Homeಕರ್ನಾಟಕಪುಲ್ವಾಮಾ: ಮೌನ ಮತ್ತು ಕಿರುಚಾಟ

ಪುಲ್ವಾಮಾ: ಮೌನ ಮತ್ತು ಕಿರುಚಾಟ

- Advertisement -
- Advertisement -

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಪುಲ್ವಾಮಾ ಘಟನೆಯ ಬಗ್ಗೆ ಆಸ್ಪೋಟಿಸಿದ ಭೀಕರ ಸತ್ಯವು ಎರಡು ಕಾರಣಗಳಿಂದ ಕರ್ನಾಟಕದಲ್ಲಿ ಚರ್ಚೆಗೆ ಒಳಗಾಗಲಿಲ್ಲ. ಮೊದಲನೆಯದು ಕರ್ನಾಟಕದ ಚುನಾವಣೆಯ ಗದ್ದಲ. ಎರಡನೆಯದು ಬಹುತೇಕ ಮಾರಾಟವಾಗಿರುವ ಮತ್ತು ಮತೀಕರಣಗೊಂಡಿರುವ ಮಾಧ್ಯಮಗಳು, ಇದರ ಚರ್ಚೆಯಲ್ಲಿ ಆಸಕ್ತಿ ತೋರದೆ ಹೋಗಿರುವುದು. ಈ ಚರ್ಚೆ ಮಾಡಿದರೆ, ತಾವು ಬೆಂಬಲಿಸುವ ಪಕ್ಷ ಮತ್ತು ಸರ್ಕಾರಗಳೇ ದೋಷದ ಕಟಕಟೆಯಲ್ಲಿ ನಿಂತುಬಿಡುವುದೆಂದು ಅವುಗಳಿಗೆ ತಿಳಿದಿರುವುದು. ಮೂರನೆಯದು ಜನರೂ ಈ ಬಗ್ಗೆ ಸಂವೇದನಾಶೀಲತೆ ಕಳೆದುಕೊಂಡಿರುವುದು.

ಸತ್ಯಪಾಲ್ ಮಲಿಕ್, (ಅವರ ಹೆಸರಲ್ಲಿ ಸತ್ಯ ಎಂಬ ಶಬ್ದವಿರುವುದು ಮಾರ್ಮಿಕ) ತಮ್ಮ ‘ದಿ ವೈರ್’ ಸಂದರ್ಶನದಲ್ಲಿ ಬಾಯಿಬಿಟ್ಟಿರುವ ಎರಡು ಸಂಗತಿಗಳೆಂದರೆ, 1. ನಮ್ಮ ಸೈನಿಕರನ್ನು ಪುಲ್ವಾಮಾದ ನಿರ್ದಿಷ್ಟ ರಸ್ತೆಯಲ್ಲಿ ಸಾಗಿಸುವುದು ಅಪಾಯಕರ; ಆಕ್ರಮಣವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರೂ, ಅವರನ್ನು ಸಾಗಿಸಲು ಯಾವುದೇ ವಿಮಾನವನ್ನು ಒದಗಿಸಲಿಲ್ಲ. 2. ಪುಲ್ವಾಮಾ ದುರಂತದಲ್ಲಿ 40 ಸೈನಿಕರು ಜೀವ ಕಳೆದುಕೊಂಡ ಬಳಿಕ, ಇದು ಸರ್ಕಾರದ ಪ್ರಮಾದದಿಂದಾದ ದುರಂತ ಎಂದು ಪ್ರಧಾನಮಂತ್ರಿಯವರಿಗೆ ಹೇಳಿದಾಗ, ಅವರು ನೀನು ಈ ಬಗ್ಗೆ ಮಾತಾಡಬೇಡ, ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು ಎಂಬುದು.

