Homeಕರ್ನಾಟಕ'ಪಬ್ಲಿಕ್ ಟಿವಿ' ವರದಿಗಾರ ಮಂಜುನಾಥನಿಂದ ದೌರ್ಜನ್ಯ; ಹಲ್ಲೆ ಹಿಂದಿನ ಕಾರಣ ಬಿಚ್ಚಿಟ್ಟ ದಲಿತ ಪತ್ರಕರ್ತ

‘ಪಬ್ಲಿಕ್ ಟಿವಿ’ ವರದಿಗಾರ ಮಂಜುನಾಥನಿಂದ ದೌರ್ಜನ್ಯ; ಹಲ್ಲೆ ಹಿಂದಿನ ಕಾರಣ ಬಿಚ್ಚಿಟ್ಟ ದಲಿತ ಪತ್ರಕರ್ತ

- Advertisement -
- Advertisement -

ದಲಿತ ವಿರೋಧಿ ಮನಸ್ಥಿತಿ; ತಳಸಮುದಾಯಗಳ ಪರವಾಗಿ ಧ್ವನಿ ಎತ್ತುವ ಪತ್ರಕರ್ತರ ಕುರಿತು ಅಸಹನೆ! ಇದಿಷ್ಟೇ ಅಲ್ಲ, ಮುಖ್ಯವಾಹಿನಿ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ನಾನು ಏನೇ ಮಾಡಿದರೂ ನೀಗಿಸಿಕೊಳ್ಳುತ್ತೇನೆ ಎಂಬ ಅಹಂಕಾರವನ್ನೇ ಮೈಗೂಡಿಸಿಕೊಂಡಿರುವ ಪಬ್ಲಿಕ್ ಟಿವಿಯ ತುಮಕೂರು ಜಿಲ್ಲಾ ವರದಿಗಾರ ಮಂಜುನಾಥ್ ತಾಳಮಕ್ಕಿ ಕುರಿತು ಇನ್ನೂ ಹೇಳಬೇಕಾಗಿರುವ ಸಾಕಷ್ಟು ವಿಚಾರಗಳಿವೆ ಎನ್ನುತ್ತಾರೆ ಅಲ್ಲಿನ ಕೆಲ ಪತ್ರಕರ್ತರು.

ದಲಿತ ಸಮುದಾಯದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದಡಿ ತುಮಕೂರು ಜಿಲ್ಲೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದಾ ದಲಿತ ವಿರೋಧಿ ಮನಸ್ಥಿತಿಯ ಮಂಜುನಾಥ್, ಮಾದಿಗ ಸಮುದಾಯದ ಜಿ.ಎನ್.ಮಂಜುನಾಥ್  (ಸಮಯ ಮಂಜು) ಎಂಬುವವರ ಮೇಲೆ ತಾನು ಹಿಡಿದಿದ್ದ ಪಬ್ಲಿಕ್ ಟಿವಿ ಲೋಗೋ ಮೈಕ್‌ನಿಂದ ಹಲ್ಲೆ ನಡೆಸಿದ್ದಾನೆ; ಜಾತಿ ಹೆಸರಿಡಿದು ನಿಂದಿಸಿದ ಆತನ ಮೇಲೆ ಇದೀಗ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989’ ಅಡಿ ಪ್ರಕರಣ ದಾಖಲಾಗಿದೆ.

