ನಾಳೆಯಿಂದ ರಾಜ್ಯದಲ್ಲಿ ಅನ್ಲಾಕ್-4.0 ಜಾರಿಗೆ ಬರಲಿದ್ದು, ಕಳೆದೈದು ತಿಂಗಳುಗಳಿಂದ ಬಂದ್ ಆಗಿದ್ದ ಪಬ್, ಬಾರ್, ಕ್ಲಬ್ ಮತ್ತು ರೆಸ್ಟೋರೆಂಟ್ಗಳು ಪುನಾರಾಂಭವಾಗಲಿವೆ.
ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿದ್ದರೂ, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಅಲ್ಲಿಯೇ ಕುಳಿತು ಮದ್ಯಸೇವನೆಗೆ ನಿಷೇಧ ಹೇರಲಾಗಿತ್ತು. ನಾಳೆಯಿಂದ ಆ ನಿರ್ಬಂಧ ಸಡಿಲಿಸಲಾಗಿದೆ. ಆದರೆ ಸರ್ಕಾರ ಇವುಗಳಿಗೂ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ್ದು, ಕೊವೀಡ್ ತಡೆ ಮಾರ್ಗಸೂಚಿ ಪಾಲಿಸುವುದು ಕಡ್ಡಾಯವಾಗಿದೆ.
ಮಾರ್ಗಸೂಚಿಗಳು
- ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ
- ಶೇಕಡ 50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ
- ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ. ರೂಂ, ಕ್ಯಾಬಿನ್ ಗಳ ಬಾಗಿಲ ಬಾಗಿಲ ಬಳಿ ಮದ್ಯ ಅಥವಾ ಆಹಾರ ಇಡಬೇಕು..
- ಕಂಟೋನ್ಮೆಂಟ್ ವಲಯಗಳಲ್ಲಿ ನಿರ್ಬಂಧ ಮಂದುವರಿಕೆ.
ಮತ್ತೆ ಶುರುವಾಯ್ತು ಮಾರ್ಕೆಟ್
ಇನ್ನು ಬೆಂಗಳೂರಿನ ಕೆ.ಆರ್.ಮಾರ್ಕೆಟ್ ನಾಳೆಯಿಂದ ವ್ಯಾಪಾರಕ್ಕೆ ಮುಕ್ತವಾಗಲಿದೆ. ಇಷ್ಟು ದಿನ ಸೀಲ್ಡೌನ್ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಜನಸಂದಣೆ ನಿಯಂತ್ರಿಸಲು ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮಳಿಗೆಗಳ ಮುಂಭಾಗ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆ ನಿಯಮಗಳನ್ನು ಪಾಲಿಸದವರಿಗೆ ದಂಡ ಹಾಕಲು ಬಿಬಿಎಂಪಿ ನಿರ್ಧರಿಸಿದೆ. ಮಾರುಕಟ್ಟೆ ಆವರಣ ಬಿಟ್ಟು ಹೊರ ಬಂದು ಅನಧಿಕೃತ ವ್ಯಾಪಾರ ಮಾಡುವವರಿಗೆ, ಮಾಸ್ಕ್ ಧರಿಸದೇ ಇರುವವರಿಗೆ ದಂಡ ಬೀಳಲಿದೆ. ಮಾರುಕಟ್ಟೆಯಲ್ಲಿ ಸ್ವಚ್ಛತೆ ಬಗ್ಗೆ ಹದ್ದಿನ ಕಣ್ಣಿಡಲು ಕೆ.ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯಲ್ಲಿ ಒಂದು ಪಾಳಿಗೆ 15 ಮಂದಿಯಂತೆ ಸುಮಾರು 60 ಮಾರ್ಷಲ್ಗಳನ್ನು ನೇಮಿಸಲಾಗಿದೆ.
ಇನ್ನು ಸೆಪ್ಟೆಂಬರ್ 7 ರಿಂದ ನಮ್ಮ ಮೆಟ್ರೋ ಪುನರಾರಂಭ ಮಾಡಲಿದೆ. ಬಿಎಂಆರ್ಸಿಎಲ್ನಿಂದ ಸ್ವಚ್ಛತಾಕಾರ್ಯ ಭರದಿಂದ ಸಾಗಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ಬಿಎಂಆರ್ಸಿಎಲ್ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ, ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಜೊತೆಗೆ ಟಿಕೆಟ್ ನೀಡದೇ ಸ್ಮಾರ್ಟ್ ಕಾರ್ಡ್ ಇದ್ದವರಷ್ಟೇ ಪ್ರಯಾಣಿಸಬಹುದೆಂಬ ನಿಯಮ ಹೇರಲಾಗಿದೆ.
ಪ್ರತಿ ರೈಲಿನಲ್ಲಿ ಹಿಂದೆ ಗರಿಷ್ಟ 1,800 ರಿಂದ 2 ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಸೆಪ್ಟೆಂಬರ್ 7ರ ಬಳಿಕ ಒಂದು ರೈಲಿನಲ್ಲಿ 346 ಜನರಿಗಷ್ಟೇ ಅವಕಾಶ ನೀಡಲಾಗುತ್ತದೆ. ಮೆಟ್ರೋ ರೈಲುಗಳ ಕಾರ್ಯಾಚರಣೆನ್ನು ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಸೀಮಿತಗೊಳಿಸುತ್ತಿದೆ.
ಮೆಟ್ರೋ ನಿಲ್ದಾಣ ಪ್ರವೇಶಿಸಲು ಮಾಸ್ಕ್ ಧರಿಸಿರುವುದು ಕಡ್ಡಾಯವಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡಲೇಬೇಕು.
ಅನ್ಲಾಕ್ 4.0 ಜನರ ಆರ್ಥಿಕ ಜೀವನವನ್ನು ಗಮನದಲ್ಲಿಟ್ಟುಕೊಂಡು ಹಲವು ವ್ಯಾಪಾರ –ವಹಿವಾಟಿಗೆ ಅವಕಾಶ ನೀಡಿದೆ. ಆದರೇ ಜನ ಎಷ್ಟರ ಮಟ್ಟಿಗೆ ಕೋವಿಡ್ ತಡೆ ನಿಯಮಗಳನ್ನು ಪಾಲಿಸುತ್ತಾರೆ ಎನ್ನುವುದರ ಮೇಲೆ ಕೊರೋನಾ ಸೋಂಕು ನಿಯಂತ್ರಣ ಅವಲಂಭಿಸಿದೆ.
ಇದನ್ನೂ ಓದಿ:ಅನ್ಲಾಕ್ – 04: ಸೆಪ್ಟೆಂಬರ್ 07 ರಿಂದ ಮೆಟ್ರೋ ಸಂಚಾರ ಆರಂಭಕ್ಕೆ ಹಸಿರು ನಿಶಾನೆ