ಅವರ ಸಚಿವಾಲಯ ಘೋಷಿಸಿದೆ.

“ದೇಶದಲ್ಲಿ ನೆಲೆಸಿರುವ ಅಸಾಮಾನ್ಯ ಪರಿಸ್ಥಿತಿಯನ್ನು ಪರಿಗಣಿಸಿ ಮತ್ತು ಸಂವಿಧಾನಾತ್ಮಕ ರಾಜಕೀಯ ಪರಿಹಾರ ಹಾಗೂ ಸಮಸ್ಯೆ ನಿವಾರಣೆಯತ್ತ ಹೆಚ್ಚಿನ ಪ್ರಯತ್ನಗಳಿಗೆ ಅನುಕೂಲವಾಗುವಂತೆ, ನಾನು ಸಂವಿಧಾನದ ಆರ್ಟಿಕಲ್ 77(1)a ಅಡಿಯಲ್ಲಿ ಪ್ರಧಾನಿ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತೇನೆ” ಎಂದು ಓಲಿ ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ‘ದಿ ಹಿಮಾಲಯನ್ ವರದಿ’ ಮಾಡಿದೆ.

ಮಂಗಳವಾರ (ಸೆಪ್ಟೆಂಬರ್ 9) ನೇಪಾಳದಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಪ್ರತಿಭಟನಾಕಾರರು ಸೋಮವಾರ ಮಧ್ಯಾಹ್ನ ಜಾರಿಗೆ ಬಂದಿದ್ದ ಕರ್ಫ್ಯೂ ಅನ್ನು ಧಿಕ್ಕರಿಸಿ, ದೇಶದ ಉನ್ನತ ರಾಜಕೀಯ ನಾಯಕತ್ವದ ಮನೆಗಳು ಮತ್ತು ಕಚೇರಿಗಳಿಗೆ ಬೆಂಕಿ ಹಚ್ಚಿದರು. ಇದರಲ್ಲಿ ಭಕ್ತಪುರದ ಬಾಲಕೋಟ್‌ನಲ್ಲಿರುವ ಓಲಿಯವರ ಖಾಸಗಿ ನಿವಾಸವೂ ಸೇರಿತ್ತು.

ಬೆಂಕಿಗೆ ಆಹುತಿಯಾದ ಇತರ ಮನೆಗಳಲ್ಲಿ ರಾಷ್ಟ್ರಪತಿ ಪೌಡೆಲ್, ಮಾಜಿ ಗೃಹ ಸಚಿವ ರಮೇಶ್ ಲೇಖಕ್, ನೇಪಾಳಿ ಕಾಂಗ್ರೆಸ್ ನಾಯಕ ಶೇರ್ ಬಹದ್ದೂರ್ ದೇವುಬಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ ಮಾವೋವಾದಿ ನಾಯಕ ಪುಷ್ಪ ಕಮಲ್ ದಹಲ್ ಅವರ ಮನೆಗಳು ಸೇರಿವೆ. ನೇಪಾಳಿ ವಿದೇಶಾಂಗ ಸಚಿವ ಅರ್ಜು ದೇವುಬಾ ರಾಣಾ ಅವರಿಗೆ ಸೇರಿದ ಶಾಲೆಯೊಂದಕ್ಕೂ ಬೆಂಕಿ ಹಚ್ಚಲಾಗಿದೆ ಎಂದು ಎಪಿ ವರದಿ ಮಾಡಿದೆ.

ಕಠ್ಮಂಡು ಪೋಸ್ಟ್ ಪತ್ರಿಕೆಯು ವರದಿ ಮಾಡಿರುವ ಪ್ರಕಾರ, ಬೆಂಕಿ ಹಚ್ಚುವುದು ಮತ್ತು ವಿಧ್ವಂಸಕ ಕೃತ್ಯಗಳ ವರದಿಗಳ ಹಿನ್ನೆಲೆಯಲ್ಲಿ ನೇಪಾಳ ಸೇನೆಯು ಹೆಲಿಕಾಪ್ಟರ್‌ಗಳನ್ನು ಬಳಸಿ ಮಂತ್ರಿಗಳನ್ನು ಅವರ ನಿವಾಸಗಳಿಂದ ಸ್ಥಳಾಂತರಿಸಲು ಪ್ರಾರಂಭಿಸಿದೆ.