ದಲಿತ ಸಮುದಾಯದ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವ ಪಬ್ಲಿಕ್ ಟಿವಿ ವರದಿಗಾರನ ಕುರಿತು ಮಾಹಿತಿ ಕಲೆ ಹಾಕಲು ಅಲ್ಲಿನ ಸ್ಥಳೀಯ ಪತ್ರಕರ್ತರನ್ನು ಸಂಪರ್ಕಿಸಿದಾಗ, ಮಂಜುನಾಥ್ ಈ ಹಿಂದೆ ಕೂಡ ಮಂಡ್ಯದಲ್ಲಿ ವರದಿಗಾರನಾಗಿದ್ದಾಗ ಇದೇ ರೀತಿ ವರ್ತಿಸಿದ್ದ ಎನ್ನಲಾಗಿದೆ. ಆಗಲೂ ಈತನ ಮೇಲೆ ‘ಅಟ್ರಾಸಿಟಿ’ ಪ್ರಕರಣ ದಾಖಲಾಗಿ, ಬಳಿಕ ಕೆಲವರು ರಾಜಿ ಮಾಡಿಸಿ ದೂರು ಹಿಂಪಡೆಯುವಂತೆ ಮನವೊಲಿಸಿದ್ದರು ಎಂದು ತಿಳಿದುಬಂದಿದೆ. ಇಷ್ಟೆಲ್ಲಾ ಆದರೂ ಬುದ್ದಿ ಕಲಿಯದ ಈತ, ತಾನು ಕೆಲಸ ಮಾಡುತ್ತಿದ್ದ ಸುದ್ದಿವಾಹಿನಿಯ ‘ಕ್ಯಾಮೆರಾಮ್ಯಾನ್‌’ ಒಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ! ವಿವಾದದ ಬಳಿಕ ಈತನನ್ನು ತುಮಕೂರಿಗೆ ವರ್ಗಾವಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ತನ್ನ ಹಿಂದಿನ ಕೃತ್ಯಗಳಿಗೆ ಕೇಸು ಹಾಕಿಸಿಕೊಂಡು, ವರ್ಗಾವಣೆಯಾಗಿದ್ದರೂ ಬುದ್ದಿ ಕಲಿಯದ ಮಂಜುನಾಥ್, ತುಮಕೂರಿಗೆ ಬಂದ ಬಳಿಕವೂ ತನ್ನ ಹಿಂದಿನ ಅದೇ ದಾಳಿ ಮನಸ್ಥಿತಿಯನ್ನೇ ಮುಂದುವರಿಸಿದ್ದಾರೆ.

ಮಂಜುನಾಥ್ ತಾಳಮಕ್ಕಿ ತುಮಕೂರಿಗೆ ವರ್ಗಾವಣೆ ಆದ ಬಳಿಕ, ಈಗ ದಾಳಿಗೆ ಒಳಗಾಗಿರುವ ದಲಿತ ಸಮುದಾಯದ ಪತ್ರಕರ್ತ ಜಿ.ಎನ್‌.ಮಂಜುನಾಥ್ ಅವರ ಮನೆಯಲ್ಲೇ ಆಶ್ರಯ ಪಡೆದುಕೊಂಡಿದ್ದನಂತೆ. ದಲಿತ ಸಮುದಾಯದ ಮಂಜುನಾಥ್ ತಮ್ಮ ಕೈಯಾರೆ ಮಾಡುತ್ತಿದ್ದ ಅನ್ನವನ್ನೇ ಉಣ್ಣುತ್ತಿದ್ದಾಗ ಆತನಿಗೆ ಕಾಣದ ಜಾತಿಪ್ರಜ್ಞೆ, ಈಗ ತುಮಕೂರಿನಲ್ಲಿ ನೆಲೆ ಕಂಡುಕೊಂಡ ಬಳಿಕ ಎಚ್ಚರವಾಗಿಬಿಟ್ಟಿದೆ. ಅನ್ನ-ಆಶ್ರಯ ಕೊಟ್ಟವರಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾನೆ.

ಈ ಬಗ್ಗೆ ನಾನುಗೌರಿ.ಕಾಮ್ ಜೊತೆಗೆ ಮಾತನಾಡಿದ ಹಲ್ಲೆಗೊಳಗಾದ ದಲಿತ ಪತ್ರಕರ್ತ ಜಿ.ಎನ್‌.ಮಂಜುನಾಥ್, “ದೈಹಿಕವಾಗಿ ಚೇತರಿಕೊಂಡಿದ್ದೇನೆ. ಆದರೆ, ಅಂದು ನಡೆದ ಮಾನಸಿಕ ಆಘಾತದಿಂದ ಇನ್ನೂ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ಹತ್ತಾರು ಜನ ಸಹೋದ್ಯೋಗಿಗಳು ಮತ್ತು ಅಲ್ಲಿದ್ದ ವಿದ್ಯಾರ್ಥಿಗಳ ಎದುರು ನಡೆದ ಅವಮಾನದಿಂದ ಸಾಕಷ್ಟು ನೊಂದಿದ್ದೇನೆ” ಎಂದು ನೋವು ತೋಡಿಕೊಂಡರು.

