ಬಂಡಾಯದ ಬಾವುಟ ಹಾರಿಸಿದ್ದ 24 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ತೆಗೆದುಕೊಂಡಿದೆ.
ಪಕ್ಷೇತರರಾಗಿ ಕಣಕ್ಕಿಳಿದ ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ (ಶಿರಹಟ್ಟಿ), ಬಿ.ಬಿ. ರಾಮಸ್ವಾಮಿಗೌಡ (ಕುಣಿಗಲ್), ಎಚ್.ಪಿ. ರಾಜೇಶ್ (ಜಗಲೂರು) ಸೇರಿ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಹೊರಹಾಕಿದೆ.
ಈ 24 ಮಂದಿಯಷ್ಟೇ ಅಲ್ಲದೆ, ಇನ್ಯಾರಾದರೂ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪಕ್ಷೇತರರಾಗಿ ( ಬಂಡಾಯ) ಸ್ಪರ್ಧಿಸಿದ್ದರೆ ಅವರಿಗೂ ಈ ಉಚ್ಚಾಟನೆ ಆದೇಶ ಅನ್ವಯಿಸಲಿದೆ. ಅಲ್ಲದೆ, ಈ ಅಭ್ಯರ್ಥಿಗಳ ಜೊತೆ ಪ್ರಚಾರದಲ್ಲಿ ಭಾಗವಹಿಸಿದರೆ ಅಂಥವರ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಕೆ. ರೆಹಮಾನ್ ಖಾನ್ ಅವರು ತಮ್ಮ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ), ಕಾಂಗ್ರೆಸ್ ನಾಯಕ ಕೃಷ್ಣೇಗೌಡ (ಅರಕಲಗೂಡು), ಕೆಪಿಸಿಸಿ ಸಂಯೋಜಕ ಚಂದ್ರಾ ಸಿಂಗ್ (ಬೀದರ್ ದಕ್ಷಿಣ), ಚಿಕ್ಕಮಗಳೂರು ಡಿಸಿಸಿ ಉಪಾಧ್ಯಕ್ಷ ಗೋಪಿಕೃಷ್ಣ (ತರೀಕೆರೆ), ಬೆಳಗಾವಿ ಯುವ ಕಾಂಗ್ರೆಸ್ ಮುಖಂಡ ಇರ್ಫಾನ್ ತಾಳಿಕೋಟೆ (ಖಾನಾಪುರ), ಕಿಸಾನ್ ಸೆಲ್ ಉಪಾಧ್ಯಕ್ಷ ಪದ್ಮಜಿತ್ ನಾಡಗೌಡ (ತೇರದಾಳ), ಬಸವರಾಜ್ ಮಲ್ಕಾರಿ (ಹುಬ್ಬಳ್ಳಿ–ಧಾರವಾಡ ಪಶ್ಚಿಮ), ಉಮಾದೇವಿ (ನೆಲಮಂಗಲ), ಯೂಸುಫ್ ಅಲಿ ಜಾಮದಾರ್ (ಬೀದರ್ ದಕ್ಷಿಣ), ನಾರಾಯಣ ಬಂಗಿ (ಬೀದರ್ ದಕ್ಷಿಣ), ವಿಜಯಕುಮಾರ್ ಬರೂರು (ಬೀದರ್ ದಕ್ಷಿಣ), ಸವಿತಾ ಮಲ್ಲೇಶ್ ನಾಯಕ್ (ಮಾಯಕೊಂಡ), ಪಿ.ಎಚ್. ಚಂದ್ರಶೇಖರ್ (ಶ್ರೀರಂಗಪಟ್ಟಣ), ಪುಟ್ಟ ಆಂಜನಪ್ಪ (ಶಿಡ್ಲಘಟ್ಟ), ಶಂಭು ಕೋಲ್ಕರ್ (ರಾಯಬಾಗ್), ಬಿ.ಎಚ್. ಭೀಮಪ್ಪ (ಶಿವಮೊಗ್ಗ ಗ್ರಾಮಾಂತರ), ಎಸ್.ಪಿ. ನಾಗರಾಜಗೌಡ (ಶಿಕಾರಿಪುರ), ದೋರ್ನಲ್ ಪರಮೇಶ್ವರಪ್ಪ (ತರೀಕೆರೆ), ಶಶಿ ಚೌಧಿ (ಬೀದರ್), ಲಕ್ಷ್ಮಣ ಸೊರಳಿ (ಔರಾದ್), ಮುಜೀಬುದ್ದೀನ್ (ರಾಯಚೂರು ನಗರ) ಅವರು ಉಚ್ಚಾಟನೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.