ಪ್ರತಿಭಟನೆಗಳು ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಓಲಿ ಮಂಗಳವಾರ ಸಂಜೆ ಸರ್ವಪಕ್ಷ ಸಭೆಯನ್ನು ಘೋಷಿಸಿದ್ದರು. “ಸೋಮವಾರ ರಾಜಧಾನಿ ಮತ್ತು ದೇಶಾದ್ಯಂತ ನಡೆದ ಪ್ರತಿಭಟನೆಗಳು ಮತ್ತು ನಂತರದ ಘಟನೆಗಳಿಂದ ನನಗೆ ನೋವಾಗಿದೆ” ಎಂದು ಅವರು ಹೇಳಿದ್ದರು. “ಯಾವುದೇ ರೀತಿಯ ಹಿಂಸಾಚಾರವು ದೇಶದ ಹಿತಾಸಕ್ತಿಗೆ ಮಾರಕವಾಗಿದೆ ಮತ್ತು ನಾವು ಶಾಂತಿಯುತ ಹಾಗೂ ಸಂವಾದ ಆಧಾರಿತ ಪರಿಹಾರವನ್ನು ಕಂಡುಕೊಳ್ಳಬೇಕು” ಎಂದು ಅವರು ಹೇಳಿದ್ದರು.

ಪ್ರಧಾನ ಮಂತ್ರಿಯು ಬಿಕ್ಕಟ್ಟನ್ನು ಕೊನೆಗೊಳಿಸಲು ಸಂಬಂಧಿಸಿದ ಎಲ್ಲ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದರು.

ಪ್ರಮುಖ ಅಧಿಕಾರಿಗಳಿಂದ ಸಂಯಮ ವಹಿಸುವಂತೆ ಕರೆ

ನೇಪಾಳ ಸೇನೆಯ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ಸೇರಿದಂತೆ ಹಲವಾರು ಪ್ರಮುಖ ನೇಪಾಳಿ ಅಧಿಕಾರಿಗಳು ಜಂಟಿ ಮನವಿ ಬಿಡುಗಡೆ ಮಾಡಿ, ಯುವ ಪ್ರತಿಭಟನಾಕಾರರಿಗೆ ಸಂಯಮ ವಹಿಸುವಂತೆ ಕರೆ ನೀಡಿದರು.

“ಪ್ರಧಾನಮಂತ್ರಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯನ್ನು ಈಗ ಅಂಗೀಕರಿಸಲಾಗಿದೆ. ಎಲ್ಲ ನಾಗರಿಕರು ಶಾಂತಿಯಿಂದ ಇರುವಂತೆ ಮತ್ತು ಜೀವ ಹಾಗೂ ಆಸ್ತಿಗೆ ಮತ್ತಷ್ಟು ಹಾನಿಯಾಗುವುದನ್ನು ತಪ್ಪಿಸುವಂತೆ ನಾವು ಮನಃಪೂರ್ವಕವಾಗಿ ಒತ್ತಾಯಿಸುತ್ತೇವೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

“ರಾಜಕೀಯ ಸಂವಾದದ ಮೂಲಕ ತ್ವರಿತ ಮತ್ತು ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಎಲ್ಲ ಸಂಬಂಧಿತ ಪಕ್ಷಗಳನ್ನು ನಾವು ಕರೆಯುತ್ತೇವೆ” ಎಂದಿದ್ದಾರೆ.

ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮೇಯರ್ ಬಾಲೆಂದ್ರ ಶಾ ಅವರು, ಪ್ರಧಾನಿ ರಾಜೀನಾಮೆ ನೀಡಬೇಕೆಂಬ ಹೋರಾಟಗಾರರ ಬೇಡಿಕೆ ಈಡೇರಿದ್ದರಿಂದ ಪ್ರತಿಭಟನಾಕಾರರಿಗೆ ಸಂಯಮ ವಹಿಸುವಂತೆ ಒತ್ತಾಯಿಸಿದರು.