“ಮಂಜುನಾಥ್ ತಾಳಮಕ್ಕಿ ಸದಾ ದಲಿತ ವಿರೋಧಿ ಮನಸ್ಥಿತಿಯ ಪತ್ರಕರ್ತ; ತಳ ಸಮುದಾಯಗಳ ಪರವಾಗಿ ಮಾತನಾಡುವ ಎಲ್ಲರನ್ನೂ ಸಕಾರಣವಿಲ್ಲದೆ ದ್ವೇಷಿಸುತ್ತಾರೆ. ಈತ ಕೆಲಸ ಮಾಡುವ ಸಂಸ್ಥೆಯ ಸಂಪಾದಕರನ್ನು ವಿಮರ್ಷೆ ಮಾಡಿ ಲೇಖನ ಪ್ರಕಟಿಸಿದ್ದ ಸ್ವತಂತ್ರ ಮಾಧ್ಯಮ ಸಂಸ್ಥೆಯೊಂದರ ಜಿಲ್ಲಾ ವರದಿಗಾರನನ್ನು ವೈಯಕ್ತಿಕವಾಗಿ ನಿಂದಿಸಿ, ಆಗಲೂ ಈತ ದಲಿತ ಸಮುದಾಯದ ಪತ್ರಕರ್ತರನ್ನು ಹೀಯಾಳಿಸಿದ್ದ. ‘ನೀವು ದನ ತಿನ್ನುವವರನ್ನು ಬೆಂಬಲಿಸುವವರು’ ಎಂದು ತೇಜೋವಧೆ ಮಾಡಿದ್ದ. ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ನಾನು ಆಕ್ಷೇಪಿಸಿದ್ದೆ” ಎಂದರು.

ಹಲ್ಲೆಗೆ ಕಾರಣ ಏನು?

