ರೈತರು ತಮ್ಮ ‘ಚಲೋ ದೆಹಲಿ’ ಮೆರವಣಿಗೆಯನ್ನು ಪ್ರಾರಂಭಿಸುತ್ತಿದ್ದಂತೆ, ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನಾಯಕ ಸರ್ವಾನ್ ಸಿಂಗ್ ಪಂಧೇರ್, ಮೋದಿ ಸರ್ಕಾರವು ರೈತರನ್ನು ಹಿಂಸಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ದಿಲ್ಲಿಯ ಗಡಿಯಲ್ಲಿ ಕಾಂಕ್ರೀಟ್ ಬ್ಯಾರಿಕೇಡ್ಗಳು, ಮುಳ್ಳುತಂತಿಗಳು, ಟೈರ್ ಬಸ್ಟರ್ಗಳನ್ನು ಹಾಕಲಾಗಿದ್ದು, ರಾಷ್ಟ್ರ ರಾಜಧಾನಿಗೆ ರೈತರ ಸಂಚಾರಕ್ಕೆ ಅಡ್ಡಿಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಂಧೇರ್, ‘ಪಂಜಾಬ್ ಮತ್ತು ಹರಿಯಾಣದ ರೈತರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಈ ಎರಡೂ ರಾಜ್ಯಗಳು ಇನ್ನು ಮುಂದೆ ಭಾರತದ ಭಾಗವಾಗಿಲ್ಲ, ಅವರನ್ನು ಅಂತರರಾಷ್ಟ್ರೀಯ ಗಡಿ ಎಂದು ಪರಿಗಣಿಸಲಾಗುತ್ತಿದೆ’ ಎಂದು ಕಿಡಿಕಾರಿದರು.
‘ನಾವು ರಸ್ತೆಗಳನ್ನು ನಿರ್ಬಂಧಿಸುತ್ತೇವೆ ಎಂದು ಹೇಳುತ್ತಿಲ್ಲ; ಕಳೆದ ಎರಡು-ಮೂರು ದಿನಗಳಿಂದ ಸರ್ಕಾರವೇ ರಸ್ತೆಗಳನ್ನು ನಿರ್ಬಂಧಿಸಿದೆ. ನಾವು ಆಹಾರಧಾನ್ಯಗಳನ್ನು ಬೆಳೆಯುತ್ತಿರುವ ನಾವು ದೇಶವನ್ನು ಪೋಷಿಸುತ್ತೇವೆ. ಆದರೆ ಅವರು ನಮಗಾಗಿ ರಸ್ತೆಗಳಲ್ಲಿ ಮೊಳೆಗಳ ಬೆಳೆಯನ್ನು ಬೆಳೆಸಿದ್ದಾರೆ” ಎಂದು ಪಂಧೇರ್ ಹೇಳಿದರು.
ಹರ್ಯಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಂಧೇರ್, ‘ಹರಿಯಾಣವನ್ನು “ಕಾಶ್ಮೀರ ಕಣಿವೆ”ಯಾಗಿ ಪರಿವರ್ತಿಸಲಾಗಿದೆ’ ಎಂದು ಅವರು ಹೇಳಿದರು.
ಸೋಮವಾರ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಮತ್ತು ಪಿಯೂಷ್ ಗೋಯಲ್ ರೈತರನ್ನು ಭೇಟಿಯಾಗಿ ಅವರ ಪರಿಸ್ಥಿತಿಯನ್ನು ಚರ್ಚಿಸಿದರು. ಆದರೆ, ಸಭೆ ನಂತರದಲ್ಲಿ ರೈತರು ಅತೃಪ್ತರಾಗಿದ್ದು, ಮೆರವಣಿಗೆಯನ್ನು ಮುಂದುವರಿಸಲು ನಿರ್ಧರಿಸಿದರು. ‘ನಾವು ನಿನ್ನೆಯ ಸಭೆಯಲ್ಲಿ ಸಮಸ್ಯೆಯನ್ನು ಪರಿಹರಿಸಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇವೆ. ಕೇಂದ್ರ ಸರ್ಕಾರದೊಂದಿಗೆ ಘರ್ಷಣೆಯನ್ನು ತಪ್ಪಿಸಲು ನಾವು ಐದು ಗಂಟೆಗಳ ಕಾಲ ಸಭೆಯಲ್ಲಿ ಭಾಗವಹಿಸಿದ್ದೇವೆ’ ಎಂದು ಪಂಧರ್ ಅವರು ಸಭೆಯ ಕುರಿತು ಮಾತನಾಡುತ್ತಾ ಹೇಳಿದರು.
ರೈತರ ಬೇಡಿಕೆಗಳು ’75 ವರ್ಷಗಳಿಂದ ಬಗೆಹರಿಯದೆ ಉಳಿದಿವೆ; ಈ ದೇಶದಲ್ಲಿ ರೈತರನ್ನು ‘ದೇಶವಿರೋಧಿ’ ಎಂದು ಪರಿಗಣಿಸುವುದು ದುರದೃಷ್ಟಕರ. ನಾವು ಈ ದೇಶದ ಪ್ರಜೆಗಳು ಮತ್ತು ನಾವು ನಮ್ಮ ಬೇಡಿಕೆಗಳನ್ನು ಮುಂದುವರಿಸುತ್ತೇವೆ’ ಎಂದು ಪಂಧೇರ್ ಹೇಳಿದ್ದಾರೆ.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ಅನ್ನು ವಿಧಿಸಲಾಗಿದೆ ಮತ್ತು ಹರಿಯಾಣ ಕ್ರೀಡಾಂಗಣಗಳನ್ನು ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲಾಗಿದೆ. ರೈತರನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ; ರೈತರನ್ನು ಬಂಧಿಸಿಡಲು ಕ್ರೀಡಾಂಗಣಕ್ಕೆ ಬೇಡಿಕೆ ಇಟ್ಟ ಕೇಂದ್ರ; ನಿರಾಕರಿಸಿದ ಆಪ್ ಸರ್ಕಾರ