“ಪ್ರಿಯ ಜೆನ್ ಝೆಡ್, ಸರ್ಕಾರದ ರಾಜೀನಾಮೆಗಾಗಿ ನಿಮ್ಮ ಬೇಡಿಕೆ ಈಡೇರಿದೆ. ಈಗ ಸಂಯಮದಿಂದ ಇರಬೇಕಾದ ಸಮಯ” ಎಂದು ಅವರು ಬರೆದಿದ್ದಾರೆ. ಬಾಲೆಂದ್ರ ಶಾ ಅವರು ಪ್ರಸ್ತುತ ಯುವ ನೇಪಾಳಿಗಳಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ನೇಪಾಳದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಗೆ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ನಿಷೇಧವು ಕಾರಣವಾಗಿದೆ. ಇದರ ಜೊತೆಗೆ, ವ್ಯಾಪಕ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಓಲಿ ಸರ್ಕಾರದ ವಿರುದ್ಧದ ಅಸಮಾಧಾನವೂ ಇದಕ್ಕೆ ಕಾರಣವಾಗಿತ್ತು.

ಸ್ವಯಂಪ್ರೇರಿತವಾಗಿ ನಡೆದ ಈ ಪ್ರತಿಭಟನೆಗಳು, ಸರ್ಕಾರದ ಬಗ್ಗೆ ಹೆಚ್ಚುತ್ತಿರುವ ಅಸಮಾಧಾನ, ರಾಜಕೀಯ ವೈಫಲ್ಯ ಮತ್ತು ಭ್ರಷ್ಟಾಚಾರದ ಆರೋಪಗಳ ಪರಿಣಾಮ ಎಂದು ಪರಿಗಣಿಸಲಾಗಿದೆ.

ಮಂತ್ರಿಗಳು ರಾಜೀನಾಮೆ, ಕರ್ಫ್ಯೂ ಜಾರಿ

ಸೋಮವಾರ ಪ್ರತಿಭಟನೆಗಳು ಆರಂಭವಾದಾಗಿನಿಂದ ಮೂರು ಮಂತ್ರಿಗಳು ರಾಜೀನಾಮೆ ನೀಡಿದ್ದಾರೆ.

ನೇಪಾಳದ ಗೃಹ ಸಚಿವ ರಮೇಶ್ ಲೇಖಕ್ ಸೋಮವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಓಲಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. ನಂತರ ಕೃಷಿ ಸಚಿವ ರಾಮನಾಥ್ ಅಧಿಕಾರ ಮತ್ತು ಜಲಸಂಪನ್ಮೂಲ ಸಚಿವ ಪ್ರದೀಪ್ ಯಾದವ್ ಕೂಡ ರಾಜೀನಾಮೆ ನೀಡಿದರು.

ಮಂಗಳವಾರ ಕಠ್ಮಂಡು, ಲಲಿತ್ಪುರ್ ಮತ್ತು ಭಕ್ತಪುರ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ, ಸಾರ್ವಜನಿಕರನ್ನು ಬೀದಿಗಿಳಿಯದಂತೆ ತಡೆಯಲು ಇದು ಹೆಚ್ಚು ಯಶಸ್ವಿಯಾಗಲಿಲ್ಲ.

ಕಳೆದ ವಾರ, ನೇಪಾಳ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದ ಅನ್ವಯ, 2023ರ ನಿರ್ದೇಶನಗಳ ಪ್ರಕಾರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ನೋಂದಾಯಿಸಿಕೊಳ್ಳದ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಿತು.

ಆ ಸಮಯದಲ್ಲಿ, ಮೆಟಾ, ಆಲ್ಫಬೆಟ್, ಎಕ್ಸ್, ರೆಡ್ಡಿಟ್ ಮತ್ತು ಲಿಂಕ್ಡ್‌ಇನ್ ಸೇರಿದಂತೆ ಯಾವುದೇ ದೊಡ್ಡ ಜಾಗತಿಕ ಕಂಪನಿಗಳು ಸಚಿವಾಲಯದಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿರಲಿಲ್ಲ. ಮತ್ತೊಂದೆಡೆ, ಟಿಕ್‌ಟಾಕ್, ಟೆಲಿಗ್ರಾಮ್ ಮತ್ತು ವೈಬರ್ ಸೇರಿದಂತೆ ಕೆಲವು ವೇದಿಕೆಗಳು ನೋಂದಣಿಯಾಗಿದ್ದವು ಅಥವಾ ನೋಂದಣಿಗೆ ಅರ್ಜಿ ಸಲ್ಲಿಸಿದ್ದವು.