ತಮ್ಮ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕಾರಣ ಏನು ಎಂಬುದರ ಹಿನ್ನೆಲೆ ವಿವರಿಸಿದ ಮಂಜುನಾಥ್ “ಇದೇ ತಿಂಗಳ 8 ರಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತುಮಕೂರು ನಿರೀಕ್ಷಣಾ ಮಂದಿರಕ್ಕೆ (ಐಬಿ) ಬಂದಿದ್ದಾಗ, ಅವರ ಹೇಳಿಕೆ ಪಡೆಯಲು ನಾವೆಲ್ಲರೂ (ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರು) ಹೋಗಿದ್ದೆವು. ಸಚಿವರು ಮಾತನಾಡಿದ ಬಳಿಕ, ಅವರದ್ದೇ ಕ್ಷೇತ್ರವಾದ ಕೊರಟಗೆರೆಯಲ್ಲಿ ದಲಿತರಿಗೆ ನೀಡಿದ್ದ ನಿವೇಶನದ ಹಕ್ಕುಪತ್ರದ ಬಗ್ಗೆ ಎದ್ದಿರುವ ಗೊಂದಲದ ಕುರಿತು ನಾನು ಪ್ರಶ್ನೆ ಮಾಡಿದ್ದೆ. ಆದರೆ, ‘ಸ್ಥಳೀಯ ವಿಚಾರ ಬಿಟ್ಟು, ಬೇರೆ ಏನಾದರೂ ಕೇಳಿ’ ಎಂದಿದ್ದ ಸಚಿವರು, ತುಮಕೂರು ಪತ್ರಕರ್ತರನ್ನು ನಿರ್ಲಕ್ಷಿಸುವ ರೀತಿ ಮಾತನಾಡಿದ್ದರು. ಸಚಿವರ ನಡೆಯಿಂದ ನಾನೂ ಸೇರಿದಂತೆ ಉಳಿದ ಪತ್ರಕರ್ತರು ಅಸಮಾಧಾನಗೊಂಡಿದ್ದರು. ಕೆಲ ದಿನಗಳ ಬಳಿಕ, ಜಿಲ್ಲಾ ದೇಶ್ಯ ಮಾಧ್ಯಮ ವರದಿಗಾರರ ಸಭೆ ನಡೆಸಿದ್ದೆವು. ‘ಪತ್ರಕರ್ತರಿಗೆ ಅವಮಾನ ಮಾಡಿದ ಸಚಿವರ ಕುರಿತು ಸುದ್ದಿ ಪ್ರಕಟಿಸುವುದಿಲ್ಲ ಎಂದು ನಿರ್ಣಯ ಮಾಡಬೇಕು’ ಎಂದು ಮಂಜುನಾಥ್ ತಾಳಮಕ್ಕಿ ಹೇಳಿದ್ದರು. ಹೀಗೆ ನಿರ್ಧಾರ ಮಾಡುವುದು ತಪ್ಪಾಗುತ್ತದೆ ಎಂದು ಹೇಳಿದ್ದೆ; ಉಳಿದ ಪತ್ರಕರ್ತರಿಗೂ ಈ ಬಗ್ಗೆ ಸಹಮತವಿರಲಿಲ್ಲ. ಆದರೂ ಆತ ಒತ್ತಾಯ ಮಾಡಿ ಎಲ್ಲರಿಂದ ಸಹಿ ಪಡೆದುಕೊಂಡು, ಗೃಹ ಸಚಿವರ ಸುದ್ದಿಗಳನ್ನು ‘ಬಾಯ್ಕಾಟ್’ ಮಾಡಿದ್ದೇವೆ ಎಂದು ಪತ್ರಕರ್ತರ ವಾಟ್ಸಾಪ್‌ ಗ್ರೂಪ್‌ನಲ್ಲಿ ಹೇಳಿಕೆ ಹೊರಡಿಸಿದ್ದರು. ಆದರೆ, ಆ ಪತ್ರಕ್ಕೆ ಬಹುತೇಕರು ವಿರೋಧ ವ್ಯಕ್ತಪಡಿಸಿ, ಹೀಗೆ ಮಾಡುವುದು ಸರಿಯಲ್ಲ ಎಂದಿದ್ದರು. ನಾನೂ ಕೂಡ ಈ ಬೆಳವಣಿಗೆ ಒಳ್ಳೆಯದಲ್ಲ, ಮುಂದಿನ ದಿನಗಳಲ್ಲಿ ನಾವು ಅವರ ಕುರಿತು ಸುದ್ದಿ ಮಾಡಬೇಕಾಗಿ ಬರಬಹುದು ಎಂದು ಹೇಳಿದ್ದೆ. ಈ ವಿಚಾರದಲ್ಲಿ ಎಲ್ಲರನ್ನೂ ಬಿಟ್ಟು, ನನ್ನನ್ನು ಮಾತ್ರ ಗುರಿಯಾಗಿಸಿಕೊಂಡು ಕೆಟ್ಟದಾಗಿ ಮಾತನಾಡಿದರು” ಎಂದು ವಿವರಿಸಿದರು.

