ಸರ್ಕಾರದ ವಿರುದ್ಧ ಪ್ರತಿಭಟಿಸುವ ಹೋರಾಟಗಾರರ ಮೇಲೆ ಪ್ರತಿಕಾರದಿಂದ ಬುಲ್ಡೋಜರ್ ಹರಿಸುತ್ತಿರುವ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಜೂನ್ 15ರ ಬುಧವಾರದಂದು ಬೆಂಗಳೂರಿನಲ್ಲಿ ರಾಜಭವನ್ ಚಲೋ ಪ್ರತಿಭಟನೆ ನಡೆಸುವುದಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಬುಲ್ಡೋಜರ್ ಸಂಸ್ಕೃತಿಯನ್ನು ವಿರೋಧಿಸಿ, ದ್ವೇಷ ರಾಜಕಾರಣವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ತಾಹೀರ್ ಹುಸೇನ್ರವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಕಳೆದ ಶುಕ್ರವಾರ ಪ್ರಯಾಗ್ ರಾಜ್ ಸೇರಿದಂತೆ ಉಳಿದೆಲ್ಲ ನಡೆದ ಪ್ರತಿಭಟನೆಯು ಸ್ವಯಂ ಪ್ರೇರಿತವಾಗಿದ್ದು, ಅದನ್ನು ಯಾರೂ ಸಂಘಟಿಸಿರಲಿಲ್ಲ. ಅಲ್ಲಿ ಹಿಂಸಾಚಾರ ಉಂಟಾಗಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ಅದರಲ್ಲಿ ಭಾಗಿಯಾಗಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ. ಆದರೆ ಆ ನೆಪದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯರಾದ ಮೊಹಮ್ಮದ್ ಜಾವೇದ್ ಮತ್ತು ಅವರ ಮಗಳನ್ನು ಬಂಧಿಸಿರುವುದನ್ನು ನಾವು ಖಂಡಿಸುತ್ತೇವೆ” ಎಂದರು.
ಕೇವಲ 24 ಗಂಟೆಯೊಳಗೆ ಅವರಿಗೆ ನೋಟಿಸ್ ಕೊಟ್ಟು ಅವರ ಮನೆಯನ್ನು ಧ್ವಂಸ ಮಾಡಲಾಗಿದೆ. ಆ ಮನೆಯು ಸಕ್ರಮ ಮನೆಯಾಗಿದ್ದು, ತೆರಿಗೆ ಸೇರಿದಂತೆ ಎಲ್ಲವನ್ನು ಕಟ್ಟಿರುವ ರಶೀದಿಗಳಿವೆ. ಆದರೂ ಕೇವಲ ಪ್ರತೀಕಾರ ಮನೋಭಾವದಿಂದ ಯುಪಿ ಸರ್ಕಾರ ಬುಲ್ಡೋಜರ್ ಹರಿಸಿದೆ. ಈ ಗೂಂಡಾ ರಾಜಕೀಯವನ್ನು ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ ಎಂದರು.
ಇಂದು ದೇಶಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಅವರ ಆಸ್ತಿ ಪಾಸ್ತಿಗಳನ್ನು ನಾಶಪಡಿಸಲಾಗುತ್ತಿದೆ. ಯಾರಾದರೂ ತಪ್ಪೆಗೆಸಿದ್ದರೆ, ಅಕ್ರಮ ಕಟ್ಟಡಗಳನ್ನು ಹೊಂದಿದ್ದರೆ ಅವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆ ಹೊರತು ಬುಲ್ಡೋಜರ್ ಹರಿಸುವುದಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ ಕಾನೂನನ್ನು ಗಾಳಿ ತೀರಿ ಅವರೆ ನ್ಯಾಯಾಧೀಶರಾಗಿ ಶಿಕ್ಷೆ ನೀಡುವುದನ್ನು ವಿರೋಧಿಸುತ್ತೇವೆ ಎಂದರು.
ಬುಧವಾರ ಬೆಳಿಗ್ಗೆ 10.30ಕ್ಕೆ ನಗರದ ಫ್ರೀಡಂ ಪಾರ್ಕ್ನಿಂದ ಮೆರವಣಿಗೆ ಆರಂಭವಾಗಲಿದ್ದು ರಾಜಭವನದತ್ತ ಚಲಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬುಲ್ಡೋಜರ್ ಹರಿಸುವುದು ಕಾನೂನಿನ ಅಣಕ: ಸುಪ್ರೀಂ ಮಧ್ಯಪ್ರವೇಶಕ್ಕೆ ನಿವೃತ್ತ ಜಡ್ಜ್ಗಳ ಆಗ್ರಹ