ಈ ಸಂಗತಿಗಳು ದಿಟವೇ ಆಗಿದ್ದರೆ ಎರಡು ಸಂಶಯಗಳಿಗೆ ಅನುವು ಮಾಡಿಕೊಡುತ್ತಿದೆ. 1. ಅವು ಚುನಾವಣೆಯ ದಿನಗಳಾಗಿದ್ದರಿಂದ, ಸರ್ಕಾರವು ಈ ದುರ್ಘಟನೆ ಆಗುವುದಕ್ಕೆ ಅನುವು ಮಾಡಿಕೊಟ್ಟಿತ್ತು. 2. ದುರ್ಘಟನೆ ಆದ ಬಳಿಕ ಅದರ ಭಾವನಾತ್ಮಕ ಫಾಯದೆಯನ್ನು ಎತ್ತಿಕೊಂಡು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಯಸಿತ್ತು. ಈ ಶಂಕೆಗೆ ಪೂರಕವಾದ ಸಂಗತಿಯೆಂದರೆ, ಬಿಜೆಪಿಯ ಬೆಂಬಲಿಗ ಮಾಧ್ಯಮಕರ್ತನಾದ ಆರ್ನಾಬ್, ಪುಲ್ವಾಮಾ ಘಟನೆಯ ಸುದ್ದಿ ಬಂದಾಗ ಸಂತೋಷದಿಂದ ಕೇಕೆ ಹಾಕುವಂತಹ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದು. ಹೀಗೆ ಈ ಪ್ರಕರಣದಲ್ಲಿ ಗುಪ್ತವಾದ ಮೌನ ಮತ್ತು ಕೇಕೆಯ ಎರಡು ಆಯಾಮಗಳಿವೆ.