ಸಾಮಾಜಿಕ ಮಾಧ್ಯಮ ನಿಷೇಧವನ್ನು ಹಿಂತೆಗೆದುಕೊಂಡರೂ, ಮಂಗಳವಾರ ಕಠ್ಮಂಡು ಕಣಿವೆಯ ನ್ಯೂ ಬಾನೇಶ್ವರ್, ಕಲಂಕಿ ಮತ್ತು ಚಾಪಗೌನ್ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಮುಂದುವರಿದವು. ಪ್ರತಿಭಟನಾಕಾರರು ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದರು ಮತ್ತು ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಫೆಡರಲ್ ಸಂಸತ್ ಕಟ್ಟಡದ ಬಳಿ ಪೊಲೀಸರು ಹಲವಾರು ಜನರನ್ನು ಬಂಧಿಸಿದರು.

ಭಾರತ, ಯುಕೆ, ಯುಎಸ್ ಮತ್ತು ಇತರ ದೇಶಗಳಿಂದ ಸಂಯಮಕ್ಕೆ ಕರೆ

ಮಂಗಳವಾರ ಬೆಳಿಗ್ಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಾರತವು, ನೇಪಾಳದ ಪ್ರತಿಭಟನೆಗಳಲ್ಲಿ “ಹಲವು ಯುವ ಜೀವನಗಳ ನಷ್ಟದಿಂದ ತೀವ್ರವಾಗಿ ದುಃಖಿತವಾಗಿದೆ” ಎಂದು ತಿಳಿಸಿದೆ ಮತ್ತು ಈ ಬಿಕ್ಕಟ್ಟನ್ನು “ಶಾಂತಿಯುತ ವಿಧಾನ ಮತ್ತು ಸಂವಾದದ” ಮೂಲಕ ಬಗೆಹರಿಸುವಂತೆ ಒತ್ತಾಯಿಸಿದೆ.

ಭಾರತವು ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡವರಿಗೆ ಶೀಘ್ರ ಗುಣಮುಖರಾಗಲೆಂದು ಹಾರೈಸಿದೆ. “ನಿಕಟ ಸ್ನೇಹಿತ ಮತ್ತು ನೆರೆಯ ದೇಶವಾಗಿ, ಎಲ್ಲರೂ ಸಂಯಮ ವಹಿಸಿ ಮತ್ತು ಶಾಂತಿಯುತ ವಿಧಾನ ಮತ್ತು ಸಂವಾದದ ಮೂಲಕ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ನಾವು ಆಶಿಸುತ್ತೇವೆ” ಎಂದು ಹೇಳಿಕೆ ತಿಳಿಸಿದೆ.

ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್, ಫ್ರಾನ್ಸ್, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ನೇಪಾಳದ ರಾಯಭಾರ ಕಚೇರಿಗಳು ಸೋಮವಾರ ಸಂಜೆ ಜಂಟಿ ಹೇಳಿಕೆ ನೀಡಿದವು.