“ನಿನಗೆ ಪರಮೇಶ್ವರ್ ಮೇಲೆ ಜಾತಿಪ್ರೇಮವಿದೆ, ಎಡಚರ ಲದ್ದಿ, ಬುದ್ದಿ ತೋರಿಸಬೇಡಾ ಎಂದು ನಿಂದಿಸಿದ್ದ. ಆತನ ಟೀಕೆಗಳಿಗೆ ನಾನು ನಯವಾಗೇ ಪ್ರತಿಕ್ರಿಯೆ ನೀಡಿದ್ದೆ. ಮರುದಿನ, ಗೃಹ ಸಚಿವರಾದ ಜಿ.ಪರಮೇಶ್ವರ್ ಕುಟುಂಬದ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ (ಜಾರಿ ನಿರ್ದೇಶನಾಲಯ) ನಡೆಯುತ್ತದೆ; ಎಂದಿನಂತೆ ಎಲ್ಲರ ಜೊತೆಗೆ ನಾನೂ ಕೂಡ ಅಲ್ಲಿ ವರದಿಗಾಗಿ ತೆರಳಿದ್ದೆ. ಅಲ್ಲಿಗೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ಕೂಡ ಆಗಮಿಸಿ, ಹಿಂದಿನ ದಿನ ನಾನು ವಾಟ್ಸಾಪ್‌ ಗ್ರೂಪಿನಲ್ಲಿ ಅವರ ನಿರ್ಧಾರ ವಿರೋಧಿಸಿದ್ದನ್ನೇ ಮುಂದಿಟ್ಟುಕೊಂಡು ಕಾಲುಕೆರೆದು ಜಗಳಕ್ಕೆ ಬಂದರು. ಏನಲೇ, ನೀನು ಬಂದಿದಿಯಾ, ನಿನಗೆ ನೀನು ದೊಡ್ಡ ಬುದ್ದಿವಂತ ಎಂದು ತೋರಿಸಿಕೊಳ್ಳೊಕೆ ಬಂದಿದಿಯಾ ಎಂದು ಹಿಯಾಳಿಸುತ್ತಾನೆ. ‘ಇಡಿ ದಾಳಿ’ ಗಂಭೀರ ಸುದ್ದಿಯಾಗಿದ್ದು, ಈಗ ಸುಮ್ಮನಿರು ನಂತರ ಮಾತನಾಡೋಣ ಎಂದು ನಾನು ಸೇರಿದಂತೆ ಉಳಿದ ಪತ್ರಕರ್ತರೂ ಅವರಿಗೆ ತಿಳುವಳಿಕೆ ಹೇಳಲು ಯತ್ನಿಸಿದರು. ಆದರೆ, ಯಾವುದನ್ನೂ ಕೇಳಿಸಿಕೊಳ್ಳದ ಆತ ಜಗಳ ಮುಂದುವರಿಸಿದ್ದ. ಅಶ್ಲೀಲ ಮಾತುಗಳಿಂದ ನನ್ನ ಮೇಲೆ ದಾಳಿ ನಡೆಸಿ, ಏನೆ ಮಾಡಿದರೂ ನಿಮ್ಮ ಜಾತಿ ಕೀಳು ಜಾತಿನೇ, ನೀವು ಕೀಳು ಜಾತಿ ಬುದ್ದಿ ಬಿಡಲ್ಲಾ, ಎಂದು ಮಾದಿಗ ನನ್ನ ಮಗನೇ’ ಎಂದು ಜಾತಿ ಬಳಸಿ ನಿಂದಿಸಿ ಅವಾಚ್ಯ ಶಬ್ದಗಳನ್ನ ಬಳಸಿ ಸಾರ್ವಜನಿಕವಾಗಿ ಅವಮಾನಿಸುತ್ತಾನೆ. ನಾನು ನಾಲಿಗೆ ಬಿಗಿ ಹಿಡಿದು ಮಾತನಾಡು ಎಂದು ಜಾತಿ ಹಿಡಿದು ಯಾಕೆ ಮಾತನಾಡುತ್ತಿಯಾ ಎಂದು ಪ್ರಶ್ನಿಸಿದ್ದಕ್ಕೆ ಆತ ನೇರವಾಗಿ ತನ್ನ ಕೈನಲ್ಲಿದ್ದ ಲೋಗೋದಿಂದ ನನ್ನ ಮೇಲೆ ದಾಳಿ ಮಾಡಿದ, ಇದರಿಂದ ನನ್ನ ತಲೆಗೆ ಪೆಟ್ಟಾಗಿ ಕಿವಿ ಹಿಂದೆ ಗಾಯ ಆಗಿದೆ. ತಕ್ಷಣ ಮಧ್ಯಪ್ರವೇಶಿಸಿದ ಸ್ಥಳದಲ್ಲಿದ್ದ ವರದಿಗಾರರು, ಸಾರ್ವಜನಿಕರು ಆಸ್ಪತ್ರೆಗೆ ತೆರಳುವಂತೆ ನನ್ನನ್ನು ಅಲ್ಲಿಂದ ಕಳುಹಿಸಿದರು. ಈ ಘಟನೆಯಿಂದ ನನಗೆ ಬಹಳ ಆಘಾತವಾಯಿತು. ನೇರವಾಗಿ ಮನೆಗೆ ತೆರಳಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಿಗೆ ಕರೆ ಮಾಡಿದೆ. ಹಿರಿಯ ಪತ್ರಕರ್ತರನ್ನು ಸಂಪರ್ಕಿಸಿ ಆತನಿಗೆ ಬುದ್ದಿ ಹೇಳುವಂತೆ ಕೇಳಿಕೊಂಡೆ. ಆದರೆ, ಆತ ಯಾರ ಮಾತನ್ನೂ ಕೇಳುವುದಿಲ್ಲ ಎಂದು ಕೆಲವರು ಅಸಹಾಯಕತೆ ವ್ಯಕ್ತಪಡಿಸಿದರು. ನಾನು ಕೆಲಸ ಮಾಡುತ್ತಿರುವ ಸಂಸ್ಥೆ ಹಾಗೂ ಹಿರಿಯರ ಸಲಹೆ ಪಡೆದು ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ” ಎಂದರು.