ನನಗೆ ಈ ಸಂದರ್ಶನದಲ್ಲಿ ಎದ್ದು ಕಂಡ ಸಂಗತಿಯೆಂದರೆ, ಈ ಆಸ್ಫೋಟಕ ಸತ್ಯವನ್ನು ಹೇಳುವಾಗ, ಮೂಲತಃ ಬಿಜೆಪಿಯಿಂದ ಬಂದವರಾದ ಸತ್ಯಪಾಲ್ ಮಲಿಕರ ಮುಖದಲ್ಲಿ ಕಂಡ ವಿಷಾದಕರ ದೃಢತೆ. ಪ್ರಭುತ್ವಕ್ಕೆ ಅಪ್ರಿಯವಾದ ಸತ್ಯವನ್ನು ಹೇಳುವವರಲ್ಲಿ ಇಂದು ಹಲವು ನ್ಯಾಯಾಧೀಶರು ಅಧಿಕಾರಿಗಳು ಎದುರಾಳಿಗಳು ಕೊಲೆಯಾಗುತ್ತಿರುವ ಸನ್ನಿವೇಶದಲ್ಲಿ, ಸಂವಿಧಾನದ ಪ್ರತಿನಿಧಿಯಾಗಿದ್ದ ಒಬ್ಬ ರಾಜ್ಯಪಾಲ ಈ ಭೀಕರವಾದ ಸತ್ಯವನ್ನು ಬಹಿರಂಗಗೊಳಿಸುತ್ತಿದ್ದಾರೆ. ಬಹಿರಂಗಗೊಳಿಸಿದ ಬಳಿಕ ಬರಲಿರುವ ಪರಿಣಾಮಗಳ ಬಗ್ಗೆ ತಿಳಿದಿದ್ದರೂ ಹೆದರದೆ ಹೇಳುತ್ತಿದ್ದಾರೆ. ಸತ್ಯಪಾಲರು ಈ ಹಿಂದೆ ಕೂಡ ಸರ್ಕಾರವು ರೈತವಿರೋಧಿ ಕಾಯಿದೆಗಳನ್ನು ತಂದಾಗ ಇದು ತಪ್ಪು ಎಂದು ರಾಜ್ಯಪಾಲ ಪದವಿಯಲ್ಲಿದ್ದೇ ಹೇಳಿದವರು. ಅವರ ಈ ಸತ್ಯವನ್ನು ಬಲಿಷ್ಠ ಪ್ರಭುತ್ವಕ್ಕೆ ಮುಖದ ಮೇಲೆ ಹೇಳುವ ಈ ದೃಢತೆಯು ಪಂಪಭಾರತದಲ್ಲಿ ಕರ್ಣನ ರಹಸ್ಯವನ್ನು ದುರ್ಯೋಧನನಿಗೆ ಹೇಳುವ ಸತ್ಯಂತಪ ಋಷಿಯ ಪ್ರಕರಣವನ್ನು ನೆನಪಿಸುತ್ತದೆ. ದ್ರೌಪದಿಗೆ ಮಾಡುವ ಅಪಮಾನ ಮತ್ತು ಬರಲಿರುವ ಯುದ್ಧದಿಂದ ಆಗುವ ಅನಾಹುತವನ್ನು ಚಕ್ರವರ್ತಿ ದುರ್ಯೋಧನನಿಗೂ, ಅದಕ್ಕೆ ನೈತಿಕವಾಗಿ ಬೆಂಬಲಕೊಟ್ಟ ಧೃತರಾಷ್ಟ್ರನಿಗೂ, ಕೌರವ ಪಕ್ಷದಲ್ಲೇ ಇದ್ದ ಸಂಜಯ ಮತ್ತು ವಿದುರರು ಹೇಳುವ ಪ್ರಸಂಗಗಳನ್ನು ಸಹ ನೆನಪಿಸುತ್ತದೆ. ವಾಸ್ತವವಾಗಿ ಆಳುವ ಸರ್ಕಾರಗಳು ಜನಬೆಂಬಲ ಗಳಿಸಲು ದೇಶಕ್ಕೆ ಹಾನಿಯಾಗುವಂತಹ ಕಾರ್ಯ ಮಾಡಿದರೆ, ಅದು ತಪ್ಪೆಂದು ಸುದ್ದಿಮಾಧ್ಯಮಗಳು ಅಧಿಕಾರಕ್ಕೆ ಸತ್ಯವನ್ನು ನುಡಿಯಬೇಕು. ಆದರೆ ಈ ಪ್ರಸಂಗದಲ್ಲಿರುವ ವೈರುಧ್ಯವೆಂದರೆ, ಪ್ರಭುತ್ವದ ಪಿತೂರಿ ಮತ್ತು ದೇಶಕ್ಕಾಗುವ ನಷ್ಟವನ್ನು ಆಳುವ ಪಕ್ಷದಲ್ಲಿರುವ ವ್ಯಕ್ತಿಯೇ ಹೇಳಿದ್ದು ಮತ್ತು ಪತ್ರಕರ್ತರು ಇದನ್ನು ಹೇಳದೆ ಹೋಗಿದ್ದು. ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳನೋಡುವ, ಬಡ ಕುಟುಂಬಗಳಿಂದ ಹೋದ ಸೈನಿಕರನ್ನು ಬಲಿಗೊಟ್ಟು ಅಧಿಕಾರ ಉಳಿಸಿಕೊಳ್ಳುವ ಈ ನೀತಿಯು, ಹೃದಯಹೀನತೆ ಮಾತ್ರವಲ್ಲ, ಅದನ್ನು ಮುಚ್ಚಿಟ್ಟು ಭಾರತದ ಮಾಧ್ಯಮಗಳ ಅಪ್ರಾಮಾಣಿಕತೆ ಕ್ರೌರ್ಯವೂ ಆಗಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿ ಕುರಿತ ಸತ್ಯಪಾಲ್ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯೆ

ಜಗತ್ತಿನಾದ್ಯಂತ ಆಳುವ ಪ್ರಭುತ್ವಗಳು, ತಮ್ಮ ಹಿತಾಸಕ್ತಿಗಾಗಿ ಸೈನಿಕರನ್ನು ಬಲಿಗೊಡುವ ರಾಜಕಾರಣಕ್ಕೆ ಸುದೀರ್ಘ ಚರಿತ್ರೆಯಿದೆ. ಸಾಮಾನ್ಯವಾಗಿ ಅವು ಬಡವರ ರೈತರ ಕೂಲಿಕಾರರ ಮಕ್ಕಳನ್ನು ಸೈನ್ಯಕ್ಕೆ ನೇಮಿಸಿಕೊಳ್ಳುತ್ತಿದ್ದವು. ಅವರಿಗೆ ಒಂದು ಶತ್ರುವನ್ನು ಕಟ್ಟಿಕೊಡುತ್ತಿದ್ದವು. ಶತ್ರುವಿನ ವಿರುದ್ಧ ಹೋರಾಡುವುದು ಧರ್ಮಕ್ಕೆ ಜನಾಂಗಕ್ಕೆ ರಾಷ್ಟ್ರಕ್ಕೆ ಸಲ್ಲಿಸುವ ಪವಿತ್ರ ಕರ್ತವ್ಯ ಎಂದು ನಂಬಿಸುತ್ತಿದ್ದವು. ಒಂದೊಮ್ಮೆ ಹೋರಾಟದಲ್ಲಿ ಸಾವು ಸಂಭವಿಸಿದರೆ ಅದು ದೈವಸ್ವರೂಪಿಯಾದ ದೊರೆಯ ಧರ್ಮದ ದೇಶದ ಜನಾಂಗದ ರಕ್ಷಣೆಗೆ ಸಲ್ಲಿಕೆಯಾದ ಬಲಿದಾನ ಎಂದು ವೈಭವೀಕರಿಸುತ್ತಿದ್ದವು. ಊಳಿಗಮಾನ್ಯ ರಾಜಪ್ರಭುತ್ವಗಳಲ್ಲಿ ಮಾಡಲಾಗುವ ಈ ಸೈನಿಕ ರಾಜಕಾರಣವು ಪ್ರಜಾಪ್ರಭುತ್ವದಲ್ಲೂ ನಡೆಯುತ್ತದೆ ಎನ್ನುವುದೇ ದುರಂತದ ಸಂಗತಿ. ಇದಕ್ಕೆ ಪೂರಕವಾಗಿ ನಮ್ಮ ರಾಜಕೀಯ ಪಕ್ಷಗಳ ಹೆಸರಲ್ಲಿ ಸೇನೆ ದಳ ಎಂಬ ಸೈನಿಕ ಶಬ್ದಗಳೂ ಇವೆ. ಸಾಲದೆಂಬಂತೆ, ಜನರು ತಮ್ಮ ಜತೆ ವಾಸಿಸುವ ಸಹನಾಗರಿಕರನ್ನು ಧರ್ಮ ಭಾಷೆ ಸಂಸ್ಕೃತಿ ಆಹಾರದ ಭಿನ್ನತೆಗಾಗಿ ದ್ವೇಷಿಸುವ, ಕೊಲ್ಲುವ ಅರೆಸೈನಿಕರೂ ಆಗುತ್ತಿರುವುದು ಈ ಯುಗಧರ್ಮದ ದುರಂತ.