“ಕಠ್ಮಂಡು ಮತ್ತು ನೇಪಾಳದ ಇತರ ಭಾಗಗಳಲ್ಲಿ ಇಂದು ನಡೆದ ಹಿಂಸಾಚಾರದಿಂದ, ವಿಶೇಷವಾಗಿ ಪ್ರದರ್ಶನಗಳ ಸಮಯದಲ್ಲಿ ಸಂಭವಿಸಿದ ಜೀವಹಾನಿ ಮತ್ತು ಗಾಯಗಳಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಮೃತರ ಕುಟುಂಬಗಳಿಗೆ ಮತ್ತು ಇದರಿಂದ ಬಾಧಿತರಾದ ಎಲ್ಲರಿಗೂ ನಾವು ನಮ್ಮ ಪ್ರಾಮಾಣಿಕ ಸಂತಾಪಗಳನ್ನು ತಿಳಿಸುತ್ತೇವೆ ಮತ್ತು ಗಾಯಗೊಂಡವರು ಶೀಘ್ರವಾಗಿ ಪೂರ್ಣ ಗುಣಮುಖರಾಗಲೆಂದು ಹಾರೈಸುತ್ತೇವೆ. ಶಾಂತಿಯುತ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾರ್ವತ್ರಿಕ ಹಕ್ಕುಗಳಿಗೆ ನಮ್ಮ ಸರ್ಕಾರಗಳು ಬಲವಾದ ಬೆಂಬಲವನ್ನು ಪುನರುಚ್ಚರಿಸುತ್ತವೆ. ಎಲ್ಲ ಪಕ್ಷಗಳು ಗರಿಷ್ಠ ಸಂಯಮ ವಹಿಸಬೇಕು, ಮತ್ತಷ್ಟು ಉದ್ವಿಗ್ನತೆಯನ್ನು ತಪ್ಪಿಸಬೇಕು ಮತ್ತು ಈ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮತ್ತು ನೇಪಾಳದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೇರಿದಂತೆ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಹಕ್ಕುಗಳ ಸಂಸ್ಥೆಗಳು ಈ ಹತ್ಯೆಗಳನ್ನು ಖಂಡಿಸಿವೆ ಮತ್ತು ತಕ್ಷಣದ ತನಿಖೆಗೆ ಕರೆ ನೀಡಿವೆ. ಜೊತೆಗೆ ಸಭೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿವೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದ್ದು, ಪರಿಸ್ಥಿತಿ ಸ್ಥಿರವಾಗುವವರೆಗೆ ನೇಪಾಳಕ್ಕೆ ಪ್ರಯಾಣಿಸುವುದನ್ನು ಮುಂದೂಡುವಂತೆ ಮತ್ತು ದೇಶದಲ್ಲಿರುವವರು ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸೂಚಿಸಿದೆ.

“ನೇಪಾಳದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ನಾಗರಿಕರು ಪರಿಸ್ಥಿತಿ ಸ್ಥಿರವಾಗುವವರೆಗೆ ಅಲ್ಲಿಗೆ ಪ್ರಯಾಣಿಸುವುದನ್ನು ಮುಂದೂಡುವಂತೆ ಸೂಚಿಸಲಾಗಿದೆ. ಪ್ರಸ್ತುತ ನೇಪಾಳದಲ್ಲಿರುವ ಭಾರತೀಯ ನಾಗರಿಕರು ತಮ್ಮ ಪ್ರಸ್ತುತ ವಾಸಸ್ಥಳಗಳಲ್ಲಿ ಆಶ್ರಯ ಪಡೆಯಲು, ಬೀದಿಗಳಿಗೆ ಹೋಗುವುದನ್ನು ತಪ್ಪಿಸಲು ಮತ್ತು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ನೇಪಾಳ ಅಧಿಕಾರಿಗಳಿಂದ ಮತ್ತು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಸ್ಥಳೀಯ ಸುರಕ್ಷತಾ ಸಲಹೆಗಳನ್ನು ಅನುಸರಿಸುವಂತೆ ಸಹ ಅವರಿಗೆ ಸೂಚಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ನೇಪಾಳ ಪ್ರಧಾನಿ ಕೆ.ಪಿ.ಒಲಿ ರಾಜೀನಾಮೆ: ಕಾರಣವೇನು?

ನೇಪಾಳದ ನೆಪೋ ಕಿಡ್ಸ್ vs ಯುವ ಶಕ್ತಿ: ವ್ಯವಸ್ಥೆ ಬದಲಾವಣೆಯ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...

ಭೀಮಾ ಕೋರೆಗಾಂವ್ ಪ್ರಕರಣ: ನಾಲ್ಕು ವರ್ಷಗಳ ನಂತರ ಇಬ್ಬರಿಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು

ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ...

‘ಗುಜರಾತ್‌ನಂತೆಯೇ ಕೇರಳವೂ ಈಗ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ’: ಪ್ರಧಾನಿ ನರೇಂದ್ರ ಮೋದಿ 

ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯವನ್ನು "ಬದಲಾವಣೆಗೆ ಮಹತ್ವದ ಜನಾದೇಶ" ಎಂದು ಶ್ಲಾಘಿಸಿದ್ದಾರೆ.  ಇದೇ ವೇಳೆ "ಜನಪರ ಮತ್ತು...

