2024ರ ಲೋಕಸಭಾ ಚುನಾವಣೆಗೂ ಮುನ್ನ ದೇಶದಲ್ಲಿ ಒಡೆದುಹೋಗಿರುವ ಪ್ರತಿಪಕ್ಷಗಳನ್ನು ಒಟ್ಟು ಸೇರಿಸು ದೃಷ್ಟಿಯಿಂದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರುವಾರ ಸಂಜೆ ಭೇಟಿಯಾದರು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ದೆಹಲಿಯಲ್ಲಿರುವ ಖರ್ಗೆ ಅವರ ಮನೆಗೆ ಬೇಟಿ ನೀಡಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ”ಎಲ್ಲ ವಿರೋಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಯಬೇಕು ಎಂದು ನಾನು ಬಯಸುತ್ತೇನೆ. ನಾವು ಮಮತಾ ಬ್ಯಾನರ್ಜಿ, [ಅರವಿಂದ್] ಕೇಜ್ರಿವಾಲ್.. ಬಳಿಹೋಗಿ ಅವರೊಂದಿಗೂ ಮಾತನಾಡಬೇಕು. ನಾವು ಪ್ರತಿಪಕ್ಷಗಳನ್ನು ಒಗ್ಗೂಡಿಸಲು ಎಲ್ಲರನ್ನು ಕರೆದುಕೊಂಡು ಮುಂದೆ ಸಾಗುತ್ತೇವೆ” ಎಂದು ಶರದ್ ಪವಾರ್ ಹೇಳಿದ್ದಾರೆ.
ಆ ಬಳಿಕ ಖರ್ಗೆ ಮಾತನಾಡಿ, ”ಶರದ್ ಪವಾರ್ ಅವರು ಮುಂಬೈನಿಂದ ನಮ್ಮನ್ನು ಭೇಟಿ ಮಾಡಲು ಬಂದು, ನಮಗೆ ಮಾರ್ಗದರ್ಶನ ನೀಡಿದ್ದು ನನಗೆ ಸಂತೋಷವಾಗಿದೆ. ನಿನ್ನೆ, ನಾನು ಮತ್ತು ರಾಹುಲ್ ಗಾಂಧಿ ಅವರು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ದೇಶದಲ್ಲಿ ವಿರೋಧ ಪಕ್ಷಗಳನ್ನು ಒಗ್ಗೂಡಿಸುತ್ತೇವೆ ಎಂದು ಮಾತುಕತೆ ನಡೆಸಿದ್ದೇವೆ” ಎಂದು ಹೇಳಿದರು.
”ಇಂದು ದೇಶದಲ್ಲಿ ನಡೆಯುತ್ತಿರುವ ಘಟನೆಗಳು… ದೇಶವನ್ನು ಉಳಿಸಲು, ಪ್ರಜಾಪ್ರಭುತ್ವವನ್ನು ಉಳಿಸಲು, ಸಂವಿಧಾನ ಮತ್ತು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸಲು… ಸರ್ಕಾರಿ ಸಂಸ್ಥೆಗಳ ದುರುಪಯೋಗ, ಯುವಕರ ಉದ್ಯೋಗಕ್ಕಾಗಿ ಹಣದುಬ್ಬರ ಮುಂತಾದ ವಿಷಯಗಳಲ್ಲಿ ನಾವು ಒಂದಾಗಿ ಹೋರಾಡಲು ಸಿದ್ಧರಿದ್ದೇವೆ” ಎಂದು ಹೇಳಿದರು.
Stronger, together !
We stand united for a better, brighter and an equal future for our people.
Along with Shri @RahulGandhi ji met @NCPspeaks President, Shri @PawarSpeaks ji and had a discussion on the future course of action. pic.twitter.com/EIMPtA15cM
— Mallikarjun Kharge (@kharge) April 13, 2023
“ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಖರ್ಗೆ ಮತ್ತು ಪವಾರ್ ಜೀ ಹೇಳಿದ್ದಾರೆ. ಇದು ಪ್ರಾರಂಭವಾಗಿದೆ ಮತ್ತು ಈ ಪ್ರಕ್ರಿಯೆಗೆ ಎಲ್ಲಾ ಪಕ್ಷಗಳು ಬದ್ಧವಾಗಿವೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಖರ್ಗೆ ಮತ್ತು ಗಾಂಧಿ ಅವರನ್ನು ಭೇಟಿಯಾದ ಒಂದು ದಿನದ ನಂತರ ಈ ಸಭೆ ನಡೆಸಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಸೇರುವ ಮಾತುಕತೆ ನಡೆಸಲಾಗುತ್ತಿದೆ.
संविधान सुरक्षित रखेंगे,
और लोकतंत्र बचाएँगे !