ಜರ್ಮನಿ ಪಾಕಿಸ್ತಾನ ಅಮೆರಿಕ ಭಾರತವನ್ನು ಒಳಗೊಂಡಂತೆ, ಯಾವತ್ತೂ ಬಲಪಂಥೀಯ ಪ್ರಭುತ್ವಗಳು ತಮ್ಮ ದುರಾಡಳಿತದಿಂದ ಚುನಾವಣೆ ಸೋಲುವ ಮತ್ತು ಜನಪ್ರಿಯತೆ ತೀವ್ರವಾಗಿ ಕುಗ್ಗಿದ್ದ ಸನ್ನಿವೇಶದಲ್ಲಿ ಯುದ್ಧ ಕೊಲೆ ಹೆಣ ರಕ್ತ ಸಾವುಗಳನ್ನು ಬಯಸುತ್ತವೆ. ಆ ಸಾವು ಸೈನಿಕರದಾಗಿರಬಹುದು, ಪಕ್ಷದ ಕಾರ್ಯಕರ್ತರದಾಗಿರಬಹುದು, ಇಲ್ಲವೇ ಪ್ರಜೆಗಳದ್ದಾಗಿರಬಹುದು. ಇವು ಬಲಪಂಥೀಯ ರಾಷ್ಟ್ರೀಯತೆಗೆ ಯಾವಾಗಲೂ ಪ್ರಬಲವಾದ ಅಸ್ತ್ರಗಳು. ಹೀಗಾಗಿಯೇ ಈಗಲೂ ಚುನಾವಣೆ ಸನ್ನಿವೇಶದಲ್ಲಿ ಆಗುವ ನಿರ್ದಿಷ್ಟ ಧರ್ಮದ ವ್ಯಕ್ತಿಯ ಕೊಲೆ, ಚುನಾವಣೆಯ ಫಲಿತಾಂಶವನ್ನೇ ಬದಲಿಸುತ್ತದೆ. ಕವಿಯೊಬ್ಬ ಹೇಳಿದಂತೆ ‘ರಾಜಕೀಯ ನಾಯಕರು ಧರ್ಮ ದೇಶ ಖತರೇಮೇ ಹೈ ಎಂದು ಬೊಬ್ಬೆ ಹಾಕುತ್ತಿದ್ದಾರಾ? ಹಾಗಿದ್ದಲ್ಲಿ ಬಹುಶಃ ಚುನಾವಣೆಗಳು ಬಂದಿರಬೇಕು’ ಎಂಬುದು ಇಂದಿಗೂ ವಾಸ್ತವವೇ. ತಮ್ಮದೇ ದೇಶದ ಜನರನ್ನು ದಮನಿಸಿ, ಸೈನಿಕರನ್ನು ಯುದ್ಧಕ್ಕೆ ಮತ್ತಿತರ ಅಪಾಯಕ್ಕೆ ದೂಡಿ, ಕೊಲ್ಲಿಸಿ, ತಾನು ಅಧಿಕಾರ ಜನಪ್ರಿಯತೆ ಅನುಭವಿಸುವ ಈ ಸಂಸ್ಕೃತಿ ಪ್ರಜಾಪ್ರಭುತ್ವದ ಘೋರವಾದ ಸತ್ಯವಾಗಿದೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...

ಬೆಂಗಳೂರು: ಮತ್ತು ಬೆರೆಸಿದ ಪಾನೀಯ ನೀಡಿ ಗೆಳೆಯ ಮತ್ತು ಆತನ ಸ್ನೇಹಿತನಿಂದ ಅತ್ಯಾಚಾರ, ಬೆದರಿಕೆ: ಕಾಲೇಜು ವಿದ್ಯಾರ್ಥಿನಿಯಿಂದ ದೂರು

19 ವರ್ಷದ ಖಾಸಗಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯ ಮತ್ತು ಅವನ ಸ್ನೇಹಿತನ ವಿರುದ್ಧ ಮಾದಕ ದ್ರವ್ಯ ಸೇವಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದಾಳೆ. ಜಕ್ಕೂರಿನಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಗೆ...

