ಕಳೆದ ಗಣರಾಜ್ಯೋತ್ಸವದಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿದ್ದರು. ಕೆಲವು ಕಿಡಿಗೇಡಿಗಳಿಂದಾಗಿ ಹಿಂಸಾಚಾರ ಸಂಭವಿಸಿದ ನಂತರ ದೆಹಲಿ ಪೊಲೀಸರು 83 ಮಂದಿಯನ್ನು ಬಂಧಿಸಿದ್ದರು. ಅಂದು ಬಂಧಿತರಾಗಿದ್ದವರಿಗೆ ಪಂಜಾಬ್ ಸರ್ಕಾರ ಆರ್ಥಿಕ ಸಹಾಯವನ್ನು ಘೋಷಿಸಿದೆ. ಈ ಮೂಲಕ ಕೇಂದ್ರದ ವಿರುದ್ಧ ಪಂಜಾಬ್ನಲ್ಲಿರುವ ಕಾಂಗ್ರೆಸ್ ಸರ್ಕಾರ ಹೊಸ ಹೋರಾಟಕ್ಕೆ ಮುನ್ನುಡಿ ಬರೆದಿದೆ.
ಖಾಸಗಿಯವರ ಹಿಡಿತಕ್ಕೆ ಕೃಷಿ ವಲಯವನ್ನು ದೂಡುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಒಂದು ವರ್ಷದಿಂದ ದೆಹಲಿಯಲ್ಲಿ ಪಂಜಾಬ್ ಹಾಗೂ ಹರಿಯಾಣ ರೈತರು ಹೋರಾಟ ನಡೆಸುತ್ತಿದ್ದಾರೆ. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ.
ದೆಹಲಿ ಪೊಲೀಸರು ಮತ್ತು ರೈತ ಮುಖಂಡರ ನಡುವಿನ ಮಾತುಕತೆಯ ನಂತರ ಕಳೆದ ಜನವರಿ 26ರಂದು ರೈತರಿಂದ ಟ್ರ್ಯಾಕ್ಟರ್ ರ್ಯಾಲಿ ನಡೆಯಲು ಅನುಮತಿ ದೊರೆಯಿತು. ಪ್ರಭುತ್ವದೊಂದಿಗೆ ಗುರುತಿಸಿಕೊಂಡಿದ್ದ ಕೆಲವು ಕಿಡಿಗೇಡಿಗಳು ರೈತ ಚಳವಳಿಗೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಟ್ರ್ಯಾಕ್ಟರ್ ರ್ಯಾಲಿಯಂದು ಮಾಡಿದ್ದರು.
“ಪ್ರತಿಭಟನಾಕಾರರ ಗುಂಪುಗಳು ಪೂರ್ವ ನಿಯೋಜಿತ ಮಾರ್ಗವನ್ನು ಅನುಸರಿಸಲಿಲ್ಲ. ದೆಹಲಿ ಪ್ರವೇಶಿಸಲು ಬ್ಯಾರಿಕೇಡ್ಗಳನ್ನು ದ್ವಂಸ ಮಾಡಿದರು. ಕೆಂಪು ಕೋಟೆಯನ್ನು ಪ್ರವೇಶಿಸಿ, ಅನಪೇಕ್ಷಿತ ಬಾವುಟವನ್ನು ಹಾರಿಸಿದರು” ಎಂದು ಪೊಲೀಸರು ಆರೋಪಿಸಿದ್ದರು.
ಹೊಸ ಬೆಳವಣಿಗೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡಿದ್ದು, “ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟವರಿಗೆ ತಮ್ಮ ಸರ್ಕಾರ ಪರಿಹಾರವನ್ನು ನೀಡಲಿದೆ” ಎಂದು ಘೋಷಿಸಿದ್ದಾರೆ.
Reiterating My Govt’s stand to support the ongoing #FarmersProtest against three black farm laws, We have decided to give Rs 2 lakh compensation to 83 people arrested by Delhi Police for carrying out a tractor rally in the national capital on 26th January, 2021.
— Charanjit S Channi (@CHARANJITCHANNI) November 12, 2021
“ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಸರ್ಕಾರದ ನಿಲುವನ್ನು ಪುನರುಚ್ಚರಿಸುತ್ತೇನೆ. ಜನವರಿ 26, 2021ರಂದು ರಾಷ್ಟ್ರದ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದಕ್ಕಾಗಿ ದೆಹಲಿ ಪೊಲೀಸರು ಬಂಧಿಸಿದ 83 ಜನರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ನೀಡಲು ನಿರ್ಧರಿಸಿದ್ದೇವೆ” ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿರಿ: ರೈತ ಹೋರಾಟ: ಸಿಂಘು ಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರೈತರ ಮೃತದೇಹ ಪತ್ತೆ
ಅಷ್ಟೇ ಅಲ್ಲದೆ ಒಕ್ಕೂಟ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ವಿಧಾನಸಭೆ ಗುರುವಾರ ನಿರ್ಣಯ ಅಂಗೀಕರಿಸಿದೆ. ಕೇಂದ್ರ ಸರ್ಕಾರ ಕಾನೂನುಬಾಹಿರವಾಗಿ ರಾಜ್ಯ ಸರ್ಕಾರದ ವಿಷಯಗಳಲ್ಲಿ ಪ್ರವೇಶಿಸಿದೆ ಎಂದು ಪಂಜಾಬ್ ಸರ್ಕಾರ ತಿಳಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ವಿಧಾನಸಭೆ ನಿರ್ಣಯ ಅಂಗೀಕರಿಸಿತ್ತು. ಈಗ ಎರಡನೇ ಬಾರಿ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ಎರಡು ದಿನಗಳ ವಿಧಾನಸಭೆ ಅಧಿವೇಶನದ ಮುಕ್ತಾಯದ ದಿನದಂದು ರಾಜ್ಯ ಕೃಷಿ ಸಚಿವ ರಣದೀಪ್ ಸಿಂಗ್ ನಾಭಾ ಅವರು ನಿರ್ಣಯ ಮಂಡಿಸಿದರು. ಸದನದಲ್ಲಿ ಚರ್ಚೆಯ ನಂತರ ಇಬ್ಬರು ಬಿಜೆಪಿ ಶಾಸಕರ ಅನುಪಸ್ಥಿತಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.
“ನವೆಂಬರ್ 11, 2021ರಂದು ನಡೆದ ಈ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ಪಂಜಾಬ್ ಕೃಷಿ ಸಚಿವರು ಮಂಡಿಸಿದ ನಿರ್ಣಯ ಸದನದಲ್ಲಿ ಅಂಗೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರವು ಯಾವುದೇ ಅರ್ಹತೆ ಇಲ್ಲದೆ ರಾಜ್ಯಗಳ ಪಟ್ಟಿಯಲ್ಲಿನ ವಿಷಯದಲ್ಲಿ ಕಾನೂನುಬಾಹಿರವಾಗಿ ಜಾರಿಗೆ ತಂದ ಮೂರು ವಿವಾದಾತ್ಮಕ ಕಾನೂನುಗಳನ್ನು ಮತ್ತೊಮ್ಮೆ ತಿರಸ್ಕರಿಸುತ್ತದೆ” ಎಂದು ಹೇಳಿದೆ.