श्री @RahulGandhi जी और हमने बिहार के मुख्यमंत्री श्री @NitishKumar जी, उपमुख्यमंत्री श्री @yadavtejashwi जी व अन्य नेताओं से मुलाक़ात कर, जनता की आवाज़ को एक साथ उठाने और देश को नई दिशा देने का संकल्प दोहराया। pic.twitter.com/FZP9JsPGaQ
— Mallikarjun Kharge (@kharge) April 12, 2023
ಪ್ರತಿಪಕ್ಷಗಳ ಏಕತೆಯನ್ನು ಭದ್ರಪಡಿಸುವ ಪ್ರಯತ್ನಗಳು ಈ ವಾರ ವೇಗವನ್ನು ಪಡೆದುಕೊಳ್ಳುತ್ತಿವೆ. ನಿತೀಶ್ ಕುಮಾರ್ ಅವರು ಎಡಪಕ್ಷಗಳ ಹಿರಿಯ ಅನುಭವಿ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಹೆಚ್ಚಿನ ಚರ್ಚೆಗಳನ್ನು ಮಾಡಬೇಕಿರುವುದರಿಂದ ಎಲ್ಲ ನಾಯಕರು ಏಕತೆಯ ಮಾತುಕತೆಗಳನ್ನು ಒಪ್ಪಿಕೊಂಡು ಮುಂದುವರೆಯುವ ಸಾಧ್ಯತೆಯಿದೆ. ಅತಿ ಶೀಘ್ರದಲ್ಲಿಯೇ ವಿಪಕ್ಷಗಳ ಉನ್ನತ ನಾಯಕರ ಸಭೆಯನ್ನು ಕರೆಯಲು ಕಾಂಗ್ರೆಸ್ ಯೋಜಿಸಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ ಬಳಿಕ ನಿತೀಶ್ ಕುಮಾರ್ ಅವರು ದೆಹಲಿಯಿಂದ ತೆರಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರೇ ದೇಶ ವಿರೋಧಿಗಳು: ನಡ್ಡಾಗೆ ಖರ್ಗೆ ತಿರುಗೇಟು
ನಿತೀಶ್ ಕುಮಾರ್ ಅವರು ಸೀತಾರಾಮ್ ಯೆಚೂರಿ ಅವರನ್ನು ಭೇಟಿ ಮಾಡಿದ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ಸ್ಟ್ (ಸಿಪಿಐ-ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ರಾಜ್ಯ ಮಟ್ಟದಲ್ಲಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
”ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರಯತ್ನಗಳು ವೇಗವನ್ನು ಪಡೆದುಕೊಂಡಿವೆ. ಪ್ರತಿಪಕ್ಷಗಳ ಒಕ್ಕೂಟವನ್ನು ರಚಿಸಲಾಗುವುದು ಮತ್ತು ರಾಜ್ಯ ಮಟ್ಟದಲ್ಲಿ ಸ್ಥಾನ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಅದು ಸಾಕಾರಗೊಂಡರೆ ಚುನಾವಣೆ ನಂತರವೇ ತೃತೀಯ ರಂಗ ಬರಲಿದೆ” ಎಂದು ಸೀತಾರಾಂ ಯೆಚೂರಿ ಹೇಳಿದರು.
”ಭಾರತದಲ್ಲಿ 1996ರಲ್ಲಿ ಯುನೈಟೆಡ್ ಫ್ರಂಟ್ನಂತಹ ಚುನಾವಣಾ ನಂತರದ ರಂಗಗಳನ್ನು ರಚಿಸಲಾಗಿವೆ. 1998 ರಲ್ಲಿ ಚುನಾವಣೆಯ ನಂತರ NDA ರಚನೆಯಾಯಿತು. 2004ರಲ್ಲಿ ಚುನಾವಣೆ ಬಳಿಕ ಯುಪಿಎ ರಚನೆ ಮಾಡಲಾಯಿತು” ಎಂದು ಯೆಚೂರಿ ಹೇಳಿದರು.
ಆ ಬಳಿಕ ಟ್ವೀಟ್ ಮಾಡಿದ ಯೆಚೂರಿ ಅವರು, ”ಬಿಜೆಪಿ ಮತ್ತು ಮೋದಿ ಸರ್ಕಾರದಿಂದ ತೀವ್ರ ಹಲ್ಲೆಗೊಳಗಾಗಿರುವ ಭಾರತೀಯ ಗಣರಾಜ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಜಾತ್ಯತೀತ ಪ್ರಜಾಪ್ರಭುತ್ವ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನಗಳನ್ನು ಮುಂದುವರಿಸಲು ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಕೈಜೋಡಿಸುತ್ತೇನೆ. ದೇಶ, ದೇಶದ ಜನರು ಮತ್ತು ಜನರ ಜೀವನೋಪಾಯ ಉಳಿಸಲು ಬಿಜೆಪಿಯನ್ನು ಸೋಲಿಸಿ” ಎಂದಿದ್ದಾರೆ.
With Bihar CM Shri Nitish Kumar to carry forward the efforts to unite secular democratic parties to safeguard the Indian Republic, Constitution and Democracy, severely assaulted by the BJP & Modi govt. Defeat the BJP in order to save India & people’s livelihoods. pic.twitter.com/9yXdRGM3tI
— Sitaram Yechury (@SitaramYechury) April 13, 2023