ಮಕ್ಕಳಲ್ಲಿ ಹಿಂಸಾತ್ಮಕ ಪ್ರವೃತ್ತಿ ತಡೆಯಲು ಮೀನು-ಮಾಂಸ ಮಾರಾಟ ನಿಷೇಧ: ಬಿಹಾರ ಉಪಮುಖ್ಯಮಂತ್ರಿ

ಮಕ್ಕಳಲ್ಲಿ 'ಹಿಂಸಾತ್ಮಕ ಪ್ರವೃತ್ತಿ'ಗಳನ್ನು ನಿಲ್ಲಿಸುವ ಪ್ರಯತ್ನದಲ್ಲಿ ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಅಥವಾ ಜನದಟ್ಟಣೆಯ ಸ್ಥಳಗಳ ಬಳಿ ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್...

ದೆಹಲಿಯಲ್ಲಿ ಅರುಣಾಚಲದ ಮಹಿಳೆಯರಿಗೆ ಜನಾಂಗೀಯ ನಿಂದನೆ : ಪ್ರಕರಣ ದಾಖಲು

ದೆಹಲಿಯ ಮಾಳವೀಯ ನಗರದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳೆಯರಿಗೆ ಜನಾಂಗೀಯ ನಿಂದನೆ ಮಾಡಿ, ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೆಬ್ರವರಿ 20 ಎಸಿ ದುರಸ್ತಿ ಸಂದರ್ಭದಲ್ಲಿ ಉಂಟಾದ ಸಣ್ಣ ಜಗಳವೊಂದು ಜನಾಂಗೀಯ ನಿಂದನೆಗೆ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ್ದ ಜಿಮ್ ಟ್ರೈನರ್ ‘ಮೊಹಮ್ಮದ್ ದೀಪಕ್’ ಅವರನ್ನು ಭೇಟಿಯಾದ ರಾಹುಲ್ ಗಾಂಧಿ 

ನವದೆಹಲಿ: ಕಳೆದ ತಿಂಗಳು ಕೋಟ್ದ್ವಾರದಲ್ಲಿರುವ ಅಹ್ಮದ್ ಅವರ ಬಾಬಾ ಸ್ಕೂಲ್ ಡ್ರೆಸ್ & ಮ್ಯಾಚಿಂಗ್ ಸೆಂಟರ್‌ನ ರಕ್ಷಣೆಗೆ ಬಂದು ಸುದ್ದಿಯಲ್ಲಿದ್ದ ಜಿಮ್ ತರಬೇತುದಾರ ದೀಪಕ್ ಅವರನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್...

‘ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ..’; ಛಲವಾದಿಗೆ ಸಚಿವ ಪ್ರಿಯಾಂಕ್‌ ತಿರುಗೇಟು

"ಸಂವಿಧಾನ ವಿರೋಧಿಸಿ ಕರಡು ಪ್ರತಿಯನ್ನು ಸುಟ್ಟಿದ್ದ ಸಂಘದವರ ಚಡ್ಡಿಗಳನ್ನು ತಲೆ ಮೇಲೆ ಹೊರುವುದು ದಲಿತತ್ವವಲ್ಲ" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ...

ಅಮೆರಿಕದಿಂದ ದಾಳಿ ಬೆದರಿಕೆ : ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

ಅಮೆರಿಕದ ದಾಳಿ ಬೆದರಿಕೆ ಹಾಗೂ ಮತ್ತೆ ಪ್ರತಿಭಟನೆಗಳು ಭುಗಿಲೆದ್ದಿರುವ ಕಾರಣ, ಇರಾನ್‌ನಲ್ಲಿರುವ ಎಲ್ಲಾ ಭಾರತೀಯರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ವ್ಯವಸ್ಥೆಯ ಮೂಲಕ ತಕ್ಷಣ ದೇಶ ತೊರೆಯುವಂತೆ ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ...

ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್

ಕೇಂದ್ರ ಅಪರಾಧ ಶಾಖೆ (ಸಿಸಿಬಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೆಲವು ದಿನಗಳ ನಂತರ, ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.  ಪವಿತ್ರಾ ಬಿ.ಎನ್ ಸಲ್ಲಿಸಿದ ದೂರಿನ ಆಧಾರದ ಮೇಲೆ...