ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಕೇಂದ್ರದಿಂದ 20 ಕಿ,ಮೀ ದೂರದಲ್ಲಿರುವ ಶರವೂರು, ಕಂದ್ಲಾಜೆ, ನಗ್ರಿ ಗ್ರಾಮಗಳಿಗೆ ರಸ್ತೆ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ನಾವು ಎಲ್ಲಾ ರೀತಿಯ ತೆರಿಗೆ ಕಟ್ಟುತ್ತೇವೆ. ಜಿಎಸ್ಟಿ ಕಟ್ಟುತ್ತೇವೆ, ಆದರೆ ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ರಸ್ತೆ ಮಾಡಿಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚುನಾವಣೆಯಲ್ಲಿ ನಮಗೆ ಹಣ ನೀಡುವುದು ಬೇಡ. ನಾವು ನಮ್ಮ ಮನೆಗೆ ಏನಾದರೂ ಮಾಡಿಕೊಡಿ ಎಂದು ಕೇಳುತ್ತಿಲ್ಲ. ಬದಲಿಗೆ ಗ್ರಾಮದ ಅಭಿವೃದ್ದಿ ಮಾಡಿ ಎನ್ನುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಸಂಜೀವ ಮಠಂದೂರರು ಪ್ರತಿನಿಧಿಸುವ ಪುತ್ತೂರು ಕ್ಷೇತ್ರದ ವ್ಯಾಪ್ತಿಗೆ ಈ ಮೇಲಿನ ಗ್ರಾಮಗಳು ಬರಲಿದ್ದು, ಶಾಸಕರು ಅಭಿವೃದ್ದಿಯ ಕಡೆ ಗಮನ ಹರಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
Fed up with lack of development in their Constituency. Sharoor villagers in #DakshinKannada have decided to #boycott #KarnatakaElection2023. Banners have been put up by the residents. #Karnataka pic.twitter.com/3c0nY79Pcy
— Imran Khan (@KeypadGuerilla) March 16, 2023
ಈ ಹಿಂದೆ ಶಾಸಕ ಸಂಜೀವ ಮಠಂದೂರರ ತವರು ಗ್ರಾಮ ಹಿರೇಬಂಡಾಡಿಯ ಮಂದಿಯೆ ರಸ್ತೆ ನಿರ್ಮಾಣಕ್ಕಾಗಿ ಮತ್ತು ಕಳಪೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿ ಶಾಸಕರಿಗೆ ಘೇರಾವ್ ಹಾಕಿದ್ದರು.
ಕೋಟ್ಯಂತರ ರೂ ಅಡಿಕೆ ವ್ಯವಹಾರದ ದುಡ್ಡಿನ ಪುತ್ತೂರು ಪೇಟೆಯ ಥಳುಕು-ಬಳುಕು ಕಂಡರೆ ಇಡೀ ತಾಲೂಕು ಅಭಿವೃದ್ದಿಯಾಗಿದೆ ಎಂಬ ಭ್ರಮೆ ಮೂಡುತ್ತದೆ. ಆದರೆ ವಾಸ್ತವ ಅದಕ್ಕೆ ವಿರುದ್ಧವಾಗಿದೆ. ಸರಿಯಾದ ರಸ್ತೆ, ಸಂಪರ್ಕ ಸೇತುವೆ, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಸೌಕರ್ಯ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮಸ್ಯೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಕ್ಷೇತ್ರವನ್ನು ಇಂದೆ ಮಾಜಿ ಸಿಎಂ ಡಿ.ವಿ ಸದಾನಂದಗೌಡರು ಪ್ರತಿನಿಧಿಸಿದ್ದರು. ಆದರೂ ಅಭಿವೃದ್ದಿಯಾಗಿಲ್ಲ ಎಂಬ ಆರೋಪ ಅವರದು.
ಇನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿಯೂ ಬಿಜೆಪಿ ಕಾರ್ಯಕರ್ತರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆ ಹತ್ತಿರಬಂದಾಗ ಭೂಮಿ ಪೂಜೆ ಮಾಡಲು ಬಂದಿದ್ದೀರಾ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಸಮೀಕ್ಷೆ; ಪುತ್ತೂರು: ಸಂಘ ಪರಿವಾರದ ಆಡಂಬೊಲದಲ್ಲಿ ಸಜ್ಜುಗೊಳ್ಳುತ್ತಿದ್ದಾರೆಯೇ ನಳಿನ್?