ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಡೆಸಿರುವ ಭಾರತ್ ಜೋಡೋ ಯಾತ್ರೆ ಸ್ಫೂರ್ತಿದಾಯಕ ಎಂದು ಕನ್ನಡದ ಹಿರಿಯ ನಟ ಶಿವರಾಜ್ಕುಮಾರ್ ಬಣ್ಣಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ, ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಮಾತನಾಡಿರುವ ಶಿವಣ್ಣ, “ತೀರ್ಥಹಳ್ಳಿಯ ಅಭಿಮಾನಿ ದೇವರುಗಳಿಗೆ ನಮಸ್ಕಾರ. ನಾನು ನಿಮ್ಮಂತೆಯೇ ಒಬ್ಬ ಅಭಿಮಾನಿಯಾಗಿ ರಾಹುಲ್ ಗಾಂಧಿಯವರನ್ನು ನೋಡುವ ಆಸೆ ಮತ್ತು ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ಯಾಕೆಂದರೆ ಇತ್ತೀಚೆಗೆ ಅವರು ಮಾಡಿರುವ ಭಾರತ್ ಜೋಡೋ ಯಾತ್ರೆ ನೋಡಿ ಸ್ಫೂರ್ತಿ ಪಡೆದೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಜೋಡೋ ಯಾತ್ರೆಯನ್ನು ನೋಡಿ ಖುಷಿಯಾಯಿತು. ನನಗೆ ಫಿಟ್ನೇಸ್ ಎಂದರೆ ಇಷ್ಟ. ಫಿಟ್ನೆಸ್ ಜೊತೆಗೆ ಒಂದು ಪರ್ಪಸ್ ಗಾಗಿ (ಉದ್ದೇಶಕ್ಕಾಗಿ) ಇಡೀ ದೇಶದ್ಯಾಂತ ನಡೆದುಕೊಂಡು ಹೋಗಿದ್ದನ್ನು ನೋಡಿ ಉತ್ತೇಜನ ಸಿಕ್ಕಿತು, ಖುಷಿ ಸಿಕ್ಕಿತು’’ ಎಂದು ಹೊಗಳಿದ್ದಾರೆ.
“ನಾನೊಬ್ಬ ನಟನಷ್ಟೇ. ನನಗೆ ರಾಜಕಾರಣ ಗೊತ್ತಿಲ್ಲ. ನಮ್ಮ ಮಾವರಾದ ಬಂಗಾರಪ್ಪನವರು ರಾಜಕಾರಣದಲ್ಲಿ ಇದ್ದರು. ಅವರ ಪುತ್ರ ಮಧು ಅವರು ರಾಜಕಾರಣದಲ್ಲಿ ಇದ್ದಾರೆ. ಪತ್ನಿ ಗೀತಾ ಅವರು ಒಮ್ಮೆ ಎಂ.ಪಿ. ಎಲೆಕ್ಷನ್ನಲ್ಲಿ ಸ್ಪರ್ಧಿಸಿದ್ದರು. ಈಗ ಕಾಂಗ್ರೆಸ್ ಸೇರಿದ್ದಾರೆ. ನನ್ನ ಪತ್ನಿ ನಿಮ್ಮ ಪಕ್ಷದೊಂದಿಗೆ ಇರುತ್ತಾರೆ. ಆಕೆಗೆ ನನ್ನ ಬೆಂಬಲ ಇರುತ್ತದೆ’’ ಎಂದಿದ್ದಾರೆ.
“ಯಾರನ್ನು ಆಯ್ಕೆ ಮಾಡಬೇಕು ಎಂಬುದು ನಿಮಗೆ ಗೊತ್ತು. ಯಾರು ಒಳ್ಳೆಯದನ್ನು ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ಈ ಭಾರಿ ಜಯಭೇರಿ ಬಾರಿಸಲಿ, ನೀವೆಲ್ಲರೂ ಆಶೀರ್ವಾದ ಮಾಡಿರಿ ಎಂದು ಕೇಳಿಕೊಳ್ಳುತ್ತೇನೆ’’ ಎಂದು ತಿಳಿಸಿದ್ದಾರೆ.
ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿದ್ದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುತ್ರಿಯಾಗಿರುವ ಗೀತಾ ಅವರು, ಈ ಹಿಂದೆ ಜೆಡಿಎಸ್ನಿಂದ ಲೋಕಸಭಾ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪನವರ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಆದರೆ, ಯಡಿಯೂರಪ್ಪ ಅವರ ಎದುರು ಸೋತಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಜೆಡಿಎಸ್ ಟಿಕೆಟ್ ಪಡೆದು ಗೀತಾ ಶಿವರಾಜ್ಕುಮಾರ್ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2008ರಲ್ಲಿ ಜೆಡಿಎಸ್ನಿಂದ ಗೀತಾ ಅವರು ಸ್ಪರ್ಧಿಸಿದ್ದರು.
ಬಂಗಾರಪ್ಪ ಅವರ ಐವರು ಮಕ್ಕಳಲ್ಲಿ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಮತ್ತು ಗೀತಾ ಶಿವರಾಜ್ಕುಮಾರ್ ಅವರು ರಾಜಕೀಯ ಜೀವನದಲ್ಲಿದ್ದಾರೆ. ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷದಲ್ಲಿ, ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿದ್ದು, ಈ ಬಾರಿ ಸೊರಬ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಸೆಣಸಲಿದ್ದಾರೆ.
2021ರ ಜುಲೈನಲ್ಲಿ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಇದೀಗ ಗೀತಾ ಶಿವರಾಜ್ಕುಮಾರ್ ಸಹ ಕಾಂಗ್ರೆಸ್ ಸೇರಿದ್ದಾರೆ. ತಮ್ಮ ಪತ್ನಿಯ ಒತ್ತಾಸೆಯಂತೆ ಶಿವರಾಜ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಮಾತನಾಡಿದ್ದಾರೆ.