“ಹಿಂದಿನಿಂದಲೂ ಈತ ಇದೇ ರೀತಿಯ ಕೃತ್ಯ ಮಾಡಿಕೊಂಡು ಬಂದಿದ್ದಾನೆ. ಮಂಡ್ಯದಲ್ಲಿ ಕೂಡ ದಲಿತ ಯುವಕನನ್ನು ಥಳಿಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಆಗ ತಲೆಮರೆಸಿಕೊಂಡಿದ್ದ ಈತನಿಗೆ, ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರು ನೆರವಿಗೆ ಬಂದು ರಾಜಿ ಮಾಡಿಸಿದ್ದರು. ಆ ಬಳಿಕವೂ ಈತ ತನ್ನ ಸಹೋದ್ಯೋಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎಂದು ಅಲ್ಲಿನ ಸ್ಥಳೀಯ ಪತ್ರಕರ್ತರು ನನಗೆ ತಿಳಿಸಿದ್ದಾರೆ. ಅಲ್ಲಿಂದ ವರ್ಗಾವಣೆ ಆದ ಬಳಿಕ ಈತನಿಗೆ ನಾನೇ ಆಶ್ರಯ ನೀಡಿದ್ದೆ; ಈತ ಮೂಲತಃ ಕಾರವಾರದವನು. ಅವನಿಗೆ ನಾನೇ ಅಡುಗೆ ಮಾಡಿ ಬಡಿಸಿದ್ದೆ, ಅವನಿಗೆ ಕೋವಿಡ್ ತಗುಲಿದ್ದಾಗ ನಮ್ಮ ಸಮುದಾಯದ ಹುಡುಗರೇ ಮುಂದೆ ನಿಂತು ಆಸ್ಪತ್ರೆಯಲ್ಲಿ ನೆರವಾಗಿದ್ದರು. ಆಗ ಆತನಿಗೆ ಕಾಣದ ಜಾತಿ ಈಗ ಕಾಣಿಸುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸಿದ ಬಳಿಕ, ಕ್ಷಮೆ ಕೇಳಿ ರಾಜಿ ಮಾಡಿಕೊಳ್ಳುವಂತೆ ಆತನಿಗೆ ಕೆಲ ಹಿರಿಯರು ಸಲಹೆ ನೀಡಿದ್ದಾರೆ. ‘ಅವರ ಬಳಿ ನಾನು ಕ್ಷಮೆ ಕೇಳುವುದಕ್ಕೆ ಸಾಧ್ಯವೇ? ಬೇಕಿದ್ದರೆ ಜೈಲಿನಲ್ಲಿ ಇದ್ದು ಬರುತ್ತೇನೆ’ ಎಂದು ದುರಹಂಕಾರದಿಂದ ಮಾತನಾಡಿದ್ದಾನೆ” ಎಂದು ಹೇಳಿದರು.

ದಲಿತ ಪತ್ರಕರ್ತನ ಮೇಲೆ ಹಲ್ಲೆ-ಜಾತಿ ನಿಂದನೆ: ತುಮಕೂರು ಜಿಲ್ಲಾ ಪಬ್ಲಿಕ್ ಟಿವಿ ವರದಿಗಾರನ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...