ರಾಜಸ್ಥಾನ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಡುವೆ ಪ್ರೀತಿ: ಮದುವೆಗಾಗಿ ಪೆರೋಲ್ ಮೇಲೆ ಹೊರ ಬಂದ ಕೊಲೆ ಅಪರಾಧಿಗಳು

ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ(ಮುಕ್ತ ಜೈಲು) ಪ್ರಾರಂಭವಾದ ಇಬ್ಬರು ಕೊಲೆ ಅಪರಾಧಿಗಳ ನಡುವಿನ ಪ್ರಣಯವು ಸಾರ್ವಜನಿಕ ಜೀವನಕ್ಕೂ ಕಾಲಿರಿಸಿದೆ. ಕೊಲೆ ಪ್ರಕರಣಗಳಲ್ಲಿ ಜೀವಾವಧಿಗೆ ಒಳಗಾಗಿರುವ ಇಬ್ಬರು ಕೈದಿಗಳು ಮದುವೆಯಾಗಲು ಪೆರೋಲ್ ಮೇಲೆ ಹೊರಬಂದಿದ್ದಾರೆ. ಅಪರಾಧ...

‘ಅತ್ಯಾಚಾರ-ಕೊಲೆ ಸಣ್ಣ ಘಟನೆ’: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ: ಸಂಸದರ ಹೇಳಿಕೆಗೆ ವ್ಯಾಪಕ ಖಂಡನೆ 

ಕೊಪ್ಪಳ: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ...

ರಾಹುಲ್ ಕಡೆಗಣನೆ ಆರೋಪ: ಅಸಮಾಧಾನಗೊಂಡ ಶಶಿ ತರೂರ್, ಕೇರಳ ಕಾಂಗ್ರೆಸ್ ಕಾರ್ಯತಂತ್ರದ ಸಭೆಗೆ ಗೈರಾಗುವ ಸಾಧ್ಯತೆ!

ನವದೆಹಲಿ: ಕೇರಳ ಕಾಂಗ್ರೆಸ್ ಘಟಕದಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಅಸಮಾಧಾನಗೊಂಡಿರುವ ಹಿರಿಯ ಸಂಸದ ಶಶಿ ತರೂರ್, ಚುನಾವಣಾ...

ಒಡಿಶಾ| ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ ಮೇಲೆ ಸೇಡು; ನಕಲಿ ಖಾತೆ ತೆರೆದು ಜಗನ್ನಾಥ ದೇಗುಲ ಸ್ಪೋಟಿಸುವ ಬೆದರಿಕೆ

ಮಹಿಳೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸಿ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ...

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಪರ್ಮಿಟ್ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜನವರಿ 23 ರಂದು ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಬೈಕ್ ಟ್ಯಾಕ್ಸಿ ಸಂಗ್ರಾಹಕರು, ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿದೆ. ಮುಖ್ಯ...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 22 ಮಂದಿ ಅಸ್ವಸ್ಥ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಕನಿಷ್ಠ 22 ಜನರು ಅಸ್ವಸ್ಥರಾಗಿದ್ದಾರೆ. ಕೆಲವೇ ವಾರಗಳ ಹಿಂದೆ ಕಲುಷಿತ ನೀರಿನಿಂದ ಹರಡುವ ರೋಗಗಳಿಂದ ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರು....

ರಾಜ್ಯಪಾಲರ ಭಾಷಣ ಪದ್ಧತಿ ಕೊನೆಗೊಳಿಸುವ ಸಮಯ ಬಂದಿದೆ: ಮುಖ್ಯಮಂತ್ರಿ ಸ್ಟಾಲಿನ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಹೆಹ್ಲೋಟ್ ಸದನವನ್ನು ಉದ್ದೇಶಿಸಿ ಸಂಪೂರ್ಣ ಸಾಂಪ್ರದಾಯಿಕ ಭಾಷಣವನ್ನು ಓದದೆ ವಿಧಾನಸಭೆಯಿಂದ ನಿರ್ಗಮಿಸಿರುವುದು ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ...